BREAKING NEWS

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಣೆ.

ಚಿತ್ತಾಪುರ: ತಾಯಿ ಯಾವುದೇ ನಿರೀಕ್ಷೆ ಇಲ್ಲದೆ ಮಕ್ಕಳನ್ನು ಸಲಹುವಂತೆ, ಪ್ರಕೃತಿ ಮಾತೆಯು ನಮಗೆ ಆರೋಗ್ಯವಂತ ಬದುಕನ್ನು ನೀಡುತ್ತಾಳೆ. ಆದ್ದರಿಂದ ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಸೃಷ್ಟಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಕರೆ ನೀಡಿದರು.

ಮತ​ಕ್ಷೇತ್ರದ ವಾಡಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಲು ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ​ಮಾಲಿನ್ಯದ ತಡೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ ​ಇಂದಿನ ಕೈಗಾರಿಕಾ ಯುಗದಲ್ಲಿ ಜಲ, ವಾಯು ಹಾಗೂ ಶಬ್ದ ಮಾಲಿನ್ಯದಿಂದ ವಾತಾವರಣ ಸಂಪೂರ್ಣವಾಗಿ ಹದಗೆಡುತ್ತಿದೆ. ಈ ವ್ಯವಸ್ಥೆ ಹೀಗೆಯೇ ಮುಂದುವರಿದರೆ ನಮ್ಮ ದುರಂತಕ್ಕೆ ನಾವೇ ಹೊಣೆಯಾಗಬೇಕಾಗುತ್ತದೆ. ಪರಿಸರ ಮಾಲಿನ್ಯದ ದುಷ್ಪರಿಣಾಮದಿಂದಾಗಿ ಇಂದು ಎಷ್ಟೋ ಜನರು ನಾನಾ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ.

 ಆರೋಗ್ಯವಂತ ನಾಡು ಮತ್ತು ಸದೃಢ ಸಮಾಜದ ನಿರ್ಮಾಣಕ್ಕೆ ಪರಿಶುದ್ಧ ಪರಿಸರ ಅತ್ಯಗತ್ಯವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.​"ನಾವೆಲ್ಲರೂ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬರೂ ಸಸಿಗಳನ್ನು ಮಕ್ಕಳಂತೆ ಲಾಲನೆ, ಪಾಲನೆ, ಪೋಷಣೆ ಮಾಡಿ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕೆ ದಾರಿಯಾಗುತ್ತದೆ." ಎಂದರು.

​ಈ ಸಂದರ್ಭದಲ್ಲಿ ರಾಷ್ಟ್ರೀಯ ಗೋರ್ ಸೇನಾದ ರಾಜಾಧ್ಯಕ್ಷ ರವಿ ಕಾರಬಾರಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಮ್.ಡಿ. ತಮಜೀದ್, ಪ್ರಮುಖ ಮುಖಂಡರಾದ ರವಿಕುಮಾರ ಸಿಂದಗಿ, ಮಲ್ಲಿಕಾರ್ಜುನ ಆಣಿಕೇರಿ, ಜಯಂತ ಪವಾರ, ಪ್ರೇಮ ರಾಠೋಡ, ಆಕಾಶ ಉಪ್ಪಿನ, ರಮೇಶ ಜಾಧವ ಹಾಗೂ ಸುನಿಲ ರಾಠೋಡ ಉಪಸ್ಥಿತರಿದ್ದರು.ಆಸ್ಪತ್ರೆಯ ಸಿಬ್ಬಂದಿಗಳಾದ ಗೋವಿಂದ ಮೂರ್ತಿ, ಬಾಬುರಾವ ಭೀಮನಳ್ಳಿ, ಪಾಂಡುರಂಗ ಕೊತಲಾಪುರ, ಕೃಷ್ಣ ಹುಲಿಕರ್, ಮಂಜುಳಾ ಗುಡುಬಾ, ರೇಷ್ಮಾ ನಲಿ, ನಿರ್ಮಲ ವಿಲಿಯಮ್, ನೀಲಮ್ಮ ಪೂಜಾರಿ, ಸವಿತಾ ಮೇತ್ರೆ, ಪೂಜಾ ಮೈನಾಳಕರ್, ವಿಜ್ಜುಬಾಯಿ ಪವಾರ, ಲಕ್ಷ್ಮಣ ಚವ್ಹಾಣ, ಸೂರ್ಯಕಾಂತ ಹೇರೊರ, ಜಯಕುಮಾರ ಚವ್ಹಾಣ, ರಮೇಶ ಮಡಿವಾಳ ಹಾಗೂ ರಬೇಕಾ ದೊಡ್ಡಮನಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this:

ಕಾಮೆಂಟ್‌‌ ಪೋಸ್ಟ್‌ ಮಾಡಿ

 
Copyright © 2014 Jtv kannada. Designed by OddThemes