ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಅವರಿಗೆ ಯಾವುದೇ ಮಾಹಿತಿ ನೀಡದೆ, ರಾತೋರಾತ್ರಿ ಅಕ್ರಮವಾಗಿ ಸುಣ್ಣದ ಕಲ್ಲು ಪತ್ತೆಗಾಗಿ ಡ್ರಿಲಿಂಗ್ ನಡೆಸುತ್ತಿರುವ RP GEO MINING SOLUTIONS ಕಂಪನಿಯ ವಿರುದ್ಧ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಕಾರ್ಮಿಕ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಸಾಗರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿಗಳು ಅಥವಾ ತಹಸೀಲ್ದಾರರಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಂಪನಿಯು ಸುಣ್ಣದ ಕಲ್ಲಿನ ಡ್ರಿಲಿಂಗ್ ನಡೆಸುತ್ತಿದೆ, 2022ರಲ್ಲಿಯೇ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರೈತರ ಗಮನಕ್ಕೆ ತರದೆ ಜಮೀನುಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿದೆ. ಈ ಹರಾಜನ್ನು ಅಂಬುಜಾ ಸಿಮೆಂಟ್ ಕಂಪನಿ ಪಡೆದುಕೊಂಡಿದೆ, ಬೋರ್ವೆಲ್ಗಳಿಂದ ಕೇವಲ 100 ಮೀಟರ್ ಅಂತರದಲ್ಲಿ ಆಳವಾಗಿ ಕೊರೆಯುವ ಮೂಲಕ ಅಂತರ್ಜಲ ಹಾಗೂ ಕೃಷಿ ಭೂಮಿಗೆ ಹಾನಿ ಮಾಡಲಾಗುತ್ತಿದೆ. ಜಮೀನಿನಿಂದ ತೆಗೆದ ಸುಣ್ಣದ ಕಲ್ಲಿನ ಮಾದರಿಗಳನ್ನು ರೈತರಿಗೆ ತಿಳಿಯದಂತೆ ಬೆಂಗಳೂರಿನ ಐ.ಬಿ.ಎಂ (IBM) ಗೆ ಸಲ್ಲಿಸಿ, ಇಡೀ ಗ್ರಾಮದ ಜಮೀನುಗಳನ್ನು ಹರಾಜು ಪ್ರಕ್ರಿಯೆಯಡಿ ವಶಪಡಿಸಿಕೊಳ್ಳುವ ಸಂಚು ರೂಪಿಸಲಾಗಿದೆ ಎಂದರು.
ನವ ಕರ್ನಾಟಕ ರೈತ ಸಂಘ ಸೇಡಂ ತಾಲ್ಲೂಕು ಅಧ್ಯಕ್ಷ ದೊಡ್ಡಪ್ಪ ಮಳಖೇಡ ಮಾತನಾಡಿ "ರೈತರ ಬದುಕಿನ ಆಧಾರವಾಗಿರುವ ಜಮೀನುಗಳನ್ನು ಅವರಿಗೆ ತಿಳಿಯದಂತೆ ಕಂಪನಿಗಳಿಗೆ ಧಾರೆ ಎರೆಯುತ್ತಿರುವುದು ಖಂಡನೀಯ. ಕೂಡಲೇ ಈ ಅಕ್ರಮ ಡ್ರಿಲಿಂಗ್ ಕಾರ್ಯವನ್ನು ತಡೆಹಿಡಿಯಬೇಕು. ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ RP GEO MINING SOLUTIONS ಕಂಪನಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಜಗದೀಶ್ ಸಾಗರ ಒತ್ತಾಯಿಸಿದ್ದಾರೆ.
ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ಸೂಲಹಳ್ಳಿ ಗ್ರಾಮದ ರೈತರೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಕಾರ್ಮಿಕ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ಜಳಕಿ ಇದ್ದರು.