ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿಯ ವಿಶ್ವಜ್ಯೋತಿ ವಾಟರ್ ಫಿಲ್ಟರ್ ಹತ್ತಿರವಿರುವ ರುದ್ರಭೂಮಿಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿಕೊಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಆಶ್ರಯ ಕಾಲೋನಿ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಮರಣ ಹೊಂದಿದಾಗ ಅಂತ್ಯಸಂಸ್ಕಾರ ಮಾಡಲು ಈ ರುದ್ರಭೂಮಿಯನ್ನು ಬಳಸಲಾಗುತ್ತಿದೆ. ಆದರೆ, ಪ್ರಸ್ತುತ ಈ ಸ್ಮಶಾನದಲ್ಲಿ ಅತಿಯಾಗಿ ಗಿಡಗಂಟಿಗಳು ಹಾಗೂ ಮುಳ್ಳಿನ ಪೊದೆಗಳು ಬೆಳೆದು ನಿಂತಿರುವುದರಿಂದ ಅಂತ್ಯಸಂಸ್ಕಾರ ಮಾಡಲು ಸಾರ್ವಜನಿಕರಿಗೆ ತೀವ್ರ ಅನಾಹುತ ಮತ್ತು ತೊಂದರೆ ಎದುರಾಗುತ್ತಿದೆ.
ಅಂತ್ಯಸಂಸ್ಕಾರದಂತಹ ದುಃಖದ ಸಮಯದಲ್ಲಿ ನಿವಾಸಿಗಳು ಮತ್ತು ಮೃತರ ಕುಟುಂಬದವರು ಇಲ್ಲಿನ ದುಸ್ಥಿತಿಯಿಂದಾಗಿ ಮತ್ತಷ್ಟು ಕಷ್ಟ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
"ರುದ್ರಭೂಮಿಯಲ್ಲಿ ಸಾರ್ವಜನಿಕರು ಯಾವುದೇ ಅಡೆತಡೆಯಿಲ್ಲದೆ ಅಂತ್ಯಸಂಸ್ಕಾರ ನೆರವೇರಿಸಲು ಅನುಕೂಲವಾಗುವಂತೆ, ಪುರಸಭೆಯು ತಕ್ಷಣವೇ ಗಮನಹರಿಸಿ ಇಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಿಕೊಡಬೇಕು" ಎಂದು ಸ್ಥಳೀಯ ಮುಖಂಡರಾದ ಬಸವರಾಜ್ ಮೈನಾಳಕರ್ ಸೇರಿದಂತೆ ಕಾಲೋನಿಯ ನಿವಾಸಿಗಳು ಮನವಿ ಪತ್ರದ ಮೂಲಕ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.