ಕುಡಿಯಲು ಶುದ್ಧ ನೀರಿಲ್ಲ, ಸ್ವಚ್ಛತೆಯೂ ಇಲ್ಲ.
ಚಿತ್ತಾಪುರ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಬಸ್ ನಿಲ್ದಾಣವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ. ನಿಲ್ದಾಣದ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹದಗೆಟ್ಟ ಕುಡಿಯುವ ನೀರು ಮತ್ತು ನೈರ್ಮಲ್ಯ
ನಿಲ್ದಾಣದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವು ಹೆಸರಿಗಷ್ಟೇ ಇದೆ. ಇಲ್ಲಿ ಸರಬರಾಜಾಗುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ನೀರಿನ ಟ್ಯಾಂಕ್ಗಳಲ್ಲಿ ಪಾಚಿ ಮತ್ತು ಕೊಳಚೆ ತುಂಬಿಕೊಂಡಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಇನ್ನು ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಂತೂ ಹೇಳತೀರದಾಗಿದೆ. ದುರ್ನಾತದಿಂದಾಗಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕವಿಗಳ ಚಿತ್ರಗಳಿಗೆ ಅಪಮಾನ, ನಿರ್ವಹಣೆಯಿಲ್ಲದ ಫ್ಯಾನ್ಗಳು ನಿಲ್ದಾಣದ ಗೋಡೆಗಳ ಮೇಲೆ ಅಳವಡಿಸಲಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾನ್ ಕವಿಗಳ ಭಾವಚಿತ್ರಗಳು ಧೂಳು ಹಿಡಿದು ಅನಾಥವಾಗಿವೆ. ವರ್ಷಗಳಿಂದ ಇವುಗಳನ್ನು ಸ್ವಚ್ಛಗೊಳಿಸುವ ಕನಿಷ್ಠ ಸೌಜನ್ಯವನ್ನೂ ಸಾರಿಗೆ ಇಲಾಖೆ ತೋರಿಲ್ಲ. ಅಳವಡಿಸಲಾದ ಫ್ಯಾನ್ಗಳು ಧೂಳಿನಿಂದ ತುಂಬಿ ನಿಷ್ಪ್ರಯೋಜಕವಾಗಿವೆ. ನಿಲ್ದಾಣಕ್ಕೆ ಸುಣ್ಣ-ಬಣ್ಣ ಬಳಿದು ವರ್ಷಗಳು ಕಳೆದಂತಿದ್ದು, ಕಟ್ಟಡವು ಭಣಗುಡುತ್ತಿದೆ.
ಸಾರಿಗೆ ವ್ಯವಸ್ಥಾಪಕರು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಕೂಡಲೇ ಈ ಸಮಸ್ಯೆಗಳತ್ತ ಗಮನಹರಿಸಿ, ಬಸ್ ನಿಲ್ದಾಣದ ನವೀಕರಣಕ್ಕೆ ಮುಂದಾಗುತ್ತಾರೆಯೇ ಕಾದು ನೋಡಬೇಕಿದೆ.
"ನಾವು ಪ್ರತಿದಿನ ಹಳ್ಳಿಗಳಿಂದ ಶಾಲಾ-ಕಾಲೇಜಿಗೆ ಬರಲು ಇದೇ ನಿಲ್ದಾಣವನ್ನು ಅವಲಂಬಿಸಿದ್ದೇವೆ. ಇಲ್ಲಿ ಕುಡಿಯಲು ಶುದ್ಧ ನೀರಿಲ್ಲ, ಕೂರಲು ಸರಿಯಾದ ಖುರ್ಚಿಗಳಿಲ್ಲ ಇದ್ದರು ಕಡಿಮೆ ಇವೆ. ಧೂಳು ಮತ್ತು ಗಲೀಜಿನ ನಡುವೆ ಬಸ್ಗಾಗಿ ಕಾಯಬೇಕಿದೆ. ಅಧಿಕಾರಿಗಳಿಗೆ ನಮ್ಮ ಕಷ್ಟ ಕಾಣುತ್ತಿಲ್ಲವೇ?"
-ವಿಧ್ಯಾರ್ಥಿನಿ ಶೃತಿ
"ವ್ಯಾಪಾರ-ವಹಿವಾಟುಗಳಿಗೆ ನೂರಾರು ಹಳ್ಳಿಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಆದರೆ ಬಸ್ ನಿಲ್ದಾಣದ ದುಸ್ಥಿತಿ ನೋಡಿದರೆ ವಾಕರಿಕೆ ಬರುತ್ತದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಎಚ್ಚೆತ್ತು ನಿಲ್ದಾಣಕ್ಕೆ ಸುಣ್ಣ-ಬಣ್ಣ ಬಳಿಯಬೇಕು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು."
— ಮಲ್ಲಿಕಾರ್ಜುನ ಅಲ್ಲೂರಕರ್
ಕನ್ನಡ ಪರ ಹೋರಾಟಗಾರು ಚಿತ್ತಾಪೂರ