ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಸಿದ್ಧ: ಪ್ರಿಯಾಂಕ ಖರ್ಗೆ.
ಚಿತ್ತಾಪುರ: ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಸದಾ ಸಿದ್ದರಿರುವುದಾಗಿ ಶಾಸಕ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.
ಮತ ಕ್ಷೇತ್ರದ ಅಶೋಕ ನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ರೂ. 15 ಲಕ್ಷ ವೆಚ್ಚದಲ್ಲಿ ಡಾ ಬಾಬು ಜಗಜೀವನರಾಂ ಭವನ, ರೂ 15 ಲಕ್ಷ ವೆಚ್ಚದಲ್ಲಿ ಸೇವಾಲಾಲ್ ಭವನ ಉದ್ಘಾಟನೆ ಹಾಗೂ ರೂ 25 ಲಕ್ಷ ವೆಚ್ಚದಲ್ಲಿ ಕೈಗತ್ತಿಕೊಳ್ಳಲಾಗುತ್ತಿರುವ ಆರ್.ಸಿ.ಬಿ ಮಖ್ಯ ಕ್ಯಾನೆಲ್ ನಿಂದ ಬೆಣ್ಣೂರು (ಕೆ) ಗ್ರಾಮದವರೆಗೆ ಆಣೆಕಟ್ಟು ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಾಯಿತು.
ಬಿಜೆಪಿ ಸರ್ಕಾರದಲ್ಲಿ ಅಭಿವೃದ್ದಿಗೆ ಹಿನ್ನೆಡೆಯಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್ ಸಿ ಪಿ / ಟಿಎಸ್ ಪಿ ಅಡಿಯಲ್ಲಿ 28,000 ಕೋಟಿ ನಿಗದಿಪಡಿಸಿ ಎಸ್ ಸಿ ಹಾಗೂ ಎಸ್ ಟಿ ಜನಾಂಗದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 150 ಬೋರ್ ವೆಲ್ ಮಂಜೂರಾಗಿದ್ದವು. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇವಲ 5 ಬೋರ್ ವೆಲ್ ಮಾತ್ರ ಮಂಜೂರು ಮಾಡಿದ್ದಾರೆ. ಇದು ಸರ್ಕಾರದ ಬದ್ದತೆ ತೋರಿಸುತ್ತದೆ ಎಂದು ಟೀಕಿಸಿದರು.
ಗ್ರಾಮಗಳ ಅಭಿವೃದ್ದಿಗೆ ನಾನು ಸದಾ ಸಿದ್ದನಿದ್ದು ನಿಮ್ಮ ಸೇವೆಗೆ ಬದ್ಧನಾಗಿದ್ದೇನೆ. ಈ ಸರ್ಕಾರದ ನಿರ್ಲಕ್ಷ್ಯತನದ ನಡುವೆಯೂ ಅನುದಾನ ಮಂಜೂರು ಮಾಡಿಸಿಕೊಂಡು ಭವನಗಳ ನಿರ್ಮಾಣ ಮಾಡುತ್ತಿದ್ದೇನೆ. ರಸ್ತೆ ನಿರ್ಮಾಣ ಹಾಗೂ ಮಹಿಳೆಯರ ಶೌಚಾಲಯ ನಿರ್ಮಾಣಕ್ಕೂ ಆದ್ಯತೆ ನೀಡುತ್ತೇನೆ. ನಾನು ನಿಮ್ಮ ಕೆಲಸ ಮಾಡುತ್ತೇನೆ, ನೀವು ನನಗೆ ಅಶೀರ್ವಾದ ಮಾಡಿ. ಆದರೆ, ಜೂಜುಕೋರರು, ಅಕ್ರಮ ಮರುಳು ಸಾಗಾಣಿಕೆ ಮಾಡುವವರನ್ನು ಮಾತ್ರ ಬೆಂಬಲಿಸಬೇಡಿ. ಅವರ ಕೈಗೆ ಅಧಿಕಾರ ಕೊಡಬೇಡಿ, ಅವರಿಂದ ದೂರವಿರಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದುಗೌಡ ಪಾಟೀಲ್, ಶಿವರಾಜ್ ಪಾಟೀಲ್ ಕಲಗುರ್ತಿ, ಬಸವರಾಜ್ ಹೊಸಳ್ಳಿ, ಮಲ್ಲಪ್ಪ ಹೊಸಮನಿ, ಕೃಷ್ಣ ಕಟ್ಟಿಮನಿ, ರಾಕೇಶ್ ಕಟ್ಟಿಮನಿ, ಪ್ರವೀಣ್ ನಾಮದಾರ್ ಇತರರು ಇದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ