ಅಳ್ಳೊಳ್ಳಿ ಗ್ರಾಮದಲ್ಲಿ ಉಚಿತ ಜಾನುವಾರು ಲಸಿಕೆ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಚಿತ್ತಾಪುರ: ತಾಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಪಶು ವೈದ್ಯಾಧಿಕಾರಿ ಡಾ. ಶಂಕರ್ ಕಣ್ಣಿ ಅವರ ನೇತೃತ್ವದಲ್ಲಿ ಜಾನುವಾರುಗಳಿಗೆ ಉಚಿತ ಲಸಿಕೆ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ದನಗಳಿಗೆ ಚರ್ಮಗಂಟು ರೋಗ (LSD) ವಿರುದ್ಧ ಹಾಗೂ ಕುರಿ-ಮೇಕೆಗಳಿಗೆ ಕರುಳುಬೇಣೆ ರೋಗದ ವಿರುದ್ಧ ಲಸಿಕೆ ಹಾಕಲಾಯಿತು. ಜೊತೆಗೆ, ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಜಾನುವಾರು ಮಾಲೀಕರಿಗೆ ಜಂತುನಾಶಕ ಔಷಧ, ಲವಣ ಮಿಶ್ರಣ ಹಾಗೂ ಪಶು ಆರೋಗ್ಯ ಟಾನಿಕ್‌ಗಳನ್ನು ವಿತರಿಸಲಾಯಿತು. ಅಲ್ಲದೆ, ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಈ ಉಚಿತ ಶಿಬಿರದಲ್ಲಿ ಒಟ್ಟು 150 ದನಗಳು ಹಾಗೂ 280 ಮೇಕೆಗಳಿಗೆ ಲಸಿಕೆ ಹಾಕಲಾಗಿದ್ದು, 45 ಕರುಗಳಿಗೆ ಜಂತುನಾಶಕ ಔಷಧ ನೀಡಲಾಯಿತು. ರೈತರು ಕಡಿಮೆ ವೆಚ್ಚದಲ್ಲಿ ಜಾನುವಾರು ಮೇವು ಉತ್ಪಾದಿಸಬಹುದಾದ 'ಹೈಡ್ರೋಪೋನಿಕ್ಸ್' ಪದ್ಧತಿಯ ಕುರಿತು ಅರಿವು ಮೂಡಿಸಿ, ಹೈಡ್ರೋಪೋನಿಕ್ಸ್ ಬೆಳೆದ ರೈತರಿಗೆ ಪ್ರೋತ್ಸಾಹ ನೀಡಲಾಯಿತು.

ಗ್ರಾಮದ ಜಾನುವಾರು ಮಾಲೀಕರು ಅತಿ ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಪಶು ವೈದ್ಯಾಧಿಕಾರಿ ಡಾ. ಆಕಾಶ್, ಪಶು ವೈದ್ಯಾಧಿಕಾರಿ ಡಾ. ಸಚಿನ್ ಹಾಗೂ ಇಲಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು