ತಾಲ್ಲೂಕು ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ.
ಚಿತ್ತಾಪುರ: ತಾಲೂಕನ್ನು ಸಮಗ್ರ ಅಭಿವೃದ್ದಿಗೊಳಿಸಲು ಮುಂದಿನ ಐದು ವರ್ಷಗಳ ಅವಧಿಗಾಗಿ ನೂತನ ಯೋಜನೆಗಳ ಬಗ್ಗೆ ಪರಿಕಲ್ಪನೆ ಹೊಂದಿ ಆ ಬಗ್ಗೆ ವರದಿ ತಯಾರಿಸುವಂತೆ ಕಳೆದ ಸಭೆಯಲ್ಲಿ ಸೂಚಿಸಿದ್ದೆ, ಆದರೆ ಸರ್ಕಾರದ ಬಹುತೇಕ ಇಲಾಖೆಗಳ ಅಧಿಕಾರಿಗಳು ಆ ಬಗ್ಗೆ ಗಮನ ಹರಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಳೆ ಕಲ್ಯಾಣಿಗಳ ಪುನಶ್ಚೇತನಗೊಳಿಸುವುದು ಸೇರಿದಂತೆ ತಾಲೂಕಿನ ಜಲಮೂಲಗಳ ಸಂರಕ್ಷಣೆಗಾಗಿ ಯೋಜನೆ ಹಾಕಿಕೊಳ್ಳಲಾಗಿದ್ದು, ಸಣ್ಣ, ಬೃಹತ್ ನೀರಾವರಿ ಇಲಾಖೆ, ಕೆಬಿಜೆಎನ್ಎಲ್, ಕೆಎನ್ ಎನ್ ಎಲ್ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗಳಯ ಜಂಟಿಯಾಗಿ ನೀಲನಕ್ಷೆ ತಯಾರಿಸಿ ಎಂದು ಸಚಿವರು ಸೂಚಿಸಿದರು.
ಸನ್ನತಿ ಏತ ನೀರಾವರಿ ಯೋಜನೆಯಡಿಯಲ್ಲಿ 16,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದ್ದು, ಈವರೆಗೆ 11,830 ಹೆಕ್ಟರ್ ನೀರಾವರಿ ಹೊಂದಲಾಗಿದ್ದು ಸ್ಥಳೀಯ ರೈತರ ಸಹಕಾರದಿಂದಾಗಿ ಬಾಕಿ ಇರುವ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿಲ್ಲ ಎಂದು ಕೆಎನ್ ಎನ್ ಎಲ್ ಅಧಿಕಾರಿಗಳು ತಿಳಿಸಿದರು.
ಪುನರ್ವಸತಿ ಕುರಿತಂತೆ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಉತ್ತರಿಸಿದ ಅಧಿಕಾರಿಗಳು ಸನ್ನತಿ ಯೋಜನೆಯಿಂದಾಗಿ ಸನ್ನತಿ ಗ್ರಾಮ ಭಾದ್ಯಸ್ಥವಾಗುವುದಿಲ್ಲ ಆದರೆ, ಹುರಸಗುಂಡಗಿ ಗ್ರಾಮದ 700 ಕ್ಕೂ ಅಧಿಕ ಮನೆಗಳು ಹಾನಿಯಾಗುತ್ತಿದ್ದು ಆ ಪೈಕಿ 400 ಕ್ಕೂ ಅಧಿಕ ಮನೆಗಳಿಗೆ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೆಎನ್ಎನ್ ಎಲ್ಇಲಾಖೆಯ ವತಿಯಿಂದ ಎಸ್ ಸಿಪಿ/ ಟಿಎಸ್ ಪಿ ಯೋಜನೆಯಡಿಯಲ್ಲಿ ಈ ಹಿಂದೆ ಕರೆಯಲಾಗಿರುವ ಎಲ್ಲ ಟೆಂಡರ್ ಗಳನ್ನು ರದ್ದುಗೊಳಿಸಿ ಹೊಸದಾಗಿ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಿ ಎಂದರು
ಪಿಎಂಜಿಎಸ್ ವೈ ಹಾಗೂ ಪಿಆರ್ ಇ ಇಲಾಖೆಯವರು ಯಾವ ರಸ್ತೆಗಳನ್ನು ಮೇಲ್ದರ್ಜೆಗೇರಿಸಬೇಕು ಎನ್ನುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದೀರಾ ಎಂದು ಸಚಿವರು ಪ್ರಶ್ನಿಸಿದಾಗ ಸಿಇಓ ಅವರಿಗೆ ಕಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.
ಇದೇ ವೇಳೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸಂಜೀವಕುಮಾರ ಮಾನಕರ್ ಸಭೆಯಲ್ಲಿ ಮಾತನಾಡಿ ತಾಲೂಕಿನಲ್ಲಿ ಮಳೆಯ ಅಭಾವದಿಂದಾಗಿ ಉದ್ದು ಹಾಗೂ ಹೆಸರು ಸಂಪೂರ್ಣ ಹಾನಿಯಾಗಿದೆ. ತೊಗರಿ ಶೇ 100% ಬಿತ್ತನೆ ಪೂರ್ಣಗೊಂಡಿದೆ. ಆದರೆ, ಇನ್ನೊಂದು ವಾರದೊಳಗೆ ಮಳೆ ಬೀಳದೆ ಇದ್ದರೆ ತೊಗರಿ ಬೆಳೆಯೂ ಕೂಡಾ ಹಾನಿಯಾಗಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ್ ತಿಳಿಸಿದರು.
ತೊಗರಿಯ ನೆಟೆರೋಗದ ಪರಿಹಾರದ ಮೂರು ಹಂತಗಳ ಪೈಕಿ ಇದುವರೆಗೆ ಒಂದು ಹಂತದ ಪರಿವಾರ ಬಿಡುಗಡೆಯಾಗಿದ್ದು ಇನ್ನುಳಿದ ಹಂತದ ಪರಿಹಾರ ಬಿಡುಗಡೆ ಈಗಾಗಲೇ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜೊತೆಗೆ ಬರ ಘೋಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಳೆ ಹಾನಿಯ ಸರ್ವೆ ಮಾಡಲಾಗಿದೆ ಎಂದರು.ತಾಲೂಕಿಗೆ ಗೊಡೌನ್ ಅವಶ್ಯಕತೆ ಇದ್ದು ನಿರ್ಮಾಣ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿ ತಿಳಿಸಿದಾಗ ಪ್ರಸ್ತಾವನೆ ಸಲ್ಲಿಸಿ ಎಂದು ಸಚಿವರು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ದವೀರಯ್ಯ ಸ್ವಾಮಿ ಮಾತನಾಡಿ 15 ಹೊಸ ಶಾಲೆಗಳ ನಿರ್ಮಾಣಕ್ಕಾಗಿ ನೀಲಿನಕ್ಷೆ ತಯಾರಿಸಲಾಗಿದೆ ಎಂದರು. ಸಚಿವರು ಮಾತನಾಡಿ ಶಾಲೆ ಕಟ್ಟಡಗಳ ನಿರ್ಮಾಣಕ್ಕಾಗಿ ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡಿದ್ದರೂ ಕೂಡಾ ಕಳಪೆ ಕಾಮಗಾರಿ ಆಗುತ್ತಿವೆ ಎಂದು ಸಚಿವರು ಅಸಮಧಾನ ವ್ಯಕ್ತಪಡಿಸಿದರು. ಕಟ್ಟಡಗಳ ಕಳಪೆ ಕಾಮಗಾರಿಯಲ್ಲಿ ಅಧಿಕಾರಿಗಳು ಯಾವುಕ್ಕೆ ಕ್ರಮ ಯಾಕೆ ಕೈಗೊಳ್ಳುವುದಿಲ್ಲ. ಕಟ್ಟಡ ನಿರ್ಮಾಣ ಮಾಡಿ ನಾಲ್ಕು ವರ್ಷ ಆಗಿರುವುದಿಲ್ಲ ಆದರೂ ಸೋರುತ್ತಿವೆ ಯಾಕೆ ಎಂದ ಪ್ರಶ್ನಿಸಿದರು.
ತಾಲೂಕಿನಲ್ಲಿ 334 ಶಿಕ್ಷಕರ ಕೊರತೆ ಇದ್ದು 254 ಅತಿಥಿ ಶಿಕ್ಷಕರನ್ನು ಇಲಾಖೆ ಒದಗಿಸಿದೆ ಎಂದು ರುದ್ನೂರು ಹೇಳಿದರು. ಆಗ ಉತ್ತರಿಸಿದ ಸಚಿವರು, ಮೂಲಭೂತ ಸೌಲಭ್ಯ ಒದಗಿಸುವ ಜವಾಬ್ದಾರಿ ನನ್ನದು ಆದರೆ, ಉತ್ತಮ ಕಲಿಕೆ ಜವಾಬ್ದಾರಿ ನಿಮ್ಮದು ಎಂದರು.ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಗಳು ವರ್ಗಾವಣೆಯಾದರೂ ಯಾಕೆ ರಿಲೀವ್ ಆಗಿಲ್ಲ ಹಾಗೂ ಯಾಕೆ ರಿಲೀವ್ ಮಾಡಿಲ್ಲ. ಸಂಬಂದಪಟ್ಟ ಆ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಸಚಿವರು ಪಂಚಾಯತ ರಾಜ್ ಇಲಾಖೆಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರಿಗೆ ಸೂಚಿಸಿದರು.
ತಾಲೂಕಿನಲ್ಲಿ ಇನ್ನೂ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕಾಗುತ್ತದೆ ಹಾಗೂ ಅದಕ್ಕೆ ಬೇಕಾಗುವ ಸಿಬ್ಬಂದಿಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸಚಿವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಇಲಾಖೆಯ ವತಿಯಿಂದ ಮೆಟ್ರಿಕ್ ಪೂರ್ವ ಹಾಗೂ ನಂತರದ ಹೊಸ ಹಾಸ್ಟೆಲ್ ಗಳ ನಿರ್ಮಾಣಕ್ಕೆ ಹಾಗೂ ಹಳೆ ಹಾಸ್ಟೆಲ್ ಗಳನ್ನು ಹೊಡೆದುಹಾಕಿ ನೂತನ ಹಾಸ್ಟೆಲ್ ಗಳ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಹೊಸ ಹಾಸ್ಟೆಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು ಕೆಲ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರು ಆ ಬಗ್ಗೆ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಹಾಗಾಗಿ, ಸರ್ಕಾರದ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಿ, ಈ ಅವಧಿಯಲ್ಲಿ ಚಿತ್ತಾಪುರದ ಅಭಿವೃದ್ದಿ ಆಗದಿದ್ದರೆ ಮುಂದೆಯೂ ಆಗುವುದಿಲ್ಲ. ನೀವು ಬಜೆಟ್ ಬಂದ ಮೇಲೂ ಮೈಗಳ್ಳತನ ತೋರಿಸಿದರೆ ನಾನೂ ಕೂಡಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಖಡಕ್ ಆಗಿ ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಯ್ಯಾದ ಶಾಷಾವಲಿ,
ತಾಪಂ ಇಓ ನೀಲಗಂಗಾ ಬಬಲಾದ್, ಸಿಪಿಐ ಪ್ರಕಾಶ ಯಾತನೂರು, ಕಾಳಗಿ ಮತ್ತು ಶಹಾಬಾದ್ ತಹಸೀಲ್ದಾರ ಅವರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ