BREAKING NEWS

Entertainment

Technology

Travelling

ತಿಪ್ಪಣ್ಣಪ್ಪ ಕಮಕನೂರ್ ಜನ್ಮದಿನ: ರೋಗಿಗಳಿಗೆ ಹಣ್ಣು-ಹಂಪಲು ಊಟದ ವ್ಯವಸ್ಥೆ.

ಚಿತ್ತಾಪುರ: ಪ್ರಮುಖ ಕಾಂಗ್ರೆಸ್ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ (ಎಂಎಲ್‌ಸಿ) ತಿಪ್ಪಣ್ಣಪ್ಪ ಕಮಕನೂರ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಊಟದ ವ್ಯವಸ್ಥೆ (ಅನ್ನಪ್ರಸಾದ) ಮಾಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲಾಯಿತು.

ಕರ್ನಾಟಕ ಪ್ರದೇಶ ಕೋಲಿ ಸಮಾಜದ ಯುವ ಘಟಕದ ತಾಲೂಕಾಧ್ಯಕ್ಷರಾದ ಮಹೇಶ್ ಸಾತನೂರು ಅವರು ಈ ಸಂದರ್ಭದಲ್ಲಿ ಮಾತನಾಡಿ, "ತಿಪ್ಪಣ್ಣಪ್ಪ ಕಮಕನೂರ ಅವರು ಸಮಾಜದ ಏಳಿಗೆಗಾಗಿ ಹಾಗೂ ಸಾರ್ವಜನಿಕರ ಸೇವೆಗಾಗಿ ಸದಾ ಶ್ರಮಿಸುತ್ತಿರುವ ನಾಯಕರಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಮಾನವೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಾಜದ ದಿಟ್ಟ ಹೋರಾಟಗಾರ ಎಂದರೆ ದಿವಂಗತ ವಿಠಲ್ ಹೇರೊರ ಅವರಂತೆ ಈಗ ಸಾಧ್ಯ ನಮ್ಮ ಕಮಕನೂರ ಸಾಹೇಬರು ಅವರು ಸಮಾಜಕ್ಕೆ ಮತ್ತಷ್ಟು ಸೇವೆ ಸಲ್ಲಿಸಲು ಭಗವಂತನು ಅವರಿಗೆ ಆಯುಷ್ಯ, ಆರೋಗ್ಯ ಕರುಣಿಸಲಿ" ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ರೇವಣಸಿದ್ದ ದೊಡ್ಡಮನಿ, ಶ್ರೀಕಾಂತ್ ಚಪಟ್ಲ, ಚನ್ನು ಸಾತನೂರು, ಮಲ್ಲಿನಾಥ ಪೂಜಾರಿ ರಾಜೋಳಾ, ಚನ್ನಬಸಪ್ಪ ತಳವಾರ್, ನಿಂಗಪ್ಪ ದಂಡಗುಂಡ, ರಾಜು ಯಾಗಪುರ್, ಶರಣಪ್ಪ ಹೊಸೂರ್, ಸಾಬು ಹೊಸಮನಿ, ರಾಜಕುಮಾರ ತಳವಾರ್ ಸೇರಿದಂತೆ ಕೋಲಿ ಸಮಾಜದ ಪ್ರಮುಖರು, ಮುಖಂಡರು ಹಾಗೂ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಣೆ.

ಚಿತ್ತಾಪುರ: ತಾಯಿ ಯಾವುದೇ ನಿರೀಕ್ಷೆ ಇಲ್ಲದೆ ಮಕ್ಕಳನ್ನು ಸಲಹುವಂತೆ, ಪ್ರಕೃತಿ ಮಾತೆಯು ನಮಗೆ ಆರೋಗ್ಯವಂತ ಬದುಕನ್ನು ನೀಡುತ್ತಾಳೆ. ಆದ್ದರಿಂದ ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಸೃಷ್ಟಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಕರೆ ನೀಡಿದರು.

ಮತ​ಕ್ಷೇತ್ರದ ವಾಡಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಲು ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ​ಮಾಲಿನ್ಯದ ತಡೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ ​ಇಂದಿನ ಕೈಗಾರಿಕಾ ಯುಗದಲ್ಲಿ ಜಲ, ವಾಯು ಹಾಗೂ ಶಬ್ದ ಮಾಲಿನ್ಯದಿಂದ ವಾತಾವರಣ ಸಂಪೂರ್ಣವಾಗಿ ಹದಗೆಡುತ್ತಿದೆ. ಈ ವ್ಯವಸ್ಥೆ ಹೀಗೆಯೇ ಮುಂದುವರಿದರೆ ನಮ್ಮ ದುರಂತಕ್ಕೆ ನಾವೇ ಹೊಣೆಯಾಗಬೇಕಾಗುತ್ತದೆ. ಪರಿಸರ ಮಾಲಿನ್ಯದ ದುಷ್ಪರಿಣಾಮದಿಂದಾಗಿ ಇಂದು ಎಷ್ಟೋ ಜನರು ನಾನಾ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ.

 ಆರೋಗ್ಯವಂತ ನಾಡು ಮತ್ತು ಸದೃಢ ಸಮಾಜದ ನಿರ್ಮಾಣಕ್ಕೆ ಪರಿಶುದ್ಧ ಪರಿಸರ ಅತ್ಯಗತ್ಯವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.​"ನಾವೆಲ್ಲರೂ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬರೂ ಸಸಿಗಳನ್ನು ಮಕ್ಕಳಂತೆ ಲಾಲನೆ, ಪಾಲನೆ, ಪೋಷಣೆ ಮಾಡಿ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕೆ ದಾರಿಯಾಗುತ್ತದೆ." ಎಂದರು.

​ಈ ಸಂದರ್ಭದಲ್ಲಿ ರಾಷ್ಟ್ರೀಯ ಗೋರ್ ಸೇನಾದ ರಾಜಾಧ್ಯಕ್ಷ ರವಿ ಕಾರಬಾರಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಮ್.ಡಿ. ತಮಜೀದ್, ಪ್ರಮುಖ ಮುಖಂಡರಾದ ರವಿಕುಮಾರ ಸಿಂದಗಿ, ಮಲ್ಲಿಕಾರ್ಜುನ ಆಣಿಕೇರಿ, ಜಯಂತ ಪವಾರ, ಪ್ರೇಮ ರಾಠೋಡ, ಆಕಾಶ ಉಪ್ಪಿನ, ರಮೇಶ ಜಾಧವ ಹಾಗೂ ಸುನಿಲ ರಾಠೋಡ ಉಪಸ್ಥಿತರಿದ್ದರು.ಆಸ್ಪತ್ರೆಯ ಸಿಬ್ಬಂದಿಗಳಾದ ಗೋವಿಂದ ಮೂರ್ತಿ, ಬಾಬುರಾವ ಭೀಮನಳ್ಳಿ, ಪಾಂಡುರಂಗ ಕೊತಲಾಪುರ, ಕೃಷ್ಣ ಹುಲಿಕರ್, ಮಂಜುಳಾ ಗುಡುಬಾ, ರೇಷ್ಮಾ ನಲಿ, ನಿರ್ಮಲ ವಿಲಿಯಮ್, ನೀಲಮ್ಮ ಪೂಜಾರಿ, ಸವಿತಾ ಮೇತ್ರೆ, ಪೂಜಾ ಮೈನಾಳಕರ್, ವಿಜ್ಜುಬಾಯಿ ಪವಾರ, ಲಕ್ಷ್ಮಣ ಚವ್ಹಾಣ, ಸೂರ್ಯಕಾಂತ ಹೇರೊರ, ಜಯಕುಮಾರ ಚವ್ಹಾಣ, ರಮೇಶ ಮಡಿವಾಳ ಹಾಗೂ ರಬೇಕಾ ದೊಡ್ಡಮನಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಶ್ವ ಪರಿಸರ ದಿನ: ಸಸಿ ನೆಟ್ಟು ಕಾನೂನು ಅರಿವು ಮೂಡಿಸಿದ ನ್ಯಾಯಾಧೀಶರು.

​ಚಿತ್ತಾಪುರ: ಪ್ರತಿಯೊಬ್ಬ ನಾಗರಿಕನಿಗೂ ಪರಿಸರವನ್ನು ರಕ್ಷಿಸುವ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಜವಾಬ್ದಾರಿ ಇದೆ ಎಂದು ಕಲಬುರಗಿಯ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸಿರಾಜುದ್ದೀನ್ ಎ. ತಿಳಿಸಿದರು.

​ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪ್ರಾದೇಶಿಕ ಅರಣ್ಯ ವಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಜೂನ್ 05ರ "ವಿಶ್ವ ಪರಿಸರ ದಿನ" ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ​ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೇವಲ ಕಾನೂನುಗಳಿದ್ದರೆ ಸಾಲದು, ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡುವುದು ಅತ್ಯಗತ್ಯ. ಪರಿಸರವನ್ನು ನಾಶಪಡಿಸುವುದು ಕಾನೂನುಬಾಹಿರ ಮಾತ್ರವಲ್ಲ, ಅದು ಮಾನವಕುಲದ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಮಾರ್ಮಿಕವಾಗಿ ನುಡಿದರು.

​ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಬಡಿಗೇರ ಮಾತನಾಡಿ, "ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮರಗಳು ಭೂಮಿಯ ಶ್ವಾಸಕೋಶಗಳಾಗಿವೆ. ಹೆಚ್ಚು ಹೆಚ್ಚು ಮರಗಳನ್ನು ನೆಡುವುದರಿಂದ ಶುದ್ಧ ಗಾಳಿ, ಉತ್ತಮ ಹವಾಮಾನ ಹಾಗೂ ಜೀವ ವೈವಿಧ್ಯದ ಸಂರಕ್ಷಣೆ ಸಾಧ್ಯವಾಗುತ್ತದೆ" ಎಂದರು.
​ಮುಂದುವರಿದು ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

​"ಇಂದು ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ದೊಡ್ಡ ಸವಾಲಾಗಿದೆ. ವಿಶೇಷವಾಗಿ ಏಕಬಳಕೆ (ಸಿಂಗಲ್ ಯೂಸ್) ಪ್ಲಾಸ್ಟಿಕ್ ಭೂಮಿ, ನೀರು ಹಾಗೂ ವನ್ಯಜೀವಿಗಳಿಗೆ ತೀವ್ರ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ನಾವು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ, ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಬಳಸಬೇಕು. ಈ ವಿಶ್ವ ಪರಿಸರ ದಿನದಂದು ಹೆಚ್ಚು ಹೆಚ್ಚು ಮರಗಳನ್ನು ನೆಡುವ, ನೆಟ್ಟ ಮರಗಳನ್ನು ಸಂರಕ್ಷಿಸುವ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವ ಸಂಕಲ್ಪ ಮಾಡೋಣ" ಎಂದು ಕರೆ ನೀಡಿದರು.

​ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಸೋಮಶೇಖರ ಬಿ. ಕರದಾಳ, ಸಿವಿಲ್ ನ್ಯಾಯಾಧೀಶರಾದ ಕಿಶನ್ ಬಿ. ಮಾಡಲಗಿ, ಅಭಿಷೇಕ್ ಜೋಶಿ, ಸಹಾಯಕ ಸರ್ಕಾರಿ ಅಭಿಯೋಜಕಿ ಶ್ರೀಮತಿ ಅಂಜನಾದೇವಿ ಆರ್., ಅಪರ ಜಿಲ್ಲಾ ಸರ್ಕಾರಿ ವಕೀಲರಾದ ಶ್ರೀಮತಿ ವಿ. ಆರ್. ಕಾಂತ, ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಾದ ಎಸ್. ಸಿ. ಪಾಟೀಲ್ ಸೇರಿದಂತೆ ಹಲವು ಗಣ್ಯರು, ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರು ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಚಿತ್ತಾಪುರ ಜನತೆ ಹಾಗೂ ಹೈಕಮಾಂಡ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಕೃತಜ್ಞತೆ

ಚಿತ್ತಾಪುರ: ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ರಾಜ್ಯದ ಅತ್ಯಂತ ಪ್ರಮುಖ ಇಲಾಖೆಗಳಾದ ಗೃಹ ಇಲಾಖೆ, ಐಟಿ-ಬಿಟಿ ಇಲಾಖೆ ಹಾಗೂ ಇ-ಆಡಳಿತ ಇಲಾಖೆಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರು ಪಕ್ಷದ ಹಿರಿಯ ನಾಯಕರಿಗೆ ಮತ್ತು ಕ್ಷೇತ್ರದ ಜನತೆಗೆ ಧನ್ಯವಾದ ಸಮರ್ಪಿಸಿದ್ದಾರೆ.

​ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಜಾಲತಾಣ ಸಂದೇಶ ಹಂಚಿಕೊಂಡಿರುವ ಅವರು, ತಮಗೆ ಇಷ್ಟು ದೊಡ್ಡ ಮಹತ್ವದ ಜವಾಬ್ದಾರಿಯನ್ನು ನೀಡಿ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಾಯಕರಾದ ಸಿದ್ದರಾಮಯ್ಯ ಹಾಗೂ ರಂದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

​ಕ್ಷೇತ್ರದ ಜನತೆಯ ಆಶೀರ್ವಾದಕ್ಕೆ ಧನ್ಯವಾದ:
​"ನನಗೆ ಸತತವಾಗಿ ಆಶೀರ್ವದಿಸಿ, ನಿರಂತರವಾಗಿ ಬೆಂಬಲಿಸುತ್ತಾ ಬಂದಿರುವ ಚಿತ್ತಾಪುರ ವಿಧಾನಸಭಾ ಕ್ಷೇತ್ರ ಮತ್ತು ಕಲಬುರ್ಗಿ ಜಿಲ್ಲೆಯ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷದ ಶ್ರಮಜೀವಿ ಕಾರ್ಯಕರ್ತರಿಗೆ ನನ್ನ ಅನಂತಾನಂತ ಧನ್ಯವಾದಗಳು." ಎಂದು ಪ್ರಿಯಾಂಕ್ ಖರ್ಗೆ ಭಾವುಕರಾಗಿ ನುಡಿದಿದ್ದಾರೆ.

​ಪ್ರಬುದ್ಧ ಕರ್ನಾಟಕದ ಸಂಕಲ್ಪ:
​ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಉದಾತ್ತ ಆಶಯಗಳ ಅಡಿಯಲ್ಲಿ ಕರ್ನಾಟಕವನ್ನು ಒಂದು ಸುಸಂಸ್ಕೃತ ಮತ್ತು ಪ್ರಬುದ್ಧ ಸಮಾಜವನ್ನಾಗಿ ರೂಪಿಸುವ ನಿಟ್ಟಿನಲ್ಲಿ ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ಮಹತ್ಕಾರ್ಯಕ್ಕೆ ರಾಜ್ಯದ ಸಮಸ್ತ ಜನತೆಯ ಆತ್ಮೀಯ ಸಹಕಾರ ಇರಬೇಕೆಂದು ನೂತನ ಸಚಿವರು ಮನವಿ ಮಾಡಿದ್ದಾರೆ.

ನಾಗರೆಡ್ಡಿ ಪಾಟೀಲ್ ಕರದಾಳಗೆ ಎಂಎಲ್‌ಸಿ ಸ್ಥಾನ ನೀಡಲು ಒತ್ತಾಯ.

​ಚಿತ್ತಾಪುರ: ಕಾಂಗ್ರೆಸ್ ಪಕ್ಷದಲ್ಲಿ ಕಳೆದ 20 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯ ಮುಖಂಡ ನಾಗರೆಡ್ಡಿ ಪಾಟೀಲ್ ಕರದಾಳ ಅವರಿಗೆ ವಿಧಾನ ಪರಿಷತ್ತಿಗೆ (ಎಂಎಲ್‌ಸಿ) ನಾಮನಿರ್ದೇಶನ ಮಾಡಬೇಕು ಎಂದು ಸ್ಥಳೀಯ ಮುಖಂಡರು ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಹೈಕಮಾಂಡ್ ಅನ್ನು ಒತ್ತಾಯಿಸಿದರು.

​ಪಟ್ಟಣದ ಎಪಿಎಂಸಿಯ ಅಣ್ಣಾರಾವ ಪಾಟೀಲ ಅವರ ಅಡತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖಂಡರು ನಾಗರೆಡ್ಡಿ ಪಾಟೀಲ್ ಪರವಾಗಿ ಬ್ಯಾಟ್ ಬೀಸಿ ​ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಪ್ರಭುರಾಜ್ ಕಾಂತಾ ಮಾತನಾಡಿ, "ನಾಗರೆಡ್ಡಿ ಪಾಟೀಲ್ ಅವರು ಸ್ಥಳೀಯವಾಗಿ ಎಲ್ಲರ ಕೈಗೆ ಸುಲಭವಾಗಿ ಸಿಗುವಂತಹ ಸರಳ ಸಜ್ಜನಿಕೆಯ ನಾಯಕರಾಗಿದ್ದಾರೆ. ಎಲ್ಲಾ ಜಾತಿ ಜನಾಂಗವನ್ನು ಸಮಾನವಾಗಿ ಕೊಂಡೊಯ್ಯುವ ವಿಶಾಲ ಮನೋಭಾವ ಅವರದ್ದಾಗಿದೆ. ಈಗಾಗಲೇ ಈ ಭಾಗದಲ್ಲಿ ಹಿಂದುಳಿದ ವರ್ಗದವರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಈ ಬಾರಿ ಮೇಲ್ವರ್ಗದ ಜನಾಂಗಕ್ಕೆ ಎಂಎಲ್‌ಸಿ ಸ್ಥಾನ ನೀಡಬೇಕು. ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ದುಡಿದಿರುವ ನಾಗರೆಡ್ಡಿ ಅವರಿಗೆ ಪಕ್ಷ ಈ ಬಾರಿ ಕೂಲಿ ನೀಡಬೇಕು" ಎಂದು ವಿನಂತಿಸಿದರು.
​ಪುರಸಭೆ ಮಾಜಿ ಸದಸ್ಯ ವಿನೋದ್ ಗುತ್ತೇದಾರ್ ಮಾತನಾಡಿ, "ನಾಗರೆಡ್ಡಿ ಪಾಟೀಲ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವಂತೆ ಒತ್ತಾಯಿಸಿ ಚಿತ್ತಾಪುರ ಕ್ಷೇತ್ರದಿಂದ ನೂರಕ್ಕೂ ಅಧಿಕ ಬೆಂಬಲಿಗರು ಬುಧವಾರ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದು ಅಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಜ್ಯದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು" ಎಂದು ಮಾಹಿತಿ ನೀಡಿದರು.

​ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, "ನಾಗರೆಡ್ಡಿ ಪಾಟೀಲ್ ಅವರು ಕೇವಲ ರಾಜಕಾರಣಿಯಲ್ಲ, ಅವರೊಬ್ಬ ಶಿಕ್ಷಣ ಪ್ರೇಮಿ ಹಾಗೂ ಪಕ್ಷದ ಶಿಸ್ತಿನ ಸಿಪಾಯಿ. 2005ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ದಿಗ್ಗಾಂವ್ ಭಾಗದಲ್ಲಿ ಅವರು ಮಾಡಿದ ಜನಪರ ಕೆಲಸಗಳು ಇಂದಿಗೂ ಮಾದರಿಯಾಗಿವೆ. ಅವರ ಜನಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಅವರಿಗೆ ಎಂಎಲ್‌ಸಿ ಸ್ಥಾನ ನೀಡಲೇಬೇಕು" ಎಂದು ಆಗ್ರಹಿಸಿದರು.

​ಇದೇ ಸಂದರ್ಭದಲ್ಲಿ ನ್ಯಾಯವಾದಿ ಎಸ್.ಎನ್. ಪಾಟೀಲ ಅವರು ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಚಂದ್ರಶೇಖರ ಸಾತನೂರ, ಸುವನರೆಡ್ಡಿ, ಶ್ರೀನಿವಾಸ ರೆಡ್ಡಿ ಪಾಲಪ್, ಶಾಮ್ ಮುಕೇದಾರ, ಶಿವರಾಜ್ ಪಾಳೇದ್, ಸಂತೋಷ ಚೌದರಿ, ನಾಗು ಕಲ್ಲಕ್, ಅನೀಲ್ ವಡ್ಡಡಗಿ, ರವಿ ಗೊಬ್ಬುರ್, ನೀಲಕಂಠ ಕರದಾಳ, ರವಿ ಸಾಗರ ಹೊಸಮನಿ, ರಾಮು ಗಡ್ಡಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜೆ ಟಿವಿ ಕನ್ನಡ ಇಂಪ್ಯಾಕ್ಟ್: ಉಗ್ರ ಪ್ರತಿಭಟನೆಯ ಎಚ್ಚರಿಕೆಗೆ ಮಣಿದ ರೈಲ್ವೆ ಇಲಾಖೆ; ವಾಡಿ ನಿಲ್ದಾಣದ ಕಾಲುದಾರಿ ತಕ್ಷಣ ತೆರವು!.

​ಚಿತ್ತಾಪುರ: ವಾಡಿ ಪಟ್ಟಣದ ರೈಲು ನಿಲ್ದಾಣದ ಬಳಿ ಸಾರ್ವಜನಿಕರ ಸಂಚಾರಕ್ಕೆ ಇದ್ದ ಹಳೆಯ ಕಾಲುದಾರಿಯನ್ನು ಏಕಾಏಕಿ ಬಂದ್ ಮಾಡಿದ್ದ ರೈಲ್ವೆ ಸಿಬ್ಬಂದಿ, ಸಾರ್ವಜನಿಕರ ಆಕ್ರೋಶ ಹಾಗೂ ಉಗ್ರ ಪ್ರತಿಭಟನೆಯ ಎಚ್ಚರಿಕೆಗೆ ಮಣಿದು ತಕ್ಷಣವೇ ತಡೆಯನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಈ ಸಮಸ್ಯೆಯ ಕುರಿತು 'ಜೆ ಟಿವಿ ಕನ್ನಡ ನ್ಯೂಸ್' ವಾಹಿನಿಯು ಮೊಟ್ಟಮೊದಲ ಬಾರಿಗೆ ಸವಿಸ್ತಾರವಾದ ವರದಿ ಪ್ರಸಾರ ಮಾಡುವ ಮೂಲಕ ಸಾರ್ವಜನಿಕರ ಧ್ವನಿಯಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ರೈಲ್ವೆ ಇಲಾಖೆ ಹಾಗೂ ಸಿಬ್ಬಂದಿ, ಸ್ಥಳದಲ್ಲಿದ್ದ ತಡೆಗೋಡೆ/ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.

​ಕಾಲುದಾರಿ ತೆರವುಗೊಳಿಸಿದ ಬೆನ್ನಲ್ಲೇ ಮಾತನಾಡಿದ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, "ಇದು ಜನಸಾಮಾನ್ಯರ ಧ್ವನಿಯಾಗಿ ನಾವೆಲ್ಲರೂ ಸಂಘಟಿತವಾಗಿ ನಡೆಸಿದ ಹೋರಾಟಕ್ಕೆ ಸಿಕ್ಕ ದೊಡ್ಡ ಜಯವಾಗಿದೆ. ರೈಲ್ವೆ ಇಲಾಖೆಯು ಏಕಾಏಕಿ ದಾರಿ ಬಂದ್ ಮಾಡಿದ್ದರಿಂದ ಸುಮಾರು 20 ಸಾವಿರ ಬಡಾವಣೆ ನಿವಾಸಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ನಾವು ಸ್ಥಳೀಯ ರೈಲು ನಿಲ್ದಾಣದ ಪ್ರಬಂಧಕರಿಗೆ, ಮುಂಬಯಿ ಮತ್ತು ಸೊಲ್ಲಾಪುರದ ಕೇಂದ್ರ ವಿಭಾಗದ ಅಧಿಕಾರಿಗಳಿಗೆ ಹಾಗೂ ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರಿಗೆ ಇ-ಮೇಲ್ ಮುಖಾಂತರ ಇಲ್ಲಿನ ಜನರ ಕಷ್ಟಗಳನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಇಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆ ಇಲ್ಲದೆ ಜನರು ಅನುಭವಿಸುತ್ತಿರುವ ನರಕಯಾತನೆಯನ್ನು ವಿವರಿಸಿ, ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಲಾಗಿತ್ತು" ಎಂದರು.

​ಮಾಧ್ಯಮಗಳು ಮತ್ತು ಸಂಘಟನೆಗಳಿಗೆ ಧನ್ಯವಾದ
"ನಮ್ಮ ಈ ಹೋರಾಟಕ್ಕೆ ಮಾದಿಗ ದಂಡೋರ ಹೋರಾಟ ಸಮಿತಿ, ಕರವೇ ಹಾಗೂ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಎದೆಯೊಡ್ಡಿ ನಿಂತಿದ್ದರಿಂದ ಜನರ ಕಷ್ಟ ನಿವಾರಣೆಯಾಗಿದೆ. ವಿಶೇಷವಾಗಿ ಈ ಸಮಸ್ಯೆಯನ್ನು ಮೊದಲಿಗೆ ಮುಂಚೂಣಿಗೆ ತಂದು, ನಮ್ಮ ಧ್ವನಿಗೆ ಮತ್ತಷ್ಟು ಶಕ್ತಿ ನೀಡಿದ 'ಜೆ ಟಿವಿ ಕನ್ನಡ ನ್ಯೂಸ್' ಸೇರಿದಂತೆ ಎಲ್ಲಾ ಪ್ರಮುಖ ದಿನಪತ್ರಿಕೆ ಹಾಗೂ ಟಿವಿ ಮಾಧ್ಯಮದವರಿಗೆ ಧನ್ಯವಾದಗಳು. ಆದರೆ, ಸಾರ್ವಜನಿಕರು ಈ ಕಾಲುದಾರಿಯಿಂದ ರೈಲ್ವೆ ಹಳಿ ದಾಟುವಾಗ ತುಂಬಾ ಜಾಗರೂಕರಾಗಿರಬೇಕು."

— ವೀರಣ್ಣ ಯಾರಿ, ಸ್ಥಳೀಯ ಬಿಜೆಪಿ ಅಧ್ಯಕ್ಷ ವಾಡಿ

ಈ ಸಂದರ್ಭದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಮುಕ್ಕನಾಳ, ಶ್ರೀರಾಮ‌ ಸೇನೆ ತಾಲೂಕು ಅಧ್ಯಕ್ಷ ವಿಶ್ವರಾಧ್ಯ ತಳವಾರ, ಮುಖಂಡ ಸುರೇಶ ನಾಯಕ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ನೂರಾರು ನಿವಾಸಿಗಳು ಉಪಸ್ಥಿತರಿದ್ದು ಸಂಭ್ರಮಿಸಿದರು.

ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡಲು ನಾಗೇಶ ಹಲಗಿ ಒತ್ತಾಯ.

ಚಿತ್ತಾಪುರ: ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಹೆಮ್ಮೆಯ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನವನ್ನು ನೀಡಬೇಕು ಎಂದು ಮಾದಿಗ ಸಮಾಜದ ಯುವ ಮುಖಂಡ ಹಾಗೂ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ರಾಜ್ಯ ಸಂಘಟನಾ ಸಂಚಾಲಕ ನಾಗೇಶ ಹಲಗಿ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಿಯಾಂಕ್ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿರುವ ಅವರಿಗೆ ಡಿಸಿಎಂ ಹುದ್ದೆ ನೀಡುವುದು ಸೂಕ್ತ ಎಂದಿದ್ದಾರೆ.

​ಅವರು ಸಚಿವರಾಗಿ ಕೈಗೊಂಡಿರುವ ಜನಪರ ಹಾಗೂ ಪ್ರಗತಿಪರ ಕೆಲಸಗಳು ಇಡೀ ರಾಜ್ಯಕ್ಕೆ ಮಾದರಿಯಾಗಿವೆ. ​ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತಷ್ಟು ಬಲ ತುಂಬಲು ಮತ್ತು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅವರಿಗೆ ಡಿಸಿಎಂ ಸ್ಥಾನ ನೀಡುವುದು ಅತ್ಯಗತ್ಯವಾಗಿದೆ. ದಲಿತ, ಶೋಷಿತ ಹಾಗೂ ಯುವ ಸಮುದಾಯದ ಧ್ವನಿಯಾಗಿರುವ ಖರ್ಗೆ ಅವರಿಗೆ ಉನ್ನತ ಸ್ಥಾನಮಾನ ನೀಡುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯ ಎತ್ತಿಹಿಡಿಯಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಕಾಲುದಾರಿ ಬಂದ್: ಜೂನ್ 8 ಕ್ಕೆ ಬೃಹತ್ ಪ್ರತಿಭಟನೆ.

ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣದ ರೈಲು ನಿಲ್ದಾಣದ ಹತ್ತಿರದಿಂದ ಹನುಮಾನ ನಗರ, ವಿಜಯ ನಗರ, ಇಂದಿರಾ ನಗರ ಸೇರಿದಂತೆ ನಾಲ್ಕೈದು ಬಡಾವಣೆಗಳಿಗೆ ಸಂಪರ್ಕಿಸುವ ಕಾಲುದಾರಿಯನ್ನು ರೈಲ್ವೆ ಸಿಬ್ಬಂದಿ ಏಕಾಏಕಿ ತಡೆದಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರೈಲ್ವೆ ಇಲಾಖೆಯ ಈ ಕ್ರಮವನ್ನು ಖಂಡಿಸಿ ಬಿಜೆಪಿ, ಮಾದಿಗ ದಂಡೋರ ಹೋರಾಟ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಂಘಟನೆಗಳು ಪರ್ಯಾಯ ಮಾರ್ಗಕ್ಕೆ ಒತ್ತಾಯಿಸಿವೆ.

​ಈ ಕುರಿತು ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ರೈಲು ನಿಲ್ದಾಣದ ಪ್ರಬಂಧಕರಾದ ಸಿ.ಎಚ್. ರಾಮಕೃಷ್ಣ ಅವರ ಮುಖಾಂತರ ರೈಲ್ವೆ ಮೇಲಾಧಿಕಾರಿಗಳಿಗೆ ಪತ್ರ ರವಾನಿಸಿ, ಇಲಾಖೆಯ ನಿರ್ಧಾರದ ವಿರುದ್ಧ ತೀವ್ರ ಆಸಮಾಧಾನ ವ್ಯಕ್ತಪಡಿಸಿ ಪತ್ರದ ವಿವರಗಳನ್ನು ಹಂಚಿಕೊಳ್ಳುತ್ತಾ ಮಾತನಾಡಿದ ವೀರಣ್ಣ ಯಾರಿ ಅವರು, "ವಾಡಿ ಪಟ್ಟಣವು ರೈಲ್ವೆ ಇಲಾಖೆಗೆ ಸಾಕಷ್ಟು ಆದಾಯ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಪ್ರಮುಖ ಕೇಂದ್ರವಾಗಿದೆ. ಆದರೆ ಇಲಾಖೆಯು ನಿರಂತರವಾಗಿ ಜನರಿಗೆ ತೊಂದರೆ ನೀಡುತ್ತಾ ಬಂದಿದೆ. ಪಟ್ಟಣವು ರೈಲ್ವೆ ಹಳಿಗಳಿಂದ ಆವೃತವಾಗಿದ್ದು, ಹಳಿಯ ಮತ್ತೊಂದು ಭಾಗದಲ್ಲಿರುವ ನಾಲ್ಕೈದು ಬಡಾವಣೆಗಳಲ್ಲಿ ಸುಮಾರು 15 ರಿಂದ 20 ಸಾವಿರ ಜನರು ವಾಸಿಸುತ್ತಿದ್ದಾರೆ. ರೈಲು ನಿಲ್ದಾಣದ ಆರಂಭದಿಂದಲೂ ಜನರಿಗೆ ಅನುಕೂಲಕರವಾಗಿದ್ದ ಪಾದಚಾರಿ ಮಾರ್ಗವನ್ನು ಇದ್ದಕ್ಕಿದ್ದಂತೆ ಮುಚ್ಚಿರುವುದರಿಂದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಸಂಚರಿಸಲು ತೀವ್ರ ತೊಂದರೆ ಅನುಭವಿಸುವಂತಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.
"ಬಡಾವಣೆಗಳ ಜನರ ಅನುಕೂಲಕ್ಕಾಗಿ ಮೇಲ್ಸೇತುವೆ (FOB) ಮತ್ತು ಕೆಳಸೇತುವೆ (Underpass) ನಿರ್ಮಿಸುವಂತೆ ನಾವು ಪದೇ ಪದೇ ಸಂಬಂಧಿಸಿದ ಎಲ್ಲಾ ಮೇಲಾಧಿಕಾರಿಗಳಿಗೆ ವಿನಂತಿಯ ಮನವಿ ಪತ್ರಗಳನ್ನು ಸಲ್ಲಿಸಿದ್ದೇವೆ. ಆದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಇದ್ದ ಕಾಲುದಾರಿಯನ್ನೂ ಬಂದ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ."

— ಅರ್ಜುನ ಕಟ್ಡಿಮನಿ,
ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ ವಾಡಿ.


​ರೈಲ್ವೆ ಇಲಾಖೆಯು ತಕ್ಷಣವೇ ಈ ಸಮಸ್ಯೆಗೆ ಪರ್ಯಾಯ ಮಾರ್ಗವನ್ನು ಸೂಚಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಬರುವ ಜೂನ್ 8 ರಂದು ಸಾರ್ವಜನಿಕರೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈಲ್ವೆ ಮೇಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರದ ಮೂಲಕ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಪುರಸಭೆ ಮಾಜಿ ಸದಸ್ಯರಾದ ಕಿಶನ ಜಾಧವ, ಅಂಬದಾಸ ಜಾಧವ, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಮುಕ್ಕನಾಳ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕಾಂಬಳೆ, ಮುಖಂಡರಾದ ಮಹಾಂತೇಶ ಬಿರಾದಾರ, ಪಂಡಿತ್ ಪವಾರ, ಹಾಜಪ್ಪ ಅರಸಣಗಿ, ಗೋವಿಂದ ಚವ್ಹಾಣ, ರಾಮಾಂಜನೇಯ ದದಾಸರಿ, ದೇವೇಂದ್ರ, ವಿಜಯ ಜಾನ್ ಸೇರಿದಂತೆ ಪ್ರಮುಖರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಹುದ್ದೆ ನೀಡಲು ಕುರುಬ ಸಮಾಜ ಒತ್ತಾಯ.

ಚಿತ್ತಾಪುರ: ಕ್ಷೇತ್ರದ ಜನಪ್ರಿಯ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.

​ಪಟ್ಟಣದ ಕನಕ ಭವನದಲ್ಲಿ ಮಂಗಳವಾರ ಕುರುಬ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ​"ಪ್ರಿಯಾಂಕ್ ಖರ್ಗೆ ಅವರು ಸಮಾಜ ಕಲ್ಯಾಣ, ಪ್ರವಾಸೋದ್ಯಮ, ಐಟಿಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಚಿವರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿ.ಎಸ್.ಐ ಹಗರಣ ಮತ್ತು ಬಿಟ್ ಕಾಯಿನ್ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರಗಳನ್ನು ಧೈರ್ಯವಾಗಿ ಬಯಲಿಗೆಳೆದ ದಿಟ್ಟ ನಾಯಕ ಇವರಾಗಿದ್ದಾರೆ. ಇವರ ಜನಪರ ಹೋರಾಟದ ಪರಿಣಾಮವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಹೀಗಾಗಿ ಇವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲೇಬೇಕು" ಎಂದರು.

​ಸಮಾಜದ ಹಿರಿಯ ಮುಖಂಡ ಜುಮ್ಮಣ್ಣ ಪೂಜಾರಿ ಮಾತನಾಡಿ, "ಪ್ರಿಯಾಂಕ್ ಖರ್ಗೆ ಅವರು ಎಲ್ಲ ಜಾತಿ ಜನಾಂಗದವರನ್ನು ಸಮಾನವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕ್ಷೇತ್ರದಲ್ಲಿ ಸ್ಪೋರ್ಟ್ಸ್ ಹಬ್, ಎಜುಕೇಷನ್‌ ಹಬ್, ಮೃಗಾಲಯ ಹಾಗೂ ಗುಂಡಗುರ್ತಿ ಉದ್ಯಾನವನ ನಿರ್ಮಾಣ ಮಾಡುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ಆಸ್ಪತ್ರೆ, ಶಾಲಾ ಕೋಣೆಗಳು, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಪ್ರಾಮಾಣಿಕ ನಾಯಕ ಇವರಾಗಿದ್ದಾರೆ. ಇಂತಹ ಅಭಿವೃದ್ಧಿ ಪರ ಚಿಂತನೆಯುಳ್ಳ ನಾಯಕನನ್ನು ಡಿಸಿಎಂ ಮಾಡಿದರೆ ಎಲ್ಲ ಸಮಾಜದವರು ಸ್ವಾಗತಿಸುತ್ತಾರೆ" ಎಂದರು.

ಈ ಸಂದರ್ಭದಲ್ಲಿ ಕುರುಬ ಸಮಾಜದ ಪ್ರಮುಖ ಮುಖಂಡರಾದ ಯಲ್ಲಾಲಿಂಗ ಪೂಜಾರಿ ಮುಗುಟಾ, ಬಸವರಾಜ ಪೂಜಾರಿ ಮೊಗಲಾ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಸಂತೋಷ ಪೂಜಾರಿ, ಜಗನ್ನಾಥ ಆಲೂರ, ಯಲ್ಲಾಲಿಂಗ ಇವಣಿ, ನಾಗೇಶ್ ಪೂಜಾರಿ, ಶಿವಶರಣಪ್ಪ ಪೂಜಾರಿ, ದೇವಿಂದ್ರಪ್ಪ ಅಲ್ಲೂರಕರ್, ಬೀರು ಪೂಜಾರಿ, ನಾಗು ಪೂಜಾರಿ, ಸುನೀಲ ಅಮಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಹುದ್ದೆ ನೀಡಲು ಆನಂದ್ ಯರಗಲ್ ಆಗ್ರಹ

 

ಚಿತ್ತಾಪುರ: ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಅತ್ಯುತ್ತಮ ಆಡಳಿತ ನೀಡುತ್ತಿರುವ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ನೀಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಆನಂದ್ ಯರಗಲ್ ಒತ್ತಾಯಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಿಯಾಂಕ್ ಖರ್ಗೆ ಅವರು ಕೇವಲ ಕ್ಷೇತ್ರಕ್ಕೆ ಸೀಮಿತವಾಗದೆ ಇಡೀ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಯುವ ನಾಯಕತ್ವ, ದೂರದೃಷ್ಟಿ ಮತ್ತು ಆಡಳಿತಾತ್ಮಕ ದಕ್ಷತೆ ಹೊಂದಿರುವ ಅವರಿಗೆ ಡಿಸಿಎಂ ಹುದ್ದೆ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

​"ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿ ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಹಿಂದುಳಿದಿರುವಿಕೆಯನ್ನು ನೀಗಿಸಲು ಅವರ ಕೈ ಬಲಪಡಿಸುವುದು ಅಗತ್ಯವಾಗಿದೆ. ಹೀಗಾಗಿ ಹೈಕಮಾಂಡ್ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು."

ಆನಂದ್ ಯರಗಲ್, ಕಾಂಗ್ರೆಸ್ ಯುವ ಮುಖಂಡ


​ಖರ್ಗೆ ಅವರಿಗೆ ಉನ್ನತ ಜವಾಬ್ದಾರಿ ನೀಡುವುದರಿಂದ ಮುಂಬರುವ ದಿನಗಳಲ್ಲಿ ಪಕ್ಷ ಮತ್ತು ಸರ್ಕಾರ ಎರಡಕ್ಕೂ ಮತ್ತಷ್ಟು ಶಕ್ತಿ ಬರಲಿದ್ದು, ಇಡೀ ಭಾಗದ ಯುವಕರಿಗೆ ಮತ್ತು ಜನಸಾಮಾನ್ಯರಿಗೆ ಮತ್ತಷ್ಟು ಸೌಲಭ್ಯಗಳು ಸಿಗಲು ಸಹಕಾರಿಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಸಹಾಯಕ ಕೃಷಿ ನಿರ್ದೇಶಕರ ದಿಢೀರ್ ಭೇಟಿ, ಪರಿಶೀಲನೆ

ಚಿತ್ತಾಪುರ: ತಾಲೂಕಿನ ರೈತರಿಗೆ ಗುಣಮಟ್ಟದ ಕೃಷಿ ಪರಿಕರಗಳು ಸರಿಯಾದ ದರದಲ್ಲಿ ಸಿಗುವಂತೆ ಮಾಡಲು ಮತ್ತು ಯಾವುದೇ ರೀತಿಯ ಕಪ್ಪು ಮಾರುಕಟ್ಟೆ ದಂಧೆಗೆ ಆಸ್ಪದ ನೀಡದಂತೆ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ಪಟ್ಟಣದ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಕಟ್ಟುನಿಟ್ಟಿನ ತಪಾಸಣೆ ನಡೆಸಿದೆ.

ಸೇಡಂ ಉಪವಿಭಾಗದ ಉಪ ಕೃಷಿ ನಿರ್ದೇಶಕರಾದ ಆನಂದಕುಮಾರ್ ಹಾಗೂ ತಾಲೂಕಿನ ಜಂಟಿ ಕೃಷಿ ನಿರ್ದೇಶಕರಾದ ಸಂಜೀವ ಕುಮಾರ್ ಮಾನ್ಕರ್ ಅವರ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳಾದ ರವಿಂದ್ರ, ಕುಮಾರ ಮತ್ತು ಇತರ ಅಧಿಕಾರಿಗಳನ್ನೊಳಗೊಂಡ ತಂಡವು ಮೇ 29, ರಂದು ಪಟ್ಟಣದ ವಿವಿಧ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟ ಮಳಿಗೆಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಿತು.

​ಪ್ರತಿಯೊಂದು ಕೃಷಿ ಪರಿಕರ ಮಾರಾಟ ಮಳಿಗೆಯಲ್ಲೂ ಕಡ್ಡಾಯವಾಗಿ ದರ ಪಟ್ಟಿ ಹಾಗೂ ದಾಸ್ತಾನು (Stock) ವಿವರಗಳನ್ನು ಒಳಗೊಂಡ ಬೋರ್ಡ್ ಅನ್ನು ರೈತರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು.ರಸಗೊಬ್ಬರ ಮಾರಾಟ ಮಾಡುವಾಗ ನೈಜ ಗೋದಾಮು ದಾಸ್ತಾನು ಮತ್ತು ಪಿ.ಓ.ಎಸ್ (POS) ಯಂತ್ರದಲ್ಲಿನ ದಾಸ್ತಾನು ತಾಳೆಯಾಗಬೇಕು. ರೈತರಿಗೆ ಕಡ್ಡಾಯವಾಗಿ ಪಿ.ಓ.ಎಸ್ ಯಂತ್ರದ ಮೂಲಕವೇ ರಸಗೊಬ್ಬರ ವಿತರಿಸಬೇಕು ಹಾಗೂ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ ಬಳಕೆಯ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಬಿತ್ತನೆ ಬೀಜಗಳು, ರಸಗೊಬ್ಬರಗಳು ಹಾಗೂ ಕೀಟನಾಶಕಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ದರ ವಸೂಲಿ ಮಾಡಬಾರದು.​ಹೆಚ್ಚಿನ ದರ ವಸೂಲಿ ಮಾಡಿದರೆ ಪರವಾನಗಿ ರದ್ದು.

"ರೈತರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದು ಅಥವಾ ಕೃತಕ ಅಭಾವ ಸೃಷ್ಟಿಸುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೆ, ಅವರ ವ್ಯಾಪಾರ ಪರವಾನಗಿಯನ್ನು (License) ತಕ್ಷಣದಿಂದಲೇ ರದ್ದುಗೊಳಿಸಲಾಗುವುದು" ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
 
Copyright © 2014 Jtv kannada. Designed by OddThemes