ಕಲಬುರಗಿ: ಈ ಭಾಗದ ವಿಶೇಷ ಶಿಕ್ಷಣದ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ, ಜಾಗತಿಕ ಮಟ್ಟದ ಬೆಳೆ ಸಂರಕ್ಷಣಾ ಸಂಸ್ಥೆಯಾದ ಅದಾಮಾ (ADAMA), ಇಲ್ಲಿನ ಅಫಜಲಪುರ ರಸ್ತೆಯಲ್ಲಿರುವ ಬೌದ್ಧಿಕ ವಿಕಲಚೇತನ ಮಕ್ಕಳ ಶಾಲೆಯಾದ ಪರಿವರ್ತನಾ ಮಂದಿರದಲ್ಲಿ 1,800 ಚದರ ಅಡಿಯ ನೂತನ ತರಬೇತಿ ಬ್ಲಾಕ್ ಅನ್ನು ಉದ್ಘಾಟಿಸಿದೆ.
ದೀರ್ಘಕಾಲದವರೆಗೆ ಸುಸಜ್ಜಿತ ಕಟ್ಟಡದ ಕೊರತೆ ಅನುಭವಿಸುತ್ತಿದ್ದ ಈ ಶಾಲೆಗೆ, ಅದಾಮಾ ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಹೈದರಾಬಾದ್ ಮೂಲದ 'ನಿರ್ಮಾಣ್ ಆರ್ಗನೈಸೇಶನ್' ಸ್ವಯಂಸೇವಾ ಸಂಸ್ಥೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಿದೆ.
ನೂತನ ಕಟ್ಟಡವು ಸುಸಜ್ಜಿತ ತರಗತಿ ಕೊಠಡಿ, ವೃತ್ತಿಪರ ತರಬೇತಿ ಕೊಠಡಿ, ಆಡಳಿತ ಕಚೇರಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದೆ. ಇದರೊಂದಿಗೆ ಶಾಲಾ ಪೀಠೋಪಕರಣಗಳು, RO ಕುಡಿಯುವ ನೀರಿನ ಘಟಕ, ಗ್ರೀನ್ ಬೋರ್ಡ್ಗಳು, ಅಲ್ಮಿರಾಗಳು ಮತ್ತು ಮಕ್ಕಳಿಗೆ ಆಟದ ಸಾಮಗ್ರಿಗಳನ್ನು ಅದಾಮಾ ಸಂಸ್ಥೆ ಒದಗಿಸಿದೆ. ಪ್ರಸ್ತುತ 65 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಭವಿಷ್ಯದಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಲು ಇದು ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅದಾಮಾ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕ ರಮೇಶ್ ರೆಡ್ಡಿ ಅವರು, "ಅದಾಮಾ ಕಂಪನಿಯು ಕೇವಲ ಕೃಷಿ ಕ್ಷೇತ್ರಕ್ಕೆ ಸೀಮಿತವಾಗದೆ, ಸಮಾಜದ ಸರ್ವಾಂಗೀಣ ಪ್ರಗತಿಗೆ ಬದ್ಧವಾಗಿದೆ. ಈ ವಿಶೇಷ ಚೇತನ ಮಕ್ಕಳಿಗೆ ಗೌರವಯುತ ಕಲಿಕಾ ಪರಿಸರ ಒದಗಿಸುವುದು ನಮ್ಮ ಆಶಯವಾಗಿದೆ," ಎಂದರು.
ವಿನಾಯಕ ಎಜುಕೇಶನಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಶ್ರೀಮಂತ ರೇವೂರ ಮಾತನಾಡಿ, "ಸ್ಥಳಾವಕಾಶದ ಕೊರತೆಯೇ ನಮಗೆ ದೊಡ್ಡ ಸವಾಲಾಗಿತ್ತು. ಈಗ ಲಭ್ಯವಾಗಿರುವ ಈ ಮೂಲಸೌಕರ್ಯದಿಂದ ಮಕ್ಕಳಿಗೆ ಉತ್ತಮ ಪಠ್ಯಕ್ರಮ ಮತ್ತು ಜೀವನೋಪಾಯದ ತರಬೇತಿ ನೀಡಲು ಸಾಧ್ಯವಾಗಲಿದೆ," ಎಂದು ಕೃತಜ್ಞತೆ ಸಲ್ಲಿಸಿದರು.
ಈ ನೂತನ ಕೇಂದ್ರದಲ್ಲಿ ಮಕ್ಕಳಿಗೆ ಸ್ವಯಂ ನಿರ್ವಹಣೆ ಕೌಶಲಗಳ ಜೊತೆಗೆ ಪೇಪರ್ ಪ್ಲೇಟ್ ತಯಾರಿಕೆ, ಮೇಣದಬತ್ತಿ ತಯಾರಿಕೆ, ಲಕೋಟೆ (ಎನ್ವಲಪ್), ಜೂಟ್ ಬ್ಯಾಗ್ ಮತ್ತು ರಾಖಿ ಹಾಗೂ ಹಣತೆಗಳಿಗೆ ಬಣ್ಣ ಹಚ್ಚುವಂತಹ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತದೆ. ಇದು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.