ಶುಕ್ರವಾರ, ಮಾರ್ಚ್ 6, 2026

ಬಂಜಾರ ಸಮಾಜದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ.

ಚಿತ್ತಾಪುರ: ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 11 ಗಂಟೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಹಾಗೂ ಮನೆಗಳ ಹಕ್ಕು ಪತ್ರ ವಿತರಣೆಯ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಫಲಾನುಭವಿಗಳು ಹಾಗೂ ಬಂಜಾರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ್ ಕರೆ ನೀಡಿದ್ದಾರೆ.

ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಈ ಗಣ್ಯರ ಅಮೃತ ಹಸ್ತದಿಂದ ಫಲಾನುಭವಿಗಳ ಮನೆಗಳ ಹಕ್ಕುಪತ್ರಗಳ ವಿತರಣೆ ನಡೆಯಲಿದೆ.

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಭೀಮಸಿಂಗ್ ಚವ್ಹಾಣ್, "ಸ್ಟೇಷನ್ ತಾಂಡಾ ನಿವಾಸಿಗಳ ಬಹುದಿನಗಳ ಕನಸಾಗಿದ್ದ ಮನೆಗಳ ಹಕ್ಕು ಪತ್ರಗಳು ಈಗ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ವಿತರಣೆಯಾಗುತ್ತಿರುವುದು ಅತ್ಯಂತ ಸಂತೋಷದ ವಿಷಯ. ಈ ಐತಿಹಾಸಿಕ ಕೆಲಸಕ್ಕೆ ಕಾರಣೀಭೂತರಾದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹಾಗೂ ಸಮಾಜದ ಎಲ್ಲಾ ನಾಯಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ," ಎಂದು ತಿಳಿಸಿದ್ದಾರೆ.

ಬಂಜಾರ ಸಮಾಜದ ಪ್ರತಿಯೊಬ್ಬ ಫಲಾನುಭವಿಯೂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಮೂಲಕ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ದೇವಿದಾಸ್ ಚವ್ಹಾಣ, ಪ್ರವೀಣ ಪವಾರ್,ರಾಕೇಶ ಪವಾರ್,ಮಹಾದೇವ ರಾಠೋಡ ಇದ್ದರು.

ಅಭಿವೃದ್ಧಿ ಸಂಭ್ರಮ: ಅಧಿಕಾರಿಗಳೊಂದಿಗೆ ಡಿಸಿ ಸಭೆ.

ಚಿತ್ತಾಪುರ: ಕ್ಷೇತ್ರದ ಇತಿಹಾಸದಲ್ಲೇ ಮೈಲಿಗಲ್ಲಾಗಲಿರುವ ಸುಮಾರು 1,085 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ಲೋಕಾರ್ಪಣೆ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 8 ರಂದು ನಡೆಯಲಿರುವ ಈ ಬೃಹತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿ, ಪೂರ್ವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು.

ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭಕ್ಕೆ ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸುತ್ತಿದ್ದು.

"ಇದು ಅತ್ಯಂತ ವಿಶೇಷ ಹಾಗೂ ಪ್ರಮುಖ ಕಾರ್ಯಕ್ರಮವಾಗಿರುವುದರಿಂದ, ಶಿಷ್ಟಾಚಾರದ ಪಾಲನೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ವೇದಿಕೆ, ಆಸನ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿದ್ಧತೆ ಕೈಗೊಳ್ಳಬೇಕು," ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅಧಿಕಾರಿಗಳೊಂದಿಗೆ ಸಭೆ ಸ್ಥಳ ಪರಿಶೀಲನೆಯ ನಂತರ 'ಪ್ರಜಾ ಸೌಧ'ದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಎಸ್ಪಿ ಅದ್ದೂರು ಶ್ರೀನಿವಾಸಲು, ಜಿಪಂ ಸಿಇಓ ಭಂವರಸಿಂಗ್ ಮೀನಾ, ಸೇಡಂ ಎಸಿ ಪ್ರಭು ರೆಡ್ಡಿ, ಡಿವೈಎಸ್ಪಿ ಶಂಕರಗೌಡ ಪಾಟೀಲ, ತಹಸೀಲ್ದಾರ್ ನಾಗಯ್ಯ ಹಿರೇಮಠ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ರಾಜಕೀಯ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

ಚಿತ್ತಾಪುರ ನಕ್ಷೆ ಬದಲಿಸಲು ಪ್ರಿಯಾಂಕ್ ಖರ್ಗೆ ಪಣ: ₹1,085 ಕೋಟಿ ಅನುದಾನದ ಐತಿಹಾಸಿಕ ಸಮಾವೇಶ.

ಚಿತ್ತಾಪುರ: ಕ್ಷೇತ್ರದ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸುಮಾರು ರೂ. 1,085 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ಲೋಕಾರ್ಪಣೆ ಸಮಾರಂಭವು ಮಾರ್ಚ್ 8ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಮಳಖೇಡ ರಸ್ತೆಯ ಸೇಂದಿ ಡಿಪೋ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ತಿಳಿಸಿದರು.

​ಶುಕ್ರವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಕಾರ್ಯಕ್ರಮವು ​ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭಕ್ಕೆ ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರು ​ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳಾದ ​ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ​ಡಿ.ಕೆ. ಶಿವಕುಮಾರ್, ಆಗಮಿಸಲಿದ್ದಾರೆ. ಜಿಲ್ಲೆಯ ಶಾಸಕರು ಹಾಗೂ ನಿಗಮ ಮಂಡಳಿ ಅಧ್ಯಕ್ಷರು ಉಪಸ್ಥಿತರಿರಲಿದ್ದು, ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, "ಸಚಿವ ಪ್ರಿಯಾಂಕ್ ಖರ್ಗೆ ಅವರು ಕ್ಷೇತ್ರದ ಅಭಿವೃದ್ಧಿಗೆ ಒಟ್ಟು 1,085 ಕೋಟಿ ಅನುದಾನ ತಂದಿದ್ದಾರೆ. ಇದರಲ್ಲಿ 1,000 ಕೋಟಿ ರೂ. ವೆಚ್ಚದ ಹೊಸ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗುವುದು ಮತ್ತು 85 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು," ಎಂದರು.

​ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರು ಮಾತನಾಡಿ ​ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲು.​ದಂಡೋತಿ ಕಾಗಿಣಾ ನದಿ ಬ್ರಿಜ್ ಹಾಗೂ ಹೊನಗುಂಟಿ ಬ್ರಿಜ್ ಅಡಿಗಲ್ಲು.​ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ/ಪ್ರೌಢಶಾಲೆ ಹಾಗೂ ವಿಜ್ಞಾನ ಕೇಂದ್ರದ ಸ್ಥಾಪನೆ.
​ಪ್ರತಿಯೊಂದು ಗ್ರಾಮಕ್ಕೆ 1 ರಿಂದ 4 ಕೋಟಿ ರೂ.ವರೆಗಿನ ಅಭಿವೃದ್ಧಿ ಅನುದಾನ.​ಸಚಿವರು ಕ್ಷೇತ್ರದ ನಕ್ಷೆಯನ್ನೇ ಬದಲಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಹಳ್ಳಿ ಹಳ್ಳಿಗಳಿಂದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮುಖಂಡರು ಮನವಿ ಮಾಡಿದ್ದಾರೆ.

​ಸುದ್ದಿಗೋಷ್ಠಿಯಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ಜಿಪಂ ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಪ್ರಮುಖರಾದ ಶಿವರುದ್ರಪ್ಪ ಭೀಣ್ಣಿ, ಜಗಣ್ಣಗೌಡ ರಾಮತೀರ್ಥ, ನಾಗರೆಡ್ಡಿ ಗೋಪಸೇನ್, ವೀರುಪಾಕ್ಷಪ್ಪ ಗಡ್ಡದ್, ಚಂದ್ರಶೇಖರ ಕಾಶಿ, ಶಾಂತಣ್ಣ ಚಾಳೀಕಾರ, ನಾಗಯ್ಯ ಗುತ್ತೇದಾರ, ಮಲ್ಲಪ್ಪ ಹೊಸಮನಿ, ಶಿವರಾಜ್ ಕಲಗುರ್ತಿ, ಜಯಪ್ರಕಾಶ್ ಕಮಕನೂರ, ಕುಂದನ್ ಸಿಂಗ್, ದೇವು ಯಾಬಾಳ, ಸಂಜಯ ಬುಳಕರ್, ಶರಣು ಡೋಣಗಾಂವ, ರವಿಸಾಗರ ಹೊಸಮನಿ, ರಾಜಣ್ಣ ಕರದಾಳ, ವಿನ್ನುಕುಮಾರ ಜಡಿ, ಬಾಗು ದೊರೆ, ಸೂರಜ್ ಕಲ್ಲಕ್ ಸೇರಿದಂತೆ ಇತರರು ಇದ್ದರು.

ಗುರುವಾರ, ಮಾರ್ಚ್ 5, 2026

ನಾಳೆ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ.

​ಚಿತ್ತಾಪುರ: ತಾಲ್ಲೂಕು ಸರ್ಕಾರಿ ನೌಕರರ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಮಾರ್ಚ್ 6ರಂದು ಮಧ್ಯಾಹ್ನ 1:30ಕ್ಕೆ ಪಟ್ಟಣದ ರೈಲ್ವೆ ಸ್ಟೇಷನ್ ಹತ್ತಿರವಿರುವ ಪಶುಪಾಲನೆ ಇಲಾಖೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಬಸವರಾಜ ಬಳೂಂಡಗಿ ತಿಳಿಸಿದ್ದಾರೆ.

​ಸಂಘದ ವಾರ್ಷಿಕ ಕಾರ್ಯಕಲಾಪಗಳ ವರದಿ ಮಂಡನೆ.
​ಸಂಘದ ಲೆಕ್ಕಪತ್ರಗಳ ಅಡಿಟ್ ವರದಿ ಮಂಡನೆ.
​ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳಿಗೆ ನೇಮಕ ಪ್ರಮಾಣ ಪತ್ರ ವಿತರಣೆ. ​ಸಂಘದ ಅಭಿವೃದ್ಧಿ ಹಾಗೂ ನೌಕರರ ಹಿತರಕ್ಷಣೆಗೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಈ ಮಹತ್ವದ ಸಭೆಗೆ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಚುನಾಯಿತ ಹಾಗೂ ನಾಮನಿರ್ದೇಶಿತ ಪದಾಧಿಕಾರಿಗಳು, ಸರ್ವ ಸದಸ್ಯರು, ವಿವಿಧ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಇಲಾಖೆಗಳ ನೌಕರರು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.

ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧ್ಯ: ಬುಳಕರ್.

ಚಿತ್ತಾಪುರ: "ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢತೆ ಹೊಂದಲು ಸಾಧ್ಯವಾಗುತ್ತದೆ," ಎಂದು ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸಂಜಯ್ ಬುಳಕರ್ ಅಭಿಪ್ರಾಯಪಟ್ಟರು.

​ಪಟ್ಟಣದ ನಾಗಾವಿ ಕ್ಯಾಂಪಸ್‌ನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಎಲ್.ಎಲ್.ಎಫ್ (ಲರ್ನಿಂಗ್ ಲಿಂಕ್ ಫೌಂಡೇಶನ್) ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು 
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಕಲಂ ಜಾರಿ ಮಾಡುವ ಮೂಲಕ ಭದ್ರ ಅಡಿಪಾಯ ಹಾಕಿದ್ದಾರೆ ಎಂದು ಸ್ಮರಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ತಾಲೂಕಿನ ಗ್ರಾಮೀಣ ಯುವ ಪ್ರತಿಭೆಗಳಿಗಾಗಿ ಆಧುನಿಕ ಕ್ರೀಡಾಂಗಣಗಳನ್ನು ನಿರ್ಮಿಸಿದ್ದಾರೆ. ನಾಗಾವಿ ಹಾಗೂ ವಾಡಿ ಭಾಗದಲ್ಲಿ 'ಎಜುಕೇಷನ್ ಹಬ್' ನಿರ್ಮಾಣ ಮಾಡುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಶ್ಲಾಘಿಸಿದರು.

​ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಾನಂದ ನಾಲವಾರ ಮತ್ತು ಆದರ್ಶ ವಿದ್ಯಾಲಯದ ಮುಖ್ಯಗುರುಗಳಾದ ಸಂತೋಷಕುಮಾರ ಜಮಾದಾ‌ರ್ ಅವರು ಮಾತನಾಡಿ ಕ್ರೀಡಾಕೂಟಕ್ಕೆ ಶುಭ ಕೋರಿದರು. ​ಕಬಡ್ಡಿ, ವಾಲಿಬಾಲ್‌ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ಸಂಜಯ್ ಬುಳಕರ್ ಅವರ ವತಿಯಿಂದ ವಿತರಿಸಲಾಯಿತು.

ಕಾಳಿಕಾ ದೇವಿ ಚರಿತ್ರೆ ಪ್ರವಚನ ಮಹಾಮಂಗಳ: ಭಕ್ತಿ-ಸಂಸ್ಕಾರದ ಬದುಕು ರೂಪಿಸಿಕೊಳ್ಳಲು ಕರೆ.

ಚಿತ್ತಾಪುರ: ತಾಲೂಕಿನ ದಿಗ್ಗಾಂವ ಸುಕ್ಷೇತ್ರದ ಕಂಚಗಾರ ಹಳ್ಳದ ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದಲ್ಲಿ ಲಿಂ. ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 22ನೇ ವರ್ಷದ ಪುಣ್ಯಸ್ಮರಣೆ ಹಾಗೂ ಶ್ರೀ ಕಾಳಿಕಾ ದೇವಿ ಚರಿತ್ರೆ ಪ್ರವಚನ ಕಾರ್ಯಕ್ರಮದ ಮಹಾಮಂಗಳ ಮಂಗಳವಾರ ಅತ್ಯಂತ ವೈಭವದಿಂದ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಂಬಳೇಶ್ವರದ ಶ್ರೀ ಸೋಮಶೇಖರ ಶಿವಾಚಾರ್ಯರು, "ಕಾಳಿಕಾ ದೇವಿಯು ತನ್ನನ್ನು ನಂಬಿದ ಭಕ್ತರನ್ನು ಹರಸುವ ಹಾಗೂ ಪೀಡಿಸುವವರಿಂದ ಕಾಪಾಡುವ ಮಹಾನ್ ಶಕ್ತಿಯಾಗಿದ್ದಾಳೆ. ಈ ಭಾಗದಲ್ಲಿ ಮಲ್ಲಯ್ಯ ಸ್ವಾಮಿಗಳು ಇಂತಹ ಪುರಾಣ ಪ್ರವಚನ ಹಮ್ಮಿಕೊಂಡಿರುವುದು ಶ್ಲಾಘನೀಯ. ಯುವಕರು ವ್ಯಸನಗಳಿಗೆ ಬಲಿಯಾಗದೆ, ಇಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದಿಗ್ಗಾಂವ ಗ್ರಾಮದ ಯುವಕರ ಸೇವೆ ಅಪಾರವಾಗಿದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಮಳಖೇಡ ದರ್ಗಾದ ಸೈಯದ್ ಮುಸ್ತಫಾ ಖಾದ್ರಿ ಮಾತನಾಡಿ, "ಹುಟ್ಟು ಸಾವಿನ ನಡುವಿನ ಅನಿಶ್ಚಿತ ಬದುಕನ್ನು ಮನುಷ್ಯ ಪವಿತ್ರವಾಗಿ ಕಳೆಯಬೇಕು. ಇಂದಿನ ಪೋಷಕರು ಮಕ್ಕಳಿಗೆ ಮೊಬೈಲ್‌ನಿಂದ ದೂರವಿಟ್ಟು ಉತ್ತಮ ಸಂಸ್ಕಾರ ಮತ್ತು ವಿದ್ಯಾಭ್ಯಾಸ ನೀಡಬೇಕು," ಎಂದು ಕಿವಿಮಾತು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, "ವಿಶ್ವದ ಹಲವು ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಕವಿಯಲು ಅಲ್ಲಿ ಸರಿಯಾದ ಗುರು ಮಾರ್ಗದರ್ಶನ ಇಲ್ಲದಿರುವುದೇ ಕಾರಣ. ಭಾರತದಲ್ಲಿ ಗುರುಗಳು ಮತ್ತು ಮಠಾಧೀಶರ ಮಾರ್ಗದರ್ಶನದಿಂದಾಗಿ ಶಾಂತಿ ನೆಮ್ಮದಿ ನೆಲೆಸಿದೆ. ತಂದೆ-ತಾಯಿ ಮತ್ತು ಗುರುಗಳ ಮೇಲೆ ಭಕ್ತಿ ಇದ್ದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ," ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಅವರು ಮಲ್ಲಯ್ಯ ಸ್ವಾಮಿಗಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ಪಾಳಾ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯರು ಕಾಳಿಕಾ ದೇವಿ ಚರಿತ್ರೆ ಕುರಿತು ಪ್ರವಚನ ನೀಡಿದರು. ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದ ಮಲ್ಲಯ್ಯಸ್ವಾಮಿ ಸ್ಥಾವರಮಠ ವಹಿಸಿದ್ದರು.

ವೇದಿಕೆಯಲ್ಲಿ ತೆಂಗಳಿ ಶ್ರೀ ಡಾ. ಶಾಂತಸೋಮನಾಥ ಶಿವಾಚಾರ್ಯರು, ತೊಟ್ನಳ್ಳಿ ಶ್ರೀ ಡಾ. ತ್ರಿಮೂರ್ತಿ ಶಿವಾಚಾರ್ಯರು, ಶ್ರೀನಿವಾಸ ಸರಡಗಿ, ಶ್ರೀ ಅಪ್ಪಾರಾವದೇವಿ ಮುತ್ಯಾ, ರಾಜಶೇಖರ್ ಪುರಾಣಿಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಜರುಗಿತು.ಅಭೀಶ್ರೀ ವಿಜಯಕುಮಾರ್ ಮತ್ತು ಶಿವನಂದಿ ಸ್ಥಾವರಮಠ ಅವರಿಂದ ಭರತನಾಟ್ಯ, ವಿನೋದಕುಮಾರ ದಸ್ತಾಪೂರ ಅವರಿಂದ ಸಂಗೀತ ಸೇವೆ ಹಾಗೂ ಷಣ್ಮುಖಯ್ಯ ಸ್ವಾಮಿ ಮಠಪತಿ ಅವರಿಂದ ತಬಲಾ ಸೇವೆ ನಡೆಯಿತು.ಸಂಜೆ ಪುರವಂತರ ಆಟ ಮತ್ತು ಮಂಗಳ ವಾದ್ಯಗಳೊಂದಿಗೆ ಭವ್ಯ ಪಲ್ಲಕ್ಕಿ ಉತ್ಸವ ಜರುಗಿತು.

ಕಾರ್ಯಕ್ರಮದಲ್ಲಿ ಶರಣಯ್ಯ ಸ್ವಾಮಿ ಸ್ಥಾವರಮಠ ಸ್ವಾಗತಿಸಿದರು, ಶಂಭುಲಿಂಗ ಸಂಗಾವಿ ನಿರೂಪಿಸಿದರು. ಗ್ರಾಮದ ಹಿರಿಯರು, ಯುವಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪಟ್ಟಣದಾದ್ಯಂತ ಸಡಗರದ ಹೋಳಿ ಹಬ್ಬ ಆಚರಣೆ.

ಚಿತ್ತಾಪುರ: ಬಣ್ಣಗಳ ಹಬ್ಬ ಹೋಳಿಯನ್ನು ಪಟ್ಟಣದಾದ್ಯಂತ ಬುಧವಾರ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಹಾಗೂ ಆಶ್ರಯ ಕಾಲೋನಿ, ಬಸ್ ನಿಲ್ದಾಣ, ಬಹರಪೇಟ್, ಹೀಗೆ ಪ್ರತಿ ನಗರ ಸೇರಿದಂತೆ ವಿವಿಧೆಡೆ ಯುವಕರು ಮತ್ತು ಮಕ್ಕಳು ಪರಸ್ಪರ ಬಣ್ಣ ಹಚ್ಚುವ ಮೂಲಕ ಹಬ್ಬದ ಮಜಾ ಸವಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಮಾಯಿಸಿ ಯುವಕರು,  ಒಬ್ಬರಿಗೊಬ್ಬರು ಗುಲಾಲ್ ಹಾಗೂ ವಿವಿಧ ಬಣ್ಣಗಳನ್ನು ಹಚ್ಚಿ ಸಂಭ್ರಮಿಸಿದರು. ಜಾತಿ-ಮತದ ಭೇದ ಮರೆತು ಗೆಳೆಯರೆಲ್ಲರೂ ಒಂದಾಗಿ ಹೋಳಿ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದರು.
ಆಶ್ರಯ ಕಾಲೋನಿಯಲ್ಲಿ ಚಿಕ್ಕ ಮಕ್ಕಳ ಹೋಳಿ ಆಚರಣೆ ಕಳೆಗಟ್ಟಿತ್ತು. ಕೈಯಲ್ಲಿ ಪಿಚಕಾರಿ ಹಿಡಿದು ಬೀದಿ ಬೀದಿಗಳಲ್ಲಿ ಓಡುತ್ತಾ, ಒಬ್ಬರ ಮೇಲೊಬ್ಬರು ಬಣ್ಣದ ನೀರು ಎರಚುತ್ತಾ ಮಕ್ಕಳು ಸಂಭ್ರಮಿಸಿದರು. ಮಕ್ಕಳ ಈ ನಿಷ್ಕಲ್ಮಶ ನಗು ಮತ್ತು ಬಣ್ಣದಾಟ ಹಬ್ಬದ ಕಳೆಯನ್ನು ಇಮ್ಮಡಿಗೊಳಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಚಿದಾನಂದ ಕಾಶಿ ಅವರು, "ಹೋಳಿ ಹಬ್ಬವು ಕೆಟ್ಟ ಆಲೋಚನೆಗಳನ್ನು ಸುಟ್ಟು ಹಾಕಿ, ಜೀವನದಲ್ಲಿ ಹೊಸ ಬಣ್ಣಗಳನ್ನು ತುಂಬಿಕೊಳ್ಳುವ ಸಂಕೇತವಾಗಿದೆ. ಯುವಕರು ಮತ್ತು ಮಕ್ಕಳು ಪ್ರೀತಿ-ವಿಶ್ವಾಸದಿಂದ ಹಬ್ಬ ಆಚರಿಸುತ್ತಿರುವುದು ಸಂತಸದ ವಿಷಯ. ಈ ಬಣ್ಣಗಳ ಹಬ್ಬವು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಹೋದರತೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿ" ಎಂದು ಹಾರೈಸಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಯುವಕರ ಗುಂಪುಗಳು 'ಹೋಳಿ ಹಬ್ಬದ ಶುಭಾಶಯ' ಕೋರುತ್ತಾ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು. ಶಾಂತಿಯುತ ಆಚರಣೆಗಾಗಿ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಯಲ್ಲಪ್ಪ ಎಸ್ ಕಾಶಿ, ಜಗದೇವ ಕುಂಬಾರ, ಪೃಥ್ವಿರಾಜ್ ಸಾಗರ, ಈರು ಪವಾರ್, ವಿನೋದ್ ಗುತ್ತೇದಾರ್, ನಾಗೇಶ್ ಕಾಶಿ, ಅನೀಲ್ ಚವ್ಹಾಣ್, ರಮೇಶ್ ರಾಠೋಡ್, ಶಿವು ಚಿಕ್ಕಾ, ಸುನಿಲ್ ಕಾಶಿ, ರಮೇಶ್ ಕಾಳನೂರ, ಅಂಬಣ್ಣ ಕಾಶಿ, ಕುಪೇಂದ್ರ ಚವ್ಹಾಣ್, ಯಲ್ಲಪ್ಪ ಎಚ್ ಕಾಶಿ, ಚಂದ್ರು ನಾಟಿಕಾರ್, ಸುನಿಲ್ ಎಂ ಕಾಶಿ, ಸೇರಿದಂತೆ ಇತರರು ಇದ್ದರು.

ಮಂಗಳವಾರ, ಮಾರ್ಚ್ 3, 2026

ಅಧಿಕಾರಿಗಳು ಗುತ್ತಿಗೆದಾರರ ಕೈಗೊಂಬೆಯಾಗಬೇಡಿ": ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ.

•ಕಳಪೆ ಕಾಮಗಾರಿ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ.
 •ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ.

ಚಿತ್ತಾಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವುದರಿಂದ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಂಗಳವಾರ ಪಟ್ಟಣದ ಪ್ರಜಾಸೌಧದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು "ಕ್ಷೇತ್ರದ ಸನ್ನತಿ ಗ್ರಾಮದ ಜನರು ನದಿ ದಂಡೆಯ ಮೇಲಿದ್ದರೂ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದರೆ ನಮ್ಮ ಅಧಿಕಾರಿಗಳ ಕಾರ್ಯವೈಖರಿ ಎಂತದ್ದು ಎಂಬುದು ತಿಳಿಯುತ್ತದೆ," ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಕುಡಿಯುವ ನೀರಿಗಾಗಿ 3.68 ಕೋಟಿ ರೂ.ಗಳಿಗೂ ಅಧಿಕ ಅನುದಾನ ನೀಡಿದ್ದರೂ, ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂದು ತರಾಟೆಗೆ ತೆಗೆದುಕೊಂಡರು.
ಅಭಿವೃದ್ಧಿ ಕಾಮಗಾರಿ ಮತ್ತು ಅನುದಾನ ಜಿಲ್ಲೆಯ ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ವಿವಿಧ ಯೋಜನೆಗಳ ವಿವರ ನೀಡಿದ ಅವರು ರಸ್ತೆ ಅಭಿವೃದ್ಧಿ: ಪ್ರಗತಿ ಪಥ ಯೋಜನೆಯಡಿ ಚಿತ್ತಾಪುರಕ್ಕೆ 110 ಕಿ.ಮೀ ರಸ್ತೆ ಮಂಜೂರಾಗಿದ್ದು, ಹಣಾದಿ ರಸ್ತೆಗಳಿಗೆ 47 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.ಶಿಕ್ಷಣ ಮತ್ತು ಮಠಗಳು: ಶಾಲೆಗಳ ಅಭಿವೃದ್ಧಿಗೆ 16 ಕೋಟಿ ರೂ. ಹಾಗೂ ವಿವಿಧ ಮಠಗಳಿಗೆ 8.5 ಕೋಟಿ ರೂ. ಅನುದಾನ ನೀಡಲಾಗಿದೆ.ಅಪೂರ್ಣಗೊಂಡಿರುವ ಸಮುದಾಯ ಭವನಗಳ ಪಟ್ಟಿ ನೀಡುವಂತೆ ಸೂಚಿಸಿದ ಅವರು, ಮೇ ತಿಂಗಳೊಳಗೆ ಇವುಗಳನ್ನು ಪೂರ್ಣಗೊಳಿಸಲು ಬಾಕಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

"ಕಡಿಮೆ ಮೊತ್ತಕ್ಕೆ ಟೆಂಡರ್ ಹಿಡಿದು ಗುಣಮಟ್ಟವಿಲ್ಲದ ಕೆಲಸ ಮಾಡುವ ಗುತ್ತಿಗೆದಾರರ ಕೈಗೊಂಬೆಯಾಗಬೇಡಿ. ಸಣ್ಣ ಕೆಲಸವೆಂದು ನಿರ್ಲಕ್ಷ್ಯ ವಹಿಸಿ ಕಳಪೆ ಕಾಮಗಾರಿ ನಡೆಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಯಾರಿಗೂ ಹೆದರದೆ ಗುಣಮಟ್ಟದ ಕೆಲಸ ಮಾಡಿಸಿ," ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಅಧಿಕಾರಿಗಳ ವಿರುದ್ಧ ದೂರುಗಳು ಬರುತ್ತಿವೆ. ಇಂತಹ ವರ್ತನೆ ಮುಂದುವರಿದರೆ ಶಿಸ್ತುಕ್ರಮ ಅನಿವಾರ್ಯ ಎಂದು ಎಚ್ಚರಿಸಿದ ಸಚಿವರು, ಅಕ್ರಮ ಮದ್ಯ ಮಾರಾಟ ಮತ್ತು ತಡರಾತ್ರಿಯವರೆಗೆ ತೆರೆದಿರುವ ದಾಬಾಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಅಬಕಾರಿ ಇಲಾಖೆಗೆ ಸೂಚಿಸಿದರು.

ಸಭೆಯಲ್ಲಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಓ ಭಂವರಸಿಂಗ್ ಮೀನಾ, ಎಸ್‌ಪಿ ಅಟ್ಟೂರು ಶ್ರೀನಿವಾಸಲು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸೋಮವಾರ, ಮಾರ್ಚ್ 2, 2026

ಬಕೇಟ್ ವಿತರಣೆಯಲ್ಲೂ ವಿಳಂಬ-ಸ್ವಚ್ಛತಾ ವಾಹನದಲ್ಲೂ ವಾರಸುದಾರರ ಹಸ್ತಕ್ಷೇಪ: ಕಮರವಾಡಿ ಗ್ರಾಮ ಪಂಚಾಯತ್ ವಿರುದ್ಧ ಜನಕ್ರೋಶ.

(ಜೆ,ಟಿವಿ ನ್ಯೂಸ್)
ಚಿತ್ತಾಪುರ: ತಾಲೂಕಿನ ಕಮರವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಮೂಲಭೂತ ಸೌಕರ್ಯಗಳ ಬಗ್ಗೆ ಪಂಚಾಯತ್ ಆಡಳಿತ ವರ್ಗ ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಸಿ ಕಸ ಮತ್ತು ಒಣ ಕಸ ವಿಂಗಡಣೆಗಾಗಿ ಸುಮಾರು 2-3 ವರ್ಷಗಳ ಹಿಂದೆಯೇ ಸರ್ಕಾರದಿಂದ ಬಕೇಟ್‌ಗಳು ಮಂಜೂರಾಗಿದ್ದರೂ, ಅವುಗಳನ್ನು ಇದುವರೆಗೆ ಹಂಚಿಕೆ ಮಾಡದೆ ಪಂಚಾಯತ್‌ನಲ್ಲಿಯೇ ಕೊಳೆಯಲು ಬಿಡಲಾಗಿತ್ತು. ಇದೀಗ ಇದ್ದಕ್ಕಿದ್ದಂತೆ ವಿತರಣೆ ಆರಂಭಿಸಿರುವುದನ್ನು ಗ್ರಾಮಸ್ಥರಾದ ಮಲ್ಲಿನಾಥ ಮಡಿವಾಳ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿಬ್ಬಂದಿಗಳು, "ನಮಗೆ ಏನೂ ಕೇಳಬೇಡಿ, ಮೇಲಾಧಿಕಾರಿಗಳು ಹಂಚಲು ಹೇಳಿದ್ದಾರೆ, ಹಂಚುತ್ತಿದ್ದೇವೆ" ಎಂದು ಉಡಾಫೆಯ ಉತ್ತರ ನೀಡುವ ಮೂಲಕ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ.
ಊರಿನಲ್ಲಿ ಕಸ ಸಂಗ್ರಹಿಸಲು ನಿಗದಿತ ವಾಹನವಿದ್ದರೂ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ಜನರ ಪ್ರಮುಖ ದೂರು.ಅಧಿಕೃತ ಚಾಲಕಿ, ಶ್ರೀಮತಿ ರೇಶ್ಮೆ (ವಿನೋದ್ ಚವ್ಹಾಣ್ ಪತ್ನಿ) ವಾಸ್ತವ ಸ್ಥಿತಿ, ಚಾಲಕಿ ಕೆಲಸಕ್ಕೆ ಬರುತ್ತಿಲ್ಲ, ಅವರ ಬದಲಿಗೆ ಪತಿ ವಿನೋದ್ ತಂದೆ ಹರಿಸಿಂಗ್ ಚವ್ಹಾಣ್ ವಾಹನ ಚಾಲನೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ, "ನಮ್ಮನ್ನು ಕೇಳಬೇಡಿ, ಮೇಲಾಧಿಕಾರಿಗಳನ್ನು ಕೇಳಿ" ಎನ್ನುವ ಸಿದ್ಧ ಉತ್ತರ ಸಿಗುತ್ತಿದೆ. ವಿಶೇಷವೆಂದರೆ, ಹರಿಸಿಂಗ್ ಚವ್ಹಾಣ್ ಅವರ ತಾಯಿಯೇ ಪ್ರಸ್ತುತ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವುದರಿಂದಲೇ ಈ ರೀತಿಯ ಸ್ವಜನಪಕ್ಷಪಾತ ನಡೆಯುತ್ತಿದೆ ಎಂದು ಸಾರ್ವಜನಿಕರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರಾದ ಸಿದ್ದಲಿಂಗಯ್ಯ ಸ್ವಾಮಿ, ಮಲ್ಲು ಗೌಡ ಮಾಲಿ ಪಾಟೀಲ್, ಆನಂದಗೌಡ ಪೋಲಿಸ್ ಪಾಟೀಲ್, ಶರಣು ಕುಸನೂರ, ಶರಣು ಇಂಧೂರು ಎಚ್ಚರಿಸಿದ್ದಾರೆ.

ಭಾನುವಾರ, ಮಾರ್ಚ್ 1, 2026

ಅಟೋ ಚಾಲಕರ ಒಗ್ಗಟ್ಟು ಸಮಾಜಕ್ಕೆ ಮಾದರಿ: ಕಂಬಳೇಶ್ವರ ಶ್ರೀಗಳು.

(ಜೆ,ಟಿವಿ ಕನ್ನಡ ಸುದ್ದಿ)
​ಚಿತ್ತಾಪುರ: ಅಟೋ ಚಾಲಕರು ಅತ್ಯಂತ ಪ್ರಾಮಾಣಿಕತೆ ಮತ್ತು ನಂಬಿಕೆಯಿಂದ ಜೀವನ ಸಾಗಿಸುವವರು. ಸಾರ್ವಜನಿಕರು ಆಟೋದಲ್ಲಿ ಬಿಟ್ಟು ಹೋದ ವಸ್ತುಗಳನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಅನೇಕ ಉದಾಹರಣೆಗಳಿವೆ. ಇವರ ಸೇವೆ ಸಮಾಜ ಸೇವೆಯಂತೆಯೇ ಪವಿತ್ರವಾದುದು ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಬಣ್ಣಿಸಿದರು.

​ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಚಾಲಕರ ಒಕ್ಕೂಟ, ಆಟೋ ಚಾಲಕರ ಮತ್ತು ಮಾಲಿಕರ ಸಂಘ ಹಾಗೂ ಶಂಕರನಾಗ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ 'ಆಟೋ ರಾಜಾ ಶಂಕರನಾಗ್ ಆಟೋ ನಾಮಫಲಕ ಉದ್ಘಾಟನೆ, ಐಡಿ ಕಾರ್ಡ್ ಹಾಗೂ ಸಮಾವಸ್ತ್ರ ವಿತರಣೆ' ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

​ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರು, "ಯಾವುದೇ ಸಂಘಟನೆಯಲ್ಲಿ ಒಗ್ಗಟ್ಟು ಬಹಳ ಮುಖ್ಯ. ಸಂಘದ ಅಧ್ಯಕ್ಷರು ಚಾಲಕರ ಕಷ್ಟ-ಸುಖಗಳಿಗೆ ಸ್ಪಂದಿಸಿದಾಗ ಮಾತ್ರ ಸಂಘಟನೆ ಬಲಿಷ್ಠವಾಗಲು ಸಾಧ್ಯ. ಅಟೋ ಚಾಲಕರ ಶಕ್ತಿ ದೊಡ್ಡದಾಗಿದ್ದು, ಸಂಘಟಿತ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬಹುದು," ಎಂದರು.

​ಪುರಸಭೆ ಮಾಜಿ ಅಧ್ಯಕ್ಷರಾದ ನಾಗರಾಜ ಭಂಕಲಗಿ, ಚಂದ್ರಶೇಖರ ಕಾಶಿ, ಹಾಗೂ ಜಿಪಂ ಮಾಜಿ ಸದಸ್ಯ ಗುಂಡಣ್ಣ ಬಾಳಿ ಸೇರಿದಂತೆ ಹಲವು ಗಣ್ಯರು ಚಾಲಕರ ವೃತ್ತಿ ಗೌರವದ ಕುರಿತು ಮಾತನಾಡಿದರು. ಇದೇ ವೇಳೆ ಪಟ್ಟಣದ ಲಾಡ್ಡಿಂಗ್ ಕ್ರಾಸ್ ಹಾಗೂ ಬಸ್ ನಿಲ್ದಾಣದ ಬಳಿ 'ಆಟೋ ರಾಜಾ ಶಂಕರನಾಗ್' ನಾಮಫಲಕವನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ರವಿಚಂದ್ರ ದೊಡ್ಡಮನಿ, ನಾಗರಾಜ ಕಾಶಿ, ಸುಭಾಷ ಕಾಶಿ, ವಿಠಲ್ ಕಟ್ಟಿಮನಿ, ಜಗನ್ನಾಥ ಮುಡುಬೂಳಕರ್ ಸೇರಿದಂತೆ ಯಾದಗಿರಿ ಮತ್ತು ದೇವದುರ್ಗದ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ​ನರಸಪ್ಪ ಚಿನ್ನಾಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಾರು ಅಟೋ ಚಾಲಕರು ಸಮಾವಸ್ತ್ರ ಧರಿಸಿ ಭಾಗವಹಿಸಿದ್ದರು.

ಶನಿವಾರ, ಫೆಬ್ರವರಿ 28, 2026

ಅದಾನಿ ಸಿಮೆಂಟ್ ಘಟಕದಿಂದ '5S' ಜಾಗೃತಿ ಅಭಿಯಾನ: ಶಿಸ್ತು ಮತ್ತು ಸ್ವಚ್ಛತೆಗೆ ಆದ್ಯತೆ.

ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದ ಸಮೀಪವಿರುವ ಅದಾನಿ ಸಿಮೆಂಟ್ ಚಿತ್ತಾಪುರ ಘಟಕದ ವತಿಯಿಂದ ಇತ್ತೀಚೆಗೆ 'AWMS 5S' ಜಾಗೃತಿ ಮೆರವಣಿಗೆ ಹಾಗೂ ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.

ಫೆಬ್ರವರಿ 24 ಮತ್ತು 25ರಂದು ಎರಡು ದಿನಗಳ ಕಾಲ ನಡೆದ ಈ ಅಭಿಯಾನವು ಶಿಸ್ತು, ಸ್ವಚ್ಛತೆ ಮತ್ತು ಸುರಕ್ಷತೆಯ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಯಿತು.

ವಿದ್ಯಾರ್ಥಿಗಳಿಗೆ ವಿಂಗಡಣೆ (Sort), ವ್ಯವಸ್ಥೆ (Set in Order) ,ಸ್ವಚ್ಛತೆ (Shine),ಪ್ರಮಾಣೀಕರಣ (Standardize),ಶಿಸ್ತು (Sustain) ಇವುಗಳ ಬಗ್ಗೆ ಸವಿಸ್ತಾರವಾಗಿ ಅರಿವು ಮೂಡಿಸಲಾಯಿತು. ದೃಶ್ಯಪ್ರದರ್ಶನ ಹಾಗೂ ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಈ ತತ್ವಗಳನ್ನು ದೈನಂದಿನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಪ್ರಾಯೋಗಿಕವಾಗಿ ವಿವರಿಸಲಾಯಿತು. ಶಾಲಾ ಮಕ್ಕಳು ತಮ್ಮ ಮನೆ ಹಾಗೂ ಶಾಲಾ ಪರಿಸರದಲ್ಲಿ 5S ಅಭ್ಯಾಸಗಳನ್ನು ಪಾಲಿಸುವುದಾಗಿ ಈ ಸಂದರ್ಭದಲ್ಲಿ ಸಂಕಲ್ಪ ಮಾಡಿದರು.
ಅಭಿಯಾನದ ಎರಡನೇ ದಿನವಾದ ಫೆಬ್ರವರಿ 25ರಂದು ಅದಾನಿ ಸಿಮೆಂಟ್ ಘಟಕದ ಆವರಣದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಘಟಕದ ಎಲ್ಲಾ ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡು, ಕೆಲಸದ ಸ್ಥಳದಲ್ಲಿ ಶಿಸ್ತು ಮತ್ತು ಸುರಕ್ಷತೆಯನ್ನು ಕಾಪಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

"AWMS ಚೌಕಟ್ಟಿನಡಿ ಆಯೋಜಿಸಲಾದ ಈ ಕಾರ್ಯಕ್ರಮವು ಉದ್ಯಮದ ಎಲ್ಲಾ ವಿಭಾಗಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಕಾರ್ಯವಿಧಾನಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದು ಘಟಕದ ಕಾರ್ಯಾಚರಣೆಯ ಶ್ರೇಷ್ಠತೆ ಹಾಗೂ ನಿರಂತರ ಸುಧಾರಣೆಯತ್ತ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ" ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಸಮುದಾಯ ಮತ್ತು ಕೆಲಸದ ಸ್ಥಳ ಎರಡೂ ಕಡೆಗಳಲ್ಲಿ ಸ್ವಚ್ಛ ಹಾಗೂ ಕ್ರಮಬದ್ಧ ಪರಿಸರ ನಿರ್ಮಾಣಕ್ಕೆ ಮುಂದಾಗಿರುವ ಅದಾನಿ ಸಿಮೆಂಟ್ ಸಂಸ್ಥೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಬಂಜಾರ ಸಮಾಜದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ.

ಚಿತ್ತಾಪುರ: ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 11 ಗಂಟೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಹಾಗೂ ಮನೆಗಳ ಹಕ...