ಮಂಗಳವಾರ, ಏಪ್ರಿಲ್ 14, 2026

ಅನ್ನದಾನಕ್ಕಿಂತ ರಕ್ತದಾನ ಶ್ರೇಷ್ಠ: ಭೀಮಣ್ಣ ಸಾಲಿ

ಚಿತ್ತಾಪುರ: ಪಟ್ಟಣದ ಪ್ರಮುಖ ಕೇಂದ್ರವಾದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಸಮಾಜ ಸೇವಕ ಪೃಥ್ವಿರಾಜ್ ಸಾಗರ ಅಭಿಮಾನಿಗಳ ಬಳಗದ ವತಿಯಿಂದ ಸತತ 6ನೇ ವರ್ಷದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಿಎಲ್ ಡಿ ಬ್ಯಾಂಕ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭಿಮಣ್ಣ ಸಾಲಿ ಅವರು, "ಬಾಬಾ ಸಾಹೇಬರ ಜಯಂತೋತ್ಸವವು ತಾಲೂಕಿನಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗುತ್ತಿದೆ. ಜೀವನದಲ್ಲಿ ಅನ್ನದಾನಕ್ಕಿಂತ ರಕ್ತದಾನವು ಅತ್ಯಂತ ಶ್ರೇಷ್ಠವಾದುದು. ತುರ್ತು ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ಪೃಥ್ವಿರಾಜ್ ಸಾಗರ ಅಭಿಮಾನಿ ಬಳಗವು ಸತತವಾಗಿ ಇಂತಹ ಜನಪದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಕಾಶಿ ಅವರು ಮಾತನಾಡಿ, ಯುವ ಸಮೂಹವು ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ರಕ್ತದಾನ ಶಿಬಿರ ಆಯೋಜಿಸಿದವರನ್ನು ಕೊಂಡಾಡಿದರು.

ಶಿಬಿರದಲ್ಲಿ ಒಟ್ಟು 22 ಜನ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಸಂಗ್ರಹಿಸಲಾದ ರಕ್ತವನ್ನು ಕಲಬುರ್ಗಿ ಜಿಲ್ಲಾ ಜೇಮ್ಸ್ (GIMS) ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಾದ ಡಾ. ಪೂಜಾ, ಸುಜ್ಞಾನಿ ಪಾಟೀಲ್, ಯಲ್ಲಪ್ಪ ವಾರಿ ಹಾಗೂ ತಂಡದವರು ರಕ್ತ ಸಂಗ್ರಹಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಅಣದೂರ ಬುದ್ಧ ವಿಹಾರದ ಮಾತಾಜಿ ಅರ್ಚಸ್ಮತಿ,ತಹಸೀಲ್ದಾರ್ ನಾಗಯ್ಯ ಹೀರೆಮಠ, ಗ್ರೇಡ್-2 ತಹಸಿಲ್ದಾರ್ ರಾಜಕುಮಾರ್ ಮರತೂರ, ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೇತನ್ ಗುರಿಕಾರ್, ಪುರಸಭೆ ಮುಖ್ಯ ಅಧಿಕಾರಿ ಶ್ರೀಮತಿ ಭಾರತಿ ದಂಡೋತಿ, ಸಿಪಿಐ ಎಸ್.ಸಿ. ಪಾಟೀಲ್, ಪಿಎಸ್ಐ ಮಂಜುನಾಥ ರೆಡ್ಡಿ, ತಾಪಂ ಇಓ ಮಹಮ್ಮದ್ ಅಕ್ರಂ ಪಾಶಾ, ಅರಣ್ಯ ಅಧಿಕಾರಿ ವಿಜಯಕುಮಾರ್ ಬಡಿಗೇರ್ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಅಂಬೇಡ್ಕರ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಬೆಣ್ಣೂರಕರ್, ಶಿವಕಾಂತ ಬೆಣ್ಣೂರಕರ್,  ಮಲ್ಲಿಕಾರ್ಜುನ ಕಾಳಗಿ, ಜಗದೀಶ್ ಚವ್ಹಾಣ್, ಗೂಪಸೇನ್ ರೆಡ್ಡಿ, ದೇವಿಂದ್ರಪ್ಪ ಅಣಕಲ್, ಉದಯಕುಮಾರ್ ಸಾಗರ್, ಶ್ರೀಕಾಂತ್ ಶಿಂಧೆ, ಮಲ್ಲಿಕಾರ್ಜುನ್ ಮುಡಬೂಳಕರ್, ಜಗನ್ನಾಥ ಮುಡಬೂಳಕರ್, ನಾಗೇಶ್ ಹಲಗಿ, ಸುರಾಜ್ ಕಲ್ಲಕ, ರಾಜು ಬುಳಕರ್, ಶರಣು ತಲಾಟಿ, ವಿಕಾಸ್ ಮತ್ತಿಮೂಡ, ಸಾಗರ ಚಿಟ್ಟೆಕರ್, ಕಾರ್ತಿಕ್ ಕಲ್ಲಾಕ್, ನಾಗಾರ್ಜುನ ಮೂಡಬುಳ್ಕರ್, ನಿತಿನ್, ಮಲ್ಲಿಕಾರ್ಜುನ್ ಕಲ್ಮೇರಿ, ಉಸನಪ್ಪ, ಸಂದೀಪ್ ಗಾಯಕ್ವಾಡ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ, ಹಕ್ಕು ಸಿಗಲಿ": ನಾಗಯ್ಯ ಹೀರೆಮಠ.


ಅಂಬೇಡ್ಕರ್ 135ನೇ ಜಯಂತೋತ್ಸವ ಸಡಗರದ ಆಚರಣೆ.

ಚಿತ್ತಾಪುರ: ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವು ಮತ್ತು ಕಷ್ಟಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅನುಭವಿಸಬಾರದು ಎಂಬ ಏಕೈಕ ಉದ್ದೇಶದಿಂದ ಭಾರತಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ ಎಂದು ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಹೀರೆಮಠ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಬಾಬಾ ಸಾಹೇಬರ 135ನೇ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು "ಅಂಬೇಡ್ಕರ್ ಅವರು ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳು ಇಂದಿಗೂ ಪ್ರಸ್ತುತ. ಶಿಕ್ಷಣದಿಂದ ಮಾತ್ರ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅಂಬೇಡ್ಕರ್ ಅವರು ಕಂಡ ಸಮಾನ ಸಮಾಜದ ಕನಸು ನನಸಾಗಬೇಕಾದರೆ ನಾವೆಲ್ಲರೂ ಸಂವಿಧಾನದ ದಾರಿಯಲ್ಲಿ ನಡೆಯಬೇಕು. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಅವಕಾಶಗಳು ಸಿಗುವಂತಾಗಬೇಕು," ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿದ್ದ ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ವಿಷ್ಣುವರ್ಧನ್ ಮುಲಿಮನಿ ಅವರು ಅಂಬೇಡ್ಕರ್ ಅವರ ಬದುಕು ಮತ್ತು ಸಂವಿಧಾನದ ರಚನೆಯ ಹಾದಿಯ ಬಗ್ಗೆ ಸುದೀರ್ಘವಾಗಿ ಮಾತನಾಡುತ್ತಾ "ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವಾಗ ಎದುರಿಸಿದ ದೈಹಿಕ ಶ್ರಮ ಮತ್ತು ಸಾಮಾಜಿಕ ವಿರೋಧಗಳು ಸಾಮಾನ್ಯವಾದುದಲ್ಲ. ಅಸಂಖ್ಯಾತ ಗ್ರಂಥಗಳನ್ನು ಓದಿ, ಜಗತ್ತಿನ ವಿವಿಧ ಸಂವಿಧಾನಗಳನ್ನು ಅಭ್ಯಾಸ ಮಾಡಿ ಭಾರತದಂತಹ ವೈವಿಧ್ಯಮಯ ದೇಶಕ್ಕೆ ಹೊಂದುವಂತಹ ಕಾನೂನು ರೂಪಿಸಿದರು."

"ಸಂವಿಧಾನ ಕೇವಲ ಒಂದು ದಾಖಲೆಯಲ್ಲ, ಅದು ಈ ದೇಶದ ಪ್ರತಿಯೊಬ್ಬ ನಾಗರಿಕನ ಆತ್ಮಗೌರವದ ಸಂಕೇತ. ಬಾಬಾ ಸಾಹೇಬರ ಸಂಕಷ್ಟದ ಹಾದಿಯನ್ನು ಅರ್ಥಮಾಡಿಕೊಂಡಾಗ ಮಾತ್ರ ನಾವು ಸಂವಿಧಾನವನ್ನು ಗೌರವಿಸಲು ಸಾಧ್ಯ," ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಕಲಾ, ಕಾಮರ್ಸ್ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ರಕ್ತದಾನ ಶಿಬಿರದ ಮೂಲಕ ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ಅಣದೂರ ಬುದ್ಧ ವಿಹಾರದ ಮಾತಾಜಿ ಅರ್ಚಸ್ಮತಿ, ಅಂಬೇಡ್ಕರ್ ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಭೀಮಣ್ಣ ಸಾಲಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ ಬೇಣ್ಣೂರಕರ್, ದೇವಿಂದ್ರ ಕುಮಸಿ, ಗೋಫಸೇನ್ ರೆಡ್ಡಿ, ರಾಮಲಿಂಗ ಬಾನರ್, ಜಗದೀಶ ಚವ್ಹಾಣ್, ದೇವಿಂದ್ರಪ್ಪ ಅಣಕಲ್, ಶ್ರೀಕಾಂತ್ ಸಿಂಧೆ, ಮಲ್ಲಿಕಾರ್ಜುನ ಮೂಡಬುಳಕರ್, ಉದಯಕುಮಾರ್ ಸಾಗರ, ನಾಗೇಂದ್ರ ಬುರ್ಲಿ, ತಾಲೂಕು ಮಟ್ಟದ ಅಧಿಕಾರಿಗಳಾದ ಗ್ರೇಡ್- 2 ತಹಸೀಲ್ದಾರ್ ರಾಜಕುಮಾರ್ ಮರತೂರ, ಸಿಪಿಐ ಎಸ್ ಸಿ ಪಾಟೀಲ್, ತಾಪಂ ಇಓ ಮಹ್ಮದ್ ಆಕ್ರಂ ಪಾಶಾ, ಸಮಾಜ ಕಲ್ಯಾಣ ಇಲಾಖೆ ಚೇತನ್ ಗುರಿಕಾರ್,  ಅರಣ್ಯ ಅಧಿಕಾರಿ ವಿಜಯಕುಮಾರ ಬಡಿಗೇರ್, ಪಿಎಸ್ಐ ಮಂಜುನಾಥ ರೆಡಿ, ಎಪಿಎಂಸಿ ಕಾರ್ಯದರ್ಶಿ ನರಸಿಂಹಲು, ಬಿಸಿಎಂ ಇಲಾಖೆ ಶ್ರೀಮತಿ ಸುನಿತಾ, ಸಿಡಿಪಿಒ ಇಲಾಖೆ ಶ್ರೀಮತಿ ಆರತಿ ತುಪ್ಪದ, ಅಬಕಾರಿ ಇಲಾಖೆ ವನೀತಾ ಸೀತಾಳೆ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೋತಿ, ಸೇರಿದಂತೆ ಅನೇಕ ಮುಖಂಡರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ್ ಕಣ್ಣಿ ಕಾರ್ಯಕ್ರಮ ನಿರೂಪಿಸಿದರೆ, ಶಿವಶರಣಪ್ಪ ಮಟ್ಟಾಳೆ ವಂದಿಸಿದರು.

ಸೋಮವಾರ, ಏಪ್ರಿಲ್ 13, 2026

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕೆ ಅದಾಮಾ (ADAMA) ಕಂಪನಿಯಿಂದ ಹೊಸ ಮೂಲಸೌಕರ್ಯ ಲೋಕಾರ್ಪಣೆ

ಕಲಬುರಗಿ: ಈ ಭಾಗದ ವಿಶೇಷ ಶಿಕ್ಷಣದ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ, ಜಾಗತಿಕ ಮಟ್ಟದ ಬೆಳೆ ಸಂರಕ್ಷಣಾ ಸಂಸ್ಥೆಯಾದ ಅದಾಮಾ (ADAMA), ಇಲ್ಲಿನ ಅಫಜಲಪುರ ರಸ್ತೆಯಲ್ಲಿರುವ ಬೌದ್ಧಿಕ ವಿಕಲಚೇತನ ಮಕ್ಕಳ ಶಾಲೆಯಾದ ಪರಿವರ್ತನಾ ಮಂದಿರದಲ್ಲಿ 1,800 ಚದರ ಅಡಿಯ ನೂತನ ತರಬೇತಿ ಬ್ಲಾಕ್ ಅನ್ನು ಉದ್ಘಾಟಿಸಿದೆ.

ದೀರ್ಘಕಾಲದವರೆಗೆ ಸುಸಜ್ಜಿತ ಕಟ್ಟಡದ ಕೊರತೆ ಅನುಭವಿಸುತ್ತಿದ್ದ ಈ ಶಾಲೆಗೆ, ಅದಾಮಾ ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಹೈದರಾಬಾದ್ ಮೂಲದ 'ನಿರ್ಮಾಣ್ ಆರ್ಗನೈಸೇಶನ್' ಸ್ವಯಂಸೇವಾ ಸಂಸ್ಥೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಿದೆ.

ನೂತನ ಕಟ್ಟಡವು ಸುಸಜ್ಜಿತ ತರಗತಿ ಕೊಠಡಿ, ವೃತ್ತಿಪರ ತರಬೇತಿ ಕೊಠಡಿ, ಆಡಳಿತ ಕಚೇರಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದೆ. ಇದರೊಂದಿಗೆ ಶಾಲಾ ಪೀಠೋಪಕರಣಗಳು, RO ಕುಡಿಯುವ ನೀರಿನ ಘಟಕ, ಗ್ರೀನ್ ಬೋರ್ಡ್‌ಗಳು, ಅಲ್ಮಿರಾಗಳು ಮತ್ತು ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ಅದಾಮಾ ಸಂಸ್ಥೆ ಒದಗಿಸಿದೆ. ಪ್ರಸ್ತುತ 65 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಭವಿಷ್ಯದಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಲು ಇದು ಸಹಕಾರಿಯಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅದಾಮಾ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕ ರಮೇಶ್ ರೆಡ್ಡಿ ಅವರು, "ಅದಾಮಾ ಕಂಪನಿಯು ಕೇವಲ ಕೃಷಿ ಕ್ಷೇತ್ರಕ್ಕೆ ಸೀಮಿತವಾಗದೆ, ಸಮಾಜದ ಸರ್ವಾಂಗೀಣ ಪ್ರಗತಿಗೆ ಬದ್ಧವಾಗಿದೆ. ಈ ವಿಶೇಷ ಚೇತನ ಮಕ್ಕಳಿಗೆ ಗೌರವಯುತ ಕಲಿಕಾ ಪರಿಸರ ಒದಗಿಸುವುದು ನಮ್ಮ ಆಶಯವಾಗಿದೆ," ಎಂದರು.
ವಿನಾಯಕ ಎಜುಕೇಶನಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಶ್ರೀಮಂತ ರೇವೂರ ಮಾತನಾಡಿ, "ಸ್ಥಳಾವಕಾಶದ ಕೊರತೆಯೇ ನಮಗೆ ದೊಡ್ಡ ಸವಾಲಾಗಿತ್ತು. ಈಗ ಲಭ್ಯವಾಗಿರುವ ಈ ಮೂಲಸೌಕರ್ಯದಿಂದ ಮಕ್ಕಳಿಗೆ ಉತ್ತಮ ಪಠ್ಯಕ್ರಮ ಮತ್ತು ಜೀವನೋಪಾಯದ ತರಬೇತಿ ನೀಡಲು ಸಾಧ್ಯವಾಗಲಿದೆ," ಎಂದು ಕೃತಜ್ಞತೆ ಸಲ್ಲಿಸಿದರು.

ಈ ನೂತನ ಕೇಂದ್ರದಲ್ಲಿ ಮಕ್ಕಳಿಗೆ ಸ್ವಯಂ ನಿರ್ವಹಣೆ ಕೌಶಲಗಳ ಜೊತೆಗೆ ಪೇಪರ್ ಪ್ಲೇಟ್ ತಯಾರಿಕೆ, ಮೇಣದಬತ್ತಿ ತಯಾರಿಕೆ, ಲಕೋಟೆ (ಎನ್ವಲಪ್), ಜೂಟ್ ಬ್ಯಾಗ್ ಮತ್ತು ರಾಖಿ ಹಾಗೂ ಹಣತೆಗಳಿಗೆ ಬಣ್ಣ ಹಚ್ಚುವಂತಹ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತದೆ. ಇದು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.

ಭಾನುವಾರ, ಏಪ್ರಿಲ್ 12, 2026

ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯ: ನಾಗವೇಣಿ ಅಭಿಮತ.

ಚಿತ್ತಾಪುರ: "ಗ್ರಾಮೀಣ ಭಾಗದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ. ಹೀಗಾಗಿ ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅನನ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ನಾಗವೇಣಿ ಅಭಿಮತ ವ್ಯಕ್ತಪಡಿಸಿದರು.

 ಪಟ್ಟಣದ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ರೇವಣಸಿದ್ದಪ್ಪ ಕಾಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (NSS) ವಾರ್ಷಿಕ ವಿಶೇಷ ಶಿಬಿರದ 4ನೇ ದಿನದ ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ತ್ರೀಶಕ್ತಿಯ ಪಾತ್ರ' ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರು ಇಂದು ಸ್ವಾವಲಂಬಿಗಳಾಗುತ್ತಿದ್ದು, ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಶಕ್ತಿಯಾಗಿ ನಿಂತಿದ್ದಾರೆ," ಎಂದು ತಿಳಿಸಿದರು.
ಮತ್ತೊಬ್ಬ ಮುಖ್ಯ ಅತಿಥಿ, ಉದಯಕಾಲ ವರದಿಗಾರ ಜಗದೇವ ಕುಂಬಾರ ಅವರು ಮಾತನಾಡಿ, "ಗ್ರಾಮೀಣಾಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ನಿರ್ಮಾಣವಲ್ಲ; ಅದು ಮಹಿಳೆಯರ ಬೌದ್ಧಿಕ ಮತ್ತು ಆರ್ಥಿಕ ಸುಧಾರಣೆಯನ್ನೂ ಒಳಗೊಂಡಿದೆ. ಸ್ತ್ರೀಶಕ್ತಿ ಗುಂಪುಗಳು ಗ್ರಾಮೀಣ ಭಾಗದ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿವೆ," ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕ ನರಸಪ್ಪ ಚಿನ್ನಕಟ್ಟಿ ಅವರು ವಿಶೇಷ ಉಪನ್ಯಾಸ ನೀಡಿ, ಶಿಬಿರಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿಯಲ್ಲಿ ಯುವಜನತೆ ಮತ್ತು ಸ್ತ್ರೀಶಕ್ತಿ ಹೇಗೆ ಕೈಜೋಡಿಸಬಹುದು ಎಂಬ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸೂಗುರೇಶ್ವರ ವಹಿಸಿದ್ದರು. ವೇದಿಕೆಯಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ನಾಗರಾಜ್, ಅಗ್ನಿಶಾಮಕ ಸಿಬ್ಬಂದಿಗಳಾದ ಕಾಶಿನಾಥ್, ಮಹಮ್ಮದ್ ಸಲೀಂ ಹಾಗೂ ಉಪನ್ಯಾಸಕ ರುದ್ರ ಕುಮಾರ್ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಅಧಿಕಾರಿಗಳಾದ ಉಪನ್ಯಾಸಕ ಮರೆಪ್ಪ ಮೇತ್ರಿ, ಮಲ್ಲಪ್ಪ ಮಾನೆಗರ್, ಡಾ. ಶಶಿಧರ್ ಯಡ್ರಾಮಿ, ಇದ್ದರು.

ಪೂಜಾ ಕಾರ್ಯಕ್ರಮವನ್ನು ನಿರೂಪಿಸಿದರು, ತುಳಸಿ ಸ್ವಾಗತಿಸಿದರು ಮತ್ತು ಗೌರಮ್ಮ ವಂದನಾರ್ಪಣೆ ಮಾಡಿದರು. ಶಿಬಿರದಲ್ಲಿ ನೂರಾರು ಎನ್‌ಎಸ್‌ಎಸ್ ಸ್ವಯಂಸೇವಕರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಖರ್ಗೆ ಹೇಳಿಕೆ ಹಿಂದೂ ಸಂಪ್ರದಾಯಕ್ಕೆ ಅವಮಾನ: ಇಬ್ರಾಹಿಂ ದಿಗ್ಗಾಂವ್ ಕಿಡಿ.

ಚಿತ್ತಾಪುರ: ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು 'ವಿಷಕಾರಿ ಹಾವುಗಳು' ಎಂದು ಹೋಲಿಸಿರುವ ಹೇಳಿಕೆಯನ್ನು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಬ್ರಾಹಿಂ ದಿಗ್ಗಾಂವ್ ಬಲವಾಗಿ ಖಂಡಿಸಿದ್ದಾರೆ.

ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆಯವರ ಹೇಳಿಕೆಯು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವಂತದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ "ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ವಿಷಕಾರಿ ಹಾವುಗಳೆಂದು ಕರೆದು ಅವುಗಳನ್ನು ಹೊಡೆದು ಕೊಲ್ಲಬೇಕು ಎನ್ನುವ ಹೇಳಿಕೆ ಹಿಂದೂ ನಂಬಿಕೆ ಮತ್ತು ಸಂಪ್ರದಾಯಗಳಿಗೆ ಮಾಡಿದ ಅವಮಾನವಾಗಿದೆ. ಇಸ್ಲಾಂ ಧರ್ಮದ ಕುರಾನ್‌ನಲ್ಲಿ ನಮಾಜ್ ಮಾಡುವಾಗ ಹಾವು ಬಂದರೆ ಸಾಯಿಸಿ ಎಂದು ಹೇಳಲಾಗಿದೆ, ಆದರೆ ರಾಜಕೀಯ ಪಕ್ಷಗಳನ್ನು ಹಾವಿಗೆ ಹೋಲಿಸಿ ಕೊಲ್ಲಲು ಪ್ರಚೋದನೆ ನೀಡುವುದು ಅಕ್ಷಮ್ಯ ಅಪರಾಧ," ಎಂದು ಹೇಳಿದರು.

"ಖರ್ಗೆಯವರ ರಾಜಕೀಯ ಅನುಭವದಷ್ಟು ನನಗೆ ವಯಸ್ಸಾಗಿಲ್ಲದಿರಬಹುದು, ಆದರೆ ನಮ್ಮ ಸಮುದಾಯಕ್ಕೆ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ವಿಷ ಬಿತ್ತುವುದು ತಪ್ಪು. ಮುಸ್ಲಿಂ ಸಮುದಾಯವನ್ನು ಇಂತಹ ಮಾತುಗಳ ಮೂಲಕ ದಾರಿ ತಪ್ಪಿಸಬಾರದು," ಎಂದು ಎಚ್ಚರಿಸಿದರು. "ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದ ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಇದುವರೆಗೆ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವ ಸೌಜನ್ಯ ತೋರಿಲ್ಲ. ಆದರೆ ಬಿಜೆಪಿ ಸರ್ಕಾರವು ಎ.ಪಿ.ಜೆ ಅಬ್ದುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡುವ ಮೂಲಕ ಸಮುದಾಯಕ್ಕೆ ಗೌರವ ನೀಡಿದೆ," ಎಂದು ತಿಳಿಸಿದರು.

"ಆರ್‌ಎಸ್‌ಎಸ್ ಮತ್ತು ಬಿಜೆಪಿ ನಿಜವಾಗಿಯೂ ವಿಷಕಾರಿಯಾಗಿದ್ದರೆ ಅಬ್ದುಲ್ ಕಲಾಂ ಅಂತಹವರು ದೇಶದ ಅತ್ಯುನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತಿರಲಿಲ್ಲ. ಖರ್ಗೆಯವರ ಹೇಳಿಕೆಗಳು ಕೇವಲ ರಾಜಕೀಯ ಪ್ರೇರಿತ ಮತ್ತು ಅಪಾಯಕಾರಿ."

— ಇಬ್ರಾಹಿಂ ದಿಗ್ಗಾಂವ್, ಅಧ್ಯಕ್ಷರು, ಬಿಜೆಪಿ ಅಲ್ಪಸಂಖ್ಯಾತ ಘಟಕ ಚಿತ್ತಾಪುರ.

ಗುರುವಾರ, ಏಪ್ರಿಲ್ 9, 2026

ರೈತರ ಅಭ್ಯುದಯಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಹಾಗೂ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ತರಕಾರಿ ಬೀಜಗಳ ಕಿಟ್ ವಿತರಿಸಿ ಮಾತನಾಡಿದ ಅವರು
"ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗಾಗಿ ಒಟ್ಟು ₹2,590 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ₹656 ಕೋಟಿ ಬೆಳೆ ವಿಮೆಯೂ ಸೇರಿದೆ. ಇಷ್ಟೊಂದು ಬೃಹತ್ ಮೊತ್ತದ ಪರಿಹಾರ ಪಡೆದ ಜಿಲ್ಲೆ ರಾಜ್ಯದಲ್ಲೇ ಮತ್ತೊಂದಿಲ್ಲ," ಎಂದು ಸಚಿವರು ಹೆಮ್ಮೆಯಿಂದ ಹೇಳಿದರು. ಹಿಂದೆ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ನೆಟೆ ರೋಗ ತಗುಲಿ 2 ಲಕ್ಷ ಹೆಕ್ಟೇರ್ ಹಾನಿಯಾದಾಗ ₹182 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಹಿಂದೆ ಬಿಜೆಪಿ ಸರ್ಕಾರ ಬರ ಮತ್ತು ನೆರೆಯ ಸಂದರ್ಭದಲ್ಲಿ ಜಿಲ್ಲೆಗೆ ಕೇವಲ ₹22 ಕೋಟಿ ನೀಡಿತ್ತು ಎಂದು ಅವರು ಹೋಲಿಕೆ ಮಾಡಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, "ಕೇಂದ್ರ ಸರ್ಕಾರ ರೈತ ವಿರೋಧಿ ನಿಲುವು ತಳೆದು ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ತಡೆಹಿಡಿದಿತ್ತು. ಇದಕ್ಕಾಗಿ ರಾಜ್ಯ ಸಚಿವ ಸಂಪುಟವೇ ದೆಹಲಿಯಲ್ಲಿ ಪ್ರತಿಭಟನೆ ನಡೆಸಬೇಕಾಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯವೊಂದು ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ನಂತರವಷ್ಟೇ ಕೇಂದ್ರ ಅನುದಾನ ಬಿಡುಗಡೆ ಮಾಡಿತು. ಇದು ನಮ್ಮ ರೈತಪರ ಬದ್ಧತೆಗೆ ಸಾಕ್ಷಿ," ಎಂದರು.

ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್‌ (ಶೀತಲೀಕರಣ ಘಟಕ) ನಿರ್ಮಾಣ ಮತ್ತು ಪಲ್ಸ್ ಪ್ರೋಟೀನ್ ಹಬ್‌ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು. ಈಗಾಗಲೇ ಡ್ರೋನ್ ಮೂಲಕ ಕೀಟನಾಶಕ ಸಿಂಪಡಿಸುವ ತಂತ್ರಜ್ಞಾನ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿತ ಯಂತ್ರೋಪಕರಣಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಿಎಪಿ ಗೊಬ್ಬರದ ಬದಲಿಗೆ ಸಾವಯವ ಗೊಬ್ಬರ ಬಳಸುವ ಕುರಿತಾದ ಮಾಹಿತಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಎಂಎಲ್ಸಿ ಜಗದೇವ ಗುತ್ತೇದಾರ ಮಾತನಾಡಿ, ಪ್ರಿಯಾಂಕ್ ಖರ್ಗೆ ಬಂದ ಮೇಲೆ ಚಿತ್ತಾಪುರ ಹಾಗೂ ಕಲಬುರಗಿ ಚಿತ್ರಣವೇ ಬದಲಾಗಿದೆ, ಮಲ್ಲಿಕಾರ್ಜುನ ಖರ್ಗೆ 371ಜೆ ಕಲಂ ನೀಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ, ಅದೇ ರೀತಿ ಪ್ರಿಯಾಂಕ್ ಖರ್ಗೆ ತಂದೆಗೆ ತಕ್ಕ ಮಗನಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ವಿಧಾನಸಭಾ ಮತ್ತು ವಿಧಾನ ಪರಿಷತ್ ನಲ್ಲಿ ಹಾಗೂ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡುವ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ ಎಂದು ಬಣ್ಣಿಸಿದರು.

ತೊಗರಿ ಮಂಡಳಿ ಅಧ್ಯಕ್ಷ ಸೈಯದ್ ಮಹೆಮೂದ್ ಚಿಸ್ತಿ ಸಾಹೇಬ್, ಕೆಕೆಆರ್‌'ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಅತ್ತೂರು ಶ್ರೀನಿವಾಸಲು, ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ಎಸಿ ಪ್ರಭು ರೆಡ್ಡಿ, ತಹಸೀಲ್ದಾ‌ರ್ ನಾಗಯ್ಯ ಹಿರೇಮಠ, ತಾಪಂ ಇಒ ಮಹ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಕೃಷಿ ಅಧಿಕಾರಿ ಸಂಜೀವ್ ಮಾನಕರೆ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪಿಎಲ್ಲಿ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ, ಡಾ.ಮಹಾಂತಗೌಡ ಪಾಟೀಲ, ದೇವಿಂದ್ರ ಯಾಬಾಳ, ಸಂಜಯ್ ಬುಳಕರ್‌ ಸೇರಿದಂತೆ ಇತರರು ಇದ್ದರು.ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕರಾದ ಸಂತೋಷ ಇನಾಮದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕರಾದ ರಾಜಕುಮಾ‌ರ್ ಗೋವಿನ್ ವಂದಿಸಿದರು.

ಏ. 11ಕ್ಕೆ ಸೂಗೂರ (ಎನ್) ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಜುಮ್ಮಣ್ಣ ಪೂಜಾರಿ ಕರೆ

ಚಿತ್ತಾಪುರ: ತಾಲೂಕಿನ ಸೂಗೂರ (ಎನ್) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಭೋಜಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ, ಬೆಳ್ಳಿ ರಥೋತ್ಸವ ಹಾಗೂ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭವು ಏಪ್ರಿಲ್ 11ರಂದು ಅದ್ದೂರಿಯಾಗಿ ಜರುಗಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕುರುಬ ಸಮಾಜದ ಹಿರಿಯ ಮುಖಂಡ ಜುಮ್ಮಣ್ಣ ಪೂಜಾರಿ ಅವರು ಮನವಿ ಮಾಡಿದರು.

ಗುರುವಾರ ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠವು ಸರ್ವ ಜನಾಂಗದವರ ಆರಾಧ್ಯ ಕೇಂದ್ರವಾಗಿದೆ. ಈ ಭಾಗದ ಸಾವಿರಾರು ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಈ ಮಠದ ನೂತನ ದೇವಸ್ಥಾನದ ಲೋಕಾರ್ಪಣೆ ಸಮಾರಂಭವು ಅತ್ಯಂತ ಸಂಭ್ರಮದಿಂದ ನಡೆಯಲಿದೆ" ಎಂದು ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಭೀಮಣ್ಣ ಸಾಲಿ ಮಾತನಾಡಿ, "ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಆಸಕ್ತಿ ಮತ್ತು ನೇತೃತ್ವದಲ್ಲಿ ಈ ಬೃಹತ್ ಕಾರ್ಯಕ್ರಮ ಸಂಘಟಿತವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದು ಇಡೀ ತಾಲೂಕಿಗೆ ಹೆಮ್ಮೆಯ ವಿಷಯ. ಹೀಗಾಗಿ ಸಾರ್ವಜನಿಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು" ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಪೂಜಾರಿ, ಮುಖಂಡರಾದ ಶಿವರಾಜ್ ಕಲಗುರ್ತಿ, ಮನ್ಸೂರ್ ಪಟೇಲ್, ರಸೂಲ್ ಮುಸ್ತಫಾ, ಈರಪ್ಪ ಭೋವಿ, ಶಿವುಕುಮಾರ ಸುಲ್ತಾನಪೂರ, ಮಲ್ಲಿಕಾರ್ಜುನ ಬೆಣ್ಣೂರಕರ್, ಮಲ್ಲಿಕಾರ್ಜುನ ಹಣಿಕೇರಿ, ಶಿವಯೋಗಿ ಸಾಹು ಗುಂಡಗುರ್ತಿ, ಭೋಜು ಶೇರಿ, ಸಂಜಯ್ ಬುಳಕ‌ರ್, ಪ್ರದೀಪ್ ಕದ್ದರಗಿ, ದೇವು ನಾಲವಾರ, ಬೀರು ಪೂಜಾರಿ, ನಿಂಗು ಕಡಬೂರ, ನಾಗು ಗಂಗಾಣಿ, ಸೇರಿದಂತೆ ಇತರರು ಇದ್ದರು. ಉದಯಕುಮಾ‌ರ್ ಸಾಗರ ಸ್ವಾಗತಿಸಿದರು, ಸಂತೋಷ ಪೂಜಾರಿ ನಿರೂಪಿಸಿದರು.

ಬುಧವಾರ, ಏಪ್ರಿಲ್ 8, 2026

ತರಕಾರಿ ಬೀಜಗಳ ಕಿಟ್ ವಿತರಣಾ ಕಾರ್ಯಕ್ರಮ: ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ.

ಚಿತ್ತಾಪುರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಹಾಗೂ ತೋಟಗಾರಿಕೆ ಇಲಾಖೆ ಕಲಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 9ರಂದು ಮಧ್ಯಾಹ್ನ 1 ಗಂಟೆಗೆ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ "ತರಕಾರಿ ಬೀಜಗಳ ಕಿಟ್ ವಿತರಣಾ ಕಾರ್ಯಕ್ರಮ"ವನ್ನು ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕರಾದ ರಾಜಕುಮಾರ್ ಗೋವಿನ್ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಎಂ. ಖರ್ಗೆ ಅವರು ವಹಿಸಲಿದ್ದಾರೆ. ಜೂತೆಗೆ  ವೈದ್ಯಕೀಯ ಶಿಕ್ಷಣ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು.ಡಾ. ಶರಣಪ್ರಕಾಶ್ ಪಾಟೀಲ್,  ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಕೆಕೆಆರ್ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರು.ಡಾ. ಅಜಯಸಿಂಗ್,ಆಳಂದ್ ಶಾಸಕರಾದ ಬಿ.ಆರ್. ಪಾಟೀಲ್,  ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಖನೀಜಾ ಫಾತಿಮಾ, ಇವರೊಂದಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕರಾದ ಸಂತೋಷ್ ಇನಾಮದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ್ ಶ್ರೀನಿವಾಸಲು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಹಿರಿಯ ನಿರ್ದೇಶಕ ರಾಜಕುಮಾರ್ ಗೋವಿನ್ ಅವರು, "ಸ್ಥಳೀಯವಾಗಿ ತರಕಾರಿ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ರೈತರಿಗೆ ನೆರವಾಗಲು ಈ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ರೈತರು, ಸಾರ್ವಜನಿಕರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು," ಎಂದು ವಿನಂತಿಸಿದ್ದಾರೆ.

ಮಂಗಳವಾರ, ಏಪ್ರಿಲ್ 7, 2026

ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ: ಸಿಎಂಗೆ ಮನವಿ.

ಚಿತ್ತಾಪುರ: ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತಕ ಕೆರೆ ಬಳಿಯಿರುವ ಹನ್ನೆರಡನೇ ಶತಮಾನದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅಕ್ರಮವಾಗಿ ಬೇರೆ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ, ಅಲ್ಲಿ ಪುನಃ ಅಪ್ಪಣ್ಣನವರ ಮೂರ್ತಿಯನ್ನೇ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ತಹಸೀಲ್ದಾರ್ ನಾಗಯ್ಯ ಹಿರೇಮಠ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದ ಸಂಘಟನೆಯು, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಐತಿಹಾಸಿಕ ಅರಿವಿನ ಗವಿಗೆ ಧಕ್ಕೆಯಾಗಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಸಮೀಪ ಅನೇಕ ಬಸವಾದಿ ಶರಣರ ಅರಿವಿನ ಗವಿಗಳಿವೆ. ಇವುಗಳಲ್ಲಿ ಹಡಪದ ಅಪ್ಪಣ್ಣನವರ ಗವಿಯೂ ಒಂದು. ಆದರೆ, ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರು ಈ ಗವಿಯನ್ನು ಅಕ್ರಮವಾಗಿ ಹಸ್ತಕ್ಷೇಪ ಮಾಡಿ, ಅಲ್ಲಿ ಅನ್ಯ ಶರಣರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ. ಇದರಿಂದ ಹಡಪದ ಅಪ್ಪಣ್ಣನವರ ಇತಿಹಾಸದ ಮೌಲ್ಯಕ್ಕೆ ಧಕ್ಕೆಯಾಗಿದ್ದು, ಸಮುದಾಯದ ಭಕ್ತರ ಭಾವನೆಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಕ್ರಮವಾಗಿ ಮೂರ್ತಿ ಬದಲಿಸಿದ ಪಂಚ ಕಮಿಟಿ ಮತ್ತು ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗವಿಯನ್ನು ಮೊದಲಿನ ಸ್ಥಿತಿಗೆ ತಂದು, ಅಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನೇ ಮರು ಪ್ರತಿಷ್ಠಾಪಿಸಬೇಕು. ಸದರಿ ಅರಿವಿನ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಪ್ಪಿಸಿ, ಸರ್ಕಾರವೇ ಅದರ ಸಮರ್ಪಕ ಅಭಿವೃದ್ಧಿಗೆ ಕ್ರಮ ವಹಿಸಬೇಕು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ರಮೇಶ್ ಕೂಲ್ಲೂರ, "ನಮ್ಮ ಶರಣರ ಇತಿಹಾಸ ಮತ್ತು ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈಗಾಗಲೇ ಅನೇಕ ಮಠಾಧೀಶರು ಹಾಗೂ ಸಮಾಜದ ನಾಯಕರು ಹೋರಾಟ ನಡೆಸಿದ್ದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು," ಎಂದು ಎಚ್ಚರಿಸಿದರು.

ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಉಪಾಧ್ಯಕ್ಷ ಶೇಷಣ್ಣ ದಂಡಗುಂಡ, ನಗರ ಅಧ್ಯಕ್ಷ ಮುರಳಿಕುಮಾರ ಸಾತನೂರ, ಸಿದ್ದು ಗುಂಡಗುರ್ತಿ, ಚೇತನ್ ಚಿತ್ತಾಪುರ, ಭೀಮಾಶಂಕರ,ಹಣಮಂತರಾಯ ಮುಗಟಾ, ಸಮಾಜದ ಮುಖಂಡರು, ಭಕ್ತರು ಹಾಗೂ ಹಡಪದ ಅಪ್ಪಣ್ಣ ಸಮಾಜದ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಕ್ಕಳೇ ಶಾಲೆಯ ಆಸ್ತಿ: ಆರಾಧನಾ ಶಾಲೆಯ ಸಂಭ್ರಮದ ವಾರ್ಷಿಕೋತ್ಸವ

ಚಿತ್ತಾಪುರ: ಪಟ್ಟಣದ ಆರಾಧನಾ ಪೂರ್ವ ಪ್ರಾಥಮಿಕ ಶಾಲೆಯ 7ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವು ಮಂಗಳವಾರ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಎನ್. ಕಲ್ಲಕ್ ಅವರು, "ಮಕ್ಕಳ ಬಾಲ್ಯದ ಶಿಕ್ಷಣವು ಅವರ ಭವಿಷ್ಯದ ಅಡಿಪಾಯವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗುತ್ತವೆ," ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿ.ಆರ್.ಪಿ. ತಮ್ಮನ್ನ ಮಾತನಾಡಿ, "ಆರಾಧನಾ ಶಾಲೆಯ ಶಿಕ್ಷಕರು ಪ್ರತಿಯೊಂದು ಮಗುವನ್ನು ತಮ್ಮ ಸ್ವಂತ ಮಗುವಿನಂತೆ ಪ್ರೀತಿಸುತ್ತಾರೆ. ಮಕ್ಕಳ ಬುದ್ಧಿಮಟ್ಟವನ್ನು ಅರಿತು, ಅದಕ್ಕೆ ಅನುಗುಣವಾಗಿ ಪಾಠ ಮಾಡುವುದು ಇಲ್ಲಿನ ವಿಶೇಷ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಈ ಶಾಲೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ನಮಿತಾ ಗೋಪಸೇನ್ ಅವರು ಮಾತನಾಡಿ, "2019ರಲ್ಲಿ ಕೇವಲ 17 ಮಕ್ಕಳೊಂದಿಗೆ ಆರಂಭವಾದ ನಮ್ಮ ಸಂಸ್ಥೆಯಲ್ಲಿ ಇಂದು ನೂರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಈ ಯಶಸ್ಸಿಗೆ ಪೋಷಕರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹವೇ ಕಾರಣ," ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಶಾಲೆಯ ಅಭಿವೃದ್ಧಿಗೆ ಮತ್ತು ಮಕ್ಕಳ ಕಲಿಕೆಗೆ ಬೆಂಬಲ ನೀಡುತ್ತಿರುವ 100 ಜನ ಪೋಷಕರನ್ನು ಶಾಲೆಯ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರತಿಯೊಬ್ಬ ಪೋಷಕರಿಗೆ ಗೌರವದ ಸಂಕೇತವಾಗಿ ಒಂದು 'ದಾಸವಾಳ ಗಿಡ'ವನ್ನು ನೀಡಿ, ಮನೆಯಲ್ಲಿ ಪರಿಸರವನ್ನು ಬೆಳೆಸುವಂತೆ ಪ್ರೇರೇಪಿಸಲಾಯಿತು. ಇದು ಪೋಷಕರು ಮತ್ತು ಶಾಲೆಯ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸಿತು.

ಇದೇ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಮರಿಯಪ್ಪ ಬೊಮ್ಮನಹಳ್ಳಿಕರ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ರಕ್ಷಿತಾ ಸಿಂಪಿ ಸ್ವಾಗತಿಸಿದರು, ರಕ್ಷಿತಾ ಹುಳಗೋಳಕ  ಕಾರ್ಯಕ್ರಮ ನಿರೂಪಿಸಿದರು ಮತ್ತು ನಸರ ವಂದನಾರ್ಪಣೆ ಮಾಡಿದರು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಕಣ್ಮನ ಸೆಳೆದವು.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕೆ: ಮಣಿಕಂಠ ರಾಠೋಡ್ ನಡೆಗೆ ಜಗದೀಶ ಚವ್ಹಾಣ ತೀವ್ರ ಆಕ್ರೋಶ

ಚಿತ್ತಾಪುರ: ಸಮಾಜ ಸೇವೆಯ ಹೆಸರಿನಲ್ಲಿ ಮೋಜು-ಮಸ್ತಿ ಮಾಡುತ್ತಾ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿರುವ ಮಣಿಕಂಠ ರಾಠೋಡ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವ ಮುಖಂಡ ಜಗದೀಶ ಚವ್ಹಾಣ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಣಿಕಂಠ ರಾಠೋಡ್ ಅವರ ನಡೆಯನ್ನು ಕಟುವಾಗಿ ಟೀಕಿಸಿ ಮಾತನಾಡಿದ ಅವರು  ಚುನಾವಣೆಯ ಮುಂಚೆ ಚಿತ್ತಾಪುರದಲ್ಲಿ ಅನೇಕ ಮಂದಿರಗಳನ್ನು ಕಟ್ಟಿಸಿಕೊಡುತ್ತೇನೆ ಎಂದು ನಂಬಿಸಿದ ಮಣಿಕಂಠ, ಇದ್ದ ಮಂದಿರಗಳನ್ನೇ ಬೀಳಿಸಿ ಇಂದಿಗೂ ಅವು ಹಾಳಾಗಿ ಬಿದ್ದಿರುವಂತೆ ಮಾಡಿದ್ದಾರೆ. ಇವರ ಮಾತನ್ನು ನಂಬಿ ದೇವಸ್ಥಾನದ ಪೂಜಾರಿಗಳು ಹಾಗೂ ಭಕ್ತರು ಇಂದು ಮೋಸ ಹೋಗಿದ್ದಾರೆ.

ಕನಿಷ್ಠ ಒಬ್ಬ ಗ್ರಾಮ ಪಂಚಾಯತಿ ಸದಸ್ಯನನ್ನು ಸೋಲಿಸುವ ಯೋಗ್ಯತೆ ಇಲ್ಲದ ಇವರು ಪ್ರಧಾನಿಯಾಗುವ ಮಾತುಗಳನ್ನಾಡುತ್ತಿದ್ದಾರೆ. ಸಂವಿಧಾನದ ಅರಿವಾಗಲಿ ಅಥವಾ ಮೀಸಲಾತಿಯ ಬಗ್ಗೆ ಗೌರವವಾಗಲಿ ಇವರಿಗಿಲ್ಲ. ಯಾವ ಮೀಸಲಾತಿಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರೋ, ಅದೇ ಮೀಸಲಾತಿಯನ್ನು ರದ್ದುಪಡಿಸುತ್ತೇನೆ ಎಂದು ಹೇಳುವುದು ಇವರ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಇವರ ನಡವಳಿಕೆಯಿಂದಾಗಿ ಇವರನ್ನು 'ತಡಿಪಾರ್' ಮಾಡಲಾಗಿತ್ತು. ಇಂತಹ ವ್ಯಕ್ತಿ ಇಂದು ಪ್ರಬುದ್ಧ ರಾಜಕಾರಣಿ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಜ್ಞಾನ ಭಂಡಾರವುಳ್ಳ, ಸಂವಿಧಾನವನ್ನು ಅರಿತ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರು. ರಾಜ್ಯದ ಮೂರು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿರುವ ಅವರ ಜೊತೆ ಚಿತ್ತಾಪುರ ಮತ್ತು ಕಲಬುರಗಿಯ ಸಮಸ್ತ ಪ್ರಜ್ಞಾವಂತ ಮತದಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸದಾ ಇರುತ್ತಾರೆ ಎಂದು ಜಗದೀಶ ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನ್ನದಾನಕ್ಕಿಂತ ರಕ್ತದಾನ ಶ್ರೇಷ್ಠ: ಭೀಮಣ್ಣ ಸಾಲಿ

ಚಿತ್ತಾಪುರ: ಪಟ್ಟಣದ ಪ್ರಮುಖ ಕೇಂದ್ರವಾದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್...