✓ಭೀಮನಡೆ ಯಶಸ್ವಿ ಬಿಜೆಪಿ ಹತಾಶೆ, ✓ಬಿಜೆಪಿಗರ ಆರೋಪ ಸತ್ಯಕ್ಕೆ ದೂರ.
ಚಿತ್ತಾಪುರ: ಆರ್ಎಸ್ಎಸ್ ನವರು ತ್ರಿವರ್ಣ ಧ್ವಜಗಳು ಹಿಡಿದಿಲ್ಲ ಕೈಯಲ್ಲಿ ಬಡಗಿ ಹಿಡಿದು ಪಥಸಂಚಲನ ಮಾಡಿದ್ದರೆ ನಾವು ತ್ರಿವರ್ಣ ಧ್ವಜಗಳು ಹಿಡಿದು ಹಾಗೂ ಸಂವಿಧಾನ ಪೀಠಕೆ ಜೊತೆಗೆ ಎಲ್ಲಾ ಸಮಾಜಗಳ ಗುರುಗಳ ಭಾವಚಿತ್ರಗಳೊಂದಿಗೆ ಮೆರವಣಿಗೆ ಮಾಡಿದ್ದೇವೆ ಹಾಗಾಗಿ ಆರ್ಎಸ್ಎಸ್ ಮತ್ತು ಬಿಜೆಪಿ ನವರು ನಕಲಿ ದೇಶಭಕ್ತರು ನಾವು ನಿಜವಾದ ದೇಶಭಕ್ತರು ಎಂದು ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಹೇಳಿದರು.
ಪಟ್ಟಣದ ಬುದ್ಧ ಮಂದಿರದಲ್ಲಿ ಸಂವಿಧಾನ
ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭೀಮ ನಡಿಗೆ ಪಥಸಂಚಲನದಲ್ಲಿ ಅಂಬೇಡ್ಕರ್ ಅನುಯಾಯಿಗಳು ಹಾಗೂ 22 ಸಮಾಜದ ಜನರು ಭಾಗವಹಿಸಿದ್ದರಿಂದ ಅಭೂತಪೂರ್ವ ಯಶಸ್ವಿಗೊಂಡಿದೆ, ಇದನ್ನು ಸಹಿಸಿಕೊಳ್ಳಲು ಆಗದ ಬಿಜೆಪಿ ಮುಖಂಡರು ಹತಾಶೆಗೊಂಡು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಆರ್.ಎಸ್.ಎಸ್ ನವರು ಕೈಯಲ್ಲಿ ಬಡಗಿ ಹಿಡಿದು ಪಥ ಸಂಚಲನ ಮಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ, ಆದರೆ ನಾವು ಯಾವುದೇ ಮಾರಕಾಸ್ತ್ರ ಇಲ್ಲದೇ ಶಿಸ್ತುಬದ್ಧವಾಗಿ, ಶಾಂತಿಯುತವಾಗಿ ಐತಿಹಾಸಿಕ ಭೀಮ ನಡಿಗೆ ಪಥ ಸಂಚಲನ ಮಾಡಿದ್ದೇವೆ, ಭೀಮ ನಡಿಗೆ ಪಥಸಂಚಲನದಲ್ಲಿ ಸ್ವಯಂಪ್ರೇರಿತವಾಗಿ ಜನ ಬಂದಿದ್ದಾರೆ ಯಾರನ್ನೂ ಹಣ ನೀಡಿ ಕರೆಯಿಸಿಲ್ಲ. ಪ್ರಿಯಾಂಕ್ ಖರ್ಗೆ ಅವರು ಸಂವಿಧಾನದ ಪರ ಇದ್ದಾರೆ ಹೀಗಾಗಿ ಅವರ ಪರ ಘೋಷಣೆ ಕೂಗಿದ್ದೇವೆ, ಸಂವಿಧಾನ ವಿಷಯದಲ್ಲಿ ಬಿಜೆಪಿ ಮುಖಂಡರು ರಾಜಕೀಯ ಮಾಡುವುದನ್ನು ಬಿಟ್ಟುಬಿಡಿಲ್ಲಿ ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.
ಮಾದಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಮಾತನಾಡಿ, ಸಂವಿಧಾನ ಪರವಾಗಿ ಯಾರು ಇರುತ್ತಾರೆ ಅವರ ಪರ ಘೋಷಣೆ ಕೂಗುತ್ತೇವೆ ಅಷ್ಟೇ ಅಲ್ಲ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಸಹ ಮಾಡುತ್ತೇವೆ. ಭೀಮ ನಡಿಗೆ ಪಥಸಂಚಲನದಲ್ಲಿ ಎಲ್ಲಾ ಸಮಾಜದವರು ಭಾಗವಹಿಸಿದ್ದರಿಂದ ಬಿಜೆಪಿ ಅವರಿಗೆ ಹೊಟ್ಟೆ ಕಿಚ್ಚು ಆಗಿದೆ ಹೀಗಾಗಿ ಹತಾಶೆಯಿಂದ ಹೇಳಿಕೆ ನೀಡಿದ್ದಾರೆ. ಪ್ರತಿ ವರ್ಷ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್, ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಬಂಜಾರ ಸಮಾಜದ ಅಧ್ಯಕ್ಷ ಭೀಮಸಿಂಗ ಚವ್ಹಾಣ, ಮುಸ್ಲಿಂ ಸಮಾಜದ ಅಧ್ಯಕ್ಷ ಎಂ.ಎ.ರಷೀದ್, ಮಹಾದೇವ ರಾಠೋಡ, ಮಲ್ಲಿಕಾರ್ಜುನ ಮುಡಬೂಳಕರ್, ಶರಣು ಡೋಣಗಾಂವ, ಜಗನ್ನಾಥ ಮುಡಬೂಳಕರ್, ಶರಣಪ್ಪ ಹೊನ್ನಪೂರ, ದೇವು ಯಾಬಾಳ ಇದ್ದರು.