ಸೋಮವಾರ, ಮಾರ್ಚ್ 9, 2026

ಸಂಭ್ರಮದಿಂದ ಜರುಗಿದ ಶ್ರೀ ಆಶಾಪುರ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ದೀಪೋತ್ಸವ

ಗುರುಮಿಟ್ಕಲ್: ಸುತ್ತಲಿನ ನಾಲ್ಕು ಗ್ರಾಮಗಳ ಮಧ್ಯದಲ್ಲಿರುವ ಕಾರಣಿಕ ಕ್ಷೇತ್ರ ಹಾಗೂ ಭಕ್ತರ ಆರಾಧ್ಯ ದೈವ ಶ್ರೀ ಆಶಾಪುರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಥೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮಗಳು ಭಕ್ತಿ-ಭಾವ ಮತ್ತು ಸಡಗರ-ಸಂಭ್ರಮಗಳಿಂದ ಜರುಗಿದವು.

ಎಲೇರಿ, ಗೊಪ್ಲಾಪುರ್, ಗಣಾಪುರ್, ಆಶಾಪುರ್ ತಾಂಡಾ ಹಾಗೂ ಜೆ.ಬಿ. ತಾಂಡಾಗಳ ಕೇಂದ್ರ ಬಿಂದುವಾಗಿರುವ ಶ್ರೀ ಆಶಾಪುರ ಆಂಜನೇಯ ದೇವಸ್ಥಾನದ ರಥೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಬೆಳಗಿದ ದೀಪೋತ್ಸವ: ರಥೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ವಿಶೇಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ದೇವೇಂದ್ರಪ್ಪ ಮಾಸ್ತರ್ ಕಾಳೂರ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗುರುಮಿಟ್ಕಲ್ ಅಧ್ಯಕ್ಷರಾದ ಶರಣಬಸಪ್ಪ ಕಾಳೂರ್  ಅವರ ನೇತೃತ್ವದಲ್ಲಿ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಗಣ್ಯರ ಉಪಸ್ಥಿತಿ: ಈ ಪುಣ್ಯ ಕಾರ್ಯಕ್ರಮದಲ್ಲಿ ದಿವಂಗತ ಶರಣಗೌಡ ಶಿವರಾಯ್ ಅವರ ಪುತ್ರ ಹಾಗೂ ಯಾದಗಿರಿಯ ನವ ನಂದಿ ಗುರುಕುಲ ಶಾಲೆಯ ಆಡಳಿತ ಮಂಡಳಿಯ ಸೋಮನಾಥ್ ರೆಡ್ಡಿ ಶಿವರಾಜ್, ಎಲೇರಿಯ ಬಸವರಾಜ್ ಗೌಡ ಶಿವರಾಜ್, ಚಂದ್ರಕಾಂತ್ ಗೌಡ ಎಲೇರಿ, ಶರಣಗೌಡ ಅಮಾಪ್ಯನೂರು, ಎಸ್.ಐ. ಹಣಮಂತ ಬೆಟ್ಟದ್, ಕಾಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶರಣಪ್ಪ ಕಾಳೂರು, ಪ್ರಮುಖರಾದ ಮಹೇಶ್ ಕಳೂರ್, ಗೌಡಪ್ಪ, ಮಾಳು ಬಳಗಾರ, ಬಸ್ಸು ಅತ್ತಿ ಗೂಡೂರ್, ಅಂತಪ್ಪ ದ್ಯಾವಮ್ಮನವರ್ ಸೇರಿದಂತೆ ಹಲವು ಗಣ್ಯರು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘ: 2026-27ನೇ ಸಾಲಿನ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ.

ಚಿತ್ತಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2026-27ನೇ ಸಾಲಿನ ಸದಸ್ಯತ್ವ ನವೀಕರಣ ಹಾಗೂ ಹೊಸದಾಗಿ ಸದಸ್ಯತ್ವ ಪಡೆಯಲು ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಕಲಬುರಗಿ ಜಿಲ್ಲಾ ಸಮಿತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್ ಹಾಗೂ ರಾಜ್ಯ ಸಮಿತಿ ಸದಸ್ಯ ರಾಜಕುಮಾರ ಉದನೂರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ತಾಪುರ ಸೇರಿ ಜಿಲ್ಲಾದ್ಯಾಂತ ಇರುವ ಪತ್ರಕರ್ತರು ಮಾರ್ಚ್ 10ರಿಂದ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಅರ್ಜಿಗಳನ್ನು ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 20ರ ಸಂಜೆ 5:00 ಗಂಟೆ ಕಡೆಯ ದಿನವಾಗಿರುತ್ತದೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳಾದ ಹಿಂದಿನ ವರ್ಷದ ಸಂಘದ ಗುರುತಿನ ಚೀಟಿ (ನವೀಕರಣ ಮಾಡುವವರಿಗೆ).ಸಂಪಾದಕರು ಅಥವಾ ಸಂಬಂಧಪಟ್ಟ ಮಾಧ್ಯಮ ಸಂಸ್ಥೆಗಳು ನೀಡಿದ ಆದೇಶ/ನೇಮಕಾತಿ ಪ್ರತಿ.ಆಧಾರ್ ಕಾರ್ಡ್ ಪ್ರತಿ.ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.ರೂ. 510/- ನಿಗದಿತ ಶುಲ್ಕ.

ಹೊಸದಾಗಿ ಸಂಘದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ (SSLC) ತೇರ್ಗಡೆಯಾದ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಇದರ ಜತೆಗೆ, ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಂದ ದೃಢೀಕರಣ ಪತ್ರವನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸಮಿತಿ ಸದಸ್ಯರಾದ ರಾಜಕುಮಾರ ಉದನೂರ ಸ್ಪಷ್ಟಪಡಿಸಿದ್ದಾರೆ.

ಶಿಸ್ತು, ಮೌಲ್ಯಗಳೇ ಯಶಸ್ಸಿನ ಮೆಟ್ಟಿಲು: ಜಗದೇವ ಕುಂಬಾರ

ಚಿತ್ತಾಪೂರ: ವಿದ್ಯಾರ್ಥಿ ಜೀವನದಲ್ಲಿ ಪ್ರಾಥಮಿಕ ಶಿಕ್ಷಣವು ಬುನಾದಿಯಿದ್ದಂತೆ. ಈ ಶಾಲೆಯಲ್ಲಿ ನೀವು ಕಲಿತ ಶಿಸ್ತು, ಸಮಯ ಪ್ರಜ್ಞೆ ಮತ್ತು ಮೌಲ್ಯಗಳನ್ನು ಮುಂದಿನ ದಿನಗಳಲ್ಲೂ ಪಾಲಿಸಿ. ಉತ್ತಮ ಪ್ರಜೆಗಳಾಗಿ ಬೆಳೆದು ಸಮಾಜಕ್ಕೆ ಮಾದರಿಯಾಗಿ," ಎಂದು ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯ ಕಾರ್ಯದರ್ಶಿಯಾದ ಜಗದೇವ ಎಸ್ ಕುಂಬಾರ ಹೇಳಿದರು.

ಪಟ್ಟಣದ ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 5ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ  ವಿದ್ಯಾದೇವತೆ ಶಾರದಾ ಮಾತೆ ಹಾಗೂ ಸರಸ್ವತಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನಗಳನ್ನು ಅರ್ಪಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದ ಒಂದು ಹಂತವನ್ನು ಯಶಸ್ವಿಯಾಗಿ ಮುಗಿಸಿ, ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಬಿಳ್ಕೊಡುಗೆ ಸಮಾರಂಭವು ಕೇವಲ ಬೀಳ್ಕೊಡುವಿಕೆಯಲ್ಲ, ಇದು ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುವ ಶುಭ ಸಂದರ್ಭವಾಗಿದೆ. ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯು ಕೇವಲ ಅಕ್ಷರ ಕಲಿಸಿದ ಸ್ಥಳವಲ್ಲ, ಇದು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಪವಿತ್ರ ದೇಗುಲವಾಗಿದೆ. ಇಲ್ಲಿ ಕಲಿತ ಸಂಸ್ಕಾರ ಮತ್ತು ಜ್ಞಾನದೊಂದಿಗೆ ನೀವು ಸಾಧನೆಯ ಶಿಖರ ಏರಬೇಕು, ನಿಮ್ಮ ಸಾಧನೆ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಲಿ," ಎಂದು ಹಾರೈಸಿದರು.

ಬಿಳ್ಕೊಡುಗೆ ಪಡೆಯುತ್ತಿರುವ 5ನೇ ತರಗತಿಯ ವಿದ್ಯಾರ್ಥಿಗಳಾದ ಪಿರ್ದೋಸ್, ಅಮಾನ್ ಮತ್ತು ಮಾನಸ ಮಾತನಾಡಿ, "ನಮಗೆ ಅಕ್ಷರ ಕಲಿಸಿ, ತಪ್ಪು ಮಾಡಿದಾಗ ತಿದ್ದಿ, ಪೋಷಕರಂತೆ ಪ್ರೀತಿಯಿಂದ ನೋಡಿಕೊಂಡ ನಮ್ಮ ಗುರುಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ಶಾಲೆಯ ನೆನಪುಗಳು ನಮ್ಮ ಜೀವನದ ಮಧುರ ಕ್ಷಣಗಳಾಗಿರುತ್ತವೆ. ನಮ್ಮನ್ನು ಈ ಹಂತಕ್ಕೆ ಬೆಳೆಸಿದ ಎಲ್ಲಾ ಶಿಕ್ಷಕರಿಗೂ ನಾವು ಚಿರಋಣಿಯಾಗಿದ್ದೇವೆ," ಎಂದು ಭಾವುಕವಾಗಿ ನುಡಿದರು.

ಈ ಸಂದರ್ಭದಲ್ಲಿ  ಶಾಲೆಯ ಶಿಕ್ಷಕರಾದ ಅಂಬರೀಶ್ ಭೋವಿ, ಶ್ರೀಮತಿ ಫೈಮುದ್ ಬೇಗಂ, ಸುಜಾತಾ ಕುಂಬಾರ, ಶಮ್ರೀನ್ ಬೇಗಂ, ಸುನಿತಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಟಿ-20 ವಿಶ್ವಕಪ್ ಜಯ: ವಾಡಿಯಲ್ಲಿ ವಿಜಯೋತ್ಸವ.

ಚಿತ್ತಾಪುರ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಮತಕ್ಷೇತ್ರದ ವಾಡಿ ಪಟ್ಟಣದ ನ್ಯೂ ಟೌನ್‌ನಲ್ಲಿ ‘ಬೆಳಗಿನ ಬಳಗ’ದ ಸದಸ್ಯರು ಭಾರತಾಂಬೆಗೆ ಜೈಕಾರ ಹಾಕುವ ಮೂಲಕ ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದರು.

ಬೆಳಗ್ಗೆ ಒಗ್ಗೂಡಿದ ಬಳಗದ ಸದಸ್ಯರು ಭಾರತದ ಗೆಲುವನ್ನು ಪರಸ್ಪರ ಅಭಿನಂದಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರು, "ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿ ವಿಶ್ವವಿಜೇತವಾಗಿ ಹೊರಹೊಮ್ಮಿರುವುದು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ. ಕೋಟ್ಯಂತರ ಭಾರತೀಯರ ಖುಷಿಯನ್ನು ಇಮ್ಮಡಿಗೊಳಿಸಿದ ಭಾರತದ ಯುವ ಕ್ರಿಕೆಟ್ ಪಡೆಯ ಕ್ರೀಡಾಸ್ಫೂರ್ತಿಯು ಜಗತ್ತಿನ ಕ್ರೀಡಾಪಟುಗಳಿಗೆ, ಕ್ರೀಡಾ ಪ್ರೇಮಿಗಳಿಗೆ ಹಾಗೂ ಯುವಕರಿಗೆ ಮಾದರಿಯಾಗಿದೆ. ವಿಜೇತ ತಂಡಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳು," ಎಂದು ಹರ್ಷ ವ್ಯಕ್ತಪಡಿಸಿದರು.

ಈ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಬೆಳಗಿನ ಬಳಗದ ಪ್ರಮುಖರಾದ ಜಯದೇವ ಜೋಗಿಕಲಮಠ, ಕಾಶಿನಾಥ ಶೆಟಗಾರ, ಬಸವರಾಜ ಕೇಶ್ವರ, ಅಮೃತಪ್ಪ ದಿಗ್ಗಾಂವ, ಶ್ರೀನಿವಾಸ ಅಣ್ಣೆ, ಸತೀಶ ಸಾವಳಗಿ, ವಿಠಲ ರಾಠೋಡ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ಭಾನುವಾರ, ಮಾರ್ಚ್ 8, 2026

ಹಕ್ಕುಪತ್ರದ ಕನಸು ನನಸು: ಶ್ರಮಕ್ಕೆ ಸಂದ ಜಯ.

ಚಿತ್ತಾಪುರ: ಕ್ಷೇತ್ರದ ಸ್ಟೇಷನ್ ತಾಂಡಾದ ನಿವಾಸಿಗಳ ದಶಕಗಳ ಕಾಲದ ಬೇಡಿಕೆಯಾಗಿದ್ದ ಮನೆಗಳ ಹಕ್ಕುಪತ್ರ ವಿತರಣೆಯ ಕಾರ್ಯವು ಕೊನೆಗೂ ಯಶಸ್ವಿಯಾಗಿ ನೆರವೇರಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಸುಮಾರು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ನಿವಾಸಿಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲಾಗಿದೆ.

ಪುರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಜಗದೀಶ್ ಡಿ. ಚವ್ಹಾಣ್ ಅವರ ನಿರಂತರ ಪರಿಶ್ರಮ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಿಂದ ಈ ಕಾರ್ಯ ಸಾಧ್ಯವಾಗಿದೆ.

ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಕಾಳಜಿಯಿಂದ ಈ ಯೋಜನೆ ಜಾರಿಗೆ ಬಂದಿದೆ.ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸವಿದ್ದರೂ ಹಕ್ಕುಪತ್ರವಿಲ್ಲದೆ ನಿವಾಸಿಗಳು ಬ್ಯಾಂಕ್ ಸಾಲ, ಸರ್ಕಾರಿ ಸೌಲಭ್ಯ ಹಾಗೂ ಖಾತೆ ಬದಲಾವಣೆಯಂತಹ ಸೌಲಭ್ಯಗಳಿಂದ ವಂಚಿತರಾಗಿದ್ದರು. ಈಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ. ಸಾವಿರಾರು ಕುಟುಂಬಗಳ ಪರವಾಗಿ ಜಗದೀಶ್ ಡಿ. ಚವ್ಹಾಣ್ ಅವರು ರಾಜ್ಯ ಸರ್ಕಾರಕ್ಕೆ ಹಾಗೂ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.


"ನಾನು ಪಟ್ಟ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ತಾಂಡಾದ ಬಡ ಜನರ ಮುಖದಲ್ಲಿ ನಗು ನೋಡುತ್ತಿರುವುದು ಸಂತಸ ತಂದಿದೆ. ಇದು ನಮ್ಮ ನೆಚ್ಚಿನ ನಾಯಕರಾದ ಪ್ರಿಯಾಂಕ್ ಖರ್ಗೆ ಅವರ ಆಶೀರ್ವಾದದ ಬಲದಿಂದ ಮಾತ್ರ ಸಾಧ್ಯವಾಗಿದೆ."

— ಜಗದೀಶ್ ಡಿ. ಚವ್ಹಾಣ್, ಮಾಜಿ ಅಧ್ಯಕ್ಷರು, ಪುರಸಭೆ ಸ್ಥಾಯಿ ಸಮಿತಿ ಚಿತ್ತಾಪುರ.

ಮೋದಿಯ ವಿದೇಶಾಂಗ ನೀತಿಯಿಂದ ದೇಶದ ಗೌರವಕ್ಕೆ ಧಕ್ಕೆ: ಖರ್ಗೆ ವಾಗ್ದಾಳಿ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹದಗೆಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಟೀಕಿಸಿದರು.

ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರದ ₹1,069 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು "ಮೋದಿಯವರು ಅಮೆರಿಕದ ಗುಲಾಮನಂತೆ ವರ್ತಿಸುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದ ಅನುಮತಿಗಾಗಿ ಕಾಯುವ ಸ್ಥಿತಿ ಬಂದಿದೆ. ಟ್ರಂಪ್‌ ಅವರೊಂದಿಗೆ ಸ್ನೇಹ ಮಾಡಿಕೊಂಡು ದೇಶದ ಹಿತಾಸಕ್ತಿಯನ್ನು ಗಿರಿವಿ ಇಟ್ಟಿದ್ದಾರೆ. ನೆಹರೂ ಅವರ ಕಾಲದ 'ಅಲಿಪ್ತ ನೀತಿ' ವಿಶ್ವಶಾಂತಿಗೆ ಪೂರಕವಾಗಿತ್ತು. ಆದರೆ ಈಗಿನ ಮೋದಿಯವರ ನಡೆಯಿಂದ ವಿಶ್ವಶಾಂತಿ ಕದಡುತ್ತಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, 371(ಜೆ) ಜಾರಿಗೆ ಬಿಜೆಪಿ ಅಂದು ಅಡ್ಡಿಪಡಿಸಿತ್ತು ಎಂದು ಸ್ಮರಿಸಿದ ಅವರು, ಈ ಸೌಲಭ್ಯದಿಂದ ಇಂದು ಬಡ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟು ಪಡೆಯುತ್ತಿದ್ದಾರೆ ಎಂದರು.
 
ನೀರಾವರಿ ಹಾಗೂ ಉದ್ಯೋಗದ ಭರವಸೆ: ಡಿಸಿಎಂ, ಡಿಕೆಶಿ ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಮಲ್ಲಿಕಾರ್ಜುನ ಖರ್ಗೆ ಅವರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದ 400ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮೂಲಕ ನಾವು 'ನೀರಾವರಿ ಗ್ಯಾರಂಟಿ' ನೀಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲು 2,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿದ್ದು, ಕಲ್ಯಾಣ ಕರ್ನಾಟಕಕ್ಕೆ 330 ಶಾಲೆಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು" ಎಂದು ತಿಳಿಸಿದರು.
ಗ್ಯಾಸ್ ಬೆಲೆ ಏರಿಕೆ ಪ್ರಿಯಾಂಕ್ ಖರ್ಗೆ ಕಿಡಿ
ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಇಂದು ವಿಶ್ವ ಮಹಿಳಾ ದಿನ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆ ಏರಿಸಿ ಜನರಿಗೆ 'ಅಚ್ಛೇ ದಿನ್' ಉಡುಗೊರೆ ನೀಡಿದೆ. ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಅವರಿಗೆ ಮರಳಿಸುತ್ತಿರುವುದನ್ನು ಸಹಿಸದೆ ಬಿಜೆಪಿ ಟೀಕಿಸುತ್ತಿದೆ. ಚಿತ್ತಾಪುರದ ಪ್ರತಿಯೊಂದು ಹಳ್ಳಿಗೆ ಸರಾಸರಿ ₹1 ಕೋಟಿಗೂ ಅಧಿಕ ಅನುದಾನ ನೀಡಲಾಗುತ್ತಿದೆ. ನಾನು ಈ ಮಣ್ಣಿನ ಮೊಮ್ಮಗನಾಗಿ ನಿಮ್ಮ ಸೇವೆ ಮಾಡುತ್ತಿದ್ದೇನೆ. ಜನರ ಆಶೀರ್ವಾದ ಇರುವವರೆಗೆ ನನಗೆ ಯಾರ ಭಯವೂ ಇಲ್ಲ" ಎಂದು ಗುಡುಗಿದರು.

ಕಾರ್ಯಕ್ರಮದ ಮುಖ್ಯಾಂಶಗಳು:
ಕ್ಷೇತ್ರದಲ್ಲಿ ₹1,069 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.
•ಕಲಬುರಗಿ ಜಿಲ್ಲೆಯ 15.50 ಲಕ್ಷ ರೈತರಿಗೆ ₹2,590 ಕೋಟಿ ಪರಿಹಾರ ವಿತರಣೆ.
•ಚಿತ್ತಾಪುರಕ್ಕೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ 2,000 ಮನೆಗಳ ಮಂಜೂರಾತಿ.

ವೇದಿಕೆಯಲ್ಲಿ ಡಾ. ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ್, ಶ್ರೀಮತಿ ಖನಿಜ ಫಾತಿಮಾ, ಎಂ ವೈ ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ಡಾ ಚಂದ್ರಶೇಖರ್ ಪಾಟೀಲ್, ತಿಪ್ಪಣಪ್ಪ ಕಮಕನೂರು, ಬಿ ಆರ್ ಪಾಟೀಲ್, ಬಾಬುರಾವ್ ಚಿಂಚನಸೂರ, ಜಗದೇವ ಗುತ್ತೇದಾರ್, ಸಯ್ಯದ್ ಮೊಹಮ್ಮದ್ ಅಲಿ ಹುಸೇನ್, ದೇವೇಂದ್ರಪ್ಪ ಮರತೂರು, ಅರುಣ್ ಕುಮಾರ್ ಪಾಟೀಲ್, ಸೈಯದ್ ಮಹಿಮೂದ್ ಚಿಸ್ತಿ ಸಾಹೇಬ್, ಪ್ರವೀಣ್ ಹರವಾಳ, ಶ್ರೀಮತಿ ಚಂದ್ರಿಕಾ ಪರಮೇಶ್ವರಿ, ಅಧಿಕಾರಿಗಳಾದ ಜಿಲ್ಲಾಧಿಕಾರಿ  ಫೌಜಿಯ ತರನ್ನುಮ್, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ್ ಶ್ರೀನಿವಾಸುಲು, ಎಸಿ ಪ್ರಭುರಾಜ್, ತಹಸಿಲ್ದಾರ್ ನಾಗಯ್ಯ ಹಿರೇಮಠ ಡಿವೈಎಸ್ಪಿ ಶಂಕರಗೌಡ ಪಾಟೀಲ್. ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಶನಿವಾರ, ಮಾರ್ಚ್ 7, 2026

ಚಿತ್ತಾಪುರ: ₹1069 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ; ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ.

ಚಿತ್ತಾಪುರ: ಪಟ್ಟಣದ ಮಳಖೇಡ ರಸ್ತೆಯ ಸೇಂದಿ ಡಿಪೋ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿರುವ ಬೃಹತ್ ಅಡಿಗಲ್ಲು ಹಾಗೂ ಉದ್ಘಾಟನಾ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ವೀಕ್ಷಿಸಿದರು.

​ಕ್ಷೇತ್ರದ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತದ ಎನ್ನಲಾದ ಅಂದಾಜು ₹1069 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಈ ಸಂದರ್ಭದಲ್ಲಿ ಚಾಲನೆ ದೊರೆಯಲಿದೆ.
​ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿಗಳು.ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವರು​ ಡಾ. ಶರಣಪ್ರಕಾಶ ಪಾಟೀಲ್, ಸೇರಿದಂತೆ ಹಲವು ಶಾಸಕರು, ಎಂಎಲ್‌ಸಿಗಳು ಹಾಗೂ ಮಾಜಿ ಸಚಿವರು ಭಾಗವಹಿಸಲಿದ್ದಾರೆ.

​ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ವೇದಿಕೆ ನಿರ್ಮಾಣ, ಸಾರ್ವಜನಿಕರ ಆಸನ ವ್ಯವಸ್ಥೆ ಹಾಗೂ ಊಟದ ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

​ಉಪಸ್ಥಿತರಿದ್ದ ಅಧಿಕಾರಿಗಳು ಮತ್ತು ಮುಖಂಡರು:
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರಸಿಂಗ್ ಮೀನಾ, ಎಸ್ ಪಿ ಅಡ್ಡರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಜರಿದ್ದರು.ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ರಮೇಶ್‌ ಮರಗೋಳ, ನಾಗರೆಡ್ಡಿ ಪಾಟೀಲ ಕರದಾಳ, ಸುನೀಲ್ ದೊಡ್ಡಮನಿ, ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ನಾಗಯ್ಯ ಗುತ್ತೇದಾರ, ಮನ್ಸೂರ್ ಪಟೇಲ್, ಎಂ.ಎ.ರಷೀದ್, ಜಯಪ್ರಕಾಶ್ ಕಮಕನೂರ, ಶಿವರಾಜ್ ಕಲಗುರ್ತಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಶುಕ್ರವಾರ, ಮಾರ್ಚ್ 6, 2026

ಬಂಜಾರ ಸಮಾಜದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ.

ಚಿತ್ತಾಪುರ: ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 11 ಗಂಟೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಹಾಗೂ ಮನೆಗಳ ಹಕ್ಕು ಪತ್ರ ವಿತರಣೆಯ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಫಲಾನುಭವಿಗಳು ಹಾಗೂ ಬಂಜಾರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ್ ಕರೆ ನೀಡಿದ್ದಾರೆ.

ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಈ ಗಣ್ಯರ ಅಮೃತ ಹಸ್ತದಿಂದ ಫಲಾನುಭವಿಗಳ ಮನೆಗಳ ಹಕ್ಕುಪತ್ರಗಳ ವಿತರಣೆ ನಡೆಯಲಿದೆ.

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಭೀಮಸಿಂಗ್ ಚವ್ಹಾಣ್, "ಸ್ಟೇಷನ್ ತಾಂಡಾ ನಿವಾಸಿಗಳ ಬಹುದಿನಗಳ ಕನಸಾಗಿದ್ದ ಮನೆಗಳ ಹಕ್ಕು ಪತ್ರಗಳು ಈಗ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ವಿತರಣೆಯಾಗುತ್ತಿರುವುದು ಅತ್ಯಂತ ಸಂತೋಷದ ವಿಷಯ. ಈ ಐತಿಹಾಸಿಕ ಕೆಲಸಕ್ಕೆ ಕಾರಣೀಭೂತರಾದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹಾಗೂ ಸಮಾಜದ ಎಲ್ಲಾ ನಾಯಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ," ಎಂದು ತಿಳಿಸಿದ್ದಾರೆ.

ಬಂಜಾರ ಸಮಾಜದ ಪ್ರತಿಯೊಬ್ಬ ಫಲಾನುಭವಿಯೂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಮೂಲಕ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ದೇವಿದಾಸ್ ಚವ್ಹಾಣ, ಪ್ರವೀಣ ಪವಾರ್,ರಾಕೇಶ ಪವಾರ್,ಮಹಾದೇವ ರಾಠೋಡ ಇದ್ದರು.

ಅಭಿವೃದ್ಧಿ ಸಂಭ್ರಮ: ಅಧಿಕಾರಿಗಳೊಂದಿಗೆ ಡಿಸಿ ಸಭೆ.

ಚಿತ್ತಾಪುರ: ಕ್ಷೇತ್ರದ ಇತಿಹಾಸದಲ್ಲೇ ಮೈಲಿಗಲ್ಲಾಗಲಿರುವ ಸುಮಾರು 1,085 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ಲೋಕಾರ್ಪಣೆ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 8 ರಂದು ನಡೆಯಲಿರುವ ಈ ಬೃಹತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿ, ಪೂರ್ವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು.

ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭಕ್ಕೆ ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸುತ್ತಿದ್ದು.

"ಇದು ಅತ್ಯಂತ ವಿಶೇಷ ಹಾಗೂ ಪ್ರಮುಖ ಕಾರ್ಯಕ್ರಮವಾಗಿರುವುದರಿಂದ, ಶಿಷ್ಟಾಚಾರದ ಪಾಲನೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ವೇದಿಕೆ, ಆಸನ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿದ್ಧತೆ ಕೈಗೊಳ್ಳಬೇಕು," ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅಧಿಕಾರಿಗಳೊಂದಿಗೆ ಸಭೆ ಸ್ಥಳ ಪರಿಶೀಲನೆಯ ನಂತರ 'ಪ್ರಜಾ ಸೌಧ'ದ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಎಸ್ಪಿ ಅದ್ದೂರು ಶ್ರೀನಿವಾಸಲು, ಜಿಪಂ ಸಿಇಓ ಭಂವರಸಿಂಗ್ ಮೀನಾ, ಸೇಡಂ ಎಸಿ ಪ್ರಭು ರೆಡ್ಡಿ, ಡಿವೈಎಸ್ಪಿ ಶಂಕರಗೌಡ ಪಾಟೀಲ, ತಹಸೀಲ್ದಾರ್ ನಾಗಯ್ಯ ಹಿರೇಮಠ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ರಾಜಕೀಯ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

ಚಿತ್ತಾಪುರ ನಕ್ಷೆ ಬದಲಿಸಲು ಪ್ರಿಯಾಂಕ್ ಖರ್ಗೆ ಪಣ: ₹1,085 ಕೋಟಿ ಅನುದಾನದ ಐತಿಹಾಸಿಕ ಸಮಾವೇಶ.

ಚಿತ್ತಾಪುರ: ಕ್ಷೇತ್ರದ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸುಮಾರು ರೂ. 1,085 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ಲೋಕಾರ್ಪಣೆ ಸಮಾರಂಭವು ಮಾರ್ಚ್ 8ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಮಳಖೇಡ ರಸ್ತೆಯ ಸೇಂದಿ ಡಿಪೋ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ತಿಳಿಸಿದರು.

​ಶುಕ್ರವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಕಾರ್ಯಕ್ರಮವು ​ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭಕ್ಕೆ ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರು ​ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳಾದ ​ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ​ಡಿ.ಕೆ. ಶಿವಕುಮಾರ್, ಆಗಮಿಸಲಿದ್ದಾರೆ. ಜಿಲ್ಲೆಯ ಶಾಸಕರು ಹಾಗೂ ನಿಗಮ ಮಂಡಳಿ ಅಧ್ಯಕ್ಷರು ಉಪಸ್ಥಿತರಿರಲಿದ್ದು, ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ ಮಾತನಾಡಿ, "ಸಚಿವ ಪ್ರಿಯಾಂಕ್ ಖರ್ಗೆ ಅವರು ಕ್ಷೇತ್ರದ ಅಭಿವೃದ್ಧಿಗೆ ಒಟ್ಟು 1,085 ಕೋಟಿ ಅನುದಾನ ತಂದಿದ್ದಾರೆ. ಇದರಲ್ಲಿ 1,000 ಕೋಟಿ ರೂ. ವೆಚ್ಚದ ಹೊಸ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗುವುದು ಮತ್ತು 85 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು," ಎಂದರು.

​ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಅವರು ಮಾತನಾಡಿ ​ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 500 ಕೋಟಿ ರೂ. ಮೀಸಲು.​ದಂಡೋತಿ ಕಾಗಿಣಾ ನದಿ ಬ್ರಿಜ್ ಹಾಗೂ ಹೊನಗುಂಟಿ ಬ್ರಿಜ್ ಅಡಿಗಲ್ಲು.​ಸರ್ಕಾರಿ ಕನ್ಯಾ ಮಾದರಿ ಪ್ರಾಥಮಿಕ/ಪ್ರೌಢಶಾಲೆ ಹಾಗೂ ವಿಜ್ಞಾನ ಕೇಂದ್ರದ ಸ್ಥಾಪನೆ.
​ಪ್ರತಿಯೊಂದು ಗ್ರಾಮಕ್ಕೆ 1 ರಿಂದ 4 ಕೋಟಿ ರೂ.ವರೆಗಿನ ಅಭಿವೃದ್ಧಿ ಅನುದಾನ.​ಸಚಿವರು ಕ್ಷೇತ್ರದ ನಕ್ಷೆಯನ್ನೇ ಬದಲಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಹಳ್ಳಿ ಹಳ್ಳಿಗಳಿಂದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮುಖಂಡರು ಮನವಿ ಮಾಡಿದ್ದಾರೆ.

​ಸುದ್ದಿಗೋಷ್ಠಿಯಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ಜಿಪಂ ಮಾಜಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಪ್ರಮುಖರಾದ ಶಿವರುದ್ರಪ್ಪ ಭೀಣ್ಣಿ, ಜಗಣ್ಣಗೌಡ ರಾಮತೀರ್ಥ, ನಾಗರೆಡ್ಡಿ ಗೋಪಸೇನ್, ವೀರುಪಾಕ್ಷಪ್ಪ ಗಡ್ಡದ್, ಚಂದ್ರಶೇಖರ ಕಾಶಿ, ಶಾಂತಣ್ಣ ಚಾಳೀಕಾರ, ನಾಗಯ್ಯ ಗುತ್ತೇದಾರ, ಮಲ್ಲಪ್ಪ ಹೊಸಮನಿ, ಶಿವರಾಜ್ ಕಲಗುರ್ತಿ, ಜಯಪ್ರಕಾಶ್ ಕಮಕನೂರ, ಕುಂದನ್ ಸಿಂಗ್, ದೇವು ಯಾಬಾಳ, ಸಂಜಯ ಬುಳಕರ್, ಶರಣು ಡೋಣಗಾಂವ, ರವಿಸಾಗರ ಹೊಸಮನಿ, ರಾಜಣ್ಣ ಕರದಾಳ, ವಿನ್ನುಕುಮಾರ ಜಡಿ, ಬಾಗು ದೊರೆ, ಸೂರಜ್ ಕಲ್ಲಕ್ ಸೇರಿದಂತೆ ಇತರರು ಇದ್ದರು.

ಗುರುವಾರ, ಮಾರ್ಚ್ 5, 2026

ನಾಳೆ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ.

​ಚಿತ್ತಾಪುರ: ತಾಲ್ಲೂಕು ಸರ್ಕಾರಿ ನೌಕರರ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಮಾರ್ಚ್ 6ರಂದು ಮಧ್ಯಾಹ್ನ 1:30ಕ್ಕೆ ಪಟ್ಟಣದ ರೈಲ್ವೆ ಸ್ಟೇಷನ್ ಹತ್ತಿರವಿರುವ ಪಶುಪಾಲನೆ ಇಲಾಖೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಬಸವರಾಜ ಬಳೂಂಡಗಿ ತಿಳಿಸಿದ್ದಾರೆ.

​ಸಂಘದ ವಾರ್ಷಿಕ ಕಾರ್ಯಕಲಾಪಗಳ ವರದಿ ಮಂಡನೆ.
​ಸಂಘದ ಲೆಕ್ಕಪತ್ರಗಳ ಅಡಿಟ್ ವರದಿ ಮಂಡನೆ.
​ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳಿಗೆ ನೇಮಕ ಪ್ರಮಾಣ ಪತ್ರ ವಿತರಣೆ. ​ಸಂಘದ ಅಭಿವೃದ್ಧಿ ಹಾಗೂ ನೌಕರರ ಹಿತರಕ್ಷಣೆಗೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಈ ಮಹತ್ವದ ಸಭೆಗೆ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಚುನಾಯಿತ ಹಾಗೂ ನಾಮನಿರ್ದೇಶಿತ ಪದಾಧಿಕಾರಿಗಳು, ಸರ್ವ ಸದಸ್ಯರು, ವಿವಿಧ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಇಲಾಖೆಗಳ ನೌಕರರು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.

ಸಂಭ್ರಮದಿಂದ ಜರುಗಿದ ಶ್ರೀ ಆಶಾಪುರ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ದೀಪೋತ್ಸವ

ಗುರುಮಿಟ್ಕಲ್: ಸುತ್ತಲಿನ ನಾಲ್ಕು ಗ್ರಾಮಗಳ ಮಧ್ಯದಲ್ಲಿರುವ ಕಾರಣಿಕ ಕ್ಷೇತ್ರ ಹಾಗೂ ಭಕ್ತರ ಆರಾಧ್ಯ ದೈವ ಶ್ರೀ ಆಶಾಪುರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರ...