ಶುಕ್ರವಾರ, ಜನವರಿ 30, 2026

ನೂತನ ಅಧ್ಯಕ್ಷರಾಗಿ ಅಣ್ಣಾರಾಯ ಇವಣಿ ನೇಮಕ.

ಚಿತ್ತಾಪುರ: ನಾಡು-ನುಡಿ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಸಂರಕ್ಷಣೆಗಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ “ಕನ್ನಡ ಶಾಲೆ ಉಳಿಸಿ-ಬೆಳೆಸಿ” ಅಭಿಯಾನದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಅಣ್ಣಾರಾಯ ಇವಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ ತಿಳಿಸಿದ್ದಾರೆ.

ಕನ್ನಡ ಶಾಲೆಗಳ ಉಳಿವಿಗಾಗಿ ಜನಜಾಗೃತಿ ಮೂಡಿಸುವುದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದು ಹಾಗೂ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಪವಿತ್ರ ಉದ್ದೇಶದೊಂದಿಗೆ ಈ ಅಭಿಯಾನವು ರಾಜ್ಯಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ಸಂಘಟನೆಯ ರಾಜ್ಯ ನಾಯಕರು ಹಾಗೂ ಕಾರ್ಯಕರ್ತರ ಒಮ್ಮತದ ನಿರ್ಧಾರದಂತೆ ಅಣ್ಣಾರಾಯ ಇವಣಿ ಅವರಿಗೆ ಈ ಮಹತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ.

ನೂತನ ಅಧ್ಯಕ್ಷ ಅಣ್ಣಾರಾಯ ಇವಣಿ ಮಾತನಾಡಿ "ಕನ್ನಡ ಶಾಲೆಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾಡು-ನುಡಿ ಉಳಿಸುವ ಈ ಹೋರಾಟದಲ್ಲಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಕಲಬುರಗಿ ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿಯಾಗಿ ರೂಪಿಸಲಾಗುವುದು. ಜಿಲ್ಲೆಯ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ನಿರಂತರವಾಗಿ ಶ್ರಮಿಸುತ್ತೇನೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ, ಜನವರಿ 27, 2026

ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚಿನ ಕ್ರೀಡೆ: ಮತ್ತಿಮುಡು.

ಚಿತ್ತಾಪುರ: ಹಲವು ಕ್ರೀಡೆಗಳಲ್ಲಿಯೇ ಕ್ರಿಕೆಟ್ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಅಚ್ಚುಮೆಚ್ಚಿನ ಕ್ರೀಡೆ ಎಂದು ತಾಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಗುಂಡು ಮತ್ತಿಮುಡು ಹೇಳಿದರು.

ತಾಲೂಕಿನ ಕಾಟಮ್ಮದೇವರಹಳ್ಳಿ ಗ್ರಾಮದಲ್ಲಿ ಶ್ರೀ ರೇಣುಕಾ ಪರಮೇಶ್ವರಿ (ಯಲ್ಲಮ್ಮತಾಯಿ) 74ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರಿಕೆಟ್‌ ಪಂದ್ಯಾವಳಿಯ ಅಂತಿಮ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾ ಮೈದಾನ ಕೊರತೆ ಇದ್ದರೂ ಗ್ರಾಮೀಣ ಭಾಗದಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಪ್ರತಿಭೆಗಳು ಹಳ್ಳಿಯಿಂದಲೇ ಹೊರಬರುತ್ತವೆ ಹೀಗಾಗಿ ಯಾರೂ ಹಿಂಜರಿಯಬಾರದು ಆತ್ಮವಿಶ್ವಾಸದಿಂದಲೇ ಭಾಗವಹಿಸಬೇಕು ಎಂದು ಹೇಳಿದರು.

ಯುವ ಮುಖಂಡ ಮದನ್ ಯಾಗಾಪೂರ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ ಆದರೆ ಇಲ್ಲಿ ಭಾಗವಹಿಸುವುದು ಮುಖ್ಯ. ಗೆದ್ದವರು ಹಿಗ್ಗಬಾರದು, ಸೋತವರು ಕುಗ್ಗಬಾರದು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಬಿಜೆಪಿ ಯುವ ಅಧ್ಯಕ್ಷ ದೇವರಾಜ್‌ ತಳವಾರ,ಪತ್ರಕರ್ತರಾದ ಕಾಶಿನಾಥ ಗುತ್ತೇದಾರ ರವಿಶಂಕರ್ ಬುರ್ಲಿ, ಗ್ರಾಪಂ ಸದಸ್ಯರಾದ ಕೆಂಚಪ್ಪ ಪೂಜಾರಿ, ದೇವಣ್ಣ ಹಳ್ಳಿ, ಶರಣು ಜಿಡಗಿ, ಶ್ರೀನಿವಾಸ ಯಾಗಾಪೂರ, ಅರುಣಕುಮಾರ ಯಾಗಾಪೂರ, ಮೋನು ಚವ್ಹಾಣ, ಶರಣು ಬುಸ್ಸಾ, ಬಸವರಾಜ ಸಂಗಾವಿ ಸೇರಿದಂತೆ ಇತರರು ಇದ್ದರು. ರಾಮು ಭೋವಿ ನಿರೂಪಿಸಿದರು.

ಗಣರಾಜ್ಯೋತ್ಸವ ಭಾರತೀಯರ ಪಾಲಿಗೆ ಹಬ್ಬ: ತಹಸೀಲ್ದಾ‌ರ್

ಚಿತ್ತಾಪುರ: ವಿಶ್ವದ ಅತ್ಯಂತ ದೊಡ್ಡ, ಲಿಖಿತ ರೂಪದಲ್ಲಿದ್ದ ಭಾರತದ ಸಂವಿಧಾನ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪಿಸಿದ ಗಣರಾಜ್ಯೋತ್ಸವ ಭಾರತೀಯರ ಪಾಲಿನ ಹಬ್ಬವಾಗಿದೆ ಎಂದು ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1950 ಜನವರಿ 26 ರಂದು ಭಾರತೀಯರೆಲ್ಲರೂ ಹೆಮ್ಮೆಯಿಂದ ಆಚರಿಸುವ ದಿನ. ರಾಜಪ್ರಭುತ್ವವನ್ನ ತ್ಯಜಿಸಿ ಪ್ರಜಾಪ್ರಭುತ್ವಕ್ಕೆ ಬದಲಾದ ದಿನ. ಹೀಗಾಗಿ ಪ್ರತಿಯೊಬ್ಬ ಭಾರತೀಯನಿಗೂ ಈ ದಿನ ಅತ್ಯಂತ ಮಹತ್ವದ ದಿನವಾಗಿದೆ ಎಂದು ಹೇಳಿದರು

ಗಣರಾಜ್ಯೋತ್ಸವ ದಿನದಂದೇ ಸಂವಿಧಾನ ಜಾರಿಗೆ ಬಂದ ದಿನವನ್ನು ಗೌರವಿಸುವ ಅಭೂತಪೂರ್ವ ದಿನವಾಗಿದೆ ಎಂದರು. ಬೇರೆ ದೇಶಗಳಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಆದರೆ ಸಂಸದೀಯ ಪ್ರಜಾಪ್ರಭುತ್ವ ಹೊಂದಿದ ಭಾರತ ಸದೃಢವಾಗಿದೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾ ರಂಗ ನಾಲ್ಕು ಅಂಗಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಉಪನ್ಯಾಸಕರಾಗಿ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕ ಡಾ.ಸಂಗಪ್ಪ ಮಾಮನ ಶೆಟ್ಟಿ ಮಾತನಾಡಿ, ಭಾರತವು ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ್ದು, 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ ಕೂಡ ನಮ್ಮ ದೇಶವು ಸಂವಿಧಾನವನ್ನು ಹೊಂದಿರಲಿಲ್ಲ. 26 ಜನವರಿ 1950 ರಂದು ಸಂವಿಧಾನವನ್ನು ಸ್ಥಾಪನೆ ಮಾಡಿದ ದಿನವಾಗಿದ್ದು, ಇದರ ಗೌರವಾರ್ಥವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ಪಿಎಲ್‌'ಡಿ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ ಅವರು ಮಾತನಾಡಿದರು. ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ, ಕ್ರೀಡೆಗಳಲ್ಲಿ ಸಾಧನೆಗೈದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕ‌ರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಪಿಎಸ್‌ಐ ಮಂಜುನಾಥ ರೆಡ್ಡಿ, ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್, ಎಇಇ ಮಹ್ಮದ್ ಇಸ್ಮಾಯಿಲ್, ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರೆ, ಅಬಕಾರಿ ಅಧಿಕಾರಿ ವನೀತಾ ಸೀತಾಳೆ, ಕವಿತಾ, ತಮ್ಮನ್ನಾ ಕೌಸರ್, ಅಶ್ವತ್ಥನಾರಾಯಣ, ದೇವಿಂದ್ರರೆಡ್ಡಿ ದುಗನೂರ, ಬಾಬು ಕಾಶಿ, ರಾಜಣ್ಣ ಕರದಾಳ, ಸಾಬಣ್ಣ ದೊಡ್ಡಮನಿ, ನಾಗಯ್ಯ ಗುತ್ತೇದಾರ ಕರದಾಳ, ರಾಮಲಿಂಗ ಬಾನ‌ರ್, ಪ್ರಹ್ಲಾದ ವಿಶ್ವಕರ್ಮ, ರಮೇಶ್ ಬೆಟಗೇರಿ ಸೇರಿದಂತೆ ಇತರರು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಶಂಕರ ಕಣ್ಣಿ ನಿರೂಪಿಸಿದರು.

ಮಕ್ಕಳ ಭವಿಷ್ಯಕ್ಕೆ ಕೈಜೋಡಿಸಿದ ಸಚಿವ ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ಸಚಿವರು ತಮ್ಮ ವೈಯಕ್ತಿಕ ಹಣದಿಂದ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಪಠ್ಯಪುಸ್ತಕ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ 35,000 ಪುಸ್ತಕಗಳನ್ನು ವಿತರಿಸುವ ಮಹತ್ವದ ಕಾರ್ಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದ್ದಾರೆ.

ಗಣರಾಜ್ಯೋತ್ಸವ ದಿನದಂದು ಕಲಬುರಗಿಯಲ್ಲಿ ಸಾಂಕೇತಿಕವಾಗಿ ಐವರು ವಿದ್ಯಾರ್ಥಿಗಳಿಗೆ ಈ ಮಾದರಿ ಪ್ರಶ್ನೆ ಪತ್ರಿಕೆ ಕೈಪಿಡಿಗಳನ್ನು ವಿತರಿಸಲಾಯಿತು. ಈ ಕ್ರಮವು ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಬಹುಪಯೋಗಿಯಾಗಲಿದೆ ಎಂದು ಶಿಕ್ಷಣ ವಲಯದವರು ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳ ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಒಟ್ಟು 4,800 ಮಾದರಿ ಪ್ರಶ್ನೆ ಪತ್ರಿಕೆ ಪುಸ್ತಕಗಳನ್ನು ವಿತರಿಸಲಾಗಿದೆ. ಈಗಾಗಲೇ ತಾಲೂಕಿನ ಶೇಕಡಾ 95ರಷ್ಟು ಶಾಲೆಗಳಿಗೆ ಈ ಪುಸ್ತಕಗಳನ್ನು ವಿತರಿಸಲಾಗಿದೆ. ಉಳಿದ ಶಾಲೆಗಳಿಗೂ ಶೀಘ್ರದಲ್ಲೇ ಪುಸ್ತಕ ವಿತರಣೆ ಪೂರ್ಣಗೊಳ್ಳಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ತಿಳಿಸಿದ್ದಾರೆ.


ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಕ್ಷೇತ್ರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡುತ್ತಿರುವ ಈ ಸಹಕಾರ ಶ್ಲಾಘನೀಯವಾಗಿದೆ ಎಂದು ಶಿಕ್ಷಕರು ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾನುವಾರ, ಜನವರಿ 25, 2026

ನಾಗಾವಿ ನಕ್ಷತ್ರ' ಗ್ರಂಥ ಲೋಕಾರ್ಪಣೆ; ಕುಟುಂಬಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸಾಂತ್ವನ"


ಚಿತ್ತಾಪುರ: "ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ" ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ 'ದಿ. ನಾಗಯ್ಯ ಸ್ವಾಮಿ ಅಲ್ಲೂರ ಗೆಳೆಯರ ಬಳಗ' ಆಯೋಜಿಸಿದ್ದ 'ನಾಗಾವಿ ನಕ್ಷತ್ರ' ಸಂಸ್ಮರಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ನಾಗಯ್ಯ ಸ್ವಾಮಿ ಅಲ್ಲೂರ ಅವರ ವ್ಯಕ್ತಿತ್ವಕ್ಕೆ ಶ್ಲಾಘನೆ
ದಿ. ನಾಗಯ್ಯ ಸ್ವಾಮಿ ಅವರ ಪ್ರಾಮಾಣಿಕತೆಯನ್ನು ಸ್ಮರಿಸಿದರು.

ನಿಷ್ಠಾವಂತ ಬರಹಗಾರ: ನಾಗಯ್ಯ ಸ್ವಾಮಿ ಅವರು ಕೇವಲ ಪತ್ರಿಕಾರಂಗಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದಲ್ಲಿ ನಿಷ್ಠಾವಂತ ಬರಹಗಾರರಾಗಿ ಗುರುತಿಸಿಕೊಂಡಿದ್ದರು.
ಸಮಾಜಮುಖಿ ಚಿಂತಕ: ಜನರಿಗಾಗಿ ಮತ್ತು ಮಕ್ಕಳಿಗಾಗಿ ಅವರು ಮಾಡಿದ ಸೇವೆ ಅವರನ್ನು ಒಬ್ಬ ಶಿಕ್ಷಣ ಪ್ರೇಮಿಯನ್ನಾಗಿ ರೂಪಿಸಿತ್ತು.
ಪ್ರಾಮಾಣಿಕತೆಯ ಮಾದರಿ: ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಸಮ್ಮೇಳನದ ಪ್ರತಿಯೊಂದು ಖರ್ಚು-ವೆಚ್ಚದ ವಿವರವನ್ನು ನಿಖರವಾಗಿ ನೀಡುವ ಮೂಲಕ ತಮ್ಮ ನಿಷ್ಠೆಯನ್ನು ಮೆರೆದಿದ್ದರು.
ಕುಟುಂಬಕ್ಕೆ ಭರವಸೆ ಮತ್ತು ಆರ್ಥಿಕ ನೆರವು
ನಾಗಯ್ಯ ಸ್ವಾಮಿ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ ಸಚಿವರು, ವೇದಿಕೆಯಲ್ಲಿದ್ದ ಅವರ ಕುಟುಂಬದವರಿಗೆ ಧೈರ್ಯ ತುಂಬಿದರು.
ವೈಯಕ್ತಿಕ ನೆರವು: ಗೆಳೆಯರ ಬಳಗ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ತಾವು ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಗ್ರಂಥಾಲಯಗಳಿಗೆ ಪುಸ್ತಕ ಖರೀದಿ: ಕಾಂಗ್ರೆಸ್ ಮುಖಂಡ ನಾಗರೆಡ್ಡಿ ಪಾಟೀಲ ಕರದಳ್ಳಿ ಅವರ ಮನವಿಯಂತೆ, 'ನಾಗಾವಿ ನಕ್ಷತ್ರ' ಸಂಸ್ಮರಣ ಗ್ರಂಥವನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಯ ಎಲ್ಲಾ ಗ್ರಂಥಾಲಯಗಳಿಗೆ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಧನಸಹಾಯ: ಇದೇ ಸಂದರ್ಭದಲ್ಲಿ ಗೆಳೆಯರ ಬಳಗದಿಂದ ಸಂಗ್ರಹಿಸಲಾದ 1.90 ಲಕ್ಷ ರೂ. ಮೊತ್ತದ ಚೆಕ್ ಅನ್ನು ಸಚಿವರು ಕುಟುಂಬದವರಿಗೆ ಹಸ್ತಾಂತರಿಸಿದರು.
"ನಾಗಯ್ಯ ಸ್ವಾಮಿ ಅವರು ನಿಜವಾದ ಅರ್ಥದಲ್ಲಿ ನಕ್ಷತ್ರವಾಗಿದ್ದರು. ಅವರನ್ನು ಅನುಸರಿಸುವವರು ಕೂಡ ಅವರಂತೆಯೇ ಹೊಳೆಯುತ್ತಾರೆ," ಎಂದು ಸಚಿವರು ಕೊಂಡಾಡಿದರು.

ಈ ಸಂದರ್ಭದಲ್ಲಿ ಪೂಜ್ಯಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೊಂಡಿಗಿ,ನಾಗರೆಡ್ಡಿ ಪಾಟೀಲ್, ಲಿಂಗಾರೆಡ್ಡಿ ಗೌಡ ಭಾಸರೆಡ್ಡಿ, ಭೀಮಣ್ಣ ಸಾಲಿ, ವೀರಭದ್ರ ಗುರಮಿಟಕಲ್, ವೀರೇಂದ್ರ ಕೊಲ್ಲೂರ್, ಲಿಂಗಪ್ಪ ಮಲ್ಕನ್, ಭವಾನಿ ಸಿಂಗ್ ಠಾಕೂರ್, ಶಿವಾನಂದ ನಾಲವಾರ ನರಸಪ್ಪ ಚಿನ್ನಕಟ್ಟಿ, ಕಾಶಿರಾಯ ಕಲಾಲ್, ಸಂಗಮೇಶ್ ರೋಣದ, ಮಲ್ಲಿಕಾರ್ಜುನ್ ಕಾಳಗಿ, ಜಗನಗೌಡ ಪಾಟೀಲ್, ಶೇಖರ್ ಕಾಶಿ, ಮಲ್ಲಿಕಾರ್ಜುನ್ ಬೆಣ್ಣೂರಕರ್, ನಾಗಯ್ಯ ಗುತ್ತೇದಾರ್, ವೀರಸಂಗಪ್ಪ ಸುಲೇಗಾವ್, ರಾಮಲಿಂಗ ಬಾನರ್, ಬಸವರಾಜ್ ಚಿನ್ಮಳಿ, ಮಲ್ಲಿಕಾರ್ಜುನ್ ಎಮ್ಮೆನೂರ್, ಶರಣು ಡೋಣಗಾಂವ್, ಸೇರಿದಂತೆ ಇತರರು ಇದ್ದರು.

ಸರ್ಕಾರಿ ನೌಕರರ ಧ್ವನಿಯಾಗಿರುವೆ: ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ರಾಜ್ಯದ ವಿಧಾನಸಭೆಯಲ್ಲಿ ನಾನು
ಸರ್ಕಾರಿ ನೌಕರರ ಧ್ವನಿಯಾಗಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ/ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಠ ಪಂಗಡ ನೌಕರರ ಸಂಘ ಚಿತ್ತಾಪುರ ಶಾಖೆಯ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ “ಸೇವಾ ರತ್ನ ಪ್ರಶಸ್ತಿ” ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳ ಬಗ್ಗೆ ನಮ್ಮ ಸರ್ಕಾರ ಸ್ಪಂದಿಸಿ ಈಡೇರಿಸಲು ಬದ್ಧವಾಗಿದೆ ಎಂದರು.
ಜನಸಾಮಾನ್ಯರ ಸೇವೆಗೆ ನಾವು ಹಾಗೂ ಸರ್ಕಾರಿ ನೌಕರರು ಸದಾ ಸಿದ್ಧವಾಗಿರಬೇಕು. ಜನರ ಸ್ವಾಭಿಮಾನದ ಬದುಕು ಹಾಗೂ ಜೀವನಮಟ್ಟ ಸುಧಾರಣೆಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಸುವ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಫೌಝಿಯಾ ತರನುಮ್, ಎಸ್ಪಿ ಅದ್ದೂರು ಶ್ರೀನಿವಾಸಲು, ಜಿಪಂ ಸಿಇಒ ಭಂವರಸಿಂಗ್ ಮೀನಾ, ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ ಕರದಾಳ, ಪಿಎಲ್'ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ತಹಶೀಲ್ದಾ‌ರ್ ನಾಗಯ್ಯ ಹಿರೇಮಠ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಮರೇಶ್ವರಿ ಚಿಂಚನಸೂರ, ಮನೂ‌ರ್ ಆಸ್ಪತ್ರೆಯ ಸಂಸ್ಥಾಪಕ ಡಾ.ಫಾರೂಕ್, ಸಂಘದ ರಾಜ್ಯಾಧ್ಯಕ್ಷ ಮಹೇಶ ಸಿ. ಹುಬಳಿ, ಗೌರವಾಧ್ಯಕ್ಷ ವಿಠಲ ಗೋಳಾ, ಕಾರ್ಯಾಧ್ಯಕ್ಷ ಜೈ ಭೀಮ್, ರಾಜ್ಯ ಪ್ರಧಾನ ಕರ್ಯಾದರ್ಶಿ ಸುಧಾಕರ ಎಸ್. ಜಡಗಿ, ರಾಜ್ಯ ಪರಿಷತ್ ಸದಸ್ಯ ಸಂತೋಷ ಸಲಗರ, ಬೆಂಗಳೂರು ನಗರ ಸಂಘದ ಅಧ್ಯಕ್ಷ ಶ್ರೀಧರ ಕೋಟ್ರೇ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ರೋಣದ್, ವಿಜಯಲಕ್ಷ್ಮೀ, ಕವಿತಾ ದೇವಿಂದ್ರಪ್ಪ ದೊರಿ, ಶಾಂತಮಲ್ಲಪ್ಪ ಪಾಟೀಲ, ಗೌತಮಿ ಹಿರೊಳ್ಳಿ, ಸುನೀತಾ, ಜಯಶ್ರೀ, ಮಹೇಶ್ವರಿ, ಗೀತಾ ಸೇರಿದಂತೆ ಇತರರು ಇದ್ದರು.

ಪೂಜ್ಯ ವರಜ್ಯೋತಿ ಬಂತೇಜಿ ಅಣದೂರ ದಿವ್ಯಸಾನಿದ್ಯ ವಹಿಸಿದ್ದರು, ಸಂಘದ ತಾಲೂಕು ಅಧ್ಯಕ್ಷ ಅರುಣಕುಮಾರ ಎಸ್. ಚಿಂಚನಸೂರ ಅಧ್ಯಕ್ಷತೆ ವಹಿಸಿದ್ದರು. ಮನೋವಿಜ್ಞಾನಿ ಡಾ. ದಿಲೀಪಕುಮಾರ ನವಲೆ ಕಲಬುರಗಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸಾಧಕರನ್ನು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ಎಸ್.ಎಸ್.ಎಲ್.ಸಿ./ ಪಿ.ಯು.ಸಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ, ಡಾ. ಬಿ.ಆರ್. ಅಂಬೇಡ್ಕರ ರವರ ಕುರಿತು ಪ್ರಬಂಧ ಸ್ಪರ್ದೆ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ದೆಯಲ್ಲಿ ವಿಜೇತರಾದ ಕಾಲೇಜು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಸಿದ್ದಾರ್ಥ್ ಚಿಮ್ಮಾಇದಲಾಯಿ ಪ್ರಾರ್ಥಿಸಿದರು, ಶಿವಶರಣಪ್ಪ ಮಂಠಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಶರಣಪ್ಪ ಕಟ್ಟಿ ಸ್ವಾಗತಿಸಿದರು, ಶಿವಾನಂದ ನಾಲವಾರ ನಿರೂಪಿಸಿದರು, ಸದಾಶಿವ ದೊಡ್ಡಮನಿ ವಂದಿಸಿದರು. ಕಾರ್ಯಕ್ರಮದ ಮುನ್ನ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಮರೆವಣಿಗೆ ಪ್ರಾರಂಭವಾಗಿ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ನಡೆಯಿತು.

ಗುರುವಾರ, ಜನವರಿ 22, 2026

ಬಿಜೆಪಿ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ.

ಚಿತ್ತಾಪುರ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅವರು ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ಒಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮಂಡಲ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಇಟಗಿ, ನಾಗರಾಜ ಹೂಗಾರ, ಮುಖಂಡರಾದ ತಮ್ಮಣ್ಣ ಡಿಗ್ಗಿ, ಸುರೇಶ್ ಬೆನಕನಳ್ಳಿ, ಶಾಂತಕುಮಾ‌ರ್ ಮಳಖೇಡ, ದಶರಥ ದೊಡ್ಡಮನಿ, ಮೌನೇಶ್ ಭಂಕಲಗಿ, ವಿಶ್ವನಾಥ ಅಫಜಲಪುರ, ಶರಣು ಸಿದ್ರಾಮಗೋಳ, ಹನುಮಾನ್ ವ್ಯಾಸ್, ರಾಜು ರಾಠೋಡ ಸೇರಿದಂತೆ ಇತರರು ಇದ್ದರು,

ಪ್ರಜಾ ಸೌಧದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಚಿತ್ತಾಪುರ: ಪ್ರಜಾ ಸೌಧದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.

ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಅವರು ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷರಾದ ಶಿವುಕುಮಾರ ಯಾಗಾಪೂರ, ನಿಂಗಣ್ಣ ಹೆಗಲೇರಿ, ಪಿಎಲ್'ಡಿ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ, ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪಿಎಸ್‌ಐ ಮಂಜುನಾಥ ರೆಡ್ಡಿ, ಯುವ ಅಧ್ಯಕ್ಷರಾದ ರಾಜೇಶ ಹೊಳಿಕಟ್ಟಿ, ಮಲ್ಲಿಕಾರ್ಜುನ ಅಲ್ಲೂರಕರ್, ನಗರಾಧ್ಯಕ್ಷ ಪ್ರಭು ಹಲಕರ್ಟಿ, ಯುವ ಕಾಂಗ್ರೆಸ್‌ ಅಧ್ಯಕ್ಷ ದೇವು ಯಾಬಾಳ, ಮುಖಂಡರಾದ ಹಣಮಂತ ಸಂಕನೂರ, ರಾಮಲಿಂಗ ಬಾನ‌ರ್, ಬಸವರಾಜ ಚಿನ್ನಮಳ್ಳಿ, ತಮ್ಮಣ್ಣ ಡಿಗ್ಗಿ, ಸಾಬಣ್ಣ ಭರಾಟೆ, ಬಸಣ್ಣ ತಳವಾರ, ದಶರಥ ದೊಡ್ಡಮನಿ, ಗುಂಡು ಐನಾಪೂರ, ಶರಣು ಡೋಣಗಾಂವ, ಸಂತೋಷ ಇವಣಿ, ಸಾಬಣ್ಣ ಡಿಗ್ಗಿ, ಕಾಶಪ್ಪ ಡೋಣಗಾಂವ, ಭೀಮಾಶಂಕರ ಹೊಳಿಕಟ್ಟಿ, ರಾಜಾಹುಲಿ, ಲಕ್ಷ್ಮೀಕಾಂತ ಸಾಲಿ, ಕಿಶನ್ ಮೂಕೆ, ಶರಣು ಸಿದ್ರಾಮಗೋಳ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋಲಿ ಸಮಾಜದಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ,



ಚಿತ್ತಾಪುರ: ಪಟ್ಟಣದ ಲಾಡ್ಡಿಂಗ್ ಕ್ರಾಸ್ ಹತ್ತಿರದ
ಅಂಬಿಗರ ಚೌಡಯ್ಯ ವೃತ್ತದಲ್ಲಿ ತಾಲೂಕು ಕೋಲಿ ಸಮಾಜದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರಾದ ಶಿವುಕುಮಾರ ಯಾಗಾಪೂರ ಮತ್ತು ನಿಂಗಣ್ಣ ಹೆಗಲೇರಿ ಅವರು ಭಾವಚಿತ್ರಕ್ಕೆ ಪೂಜೆ ಮಾಡಿ ನಂತರ ಧ್ವಜಾರೋಹಣ ನೆರವೇರಿಸಿ ಗೌರವ ನಮನಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಿಎಲ್‌'ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡ ಯುವ ಅಧ್ಯಕ್ಷರಾದ ರಾಜೇಶ್ ಹೊಳಿಕಟ್ಟಿ, ಮಲ್ಲಿಕಾರ್ಜುನ ಅಲ್ಲೂರಕರ್, ನಗರಾಧ್ಯಕ್ಷ ಪ್ರಭು ಹಲಕರ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ದೇವು ಯಾಬಾಳ, ಮುಖಂಡರಾದ ಶರಣಪ್ಪ ನಾಟೀಕಾರ, ಹಣಮಂತ ಸಂಕನೂರ, ರಾಮಲಿಂಗ ಬಾನ‌ರ್, ಬಸವರಾಜ ಚಿನ್ನಮಳ್ಳಿ, ಭೀಮರಾಯ ಹೊತಿನಮಡಿ, ತಮ್ಮಣ್ಣ ಡಿಗ್ಗಿ, ಸಾಬಣ್ಣ ಭರಾಟೆ, ಬಸಣ್ಣ ತಳವಾರ, ದಶರಥ ದೊಡ್ಡಮನಿ, ಗುಂಡು ಐನಾಪೂರ, ಶರಣು ಡೋಣಗಾಂವ, ಕರಣಕುಮಾ‌ರ್ ಅಲ್ಲೂರ, ಅಂಬು ಹೋಳಿಕಟ್ಟಿ, ಸಂಜಯ ಬುಳಕ‌ರ್, ಸುರೇಶ್ ಗುತ್ತೇದಾರ, ಸಂತೋಷ ಪೂಜಾರಿ, ಸಂತೋಷ ಇವಣಿ, ಭೀಮಾಶಂಕರ ಹೊಳಿಕಟ್ಟಿ, ರಾಜಾಹುಲಿ, ಲಕ್ಷ್ಮೀಕಾಂತ ಸಾಲಿ, ಕಿಶನ್ ಮೂಕೆ, ಶರಣು ಸಿದ್ರಾಮಗೋಳ, ನಾಗೇಂದ್ರ ಚಪಟ್ಟಾ ಗೂಳಿ ಡಿಗ್ಗಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಯಮ ಗಾಳಿಗೆ ತೂರಿದ ಅಂಗಡಿಗಳು.


ನಿಯಮ ಗಾಳಿಗೆ ತೂರಿದ ಅಂಗಡಿಗಳು. 
ಪರವಾನಿಗೆ ಇಲ್ಲಾ. ರಾಜಾರೋಷವಾಗಿ ವ್ಯಾಪಾರ.

-ಜಗದೇವ ಎಸ್ ಕುಂಬಾರ.
ಚಿತ್ತಾಪುರ: ಪಟ್ಟಣದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಇತ್ತೀಚಿನ ದಿನಗಳಲ್ಲಿ ನಬಾಯಿಯಂತೆ ಫಾಸ್ಟ್ ಫುಡ್ ಅಂಗಡಿಗಳು ಹಾಗೂ ಧಾಬಾಗಳು, ಖಾನಾವಳಿ, ಪಾನಿಪುರಿ, ಐಸ್ಕ್ರೀಮ್, ಚಹಾ, ಅಂಗಡಿಗಳು ತಲೆಎತ್ತಿವೆ. ಆದರೆ, ಇವುಗಳಲ್ಲಿ ಬಹುತೇಕ ಅಂಗಡಿಗಳು ಸ್ಥಳೀಯ ಪುರಸಭೆಯಿಂದ ಯಾವುದೇ ಅಧಿಕೃತ ಪರವಾನಿಗೆಯನ್ನು ಪಡೆಯದೆ ಕಾರ್ಯನಿರ್ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಕೆಲ ಮುಖ್ಯ ರಸ್ತೆಗಳ ಬದಿಯಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡು ಈ ಅಂಗಡಿಗಳನ್ನು ನಡೆಸಲಾಗುತ್ತಿದೆ. ಸಂಜೆ ವೇಳೆಯಾಗುತ್ತಿದ್ದಂತೆ ಗ್ರಾಹಕರ ವಾಹನಗಳು ರಸ್ತೆಯಲ್ಲೇ ನಿಲ್ಲುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಓಡಾಡಲು ಹರಸಾಹಸ ಪಡುವಂತಾಗಿದೆ.ಬುಧವಾರ ಸಂತೆಯಂದು ಜನರು ಪಡುವ ಕಷ್ಟ ಹೇಳತೀರದು.

ರಾಜಾಸ್ಥಾನ, ಗುಜರಾತ್, ಆಂಧ್ರ ಪ್ರದೇಶ, ಬಿಹಾರ, ಹರಿಯಾಣ ಹೀಗೆ ನಾನಾ ರಾಜ್ಯಗಳ ಜನರು ಬಂದು ಇಲ್ಲಿ ವಿವಿಧ ರೀತಿಯ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಅಂಗಡಿಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಯಾರು ತಪಾಸಣೆ ಮಾಡುತ್ತಿಲ್ಲ. ತೆರೆದ ಜಾಗದಲ್ಲಿ ಅಡುಗೆ ಮಾಡುವುದು, ಬಳಸಿದ ನೀರನ್ನು ರಸ್ತೆಗೆ ಚೆಲ್ಲುವುದು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ರಾತ್ರಿಯಾದರೂ ಕೆಲ ಧಾಬಾಗಳು ಮತ್ತು ಕೆಲ ಹೋಟೆಲ್, ಪಾನ ಶಾಪ್, ಫಾಸ್ಟ್ ಫುಡ್ ಅಂಗಡಿಗಳು ತೆರೆದಿರುತ್ತವೆ, ಇದರಿಂದ ರಾತ್ರಿ ವೇಳೆ ಅಪರಿಚಿತರು ಯಾರು ಬೇಕಾದರು ಬರುತ್ತಿದ್ದು. ರಾತ್ರಿ ವೇಳೆ ಕಳ್ಳತನ ಕೂಡ ಜಾಸ್ತಿ ಆಗುತ್ತಿವೆ ಅಲ್ಲದೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಕನಿಷ್ಠ ಪರವಾನಿಗೆಯೂ ಇಲ್ಲದೆ ಇವರು ವ್ಯಾಪಾರ ಮಾಡುತ್ತಿದ್ದಾರೆ. ಇದು ಸ್ಥಳೀಯ ಆಡಳಿತದ ಕಣ್ಣಿಗೆ ಕಾಣಿಸುತ್ತಿಲ್ಲವೇ?" ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

"ಯಾವುದೇ ಹೊಸ ಉದ್ದಿಮೆ ಪ್ರಾರಂಭಿಸಲು ಸ್ಥಳೀಯ ಸಂಸ್ಥೆಗಳ ಅನುಮತಿ ಕಡ್ಡಾಯ. ಆದರೆ ಚಿತ್ತಾಪುರ ಪಟ್ಟಣದಲ್ಲಿ ಈ ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ. ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ, ಅನಧಿಕೃತವಾಗಿ ನಡೆಯುತ್ತಿರುವ ಅಂಗಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು".

-ನರಹರಿ ಕುಲ್ಕರ್ಣಿ
ತಾಲೂಕಾಧ್ಯಕ್ಷ, ಕರವೇ (ಪ್ರವೀಣ್ ಶೆಟ್ಟಿ ಬಣ) ಚಿತ್ತಾಪುರ.


"ಪುರಸಭೆಯಿಂದ ಪರವಾನಿಗೆ ಪಡೆಯದ ಅಂಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು".

ಮನೋಜಕುಮಾರ್ ಗುರಿಕಾರ್
ಮುಖ್ಯಾಧಿಕಾರಿಗಳು, ಪುರಸಭೆ ಚಿತ್ತಾಪುರ.

ಮಂಗಳವಾರ, ಜನವರಿ 20, 2026

ಜನವರಿ 25ಕ್ಕೆ ‘ಸೇವಾರತ್ನ’ ಪ್ರಶಸ್ತಿ ಪ್ರಧಾನ ಹಾಗೂ ಪದಗ್ರಹಣ ಸಮಾರಂಭ.

ಚಿತ್ತಾಪುರ: ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅರೆ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಸೇವಾ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭವು ಜನವರಿ 25ರಂದು ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಅರುಣಕುಮಾರ ಚಿಂಚನಸೂರ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ತದನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಕ್ಕೆ ಅಣದೂರನ ಪೂಜ್ಯ ವರಜ್ಯೋತಿ ಬಂತೇಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಾಗೂ ಘನ ಉಪಸ್ಥಿತರಾಗಿ ರಾಜ್ಯಸಭಾ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ.

ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ಅವರ ಗೌರವ ಉಪಸ್ಥಿತಿ ಇರಲಿದ್ದು, ಸಂಘದ ಅಧ್ಯಕ್ಷರಾದ ಅರುಣಕುಮಾರ ಚಿಂಚನಸೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣಪ್ಪ ಕಮಕನೂರ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಸರ್ಕಾರಿ ಮತ್ತು ಅರೆ ಸರ್ಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ 'ಸೇವಾ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುವುದು.
"ನೌಕರರ ಒಕ್ಕೂಟದ ಶಕ್ತಿ ಪ್ರದರ್ಶನ ಮತ್ತು ಸಾಧಕರನ್ನು ಗುರುತಿಸುವ ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಜನತೆ ಹಾಗೂ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು" ಎಂದು ಅರುಣಕುಮಾರ ಚಿಂಚನಸೂರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಶರಣಬಸವೇಶ್ವರ ದೇವಸ್ಥಾನದ ಹುಂಡಿ ಕಳವು.

ಚಿತ್ತಾಪುರ: ಪಟ್ಟಣದ ವರಣನಗರದಲ್ಲಿರುವ ಪುರಾತನ ಶರಣಬಸವೇಶ್ವರ ದೇವಸ್ಥಾನದಲ್ಲಿ ಜನೆವರಿ 19ರ ಸೋಮವಾರ ರಾತ್ರಿ ಕಳ್ಳರು ನುಗ್ಗಿ ದೇವಸ್ಥಾನದ ಹುಂಡಿಯನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಜನೆವರಿ 20ರ ಬೆಳಗಿನ ಜಾವ ಅರ್ಚಕರು ಎಂದಿನಂತೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಬಂದಾಗ, ಹುಂಡಿಯ ಬೀಗ ಮುರಿದಿರುವುದು ಕಂಡುಬಂದಿದೆ. ಹುಂಡಿಯಲ್ಲಿದ್ದ ನಗದು ಹಣವನ್ನು ಕಳ್ಳರು ದೋಚಿದ್ದಾರೆ. ಇದರಿಂದ ಆತಂಕಗೊಂಡ ಅರ್ಚಕರು ತಕ್ಷಣವೇ ದೇವಸ್ಥಾನದ ನಿರ್ವಹಣಾ ಸಮಿತಿಯ ಗಮನಕ್ಕೆ ತಂದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ದೇವಸ್ಥಾನದ ಸಮಿತಿ ಸದಸ್ಯರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಎಸ್ಐ ಮಂಜುನಾಥ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಪೊಲೀಸ್ ಸಿಬ್ಬಂದಿಗಳಾದ ಅನಿಲ್ ಕುಮಾರ್, ರವಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕಲಬುರಗಿಯಿಂದ ಆಗಮಿಸಿದ ಜಿಲ್ಲಾ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳದಲ್ಲಿ ಲಭ್ಯವಿದ್ದ ಸುಳಿವುಗಳನ್ನು ಸಂಗ್ರಹಿಸಿದೆ. ಕಳ್ಳರ ಪತ್ತೆಗಾಗಿ ಪೊಲೀಸರು ದೇವಸ್ಥಾನದ ಸಿಸಿಟಿವಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ದೇವಸ್ಥಾನದಲ್ಲಿ ನಡೆದ ಈ ಕಳುವು ಘಟನೆಯಿಂದ ಭಕ್ತರಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಶರಣಬಸವೇಶ್ವರ ದೇವಸ್ಥಾನದ ಜೀವನೋದ್ಧಾರ ಹಾಗೂ ಸೇವಾ ಟ್ರಸ್ಟ್ ಖಜಾಂಚಿ ಕೊಟೇಶ್ವರ ರೇಷ್ಮೆ, ದೇವಸ್ಥಾನದ ನಿರ್ವಹಣಾ ಸಮಿತಿ ಸದಸ್ಯ ಮಹಾದೇವ ಅಂಗಡಿ 
 ಆಗ್ರಹಿಸಿದ್ದಾರೆ.

ಶುಕ್ರವಾರ, ಜನವರಿ 2, 2026

ಇಂದು ಪರಶುರಾಮ ಅಪ್ಪಾಜಿ ಜನ್ಮ ದಿನ ಆಚರಣೆ.

ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ಭಾಗೋಡಿ ಗ್ರಾಮದಲ್ಲಿ ಇಂದು ಪೂಜ್ಯ ಶ್ರೀ ಪರಶುರಾಮ ಅಪ್ಪಾಜಿ ರವರ 33ನೇ ಜನ್ಮ ದಿನಾಚರಣೆಯು ಅವರ ಅಭಿಮಾನಿಗಳು ಸಾಯಂಕಾಲ ಅಂಬಿಗರ ಚೌಡಯ್ಯ ಭವನದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಅಪ್ಪಾಜಿ ಅವರು ಬೇಡ ಕುಟುಂಬದಲ್ಲಿ ಜನಿಸಿದ ಅವರು ನೂರಾರು ಭಕ್ತರು ಅಭಿಮಾನಿಗಳು ಹೊಂದಿದು ಅವರ ಅಪೇಕ್ಷೆಯಂತೆ ಜನ್ಮದಿನ ಆಚರಣೆ ನಡೆಯುತ್ತಿದ್ದು ಹಾಗೂ ಅನ್ನಸಂತರ್ಪಣೆ ಕೂಡ ನಡೆಯಲಿದೆ ಎಂದು ಭಕ್ತರಾದ ಖಾಸಿಂ ಪಟೇಲ್ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...