ಭಾನುವಾರ, ಏಪ್ರಿಲ್ 5, 2026

ಸಮಾಜಮುಖಿ ಕಾರ್ಯಗಳಿಂದ ಜನ್ಮದಿನಕ್ಕೆ ಸಾರ್ಥಕತೆ: ಕಂಬಳೇಶ್ವರ ಶ್ರೀ.

ಚಿತ್ತಾಪುರ: ಜನ್ಮದಿನೋತ್ಸವವು ಕೇವಲ ಆಚರಣೆಯಾಗದೆ, ಬಡವರು, ದೀನದಲಿತರಿಗೆ ಹಾಗೂ ಸಮಾಜಕ್ಕೆ ಅನುಕೂಲವಾದಾಗ ಮಾತ್ರ ಅದಕ್ಕೊಂದು ಅರ್ಥ ಬರಲಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.

ಪಟ್ಟಣದ ಕಂಬಳೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ತಮ್ಮ 59ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಜನ್ಮದಿನದ ಅಂಗವಾಗಿ ಭಕ್ತರು ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಂಪತ್ತನ್ನು ಸತ್ಕಾರ್ಯಕ್ಕೆ ಬಳಸಿದಾಗ ಮಾತ್ರ ನಿಜವಾದ ತುಲಾಭಾರಕ್ಕೆ ಬೆಲೆ ಬರುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಹಾನಗಲ್ಲ ಕುಮಾರೇಶ್ವರರ ವಾಣಿಯಂತೆ, ಭಕ್ತರ ದೇಣಿಗೆ ಹಾಗೂ ಸರ್ಕಾರದ ಅನುದಾನದ ಸದ್ಬಳಕೆ ಮಾಡಿಕೊಂಡು ಶಿಥಿಲವಾಗಿದ್ದ ಮಠವನ್ನು ಇಂದು ಮಾದರಿಯಾಗಿ ಕಟ್ಟಲಾಗಿದೆ ಎಂದು ಸ್ಮರಿಸಿದರು.
ದಿಗಾಂವದ ಶ್ರೀ ಸಿದ್ದವೀರ ಶಿವಾಚಾರ್ಯರು ಮಾತನಾಡಿ, ಸೋಮಶೇಖರ ಶ್ರೀಗಳು ಕಲ್ಯಾಣ ಕರ್ನಾಟಕದ ಅತ್ಯುತ್ತಮ ವಾಗ್ಮಿಗಳು ಎಂದು ಬಣ್ಣಿಸಿದರು. ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು ಸೇರಿದಂತೆ ಹಲವು ಮಠಾಧೀಶರು ಶ್ರೀಗಳ ಜನಪರ ಕಾರ್ಯಗಳನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಮಾಲಗತ್ತಿಯ ಶ್ರೀ ಚನ್ನಬಸವ ಶರಣರು ಹಾಗೂ ಶಿವಶರಣಯ್ಯ ಪುರದಯ್ಯನಮಠ ಅವರನ್ನು ಸನ್ಮಾನಿಸಲಾಯಿತು.

 ಕಾರ್ಯಕ್ರಮದಲ್ಲಿ ನದಿಶಿನ್ನೂರು ಶ್ರೀ ಗುರುರಾಜೇಂದ್ರ ಮಹಾಶಿವಯೋಗಿಗಳು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ್, ನಾಗರಾಜ ರೇಷ್ಮೆ ಸೇರಿದಂತೆ ನೂರಾರು ಭಕ್ತರು ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಕ್ಷರಾಗಿ ಉದ್ಯಮಿ ಬಸವರಾಜ ಪಾಟೀಲ ಬೆಳಗುಂಪಾ ಆಯ್ಕೆ.

ಚಿತ್ತಾಪುರ: ಪಟ್ಟಣದ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ, ಉದ್ಯಮಿ ಬಸವರಾಜ ಪಾಟೀಲ ಬೆಳಗುಂಪಾ ಅವರನ್ನು ಬಸವ ಜಯಂತಿ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷರಾದ ನಾಗರಾಜ ಭಂಕಲಗಿ ಅವರು ಈ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಪಾಟೀಲ ಅವರನ್ನು ಸಮಾಜದ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ನಾಗರಾಜ ಭಂಕಲಗಿ ಅವರು, "ಏಪ್ರಿಲ್ 20 ರಂದು ಬೆಳಿಗ್ಗೆ 10 ಗಂಟೆಗೆ ತಹಸೀಲ್ ಕಚೇರಿಯಿಂದ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಆರಂಭವಾಗಲಿದೆ," ಎಂದು ತಿಳಿಸಿದರು.

ಮೆರವಣಿಗೆ ಮಾರ್ಗ: ತಹಸೀಲ್ ಕಚೇರಿ, ಸ್ಟೇಷನ್ ರಸ್ತೆ,ನಾಗಾವಿ ವೃತ್ತ,ಜನತಾ ವೃತ್ತ, ಚಿತ್ತಾವಲಿ ವೃತ್ತ, ಮತ್ತು ಹೋಳಿಕಟ್ಟಿ ಬಡಾವಣೆಯ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ. ನಂತರ ಪಾಲಪ್ ಗಲ್ಲಿ, ಕೇಳಗೇರಿ ರಸ್ತೆ, ಭುವನೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆಯ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿ, ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಯು ಸಂಪನ್ನಗೊಳ್ಳಲಿದೆ.

ಬಸವ ಜಯಂತಿಯನ್ನು ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಸಮಾಜದ ಮುಖಂಡರು, ಬಸವ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.

ಈ ಪೂರ್ವಭಾವಿ ಸಭೆಯಲ್ಲಿ ಮಹಾಸಭಾದ ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸಾರೆಡ್ಡಿ ನಾಲವಾರ, ನಗರಾಧ್ಯಕ್ಷ ಚಂದ್ರಶೇಖರ ಉಟಗೂರ್, ಯುವ ಅಧ್ಯಕ್ಷ ಅನಿಲ್‌ ವಡ್ಡಡಗಿ, ಸಮಾಜದ ಹಿರಿಯ ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಸೋಮಶೇಖ‌ರ್ ಪಾಟೀಲ ಬೆಳಗಂಪಾ, ಚಂದ್ರಶೇಖ‌ರ್ ಟೆಂಗಳಿ, ಡಾ. ಪ್ರಭುರಾಜ ಕಾಂತಾ, ಅಣ್ಣಾರಾವ್ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಮಲ್ಲರೆಡ್ಡಿ ಗೋಪಸೇನ್, ಓಂಕಾರ ರೇಷ್ಮೆ, ರವೀಂದ್ರ ಸಜ್ಜನಶೆಟ್ಟಿ, ಶಾಂತಪ್ಪ ಚಾಳಿಕಾರ, ಆನಂದ್ ಪಾಟೀಲ ನರಿಬೋಳ ಸೇರಿದಂತೆ ಹಲವು ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಸಂತೋಷ ಹಾವೇರಿ ಅವರು ನಿರೂಪಿಸಿದರು.

ರಾಜೋಳ್ಳಾದಲ್ಲಿ ಏ. 7 ರಿಂದ ಹಜರತ್ ರಾಜಾಭಾಗಸವಾರರ ಜಾತ್ರಾ ಮಹೋತ್ಸವ.

ಚಿತ್ತಾಪುರ: ತಾಲೂಕಿನ ರಾಜೋಳ್ಳಾ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಸಹ ಹಜರತ್ ರಾಜಾಭಾಗಸವಾರ ರಹೇಮತ್ ಉಲ್ ಅಲೈ ರವರ ಜಾತ್ರಾ ಮಹೋತ್ಸವವು ಏಪ್ರಿಲ್ 7 ರಿಂದ ಮೂರು ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ದರ್ಗಾದ ಪೂಜ್ಯ ಶ್ರೀ ಅಬ್ದುಲ್ ರಜಾಕ್ ಸಾಹೇಬ ಖಾದ್ರಿ ತಿಳಿಸಿದ್ದಾರೆ.

ಏಪ್ರಿಲ್ 7 (ಸಂಜೆ) ಗಂಧ (ಸಂದಲ್) ಮೆರವಣಿಗೆ. ರಾತ್ರಿ 8.45 ಕ್ಕೆ ಶೇಖ್ ಇಮಾಮ್ ಸಾಬ್ ಮಹೇಬುಬ್ ಅಲಿ ಶೇಖಸಿಂದಿ ಅವರ ಮನೆಯಿಂದ ಗಂಧವು ಸಕಲ ವಾದ್ಯಗೋಷ್ಠಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರುದಿನ ಬೆಳಿಗ್ಗೆ 4 ಗಂಟೆಗೆ ದರ್ಗಾ ತಲುಪಲಿದೆ.
ಏಪ್ರಿಲ್ 8 ದೀಪೋತ್ಸವ (ಚಿರಾಗ್) ಹಾಗೂ ರಾತ್ರಿ 8.45 ರಿಂದ ಖ್ಯಾತ ಕಲಾವಿದರಿಂದ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 9 ಜೀಯಾರತ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಪೂಜ್ಯ ಶ್ರೀ ಅಬ್ದುಲ್ ರಜಾಕ್ ಸಾಹೇಬ್ ಬಖಾದ್ರಿ (ಸಜ್ಜಾದ ಸಶಿನ) ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಅವರ ಅಮೃತ ಹಸ್ತದಿಂದ ಈ ಎಲ್ಲ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

"ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನದಿಂದ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕು" ಎಂದು ಶೇಖ್ ಅಬ್ದುಲ್ ರಜಾಕ್ ಸಾಹೇಬ ಖಾದ್ರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಜಗಜೀವನರಾಮ್ ಜಯಂತಿ ಆಚರಣೆ: ಭೀಮಣ್ಣ ಸಾಲಿ ನೇತೃತ್ವದಲ್ಲಿ ಪುಷ್ಪಾರ್ಚನೆ.

ಚಿತ್ತಾಪುರ: ಭಾರತದ ಹಸಿರು ಕ್ರಾಂತಿಯ ಹರಿಕಾರ, ದಲಿತರ ಧ್ವನಿ, ರಾಷ್ಟ್ರದ ಮಹಾನ್ ನಾಯಕರಾದ ಮಾಜಿ ಉಪ ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನರಾಮ್ ಅವರ 119ನೇ ಜನ್ಮ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

 ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, "ಬಾಬು ಜಗಜೀವನರಾಮ್ ಅವರು ಕೇವಲ ಒಂದು ಸಮುದಾಯದ ನಾಯಕರಾಗಿರಲಿಲ್ಲ, ಬದಲಾಗಿ ಅವರು ಈ ದೇಶದ ಶೋಷಿತ ವರ್ಗಗಳ ಆಶಾಕಿರಣವಾಗಿದ್ದರು. ಕೃಷಿ ಕ್ಷೇತ್ರದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳು ಇಂದಿಗೂ ಭಾರತದ ಆಹಾರ ಭದ್ರತೆಗೆ ಬುನಾದಿಯಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು," ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳಿಕರ್, ನಾಗರೆಡ್ಡಿ ಗೋಪಸೇನ್, ಪುರಸಭೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಪುರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಜಗದೀಶ್ ಚವ್ಹಾಣ ಅವರು ಡಾ. ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಹೋರಾಟದ ಬದುಕನ್ನು ಸ್ಮರಿಸಿದರು.

ಶುಕ್ರವಾರ, ಏಪ್ರಿಲ್ 3, 2026

ಶ್ರೀಗಳ ಜನ್ಮದಿನದ ಸವಿನೆನಪು: ಗೋಶಾಲೆಗೆ ಕಣಕಿ ದೇಣಿಗೆ

ಚಿತ್ತಾಪುರ: ಪಟ್ಟಣದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿರುವ ಕಂಬಳೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ 59ನೇ ಜನ್ಮದಿನದ ಏಪ್ರಿಲ್ 4ರಂದು ಇದ್ದು. ಒಂದು ದಿನ ಮುಂಚಿತವಾಗಿ ಶುಕ್ರವಾರ ಪಟ್ಟಣದ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ನೀಡುವ ವಿಶೇಷ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಗಳ ಜನ್ಮದಿನದ ಸವಿನೆನಪಿಗಾಗಿ ಸಮಾಜ ಸೇವಕ ಅಂಬರೀಷ್ ಕಲ್ ಶೆಟ್ಟಿ ಅವರು ಗೋಶಾಲೆಗೆ ಒಂದು ಟ್ರ್ಯಾಕ್ಟರ್ ಲೋಡ್ ಕಣಕಿಯನ್ನು ಕಾಣಿಕೆಯಾಗಿ ನೀಡಿದರು

ಶ್ರೀಗಳು ತಮ್ಮ ಜನ್ಮದಿನದ ಅಂಗವಾಗಿ ಪಟ್ಟಣದ ಗೋಶಾಲೆಗೆ ಭೇಟಿ ನೀಡಿದ ಶ್ರೀ ಸೋಮಶೇಖರ ಶಿವಾಚಾರ್ಯರು, ಗೋವುಗಳಿಗೆ ಸ್ವತಃ ಮೇವು (ಕಣಕಿ) ತಿನ್ನಿಸುವ ಮೂಲಕ ಗೋಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, "ಗೋವುಗಳು ಭಾರತೀಯ ಸಂಸ್ಕೃತಿಯ ಜೀವಾಳ. ಗೋಸೇವೆಯು ಈಶ್ವರನ ಸೇವೆಗೆ ಸಮಾನವಾದುದು. ಭಕ್ತರು ಇಂತಹ ಪುಣ್ಯ ಕಾರ್ಯಗಳ ಮೂಲಕ ಗೋವುಗಳ ಹಸಿವು ನೀಗಿಸುತ್ತಿರುವುದು ಸಂತಸದ ವಿಷಯ," ಎಂದು ಆಶೀರ್ವದಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ್ ಬಂಕಲಗಿ ರವರು ಮಾತನಾಡಿ "ಶ್ರೀಗಳ ಹುಟ್ಟುಹಬ್ಬದ ಸವಿನೆನಪಿಗಾಗಿ ಅಂಬರೀಷ್ ಕಲ್ ಶೆಟ್ಟಿ ಅವರು ಗೋಶಾಲೆಗೆ ಕಣಕಿ ಕಾಣಿಕೆ ನೀಡಿರುವುದು ಶ್ಲಾಘನೀಯ. ಗೋವುಗಳ ಪಾಲನೆಗೆ ಇಂತಹ ದಾನಿಗಳು ಪ್ರೇರಣೆಯಾಗಿದ್ದಾರೆ," ಎಂದು ತಿಳಿಸಿದರು.

"ನಮ್ಮ ಗುರುಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ ಜನ್ಮದಿನವನ್ನು ಆಡಂಬರವಿಲ್ಲದೆ, ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಗೋವುಗಳಿಗೆ ಮೇವು ನೀಡುವ ಸಂಕಲ್ಪ ಮಾಡಿದೆ. ಗೋವುಗಳಿಗೆ ಹಸಿವು ನೀಗಿಸುವುದು ಕೋಟಿ ಪುಣ್ಯಕ್ಕೆ ಸಮಾನ. ಶ್ರೀಗಳ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಈ ಸೇವೆಯನ್ನು ಅರ್ಪಿಸುತ್ತಿದ್ದೇನೆ," ಎಂದು ಭಕ್ತಿಪೂರ್ವಕವಾಗಿ ನುಡಿದರು.

- ಅಂಬರೀಷ್ ಕಲಶೆಟ್ಟಿ (ಸಮಾಜ ಸೇವಕರು ಚಿತ್ತಾಪೂರ )
ಈ ಸಂದರ್ಭದಲ್ಲಿ ಹಿರಿಯರಾದ ಅನ್ನದಾನ ಶಾಸ್ತ್ರಿಗಳು ಹಿರೇಮಠ್, ಶಾಂತನಂದ ಗವಾಯಿಗಳು, ವೀರಶೈವ ಸಮಾಜದ ಕಾರ್ಯದರ್ಶಿ ಆನಂದ್ ಪಾಟೀಲ್ ನರಬೂಳ್ಳಿ, ಹಾಗೂ ಗೋಶಾಲೆ ಅಧ್ಯಕ್ಷ ರಮೇಶ್ ಬೊಮ್ನಳ್ಳಿ, ವೀರಶೈವ ಸಮಾಜದ ಮುಖಂಡರಾದ ಶಿವಾನಂದ ಸ್ವಾಮಿ ಗಚ್ಚಿನಮಠ, ಸಂಜು ರೆಡ್ಡಿ ಪಾಲಪ್, ಅನಿಲ್ ವಡ್ಡಡಗಿ, ವಿಶ್ವನಾಥ್ ಕುಂಬಾರ್, ಬಸವರಾಜ್ ಹೂಗಾರ್, ಶಾಂತಕುಮಾರ್ ಹತ್ತಿ, ಪ್ರಸಾದ್ ಅವಂಟಿ, ಸುರೇಶ್ ಅಲ್ಲೂರು, ಜಗದೇವ ದಿಗ್ಗಾವ್ಕಾರ್, ಸುನಿಲ್ ಲಕ್ಕುಂಡಿ, ಮಲ್ಲಿಕಾರ್ಜುನ್ ಪೂಜಾರಿ, ಸಾಹೇಬ್ ಗೌಡ ಬಂಗಿ, ಚಂದ್ರು ಉಟ್ಗೂರು, ಸಂತೋಷ್ ಹಾವೇರಿ, ಸಾಗರ್ ಮಾಡಗಿ, ಶರಣು ಜಡಿ, ಅಂಬರೀಶ್ ಸಾತನೂರು, ಶೇಸಪ್ಪ ಬಡಿಗೇರ್ ಸೇರಿದಂತೆ ಅನೇಕ ಭಕ್ತಾದಿಗಳು ಮತ್ತು ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.

ಬುಧವಾರ, ಏಪ್ರಿಲ್ 1, 2026

ಈಶ್ವರ ಖಂಡ್ರೆ ಅವರಿಗೆ ತಾಲ್ಲೂಕು ವೀರಶೈವ ಸಮಾಜದಿಂದ ಸನ್ಮಾನ.

ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಚಿತ್ತಾಪುರ ತಾಲ್ಲೂಕು ವೀರಶೈವ ಸಮಾಜದ ವತಿಯಿಂದ ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ತಾಲ್ಲೂಕು ವೀರಶೈವ ಸಮಾಜದ ಗೌರವಾಧ್ಯಕ್ಷರಾದ ಲಿಂಗಾರೆಡ್ಡಿ ಬಾಸರೆಡ್ಡಿ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ಮುಖಂಡರು, ಸಮಾಜಕ್ಕೆ ಅವರು ನೀಡುತ್ತಿರುವ ಕೊಡುಗೆ ಮತ್ತು ಸಂಘಟನಾತ್ಮಕ ಕಾರ್ಯಗಳನ್ನು ಶ್ಲಾಘಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಲಿಂಗಪ್ಪ ವಾಡೇದ್, ಸೋಮಶೇಖರ ಪಾಟೀಲ ಬೆಳಗುಂಪಾ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ಜಗಣ್ಣಗೌಡ ರಾಮತೀರ್ಥ, ಶಾಂತಣ್ಣ ಚಾಳೀಕಾರ, ಅಣ್ಣಾರಾವ ಬಾಳಿ, ಆನಂದ ಪಾಟೀಲ ನರಿಬೋಳ, ಮಲ್ಲಿನಾಥ ಭಾಗೋಡಿ, ರವೀಂದ್ರರೆಡ್ಡಿ ಭಂಕಲಗಿ, ಸಿದ್ದಣ್ಣಗೌಡ ದಳಪತಿ ಹಾಗೂ ರವೀಂದ್ರ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಮಾಜದ ಸಂಘಟನೆ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ಈ ವೇಳೆ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ಏಪ್ರಿಲ್ 4ಕ್ಕೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ.

ಚಿತ್ತಾಪುರ: ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ 59ನೇ ಜನ್ಮದಿನದ ಅಂಗವಾಗಿ, ಸಾರ್ವಜನಿಕರಿಗಾಗಿ ಬೃಹತ್ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರವನ್ನು ಆಯೋಜಿಸಲಾಗಿದೆ.

ಯಾದಗಿರಿಯ ವೇದಾ ಕಣ್ಣಿನ ಆಸ್ಪತ್ರೆ ಹಾಗೂ ಕಲಬುರಗಿಯ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ, ಏಪ್ರಿಲ್ 4 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಪಟ್ಟಣದ ಕಂಬಳೇಶ್ವರ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರಾದ ಮಲ್ಲು ಇಂದೂರ ಹಾಗೂ ನಾಗರೆಡ್ಡಿ ಗೋಪಸೇನ್ ಅವರು ತಿಳಿಸಿದ್ದಾರೆ.

ಕಂಬಳೇಶ್ವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನುರಿತ ವೈದ್ಯರಿಂದ ಕಣ್ಣಿನ ಪರೀಕ್ಷೆಯ ಜೊತೆಗೆ ಬಿಪಿ (ರಕ್ತದೊತ್ತಡ) ಮತ್ತು ಶುಗರ್ (ಮಧುಮೇಹ) ತಪಾಸಣೆಯನ್ನೂ ಮಾಡಲಾಗುವುದು.ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಹಾಗೂ ಅಗತ್ಯವಿರುವವರಿಗೆ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು.ಅಂದು ಸಂಜೆ 5:00 ಗಂಟೆಗೆ ಕಂಬಳೇಶ್ವರ ಶ್ರೀಗಳ 59ನೇ ಜನ್ಮ ದಿನೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ

"ತಾಲ್ಲೂಕಿನ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು." 

— ಮಲ್ಲು ಇಂದೂರ ಹಾಗೂ ನಾಗರೆಡ್ಡಿ ಗೋಪಸೇನ್, ಆಯೋಜಕರು.

ಮಕ್ಕಳ ಕೈಗೆ ಮೊಬೈಲ್ ಬದಲಾಗಿ ಪುಸ್ತಕ ನೀಡಿ: ಕಂಬಳೇಶ್ವರ ಶ್ರೀಗಳು

ಚಿತ್ತಾಪುರ: "ಶಿಕ್ಷಣ ಸಂಸ್ಥೆಯೊಂದನ್ನು ನಡೆಸುವುದು ಹತ್ತು ಆನೆಗಳನ್ನು ಸಾಕಿದಂತೆ. ದೇಶದ ಭವಿಷ್ಯ ರೂಪಿಸುವ ಅತಿದೊಡ್ಡ ಶಕ್ತಿ ಶಾಲೆಗಳಲ್ಲಿದೆ," ಎಂದು ಕಂಬಳೇಶ್ವರ ಮಠದ  ಸೋಮಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಪಟ್ಟಣದ ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 15ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಬಳಿಕ ಆಶೀರ್ವಚನ ನೀಡಿ ಮಾತನಾಡಿದ ಅವರು "ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಮಾತೋಶ್ರೀ ಶಾಲೆಯ ಕಾರ್ಯ ಶ್ಲಾಘನೀಯ. ಪಾಲಕರು ಮಕ್ಕಳಿಗೆ ಮೊಬೈಲ್ ನೀಡಿ ಅವರ ಭವಿಷ್ಯ ಹಾಳು ಮಾಡಬಾರದು. ಅದರ ಬದಲಾಗಿ ಪುಸ್ತಕಗಳನ್ನು ನೀಡಿ ಅವರ ಬದುಕನ್ನು ಸಾರ್ಥಕಗೊಳಿಸಬೇಕು," ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಿಎಲ್‌ಡಿ ಬ್ಯಾಂಕ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, "ಹಿಂದುಳಿದ ಪ್ರದೇಶದ ಬಡ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಪುಣ್ಯದ ಕೆಲಸ. ಇಂತಹ ಸಂಸ್ಥೆಗಳಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಮುಂಬರುವ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ವೈಯಕ್ತಿಕವಾಗಿ ಬೆಂಬಲ ನೀಡಲಾಗುವುದು," ಎಂದು ಭರವಸೆ ನೀಡಿದರು.
ಶಾಲೆಯ ಮುಖ್ಯಗುರುಗಳಾದ ಜಗದೇವ ಕುಂಬಾರ ಅವರು ವಾರ್ಷಿಕ ವರದಿ ವಾಚಿಸಿ, "2025-26ನೇ ಸಾಲಿನಲ್ಲಿ ಶಾಲೆಯು ಅತ್ಯುತ್ತಮ ಫಲಿತಾಂಶ ಪಡೆದಿದೆ. ಮಕ್ಕಳಲ್ಲಿ ಕೌಶಲ ಬೆಳೆಸಲು 'ನಿರಂತರ ಕಲಿಕೆ' ಎಂಬ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಶಿಕ್ಷಕರ ಅವಿರತ ಶ್ರಮದಿಂದ ಶಾಲೆಯು ಪ್ರಗತಿಯ ಪಥದಲ್ಲಿ ಸಾಗುತ್ತಿದೆ," ಎಂದರು.

ಕಸಾಪ ಮಾಜಿ ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ರೋಣದ, ಪ್ರಗತಿ ಪರ ರೈತ ಅಂಬರೀಶ್ ಕಲ್ಲಶೆಟ್ಟಿ, ಮಾಜಿ ಪುರಸಭೆ ಸದಸ್ಯ ವಿಶ್ವನಾಥ ಕಾಶಿ, ಪತ್ರಕರ್ತ ಚಂದ್ರಶೇಖರ ಬಳ್ಳಾ, ಕೊಲಿ ಸಮಾಜ ನಗರ ಅಧ್ಯಕ್ಷ ಬಸವರಾಜ ಮೈನಾಳಕರ್, ವೇದಿಕೆಯಲ್ಲಿ ಇದ್ದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಅಂಬರೀಶ್ ಭೋವಿ, ವಿಶ್ವನಾಥ ಕುಂಬಾರ, ಶೇಷಪ್ಪ ಬಡಿಗೇರ್, ಕಾಸಿಂ ಅಲಿ, ಶ್ರೀಮತಿ ಫೈಮುದ್ ಬೇಗಂ, ಶ್ರೀಮತಿ ಸುಜಾತಾ ಜೆ ಕುಂಬಾರ, ಶ್ರೀಮತಿ ಸುನಿತಾ, ಶಮರಿನ್ ಬೇಗಂ, ಶ್ರೀದೇವಿ, ಇದ್ದರು. ನಿರೂಪಣೆ ಶಿಕ್ಷಕ ನರಸಪ್ಪ ಚಿನ್ನಕಟ್ಟಿ ನೆರವೇರಿಸಿದರು.

ಕಾರ್ಯಕ್ರಮ ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ, ನಾಟಕ, ನಡೆದವು ನೃತ್ಯಗಳು ಪಾಲಕರ ಕಣ್ಮನ ಸೆಳೆದವು,

ಶುಕ್ರವಾರ, ಮಾರ್ಚ್ 27, 2026

ಅರಣಕಲ್ ಅವರಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗೌರವ ಸಮರ್ಪಣೆ.

ಚಿತ್ತಾಪುರ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ದೇವಿಂದ್ರ ಅರಣಕಲ್‌ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರನ್ನು ಬೆಂಗಳೂರಿನ ಸರ್ಕಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಬುದ್ಧನ ಪ್ರತಿಮೆ ನೀಡಿ ಸನ್ಮಾನಿಸಿ ಆಶೀರ್ವಾದ ಪಡೆದರು.

ನೂತನ ಅಧ್ಯಕ್ಷರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಂಘದ ಅಭಿವೃದ್ಧಿಗೆ ಮತ್ತು ರೈತರ ಹಿತರಕ್ಷಣೆಗೆ ಶ್ರಮಿಸುವಂತೆ ಹಾರೈಸಿ ಶುಭ ಕೋರಿದರು.

​ಈ ಸಂದರ್ಭದಲ್ಲಿ ಮಾತನಾಡಿದ ದೇವಿಂದ್ರ ಅರಣಕಲ್ ಅವರು, ಸಚಿವರ ಮಾರ್ಗದರ್ಶನದಲ್ಲಿ ಚಿತ್ತಾಪುರ ತಾಲೂಕಿನ ರೈತರಿಗೆ ಸಹಕಾರ ಸಂಘದ ಮೂಲಕ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾ‌ರ್, ಪಿಎಲ್ಲಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನ‌ರ್, ತಾಪಂ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಭಾಗೋಡಿ, ಎಪಿಎಂಸಿ ಮಾಜಿ ಸದಸ್ಯ ಹಣಮಂತ ಸಂಕನೂರ, ಮುಖಂಡರಾದ ಇಂದುಶೇಖರ್ ಬೆಂಕಿ, ಪ್ರಭು ಹಲಕರ್ಟಿ, ಬಸವರಾಜ ಚಿನ್ನಮಳ್ಳಿ, ನಾಗೇಂದ್ರ ಜೈಗಂಗಾ, ಬಸವರಾಜ ಪಾಟೀಲ ದಳಪತಿ, ಮಲ್ಲಪ್ಪ ಮಳಖೇಡ, ಪಾಶಾ ಶಿರೂರು ಸೇರಿದಂತೆ ಸಹಕಾರ ಸಂಘದ ಪ್ರಮುಖರು, ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಬುಧವಾರ, ಮಾರ್ಚ್ 25, 2026

ಪಿಂಚಣಿ ಕಾಯ್ದೆ 2025 ರದ್ದತಿಗೆ ಆಗ್ರಹಿಸಿ ಪ್ರಧಾನಿಗೆ ಮನವಿ.

ಚಿತ್ತಾಪುರ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ '2025ರ ಊರ್ಜಿತಗೊಳಿಸುವಿಕೆ ಕಾಯ್ದೆ ಪಿಂಚಣಿದಾರರ ನಡುವೆ ತಾರತಮ್ಯ ಉಂಟು ಮಾಡುತ್ತಿದ್ದು, ಇದನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ರೇವಣಸಿದ್ದಪ್ಪ ರೋಣದ ಅವರು, "ಮಾರ್ಚ್ 25, 2025 ರಂದು ಹಣಕಾಸು ಮಸೂದೆಯ ಭಾಗವಾಗಿ ಯಾವುದೇ ಪೂರ್ವ ಚರ್ಚೆ ಅಥವಾ ಸೂಚನೆ ಇಲ್ಲದೆ ಈ ಕಾಯ್ದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿ ಜಾರಿಗೆ ತರಲಾಗಿದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಈ ಕಾಯ್ದೆಯು ನಿವೃತ್ತಿ ದಿನಾಂಕದ ಆಧಾರದ ಮೇಲೆ ಪಿಂಚಣಿದಾರರನ್ನು ವಿವಿಧ ವರ್ಗಗಳಾಗಿ ವಿಂಗಡಿಸುತ್ತದೆ. ಇದರಿಂದಾಗಿ ಹಳೆಯ ಪಿಂಚಣಿದಾರರು ಮುಂದಿನ ವೇತನ ಆಯೋಗಗಳ ಶಿಫಾರಸು ಮತ್ತು ಹೆಚ್ಚುವರಿ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿರುವ ನಿವೃತ್ತ ನೌಕರರಿಗೆ ಆರ್ಥಿಕ ಹೊಡೆತ ನೀಡುವ ಈ ಕ್ರಮ ಅತ್ಯಂತ ಕಠಿಣವಾಗಿದೆ," ಎಂದು ಅವರು ವಿವರಿಸಿದರು.

"ಡಿ.ಎಸ್. ನಕಾರ ಮತ್ತು ಇತರರು ವಿರುದ್ಧ ಭಾರತ ಒಕ್ಕೂಟದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಪ್ರಕಾರ, ಪಿಂಚಣಿ ಎಂಬುದು ವೃದ್ಧಾಪ್ಯದ ಸಾಮಾಜಿಕ ಭದ್ರತೆಯಾಗಿದೆ. ಆದರೆ ಈ ಹೊಸ ಕಾಯ್ದೆಯು ನ್ಯಾಯಾಂಗದ ಘೋಷಣೆಗಳನ್ನು ಗಾಳಿಗೆ ತೂರಿದೆ. ಸರ್ಕಾರವು ತನ್ನ ನಾಗರಿಕರಿಗೆ ನ್ಯಾಯ ಒದಗಿಸುವ ಉದ್ದೇಶಕ್ಕೆ ಇದು ವಿರುದ್ಧವಾಗಿದೆ," ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಹಶೀಲ್ದಾರ್ ಅವರು ಮನವಿ ಪತ್ರವನ್ನು ಸ್ವೀಕರಿಸಿ, ಇದನ್ನು ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಶಿಧರ ಪಾಟೀಲ್, ಮಲ್ಲಣ್ಣ ಮಾಸ್ತರ್, ವಿಜಯಕುಮಾರ್ ಲೋಡೆನೂರ, ಮಹದೇವಪ್ಪ ಉಪ್ಪಾರ, ಕಿಶನ್ ರಾಠೋಡ್, ಸುಭಾಷ ಮೆಂಗಾಜಿ, ಸಿದ್ದಯ್ಯ ಸ್ಥಾವರಮಠ, ಬಾಬು ಕರದಾಳ, ಬಸವರಾಜ ಕಲಬುರ್ಗಿ, ಮಲ್ಲಿಕಾರ್ಜುನ, ಶಿವನಾಗಪ್ಪ, ದೇವಪ್ಪ ನಂದೂರಕರ್, ದೇವಿಂದ್ರ ಶಾಹಬಾದಕರ್, ತುಕಾರಾಂ ನಾಯಕ, ಶ್ರೀಮತಿ ಸರಳಾದೇವಿ, ಶ್ರೀಮತಿ ಶಾಂತಾ ಬಾಯಿ, ಶ್ರೀಮತಿ ಮಾಯಾದೇವಿ ರೋಣದ, ಶ್ರೀಮತಿ ಸರಸ್ವತಿ ಪಾಟೀಲ್, ಲಕ್ಷ್ಮಣ್ ಭಜಂತ್ರಿ, ಮೋನಯ್ಯ ವಿಶ್ವಕರ್ಮ, ಸಿದ್ದಣ್ಣ ಮೂಡಲಕರ್, ಮೈಬೂಬ್ ಅಲಿ ಅಲ್ಲೂರ, ನಬೀ ಸಾಬ ಸೇರಿದಂತೆ ಸಂಘದ ಅನೇಕ ನಿವೃತ್ತ ನೌಕರರು ಉಪಸ್ಥಿತರಿದ್ದರು.

ನೀರು ಅಮೂಲ್ಯ: ವ್ಯರ್ಥ ಮಾಡದೇ ಸಂರಕ್ಷಿಸಿ: ತಹಸಿಲ್ದಾರ್

ಚಿತ್ತಾಪೂರ: ಇಂದಿನ ದಿನಗಳಲ್ಲಿ ನಾವು ನೀರನ್ನು ಅತಿಯಾಗಿ ಪೋಲು ಮಾಡುತ್ತಿದ್ದೇವೆ. ಮನುಷ್ಯ ಒಂದು ದಿನ ಊಟವಿಲ್ಲದೆ ಬದುಕಬಲ್ಲ, ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕು ಎಂದು ತಹಸೀಲ್ದಾರ್ ನಾಗಯ್ಯ ಹೀರೆಮಠ್ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ 'ವಿಶ್ವ ಜಲ ದಿನಾಚರಣೆ' ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇವಲ ನೀರು ಉಳಿಸುವುದು ಮಾತ್ರವಲ್ಲ, ನೀರು ಮಲಿನವಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಕಲುಷಿತ ನೀರನ್ನು ಸೇವಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಆರೋಗ್ಯವಂತ ಸಮಾಜಕ್ಕಾಗಿ ಶುದ್ಧ ನೀರಿನ ಬಳಕೆ ಅನಿವಾರ್ಯ" ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿಶನ್ ಮಾಡಲಗಿ ಮಾತನಾಡಿ "ನೀರು ಪ್ರಕೃತಿ ನಮಗೆ ನೀಡಿದ ಉಡುಗೊರೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಈ ಕಾಲದಲ್ಲಿ ಜಲಮೂಲಗಳ ರಕ್ಷಣೆ ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ನಮ್ಮ ಜವಾಬ್ದಾರಿಯಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಮತ್ತು ತಾಲೂಕಿನಾದ್ಯಂತ ಸಾರ್ವಜನಿಕರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು" ಎಂದು ಸಲಹೆ ನೀಡಿದರು.

ನ್ಯಾಯವಾದಿಗಳಾದ ಎ,ಎಂ ಅವಂಟಿ ರವರು ವಿಶ್ವಜಲ ದಿನಾಚರಣೆ ಕುರಿತು ಕಾನೂನು ಮಾಹಿತಿ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಅಪ್ಪರ ಜಿಲ್ಲಾ ಸರ್ಕಾರಿ ವಕೀಲರಾದ ಶ್ರೀಮತಿ ವಿ ಆರ್ ಕಾಂತ, ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀಮತಿ ಅಂಜನಾದೇವಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೋಮಶೇಖರ ಕರದಳ್ಳಿ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೋತಿ, ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಮಾಜಮುಖಿ ಕಾರ್ಯಗಳಿಂದ ಜನ್ಮದಿನಕ್ಕೆ ಸಾರ್ಥಕತೆ: ಕಂಬಳೇಶ್ವರ ಶ್ರೀ.

ಚಿತ್ತಾಪುರ: ಜನ್ಮದಿನೋತ್ಸವವು ಕೇವಲ ಆಚರಣೆಯಾಗದೆ, ಬಡವರು, ದೀನದಲಿತರಿಗೆ ಹಾಗೂ ಸಮಾಜಕ್ಕೆ ಅನುಕೂಲವಾದಾಗ ಮಾತ್ರ ಅದಕ್ಕೊಂದು ಅರ್ಥ ಬರಲಿದೆ ಎಂದು ಕಂಬಳೇಶ...