ಮಂಗಳವಾರ, ಏಪ್ರಿಲ್ 7, 2026

ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ: ಸಿಎಂಗೆ ಮನವಿ.

ಚಿತ್ತಾಪುರ: ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತಕ ಕೆರೆ ಬಳಿಯಿರುವ ಹನ್ನೆರಡನೇ ಶತಮಾನದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅಕ್ರಮವಾಗಿ ಬೇರೆ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ, ಅಲ್ಲಿ ಪುನಃ ಅಪ್ಪಣ್ಣನವರ ಮೂರ್ತಿಯನ್ನೇ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ತಹಸೀಲ್ದಾರ್ ನಾಗಯ್ಯ ಹಿರೇಮಠ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದ ಸಂಘಟನೆಯು, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಐತಿಹಾಸಿಕ ಅರಿವಿನ ಗವಿಗೆ ಧಕ್ಕೆಯಾಗಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಸಮೀಪ ಅನೇಕ ಬಸವಾದಿ ಶರಣರ ಅರಿವಿನ ಗವಿಗಳಿವೆ. ಇವುಗಳಲ್ಲಿ ಹಡಪದ ಅಪ್ಪಣ್ಣನವರ ಗವಿಯೂ ಒಂದು. ಆದರೆ, ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರು ಈ ಗವಿಯನ್ನು ಅಕ್ರಮವಾಗಿ ಹಸ್ತಕ್ಷೇಪ ಮಾಡಿ, ಅಲ್ಲಿ ಅನ್ಯ ಶರಣರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ. ಇದರಿಂದ ಹಡಪದ ಅಪ್ಪಣ್ಣನವರ ಇತಿಹಾಸದ ಮೌಲ್ಯಕ್ಕೆ ಧಕ್ಕೆಯಾಗಿದ್ದು, ಸಮುದಾಯದ ಭಕ್ತರ ಭಾವನೆಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಕ್ರಮವಾಗಿ ಮೂರ್ತಿ ಬದಲಿಸಿದ ಪಂಚ ಕಮಿಟಿ ಮತ್ತು ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗವಿಯನ್ನು ಮೊದಲಿನ ಸ್ಥಿತಿಗೆ ತಂದು, ಅಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನೇ ಮರು ಪ್ರತಿಷ್ಠಾಪಿಸಬೇಕು. ಸದರಿ ಅರಿವಿನ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಪ್ಪಿಸಿ, ಸರ್ಕಾರವೇ ಅದರ ಸಮರ್ಪಕ ಅಭಿವೃದ್ಧಿಗೆ ಕ್ರಮ ವಹಿಸಬೇಕು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ರಮೇಶ್ ಕೂಲ್ಲೂರ, "ನಮ್ಮ ಶರಣರ ಇತಿಹಾಸ ಮತ್ತು ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈಗಾಗಲೇ ಅನೇಕ ಮಠಾಧೀಶರು ಹಾಗೂ ಸಮಾಜದ ನಾಯಕರು ಹೋರಾಟ ನಡೆಸಿದ್ದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು," ಎಂದು ಎಚ್ಚರಿಸಿದರು.

ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಉಪಾಧ್ಯಕ್ಷ ಶೇಷಣ್ಣ ದಂಡಗುಂಡ, ನಗರ ಅಧ್ಯಕ್ಷ ಮುರಳಿಕುಮಾರ ಸಾತನೂರ, ಸಿದ್ದು ಗುಂಡಗುರ್ತಿ, ಚೇತನ್ ಚಿತ್ತಾಪುರ, ಭೀಮಾಶಂಕರ,ಹಣಮಂತರಾಯ ಮುಗಟಾ, ಸಮಾಜದ ಮುಖಂಡರು, ಭಕ್ತರು ಹಾಗೂ ಹಡಪದ ಅಪ್ಪಣ್ಣ ಸಮಾಜದ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಕ್ಕಳೇ ಶಾಲೆಯ ಆಸ್ತಿ: ಆರಾಧನಾ ಶಾಲೆಯ ಸಂಭ್ರಮದ ವಾರ್ಷಿಕೋತ್ಸವ

ಚಿತ್ತಾಪುರ: ಪಟ್ಟಣದ ಆರಾಧನಾ ಪೂರ್ವ ಪ್ರಾಥಮಿಕ ಶಾಲೆಯ 7ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವು ಮಂಗಳವಾರ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಎನ್. ಕಲ್ಲಕ್ ಅವರು, "ಮಕ್ಕಳ ಬಾಲ್ಯದ ಶಿಕ್ಷಣವು ಅವರ ಭವಿಷ್ಯದ ಅಡಿಪಾಯವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗುತ್ತವೆ," ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿ.ಆರ್.ಪಿ. ತಮ್ಮನ್ನ ಮಾತನಾಡಿ, "ಆರಾಧನಾ ಶಾಲೆಯ ಶಿಕ್ಷಕರು ಪ್ರತಿಯೊಂದು ಮಗುವನ್ನು ತಮ್ಮ ಸ್ವಂತ ಮಗುವಿನಂತೆ ಪ್ರೀತಿಸುತ್ತಾರೆ. ಮಕ್ಕಳ ಬುದ್ಧಿಮಟ್ಟವನ್ನು ಅರಿತು, ಅದಕ್ಕೆ ಅನುಗುಣವಾಗಿ ಪಾಠ ಮಾಡುವುದು ಇಲ್ಲಿನ ವಿಶೇಷ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಈ ಶಾಲೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ನಮಿತಾ ಗೋಪಸೇನ್ ಅವರು ಮಾತನಾಡಿ, "2019ರಲ್ಲಿ ಕೇವಲ 17 ಮಕ್ಕಳೊಂದಿಗೆ ಆರಂಭವಾದ ನಮ್ಮ ಸಂಸ್ಥೆಯಲ್ಲಿ ಇಂದು ನೂರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಈ ಯಶಸ್ಸಿಗೆ ಪೋಷಕರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹವೇ ಕಾರಣ," ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಶಾಲೆಯ ಅಭಿವೃದ್ಧಿಗೆ ಮತ್ತು ಮಕ್ಕಳ ಕಲಿಕೆಗೆ ಬೆಂಬಲ ನೀಡುತ್ತಿರುವ 100 ಜನ ಪೋಷಕರನ್ನು ಶಾಲೆಯ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರತಿಯೊಬ್ಬ ಪೋಷಕರಿಗೆ ಗೌರವದ ಸಂಕೇತವಾಗಿ ಒಂದು 'ದಾಸವಾಳ ಗಿಡ'ವನ್ನು ನೀಡಿ, ಮನೆಯಲ್ಲಿ ಪರಿಸರವನ್ನು ಬೆಳೆಸುವಂತೆ ಪ್ರೇರೇಪಿಸಲಾಯಿತು. ಇದು ಪೋಷಕರು ಮತ್ತು ಶಾಲೆಯ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸಿತು.

ಇದೇ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಮರಿಯಪ್ಪ ಬೊಮ್ಮನಹಳ್ಳಿಕರ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ರಕ್ಷಿತಾ ಸಿಂಪಿ ಸ್ವಾಗತಿಸಿದರು, ರಕ್ಷಿತಾ ಹುಳಗೋಳಕ  ಕಾರ್ಯಕ್ರಮ ನಿರೂಪಿಸಿದರು ಮತ್ತು ನಸರ ವಂದನಾರ್ಪಣೆ ಮಾಡಿದರು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಕಣ್ಮನ ಸೆಳೆದವು.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕೆ: ಮಣಿಕಂಠ ರಾಠೋಡ್ ನಡೆಗೆ ಜಗದೀಶ ಚವ್ಹಾಣ ತೀವ್ರ ಆಕ್ರೋಶ

ಚಿತ್ತಾಪುರ: ಸಮಾಜ ಸೇವೆಯ ಹೆಸರಿನಲ್ಲಿ ಮೋಜು-ಮಸ್ತಿ ಮಾಡುತ್ತಾ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿರುವ ಮಣಿಕಂಠ ರಾಠೋಡ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವ ಮುಖಂಡ ಜಗದೀಶ ಚವ್ಹಾಣ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಣಿಕಂಠ ರಾಠೋಡ್ ಅವರ ನಡೆಯನ್ನು ಕಟುವಾಗಿ ಟೀಕಿಸಿ ಮಾತನಾಡಿದ ಅವರು  ಚುನಾವಣೆಯ ಮುಂಚೆ ಚಿತ್ತಾಪುರದಲ್ಲಿ ಅನೇಕ ಮಂದಿರಗಳನ್ನು ಕಟ್ಟಿಸಿಕೊಡುತ್ತೇನೆ ಎಂದು ನಂಬಿಸಿದ ಮಣಿಕಂಠ, ಇದ್ದ ಮಂದಿರಗಳನ್ನೇ ಬೀಳಿಸಿ ಇಂದಿಗೂ ಅವು ಹಾಳಾಗಿ ಬಿದ್ದಿರುವಂತೆ ಮಾಡಿದ್ದಾರೆ. ಇವರ ಮಾತನ್ನು ನಂಬಿ ದೇವಸ್ಥಾನದ ಪೂಜಾರಿಗಳು ಹಾಗೂ ಭಕ್ತರು ಇಂದು ಮೋಸ ಹೋಗಿದ್ದಾರೆ.

ಕನಿಷ್ಠ ಒಬ್ಬ ಗ್ರಾಮ ಪಂಚಾಯತಿ ಸದಸ್ಯನನ್ನು ಸೋಲಿಸುವ ಯೋಗ್ಯತೆ ಇಲ್ಲದ ಇವರು ಪ್ರಧಾನಿಯಾಗುವ ಮಾತುಗಳನ್ನಾಡುತ್ತಿದ್ದಾರೆ. ಸಂವಿಧಾನದ ಅರಿವಾಗಲಿ ಅಥವಾ ಮೀಸಲಾತಿಯ ಬಗ್ಗೆ ಗೌರವವಾಗಲಿ ಇವರಿಗಿಲ್ಲ. ಯಾವ ಮೀಸಲಾತಿಯಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರೋ, ಅದೇ ಮೀಸಲಾತಿಯನ್ನು ರದ್ದುಪಡಿಸುತ್ತೇನೆ ಎಂದು ಹೇಳುವುದು ಇವರ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಇವರ ನಡವಳಿಕೆಯಿಂದಾಗಿ ಇವರನ್ನು 'ತಡಿಪಾರ್' ಮಾಡಲಾಗಿತ್ತು. ಇಂತಹ ವ್ಯಕ್ತಿ ಇಂದು ಪ್ರಬುದ್ಧ ರಾಜಕಾರಣಿ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಜ್ಞಾನ ಭಂಡಾರವುಳ್ಳ, ಸಂವಿಧಾನವನ್ನು ಅರಿತ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರು. ರಾಜ್ಯದ ಮೂರು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿರುವ ಅವರ ಜೊತೆ ಚಿತ್ತಾಪುರ ಮತ್ತು ಕಲಬುರಗಿಯ ಸಮಸ್ತ ಪ್ರಜ್ಞಾವಂತ ಮತದಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸದಾ ಇರುತ್ತಾರೆ ಎಂದು ಜಗದೀಶ ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಣಿಜ್ಯ ಸಿಲಿಂಡರ್, ಔಷಧ ಬೆಲೆ ಏರಿಕೆ: ಎಸ್‌ಯುಸಿಐ (ಸಿ) ತೀವ್ರ ವಿರೋಧ

ವಾಡಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಅಡುಗೆ ಅನಿಲ ಹಾಗೂ ಜೀವ ರಕ್ಷಕ ಔಷಧಿಗಳ ಬೆಲೆಯನ್ನು ಸತತವಾಗಿ ಏರಿಕೆ ಮಾಡುತ್ತಿರುವುದನ್ನು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ವಾಡಿ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಸ್ಥಳೀಯ ಕಾರ್ಯದರ್ಶಿ ಶರಣು ಹೇರೂರ್, ಕೇಂದ್ರದ ಬಿಜೆಪಿ ಸರ್ಕಾರವು ಸಾಮಾನ್ಯ ಜನರನ್ನು ಬೆಲೆ ಏರಿಕೆಯ ಸುಳಿಯಿಂದ ರಕ್ಷಿಸುವ ಬದಲು ಕಾರ್ಪೊರೇಟ್ ಹಿತಾಸಕ್ತಿಗೆ ಪೂರಕವಾಗಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರಗಳಿಂದ ಜನ ಸಾಮಾನ್ಯರ ಮೇಲೆ ಬಿದ್ದಿರುವ ಹೊರೆಗಳಾದ ಕೇವಲ 25 ದಿನಗಳ ಅಂತರದಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 218 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಇದರ ಮಾರುಕಟ್ಟೆ ಬೆಲೆ 2208 ರೂಪಾಯಿ ಆಗಿದೆ.

ಕಳೆದ ತಿಂಗಳಷ್ಟೇ ಗೃಹಬಳಕೆಯ ಎಲ್‌ಪಿಜಿ ಬೆಲೆಯನ್ನು 60 ರೂ. ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 114.50 ರೂ. ಹೆಚ್ಚಿಸಲಾಗಿತ್ತು. ಸುಮಾರು 700 ರಿಂದ 900 ಅಗತ್ಯ ಔಷಧಿಗಳ ಬೆಲೆಯನ್ನು ಏರಿಕೆ ಮಾಡಿರುವುದು ರೋಗಿಗಳು ಮತ್ತು ಬಡ ಕುಟುಂಬಗಳಿಗೆ ಮರಣ ಶಾಸನವಾದಂತಿದೆ.

"ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಈಗಾಗಲೇ ತತ್ತರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಡುಗೆ ಅನಿಲ ಮತ್ತು ಔಷಧಗಳ ಬೆಲೆ ಏರಿಸಿರುವುದು ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ."

— ಶರಣು ಹೇರೂರ್, ಸ್ಥಳೀಯ ಕಾರ್ಯದರ್ಶಿ, SUCI(C)

ಈ ಕೂಡಲೇ ಏರಿಸಲಾದ ಬೆಲೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಅವರು, ಸರ್ಕಾರದ ಈ ಜನವಿರೋಧಿ ಧೋರಣೆಯ ವಿರುದ್ಧ ಸಾರ್ವಜನಿಕರು ಸಂಘಟಿತರಾಗಿ ಧ್ವನಿ ಎತ್ತಬೇಕು ಮತ್ತು ಪ್ರತಿಭಟನೆಯ ಹಾದಿ ಹಿಡಿಯಬೇಕು ಎಂದು ಕರೆ ನೀಡಿದ್ದಾರೆ.

ಪ್ರಿಯಾಂಕ್ ಖರ್ಗೆ ಸೋಲಿಸುವುದೇ ನನ್ನ ಅಜೆಂಡಾ: ಮಣಿಕಂಠ.

ಚಿತ್ತಾಪುರ: ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡುವ ಸಂಪೂರ್ಣ ಭರವಸೆ ಇದೆ. ಒಂದು ವೇಳೆ ಪಕ್ಷ ಬೇರೆಯವರಿಗೆ ಟಿಕೆಟ್ ನೀಡಿದರೂ ಸಹ, ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಆದರೆ, ಈ ಬಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದೇ ನನ್ನ ಏಕೈಕ ಗುರಿಯಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಘೋಷಿಸಿದರು.

ಪಟ್ಟಣದ ಲಾಡ್ಡಿಂಗ್ ಕ್ರಾಸ್ ಬಳಿ ರಾತ್ರಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ 26 ವರ್ಷದ ಸಣ್ಣ ವಯಸ್ಸಿನಲ್ಲೇ ಬಿಜೆಪಿ ನನಗೆ ಟಿಕೆಟ್ ನೀಡಿ ಆಶೀರ್ವದಿಸಿತ್ತು. ಚಿತ್ತಾಪುರ ಇತಿಹಾಸದಲ್ಲೇ ಬಿಜೆಪಿಗೆ ಅತಿ ಹೆಚ್ಚು ಅಂದರೆ 67,683 ಮತಗಳು ಲಭಿಸಿವೆ. ನಮ್ಮ ಕುಟುಂಬದಲ್ಲಿ ಯಾರೊಬ್ಬರೂ ಗ್ರಾಪಂ ಸದಸ್ಯರೂ ಆಗಿಲ್ಲದ ಕಾರಣ, ರಾಜಕೀಯ ಅನುಭವದ ಕೊರತೆ ಹಾಗೂ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರದಿಂದಾಗಿ ಅಲ್ಪ ಮತಗಳ ಅಂತರದಿಂದ ಸೋಲಬೇಕಾಯಿತು. ಗಡ್ಡ ಬಿಟ್ಟುಕೊಂಡು ಕುಟುಂಬದ ಹೆಸರಿನಲ್ಲಿ ಅವರು ರಾಜಕೀಯ ನಾಟಕವಾಡಿದರು ಎಂದು ಟೀಕಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ಹಗರಣಗಳನ್ನು ಬಯಲಿಗೆ ತರುವುದು ಹಾಗೂ ಕ್ಷೇತ್ರದಲ್ಲಿ ಅವರ ಬೆಂಬಲಿಗರ ದಾದಾಗಿರಿ ಮತ್ತು ಗುಂಡಾಗಿರಿಯನ್ನು ಮಟ್ಟಹಾಕುವುದೇ ನನ್ನ ಪ್ರಮುಖ ಉದ್ದೇಶವಾಗಿದೆ. ಸುಳ್ಳು ಕೇಸುಗಳನ್ನು ಹಾಕಿ ನನ್ನನ್ನು 2024ರ ಡಿಸೆಂಬರ್‌ನಲ್ಲಿ ಗಡಿಪಾರು ಮಾಡಿಸಲಾಯಿತು. ಇದರಿಂದ ಕ್ಷೇತ್ರಕ್ಕೆ ಬರಲು ಅಡ್ಡಿಯಾಯಿತು. ಆದರೆ ಚಿತ್ತಾಪುರದ ಜನತೆ ನೀಡಿದ ಶಕ್ತಿಯಿಂದ ನಾನು ಮತ್ತೆ ಎದ್ದು ನಿಂತಿದ್ದೇನೆ.ಎಂದರು.

"ಇತ್ತೀಚೆಗೆ ತಂದೆ-ಮಗ (ಖರ್ಗೆ ಕುಟುಂಬ) ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಿದರೂ ಹಣ ಕೊಟ್ಟು ಜನರನ್ನು ಕರೆಯಿಸುವ ಪರಿಸ್ಥಿತಿ ಬಂದಿದೆ. ಆದರೆ ನಾನು ಹೋದ ಕಡೆಯಲ್ಲೆಲ್ಲ ಜನ ಸ್ವಯಂಪ್ರೇರಿತರಾಗಿ ಡೊಳ್ಳು, ಬಾಜಾ-ಭಜಂತ್ರಿಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಮಗನಂತೆ ಕಾಣುತ್ತಿದ್ದಾರೆ," ಎಂದು ಭಾವುಕರಾದರು.

ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಬೇರೆ ಆಕಾಂಕ್ಷಿಗಳು ಬಂದರೆ ಪಕ್ಷ ಬಲಿಷ್ಠವಾಗುತ್ತದೆ ಹೊರತು ಅದಕ್ಕೆ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಅವರು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಶ್ವಥ್ ರಾಠೋಡ, ಶ್ರೀಕಾಂತ್ ಸುಲೇಗಾಂವ, ಜಿ.ಎಸ್.ಹಿರೇಮಠ, ಶಂಭುಲಿಂಗ ವಿಶ್ವಕರ್ಮ, ಸುನೀಲ್ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಭಾನುವಾರ, ಏಪ್ರಿಲ್ 5, 2026

ಸಮಾಜಮುಖಿ ಕಾರ್ಯಗಳಿಂದ ಜನ್ಮದಿನಕ್ಕೆ ಸಾರ್ಥಕತೆ: ಕಂಬಳೇಶ್ವರ ಶ್ರೀ.

ಚಿತ್ತಾಪುರ: ಜನ್ಮದಿನೋತ್ಸವವು ಕೇವಲ ಆಚರಣೆಯಾಗದೆ, ಬಡವರು, ದೀನದಲಿತರಿಗೆ ಹಾಗೂ ಸಮಾಜಕ್ಕೆ ಅನುಕೂಲವಾದಾಗ ಮಾತ್ರ ಅದಕ್ಕೊಂದು ಅರ್ಥ ಬರಲಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.

ಪಟ್ಟಣದ ಕಂಬಳೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ತಮ್ಮ 59ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಜನ್ಮದಿನದ ಅಂಗವಾಗಿ ಭಕ್ತರು ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಂಪತ್ತನ್ನು ಸತ್ಕಾರ್ಯಕ್ಕೆ ಬಳಸಿದಾಗ ಮಾತ್ರ ನಿಜವಾದ ತುಲಾಭಾರಕ್ಕೆ ಬೆಲೆ ಬರುತ್ತದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಹಾನಗಲ್ಲ ಕುಮಾರೇಶ್ವರರ ವಾಣಿಯಂತೆ, ಭಕ್ತರ ದೇಣಿಗೆ ಹಾಗೂ ಸರ್ಕಾರದ ಅನುದಾನದ ಸದ್ಬಳಕೆ ಮಾಡಿಕೊಂಡು ಶಿಥಿಲವಾಗಿದ್ದ ಮಠವನ್ನು ಇಂದು ಮಾದರಿಯಾಗಿ ಕಟ್ಟಲಾಗಿದೆ ಎಂದು ಸ್ಮರಿಸಿದರು.
ದಿಗಾಂವದ ಶ್ರೀ ಸಿದ್ದವೀರ ಶಿವಾಚಾರ್ಯರು ಮಾತನಾಡಿ, ಸೋಮಶೇಖರ ಶ್ರೀಗಳು ಕಲ್ಯಾಣ ಕರ್ನಾಟಕದ ಅತ್ಯುತ್ತಮ ವಾಗ್ಮಿಗಳು ಎಂದು ಬಣ್ಣಿಸಿದರು. ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು ಸೇರಿದಂತೆ ಹಲವು ಮಠಾಧೀಶರು ಶ್ರೀಗಳ ಜನಪರ ಕಾರ್ಯಗಳನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಮಾಲಗತ್ತಿಯ ಶ್ರೀ ಚನ್ನಬಸವ ಶರಣರು ಹಾಗೂ ಶಿವಶರಣಯ್ಯ ಪುರದಯ್ಯನಮಠ ಅವರನ್ನು ಸನ್ಮಾನಿಸಲಾಯಿತು.

 ಕಾರ್ಯಕ್ರಮದಲ್ಲಿ ನದಿಶಿನ್ನೂರು ಶ್ರೀ ಗುರುರಾಜೇಂದ್ರ ಮಹಾಶಿವಯೋಗಿಗಳು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ್, ನಾಗರಾಜ ರೇಷ್ಮೆ ಸೇರಿದಂತೆ ನೂರಾರು ಭಕ್ತರು ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಕ್ಷರಾಗಿ ಉದ್ಯಮಿ ಬಸವರಾಜ ಪಾಟೀಲ ಬೆಳಗುಂಪಾ ಆಯ್ಕೆ.

ಚಿತ್ತಾಪುರ: ಪಟ್ಟಣದ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ, ಉದ್ಯಮಿ ಬಸವರಾಜ ಪಾಟೀಲ ಬೆಳಗುಂಪಾ ಅವರನ್ನು ಬಸವ ಜಯಂತಿ ಸಮಿತಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷರಾದ ನಾಗರಾಜ ಭಂಕಲಗಿ ಅವರು ಈ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಪಾಟೀಲ ಅವರನ್ನು ಸಮಾಜದ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ನಾಗರಾಜ ಭಂಕಲಗಿ ಅವರು, "ಏಪ್ರಿಲ್ 20 ರಂದು ಬೆಳಿಗ್ಗೆ 10 ಗಂಟೆಗೆ ತಹಸೀಲ್ ಕಚೇರಿಯಿಂದ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಆರಂಭವಾಗಲಿದೆ," ಎಂದು ತಿಳಿಸಿದರು.

ಮೆರವಣಿಗೆ ಮಾರ್ಗ: ತಹಸೀಲ್ ಕಚೇರಿ, ಸ್ಟೇಷನ್ ರಸ್ತೆ,ನಾಗಾವಿ ವೃತ್ತ,ಜನತಾ ವೃತ್ತ, ಚಿತ್ತಾವಲಿ ವೃತ್ತ, ಮತ್ತು ಹೋಳಿಕಟ್ಟಿ ಬಡಾವಣೆಯ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ. ನಂತರ ಪಾಲಪ್ ಗಲ್ಲಿ, ಕೇಳಗೇರಿ ರಸ್ತೆ, ಭುವನೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆಯ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿ, ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಯು ಸಂಪನ್ನಗೊಳ್ಳಲಿದೆ.

ಬಸವ ಜಯಂತಿಯನ್ನು ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಸಮಾಜದ ಮುಖಂಡರು, ಬಸವ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.

ಈ ಪೂರ್ವಭಾವಿ ಸಭೆಯಲ್ಲಿ ಮಹಾಸಭಾದ ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸಾರೆಡ್ಡಿ ನಾಲವಾರ, ನಗರಾಧ್ಯಕ್ಷ ಚಂದ್ರಶೇಖರ ಉಟಗೂರ್, ಯುವ ಅಧ್ಯಕ್ಷ ಅನಿಲ್‌ ವಡ್ಡಡಗಿ, ಸಮಾಜದ ಹಿರಿಯ ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಸೋಮಶೇಖ‌ರ್ ಪಾಟೀಲ ಬೆಳಗಂಪಾ, ಚಂದ್ರಶೇಖ‌ರ್ ಟೆಂಗಳಿ, ಡಾ. ಪ್ರಭುರಾಜ ಕಾಂತಾ, ಅಣ್ಣಾರಾವ್ ಪಾಟೀಲ, ವೀರಣ್ಣಗೌಡ ಪರಸರೆಡ್ಡಿ, ಮಲ್ಲರೆಡ್ಡಿ ಗೋಪಸೇನ್, ಓಂಕಾರ ರೇಷ್ಮೆ, ರವೀಂದ್ರ ಸಜ್ಜನಶೆಟ್ಟಿ, ಶಾಂತಪ್ಪ ಚಾಳಿಕಾರ, ಆನಂದ್ ಪಾಟೀಲ ನರಿಬೋಳ ಸೇರಿದಂತೆ ಹಲವು ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಸಂತೋಷ ಹಾವೇರಿ ಅವರು ನಿರೂಪಿಸಿದರು.

ರಾಜೋಳ್ಳಾದಲ್ಲಿ ಏ. 7 ರಿಂದ ಹಜರತ್ ರಾಜಾಭಾಗಸವಾರರ ಜಾತ್ರಾ ಮಹೋತ್ಸವ.

ಚಿತ್ತಾಪುರ: ತಾಲೂಕಿನ ರಾಜೋಳ್ಳಾ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಸಹ ಹಜರತ್ ರಾಜಾಭಾಗಸವಾರ ರಹೇಮತ್ ಉಲ್ ಅಲೈ ರವರ ಜಾತ್ರಾ ಮಹೋತ್ಸವವು ಏಪ್ರಿಲ್ 7 ರಿಂದ ಮೂರು ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ದರ್ಗಾದ ಪೂಜ್ಯ ಶ್ರೀ ಅಬ್ದುಲ್ ರಜಾಕ್ ಸಾಹೇಬ ಖಾದ್ರಿ ತಿಳಿಸಿದ್ದಾರೆ.

ಏಪ್ರಿಲ್ 7 (ಸಂಜೆ) ಗಂಧ (ಸಂದಲ್) ಮೆರವಣಿಗೆ. ರಾತ್ರಿ 8.45 ಕ್ಕೆ ಶೇಖ್ ಇಮಾಮ್ ಸಾಬ್ ಮಹೇಬುಬ್ ಅಲಿ ಶೇಖಸಿಂದಿ ಅವರ ಮನೆಯಿಂದ ಗಂಧವು ಸಕಲ ವಾದ್ಯಗೋಷ್ಠಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರುದಿನ ಬೆಳಿಗ್ಗೆ 4 ಗಂಟೆಗೆ ದರ್ಗಾ ತಲುಪಲಿದೆ.
ಏಪ್ರಿಲ್ 8 ದೀಪೋತ್ಸವ (ಚಿರಾಗ್) ಹಾಗೂ ರಾತ್ರಿ 8.45 ರಿಂದ ಖ್ಯಾತ ಕಲಾವಿದರಿಂದ ಖವ್ವಾಲಿ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 9 ಜೀಯಾರತ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ಪೂಜ್ಯ ಶ್ರೀ ಅಬ್ದುಲ್ ರಜಾಕ್ ಸಾಹೇಬ್ ಬಖಾದ್ರಿ (ಸಜ್ಜಾದ ಸಶಿನ) ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಅವರ ಅಮೃತ ಹಸ್ತದಿಂದ ಈ ಎಲ್ಲ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

"ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತನು-ಮನ-ಧನದಿಂದ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬೇಕು" ಎಂದು ಶೇಖ್ ಅಬ್ದುಲ್ ರಜಾಕ್ ಸಾಹೇಬ ಖಾದ್ರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

ಜಗಜೀವನರಾಮ್ ಜಯಂತಿ ಆಚರಣೆ: ಭೀಮಣ್ಣ ಸಾಲಿ ನೇತೃತ್ವದಲ್ಲಿ ಪುಷ್ಪಾರ್ಚನೆ.

ಚಿತ್ತಾಪುರ: ಭಾರತದ ಹಸಿರು ಕ್ರಾಂತಿಯ ಹರಿಕಾರ, ದಲಿತರ ಧ್ವನಿ, ರಾಷ್ಟ್ರದ ಮಹಾನ್ ನಾಯಕರಾದ ಮಾಜಿ ಉಪ ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನರಾಮ್ ಅವರ 119ನೇ ಜನ್ಮ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

 ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, "ಬಾಬು ಜಗಜೀವನರಾಮ್ ಅವರು ಕೇವಲ ಒಂದು ಸಮುದಾಯದ ನಾಯಕರಾಗಿರಲಿಲ್ಲ, ಬದಲಾಗಿ ಅವರು ಈ ದೇಶದ ಶೋಷಿತ ವರ್ಗಗಳ ಆಶಾಕಿರಣವಾಗಿದ್ದರು. ಕೃಷಿ ಕ್ಷೇತ್ರದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳು ಇಂದಿಗೂ ಭಾರತದ ಆಹಾರ ಭದ್ರತೆಗೆ ಬುನಾದಿಯಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು," ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳಿಕರ್, ನಾಗರೆಡ್ಡಿ ಗೋಪಸೇನ್, ಪುರಸಭೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಪುರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಜಗದೀಶ್ ಚವ್ಹಾಣ ಅವರು ಡಾ. ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಹೋರಾಟದ ಬದುಕನ್ನು ಸ್ಮರಿಸಿದರು.

ಶುಕ್ರವಾರ, ಏಪ್ರಿಲ್ 3, 2026

ಶ್ರೀಗಳ ಜನ್ಮದಿನದ ಸವಿನೆನಪು: ಗೋಶಾಲೆಗೆ ಕಣಕಿ ದೇಣಿಗೆ

ಚಿತ್ತಾಪುರ: ಪಟ್ಟಣದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿರುವ ಕಂಬಳೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ 59ನೇ ಜನ್ಮದಿನದ ಏಪ್ರಿಲ್ 4ರಂದು ಇದ್ದು. ಒಂದು ದಿನ ಮುಂಚಿತವಾಗಿ ಶುಕ್ರವಾರ ಪಟ್ಟಣದ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ನೀಡುವ ವಿಶೇಷ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಗಳ ಜನ್ಮದಿನದ ಸವಿನೆನಪಿಗಾಗಿ ಸಮಾಜ ಸೇವಕ ಅಂಬರೀಷ್ ಕಲ್ ಶೆಟ್ಟಿ ಅವರು ಗೋಶಾಲೆಗೆ ಒಂದು ಟ್ರ್ಯಾಕ್ಟರ್ ಲೋಡ್ ಕಣಕಿಯನ್ನು ಕಾಣಿಕೆಯಾಗಿ ನೀಡಿದರು

ಶ್ರೀಗಳು ತಮ್ಮ ಜನ್ಮದಿನದ ಅಂಗವಾಗಿ ಪಟ್ಟಣದ ಗೋಶಾಲೆಗೆ ಭೇಟಿ ನೀಡಿದ ಶ್ರೀ ಸೋಮಶೇಖರ ಶಿವಾಚಾರ್ಯರು, ಗೋವುಗಳಿಗೆ ಸ್ವತಃ ಮೇವು (ಕಣಕಿ) ತಿನ್ನಿಸುವ ಮೂಲಕ ಗೋಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, "ಗೋವುಗಳು ಭಾರತೀಯ ಸಂಸ್ಕೃತಿಯ ಜೀವಾಳ. ಗೋಸೇವೆಯು ಈಶ್ವರನ ಸೇವೆಗೆ ಸಮಾನವಾದುದು. ಭಕ್ತರು ಇಂತಹ ಪುಣ್ಯ ಕಾರ್ಯಗಳ ಮೂಲಕ ಗೋವುಗಳ ಹಸಿವು ನೀಗಿಸುತ್ತಿರುವುದು ಸಂತಸದ ವಿಷಯ," ಎಂದು ಆಶೀರ್ವದಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ್ ಬಂಕಲಗಿ ರವರು ಮಾತನಾಡಿ "ಶ್ರೀಗಳ ಹುಟ್ಟುಹಬ್ಬದ ಸವಿನೆನಪಿಗಾಗಿ ಅಂಬರೀಷ್ ಕಲ್ ಶೆಟ್ಟಿ ಅವರು ಗೋಶಾಲೆಗೆ ಕಣಕಿ ಕಾಣಿಕೆ ನೀಡಿರುವುದು ಶ್ಲಾಘನೀಯ. ಗೋವುಗಳ ಪಾಲನೆಗೆ ಇಂತಹ ದಾನಿಗಳು ಪ್ರೇರಣೆಯಾಗಿದ್ದಾರೆ," ಎಂದು ತಿಳಿಸಿದರು.

"ನಮ್ಮ ಗುರುಗಳಾದ ಶ್ರೀ ಸೋಮಶೇಖರ ಶಿವಾಚಾರ್ಯರ ಜನ್ಮದಿನವನ್ನು ಆಡಂಬರವಿಲ್ಲದೆ, ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಗೋವುಗಳಿಗೆ ಮೇವು ನೀಡುವ ಸಂಕಲ್ಪ ಮಾಡಿದೆ. ಗೋವುಗಳಿಗೆ ಹಸಿವು ನೀಗಿಸುವುದು ಕೋಟಿ ಪುಣ್ಯಕ್ಕೆ ಸಮಾನ. ಶ್ರೀಗಳ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಈ ಸೇವೆಯನ್ನು ಅರ್ಪಿಸುತ್ತಿದ್ದೇನೆ," ಎಂದು ಭಕ್ತಿಪೂರ್ವಕವಾಗಿ ನುಡಿದರು.

- ಅಂಬರೀಷ್ ಕಲಶೆಟ್ಟಿ (ಸಮಾಜ ಸೇವಕರು ಚಿತ್ತಾಪೂರ )
ಈ ಸಂದರ್ಭದಲ್ಲಿ ಹಿರಿಯರಾದ ಅನ್ನದಾನ ಶಾಸ್ತ್ರಿಗಳು ಹಿರೇಮಠ್, ಶಾಂತನಂದ ಗವಾಯಿಗಳು, ವೀರಶೈವ ಸಮಾಜದ ಕಾರ್ಯದರ್ಶಿ ಆನಂದ್ ಪಾಟೀಲ್ ನರಬೂಳ್ಳಿ, ಹಾಗೂ ಗೋಶಾಲೆ ಅಧ್ಯಕ್ಷ ರಮೇಶ್ ಬೊಮ್ನಳ್ಳಿ, ವೀರಶೈವ ಸಮಾಜದ ಮುಖಂಡರಾದ ಶಿವಾನಂದ ಸ್ವಾಮಿ ಗಚ್ಚಿನಮಠ, ಸಂಜು ರೆಡ್ಡಿ ಪಾಲಪ್, ಅನಿಲ್ ವಡ್ಡಡಗಿ, ವಿಶ್ವನಾಥ್ ಕುಂಬಾರ್, ಬಸವರಾಜ್ ಹೂಗಾರ್, ಶಾಂತಕುಮಾರ್ ಹತ್ತಿ, ಪ್ರಸಾದ್ ಅವಂಟಿ, ಸುರೇಶ್ ಅಲ್ಲೂರು, ಜಗದೇವ ದಿಗ್ಗಾವ್ಕಾರ್, ಸುನಿಲ್ ಲಕ್ಕುಂಡಿ, ಮಲ್ಲಿಕಾರ್ಜುನ್ ಪೂಜಾರಿ, ಸಾಹೇಬ್ ಗೌಡ ಬಂಗಿ, ಚಂದ್ರು ಉಟ್ಗೂರು, ಸಂತೋಷ್ ಹಾವೇರಿ, ಸಾಗರ್ ಮಾಡಗಿ, ಶರಣು ಜಡಿ, ಅಂಬರೀಶ್ ಸಾತನೂರು, ಶೇಸಪ್ಪ ಬಡಿಗೇರ್ ಸೇರಿದಂತೆ ಅನೇಕ ಭಕ್ತಾದಿಗಳು ಮತ್ತು ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.

ಬುಧವಾರ, ಏಪ್ರಿಲ್ 1, 2026

ಈಶ್ವರ ಖಂಡ್ರೆ ಅವರಿಗೆ ತಾಲ್ಲೂಕು ವೀರಶೈವ ಸಮಾಜದಿಂದ ಸನ್ಮಾನ.

ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಚಿತ್ತಾಪುರ ತಾಲ್ಲೂಕು ವೀರಶೈವ ಸಮಾಜದ ವತಿಯಿಂದ ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ತಾಲ್ಲೂಕು ವೀರಶೈವ ಸಮಾಜದ ಗೌರವಾಧ್ಯಕ್ಷರಾದ ಲಿಂಗಾರೆಡ್ಡಿ ಬಾಸರೆಡ್ಡಿ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ಮುಖಂಡರು, ಸಮಾಜಕ್ಕೆ ಅವರು ನೀಡುತ್ತಿರುವ ಕೊಡುಗೆ ಮತ್ತು ಸಂಘಟನಾತ್ಮಕ ಕಾರ್ಯಗಳನ್ನು ಶ್ಲಾಘಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖ ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಲಿಂಗಪ್ಪ ವಾಡೇದ್, ಸೋಮಶೇಖರ ಪಾಟೀಲ ಬೆಳಗುಂಪಾ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ಜಗಣ್ಣಗೌಡ ರಾಮತೀರ್ಥ, ಶಾಂತಣ್ಣ ಚಾಳೀಕಾರ, ಅಣ್ಣಾರಾವ ಬಾಳಿ, ಆನಂದ ಪಾಟೀಲ ನರಿಬೋಳ, ಮಲ್ಲಿನಾಥ ಭಾಗೋಡಿ, ರವೀಂದ್ರರೆಡ್ಡಿ ಭಂಕಲಗಿ, ಸಿದ್ದಣ್ಣಗೌಡ ದಳಪತಿ ಹಾಗೂ ರವೀಂದ್ರ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಮಾಜದ ಸಂಘಟನೆ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ಈ ವೇಳೆ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ: ಸಿಎಂಗೆ ಮನವಿ.

ಚಿತ್ತಾಪುರ: ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತಕ ಕೆರೆ ಬಳಿಯಿರುವ ಹನ್ನೆರಡನೇ ಶತಮಾನದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅಕ್ರಮವಾಗಿ ...