ಚಿತ್ತಾಪುರ: ಇಲ್ಲಿನ ಸಂತೋಷ ನಗರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಜುಲೈ 2 ರಂದು ಸಂಭವಿಸಿದೆ. ಮೃತರನ್ನು ರಮೀಜಾ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಜುಲೈ 3 ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ರಮೀಜಾ ಅವರಿಗೆ ಆಕೆಯ ಗಂಡ ಅಬ್ದುಲ್ ಹುಸೇನ್ ಶೇಖ್, ಅತ್ತೆ ಸಾಹೇರಾ ಬಾನು, ಗಂಡನ ಅಜ್ಜಿ ಹಫೀಜಾ ಮತ್ತು ಅಣ್ಣನ ಹೆಂಡತಿ ನಿಶಾದ್ ಅಬ್ದುಲ್ ಗಫೂರ್ ಸೇರಿ ವರದಕ್ಷಿಣೆಗಾಗಿ ಹಣ ಹಾಗೂ ಬಂಗಾರ ತರುವಂತೆ ದೈಹಿಕ ಮತ್ತು ಮಾನಸಿಕವಾಗಿ ತೀವ್ರ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.
ಇವರ ಕಿರುಕುಳ ತಾಳಲಾರದೆ ರಮೀಜಾ ಅವರು ಜುಲೈ 2 ರಂದು ಸಾಯಂಕಾಲ 4.30 ರಿಂದ 5 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಮನೆಯಲ್ಲಿದ್ದ ವಿಷ ಕುಡಿದು ಮೃತಪಟ್ಟಿದ್ದಾರೆ.
ಮಗಳ ಸಾವಿಗೆ ಕಾರಣರಾದ ಈ ನಾಲ್ವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತಳ ತಂದೆ ಇಸ್ಮಾಯಿಲ್ ಮೆಹಬೂಬ್ ಅಲಿ ನಾಯ್ಕೋಡಿ ಸಾತನೂರು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ತಂದೆಯ ದೂರಿನ ಮೇರೆಗೆ ಗುನ್ನೆ ನಂ. 101/2026 ರಂತೆ, ಬಿಎನ್ಎಸ್ (BNS) 2023 ರ ಕಲಂ 80(2), 85 ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.