ಬುಧವಾರ, ಅಕ್ಟೋಬರ್ 8, 2025

ವನ್ಯಜೀವಿಗಳಿಂದ ಜಗದ ಉಳಿವು : ಬಡಿಗೇರ್.

ಚಿತ್ತಾಪುರ: ಜಗದ ಉಳಿವು ವನ್ಯಜೀವಿಗಳನ್ನು ಅವಲಂಬಿಸಿವೆ. ಅವುಗಳ ನಾಶವಾದರೆ ನಮಗೆ ಉಳಿಗಾಲವಿಲ್ಲ ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ಹೇಳಿದರು. 

ಜಿಲ್ಲಾ ಪ್ರಾದೇಶಿಕ ಅರಣ್ಯ ವಿಭಾಗ, ತಾಲ್ಲೂಕ ವಲಯ ಅರಣ್ಯ ವಿಭಾಗ ಹಾಗೂ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ವತಿಯಿಂದ ಲುಂಬಿನಿ ಟ್ರಿ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಕೃತಿ ಒಂದು ಅದ್ಭುತ ಸೃಷ್ಟಿ ಅದರಲ್ಲಿ ಅರಣ್ಯಗಳು ಹಾಗೂ ವನ್ಯಜೀವಿಗಳ ಪಾತ್ರ ಪ್ರಮುಖವಾದದ್ದು. ಆದರೆ ಅನೇಕ ಕಾರಣಗಳಿಂದ ಅರಣ್ಯಗಳಲ್ಲಿರುವ ವನ್ಯಜೀವಿಗಳಿಗೆ ಆತಂಕ ಎದುರಾಗಿವೆ. ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿಗಳು ಆಹಾರ ಸರಪಳಿಯಲ್ಲಿ ಒಂದು ಇನ್ನೊಂದನ್ನು ಆಶ್ರಯಿಸಿ ಬದುಕುತ್ತಿವೆ ಹೀಗಿರುವಾಗ ಪ್ರತಿಯೊಬ್ಬರೂ ಕಾಡು ಪ್ರಾಣಿಗಳನ್ನು ರಕ್ಷಿಸುವ ಸಂಕಲ್ಪ ಮಾಡಬೇಕು. ಅವುಗಳ ರಕ್ಷಣೆಯೇ ನಮ್ಮೇಲ್ಲರ ರಕ್ಷಣೆಯಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ ಪ್ರತಿವರ್ಷ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸಲು ಭಾರತೀಯ ವನ್ಯಜೀವಿ ಮಂಡಳಿಯು ದೇಶದಾದ್ಯoತ ಅಕ್ಟೊಬರ್ 2 ರಿಂದ 8 ರವರೆಗೆ ವನ್ಯಜೀವಿ ಸಪ್ತಾಹವನ್ನು ಆಚರಣೆ ಮಾಡಲಾಗುತ್ತಿದೆ. ಪರಿಸರದ ಜೊತೆಗೆ ವನ್ಯಜೀವಿಗಳ ರಕ್ಷಣೆ ನಮ್ಮೇಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಅರಣ್ಯ ಅಧಿಕಾರಿ ವಿಶ್ವನಾಥ ಪಾಟೀಲ್, ಏನ್. ಸಿ. ಸಿ ಅಧಿಕಾರಿ ಶರಣು ಸಜ್ಜನ್. ಟ್ರಿ ಪಾರ್ಕ್ ಸಿಬ್ಬಂದಿಗಳಾದ ಶ್ರೀಕಾಂತ, ನಾಗೇಶ್, ಜಾಫರ್ ಇದ್ದರು.ಮಕ್ಕಳಿಗೆ ಅರಣ್ಯ, ವನ್ಯಜೀವಿ ಧಾಮಗಳ ಮಹತ್ವವನ್ನು ಹೇಳಿ ಕೊಡುವುದರ ಜೊತೆಗೆ ಅಲ್ಲಿರುವ ಚಿಟ್ಟೆ ಪಾರ್ಕ ಸೇರಿದಂತೆ ವಿವಿಧ ಸಸ್ಯಗಳ ಪ್ರಭೇಧಗಳು, ಪ್ರಾಣಿ ಪ್ರಭೇಧಗಳ ಬಗ್ಗೆ ಅರಣ್ಯಧಿಕಾರಿಗಳು ಮಾರ್ಗದರ್ಶನ ಮಾಡಿದರು. ಮಕ್ಕಳು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ, ಮನೋರಂಜನೆ ಜೊತೆಗೆ ಪರಿಸರದ ಅನೇಕ ವಿಷಯಗಳನ್ನು ಕೇಳಿ ತಿಳಿದುಕೊಂಡರು.

ನಾಳೆ ಜಮೀನು ಹರಾಜು ಪ್ರಕ್ರಿಯೆ: ತಹಸೀಲ್ದಾ‌ರ್

ಚಿತ್ತಾಪುರ: ನ್ಯಾಯಾಲಯದ ಆದೇಶದಂತೆ ಬಾಂಡ್ ಮೊತ್ತ ಭರಿಸದೆ ಇರುವುದರಿಂದ ತಾಲೂಕಿನ ಯರಗಲ್ ಗ್ರಾಮದ ಸ.ನಂ:4/*/1 ವಿ:3-30ಎ.ಗುಂ ಜಮೀನಿನ ಹರಾಜು ಪ್ರಕ್ರಿಯೆ ಅ. 9 ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿರುತ್ತದೆ. ಕಾರಣ ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯುಳ್ಳವರು ಪಾಲ್ಗೊಳ್ಳಲು ಅವಕಾಶ ಇರುತ್ತದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

Crl Misc No:453/2020, Cr NO:14/2019(RG Nagar PS V/s Jakeer &Ors) reg : ಆದೇಶದಂತೆ ಬಾಂಡ್ ಮೊತ್ತ ಭರಿಸುವಂತೆ ನೋಟಿಸ್-37 ಮತ್ತು ನೋಟಿಸ್‌-38 ನೀಡಲಾಗಿರುತ್ತದೆ ಆದರೆ ಕಂದಾಯ ನಿರೀಕ್ಷಕರು ಚಿತ್ತಾಪುರ ರವರು ಅರ್ಜುನ ತಂದೆ ಮರೆಪ್ಪಾ ರವರು ಯರಗಲ್ ಗ್ರಾಮದಲ್ಲಿ ಹಾಗೂ ಶಹಾಬಾದ ಪಟ್ಟಣದಲ್ಲಿ ವಾಸವಿರುವುದಿಲ್ಲ ಎಂದು ವರದಿ ಸಲ್ಲಿಸಿರುತ್ತಾರೆ. ವಿಚಾರಣೆ ಮುಂದುವರೆದು ಸೆ.24 ರಂದು ದಿನದಂದು ಮಾನ್ಯ ನ್ಯಾಯಾಧಿಶರು ಬಾಂಡ್ ಮೊತ್ತ ಭರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿರುತ್ತಾರೆ ಹಾಗೂ ಆರಕ್ಷಕರು ಉಪನಿರೀಕ್ಷಕರು ಪೋಲಿಸ್ ಠಾಣೆ ಚಿತ್ತಾಪುರ ರವರಿಗೆ ಪತ್ರ ಬರೆಯಲಾಗಿದ್ದು ಅರ್ಜುನ ಮರೆಪ್ಪಾ ರವರನ್ನು ಬಂಧಿಸಿ ಹಾಜರಪಡಿಸುವಂತೆ ಸೂಚಿಸಲಾಗಿರುತ್ತದೆ.

ಪ್ರಯುಕ್ತ ಪಹಣಿ ಮಾಲಿಕರಾದ ಅರ್ಜುನ ತಂ ಮರೆಪ್ಪಾ ರವರ ಯರಗಲ್ ಗ್ರಾಮದಲ್ಲಿ ವಾಸವಿರದೆ ಇರುವುದರಿಂದ ಯರಗಲ್ ಗ್ರಾಮದ ಸ.ನಂ:4/*/1 ವಿ:3-30ಎ.ಗುಂ ಜಮೀನಿನ ಹರಾಜು ಪ್ರಕ್ರಿಯೆ ಅ. 9 ರಂದು ಬೆಳಿಗ್ಗೆ 11.00 ಗಂಟೆಗೆ ನಿಗದಿಪಡಿಸಲಾಗಿರುತ್ತದೆ. ಕಾರಣ ಯರಗಲ್ ಗ್ರಾಮದ ಸ.ನಂ:4/*/1 2:3-302. ಹರಾಜು ಪ್ರಕ್ರಿಯೆಯಲ್ಲಿ ಆಸಕ್ತಿಯುಳ್ಳವರು ಪಾಲ್ಗೊಳ್ಳಲು ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.

ದಸರಾ ರಜೆ ವಿಸ್ತರಣೆಗೆ ಜಿಲ್ಲಾಧ್ಯಕ್ಷ ಸ್ವಾಗತ.

ಚಿತ್ತಾಪುರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆ ಅವಧಿಯನ್ನು ಅ. 18 ವರೆಗೆ ವಿಸ್ತರಿಸಿದ ಸರಕಾರದ ಆದೇಶಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ರವರು ಸ್ವಾಗತಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-2025ರ ಗಣತಿ ಕಾರ್ಯದಲ್ಲಿ ರಾಜ್ಯಾದಾದ್ಯಂತ ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ಕಳೆದ ಸೆ.22 ರಿಂದ ಅ.7 ವರೆಗೆ ಗಣತಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿತ್ತು. ಗಣತಿ ಕಾರ್ಯದಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಗಣತಿ ಕಾರ್ಯ ಪೂರ್ಣಗೊಳ್ಳದೇ ಇರುವುದರಿಂದ ಶಿಕ್ಷಕರು ದೈಹಿಕ ಮತ್ತು ಬೌದ್ಧಿಕವಾಗಿ ಒತ್ತಡದಲ್ಲಿ ಗಣತಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ದಸರಾ ರಜೆ ವಿಸ್ತರಿಸಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜಾಧ್ಯಕ್ಷ ಸಿ.ಎಸ್.ಷಡಕ್ಷರಿ ರವರು ಮುಖ್ಯಮಂತ್ರಿಗಳಿಗೆ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿತ್ತು,

ತಕ್ಷಣವೇ ಸಂಘದ ಮನವಿಗೆ ಸ್ಪಂದಿಸಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ದಸರಾ ರಜಾ ಅವಧಿಯನ್ನು ಅ.18 ವರೆಗೆ ವಿಸ್ತರಿಸಿ ಆದೇಶ ನೀಡಿರುವುದಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕಲಬುರಗಿ ಅಧ್ಯಕ್ಷ ಬಸವರಾಜ ಬಳ್ಳಂಡಗಿ, ಪದಾಧಿಕಾರಿಗಳಾದ ಮಹೇಶ ಹೂಗಾರ, ಶ್ರೀಮಂತ ಪಟ್ಟೇದಾರ, ಧರ್ಮರಾಜ ಜವಳಿ, ಸುರೇಶ ಶರ್ಮಾ, ಚಂದ್ರಕಾಂತ ಏರಿ, ಎಂ.ಬಿ ಪಾಟೀಲ, ಸುರೇಶ ವಗ್ಗೆ ರವರು ಸಂತಸ ವ್ಯಕ್ತಪಡಿಸಿದ್ದಾರೆ.

ನಾಗಾವಿ ಎಕ್ಸಪ್ರೆಸ್‌ ವಿಶೇಷ ಪುರವಣಿಗೆ ಬಿಡುಗಡೆ.

ಚಿತ್ತಾಪೂರ: ಪಟ್ಟಣದ ಲಚ್ಚಪ್ಪ ನಾಯಕ ಸರಾಫ್ ಮನೆಯಲ್ಲಿ ಮಂಗಳವಾರ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ನಂತರ ಕಾಶಿನಾಥ ಗುತ್ತೇದಾರ ಅವರ ಸಂಪಾದಕತ್ವದಲ್ಲಿ ಮುನ್ನೆಡೆಯುತ್ತಿರುವ ನಾಗಾವಿ ಎಕ್ಸಪ್ರೆಸ್‌ ಕನ್ನಡ ದಿನಪತ್ರಿಕೆಯ ವಿಶೇಷ ಪುರವಣಿಯನ್ನು ಗಣ್ಯರು ಬಿಡುಗಡೆ ಮಾಡಿದರು 

ಈ ಸಂದರ್ಭದಲ್ಲಿ ತಹಸೀಲ್ದಾರ ನಾಗಯ್ಯ ಹಿರೇಮಠ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಲ್'ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್‌, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್‌ ಚವ್ಹಾಣ, ರೈತ ಸಂಘದ ಅಧ್ಯಕ್ಷ ಮೌನೇಶ್ ಭಂಕಲಗಿ, ರತ್ನಾಕರ್ ನಾಯಕ, ಗೌತಮ್ ನಾಯಕ, ಬೌದ್ಧ ಮಹಾಸಭಾ ಅಧ್ಯಕ್ಷ ಜಗನ್ನಾಥ ಮುಡಬೂಳಕ‌ರ್, ಪತ್ರಕರ್ತ ಜಗದೇವ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಭೋವಿ ಸಮಾಜದಿಂದ ಪಲ್ಲಕ್ಕಿ ಸೇವೆ.

ಚಿತ್ತಾಪುರ: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ನಡೆಯಿತು.ಭೋವಿ ಸಮಾಜದಿಂದ ಪಲ್ಲಕ್ಕಿ ಸೇವೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ ತಾಂಡೂರಕರ್, ರಾಹುಲ್ ಭೋವಿ, ಮಾರುತಿ ತಾಂಡೂರಕರ್, ಮಹೇಶ್ ಮೇಟಿ, ಜಗನ್ನಾಥ್ ಅಳ್ಳೊಳ್ಳಿ, ಅಂಬು ದುದಲಿಕರ್,  ಜಗನ್ನಾಥ್ ಭೋವಿ, ಲಕ್ಷ್ಮಿಕಾಂತ್ ಮೇಟಿ, ಲಾಲು ಅಲ್ಮೆಲಕರ್, ಅಂಬರೀಶ್ ಭೋವಿ, ಶಿವಕುಮಾರ್ ಭೋವಿ, ಸೇರಿದಂತೆ ಇತರರು ಇದ್ದರು.

ಅನ್ನದಾಸೋಹ: ಶಂಕರಗೌಡ ಪಾಟೀಲ ಚಾಲನೆ.

ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ
ಯಲ್ಲಮ್ಮ ಪಲ್ಲಕ್ಕಿ ಉತ್ಸವದ ಪ್ರಯುಕ್ತ ಅನ್ಮೋಲ್ ಹೋಟೆಲ್ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅನ್ನದಾಸೋಹಕ್ಕೆ ಡಿವೈಎಸ್ಪಿ ಶಂಕರಗೌಡ ಪಾಟೀಲ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಜಾತ್ರಾ ಮಹೋತ್ಸವದ ಅಂಗವಾಗಿ ಇಂತಹ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅನ್ಮೋಲ್ ಹೋಟೆಲ್  ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ್ ತಿಗಡೆ, ಅನ್ಮೋಲ್ ಹೋಟೆಲ್ ಶ್ರೀಮತಿ ಭಾಗಮ್ಮ ಕಲ್ಲಾಕ್, ಸುರಾಜ್ ಕಲ್ಲಾಕ್ ವಿಜಯ್ ಕಲ್ಲಾಕ್, ಅರುಣ್ ಕಲ್ಲಾಕ್, ವಿಜಯಕುಮಾರ್ ದೊಡ್ಮನಿ, ಜಗನ್ನಾಥ ಮುಡಬೂಳಕರ್, ಅಂಬರೀಶ್, ಪ್ರಕಾಶ್ ಸೇರಿದಂತೆ ಇತರರು ಇದ್ದರು.

ಭಾನುವಾರ, ಅಕ್ಟೋಬರ್ 5, 2025

ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ : ವಾರ್ಡನ್ ನಿರ್ಲಕ್ಷ.

ಹೈಟೆಕ್ ವಸತಿ ನಿಲಯ, ಒಳಗೆ ಹೋಗಲು ಮುಜುಗರ.

ಚಿತ್ತಾಪುರ: ಪಟ್ಟಣದ ಬಾಲಾಜಿ ಮಂದಿರದ ಮುಂದೆ ಇರುವ ಡಾ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು ದಿನಗಳಿಂದ ಮಳೆ ನೀರು ನಿಂತು ಗಬ್ಬು ನಾರುತ್ತಿದರು ಸಹ ಆ ನೀರನ್ನು ಸ್ವಚ್ಛಗೊಳಿಸದೆ ಕ್ರಮ ಕೈಗೊಳ್ಳದೆ ವಸತಿ ನಿಲಯದ ವಾರ್ಡನ್ ನಿರ್ಲಕ್ಷತನ ತೋರುತ್ತಿರುವುದು ಎದ್ದು ಕಾಣುತ್ತಿದೆ.

ಪ್ರತಿನಿತ್ಯ ವಸತಿ ನಿಲಯದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ /ಬರುವಾಗ ಅದೇ ನೀರಿನಲ್ಲಿ ಮೂಗು ಮುಚ್ಚಿಕೊಂಡು ನಡೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ಕೆಲ ವಿದ್ಯಾರ್ಥಿಗಳು ಆ ಗಬ್ಬು ನೀರಿನಲ್ಲಿ ನಡೆದುಕೊಂಡು ಹೋಗಲು ಹಿಂಜರಿದು ಕಾಂಪೌಂಡ ಹಾರಿ (ಜಿಗಿದು) ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ನಿಲಯದ ಅಡುಗೆ ಸಿಬ್ಬಂದಿ ವರ್ಗ ವಾರ್ಡನ್ ಸಹ ಇದೇ ನೀರಿನಲ್ಲಿ ನಡೆದುಕೊಂಡು ಬರುತ್ತಿದ್ದಾರೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ಇವರಿಗೆ ಆಗುತ್ತಿಲ್ಲ. 

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಚಿವ ಪ್ರಿಯಾಂಕ ಖರ್ಗೆ ಹೈಟೆಕ್ ವಸತಿ ನಿಲಯ ನಿರ್ಮಿಸಿದ್ದಾರೆ ಆದರೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದ ಇಂತಹ ಸಣ್ಣ-ಪುಟ್ಟ ಸಮಸ್ಯೆಗಳು ಉದ್ಭವಿಸುತ್ತಿವೆ ಎನ್ನುತ್ತಿದ್ದಾರೆ ಸ್ಥಳೀಯರು.

ವಸತಿ ನಿಲಯದ ವಿದ್ಯಾರ್ಥಿಗಳು ಉದಯಕಾಲ ವರದಿಗಾರ ಜೊತೆ ಮಾತನಾಡಿ ಅವರು ಈ ನಿಂತ ನೀರಿನಿಂದ ಬೆಳಗ್ಗೆ ಸಾಯಂಕಾಲ ಗಬ್ಬು ವಾಸನೆ ಬರುತ್ತಿದ್ದು, ಇದರ ಜೊತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಈ ಕುರಿತು ವಾರ್ಡನ್ ಅವರಿಗೆ ಹೇಳಿದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಮ್ಮ ಗೋಳು ಹೇಳಿಕೊಂಡಿದ್ಜಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸುದ್ದಿಯನ್ನು ನೋಡಿ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಗೋಳನ್ನು ಆಲಿಸಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

ಗುರುವಾರ, ಸೆಪ್ಟೆಂಬರ್ 18, 2025

ದುಡ್ಡು ಕೊಟ್ರೆ ಮನೆ ನಿರ್ಮಾಣಕ್ಕೆ ಅನುಮತಿ ಪತ್ರ: ದಸಂಸ ಆರೋಪ.

ಚಿತ್ತಾಪುರ: ಮತ ಕ್ಷೇತ್ರದ ಮಾಲಗತ್ತಿ ಗ್ರಾಮ ಪಂಚಾಯತನ  ಅಧ್ಯಕ್ಷರು ಮತ್ತು ಪಿಡಿಓ ಸೇರಿಕೊಂಡು ದುಡ್ಡು ಕೊಟ್ಟವರಿಗೆ ಮಾತ್ರ ಮನೆ ನಿರ್ಮಾಣಕ್ಕೆ ಅನುಮತಿ ಪತ್ರ ನೀಡುವುದು ದುಡ್ಡು ಕೊಡದವರಿಗೆ ನೀಡದೆ ಅನ್ಯಾಯ ಮಾಡುತ್ತಿರುವುದು ಖಂಡನೀಯ ಎಂದು ಆರೋಪಿಸಿ ಪತ್ರಿಕಾ ಪ್ರಕಟಣೆ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಶಿವಮೂರ್ತಿ ಪಾಮನೋರ ತಿಳಿಸಿದ್ದಾರೆ.

ಪಂಚಾಯತ ವ್ಯಾಪ್ತಿಯಲ್ಲಿರುವ ಯರಗಲ್ ಗ್ರಾಮದ 2024-25ನೇ ಸಾಲಿನ ಇಂದಿರಾ ಆವಾಜ ಯೋಜನೆ, ಮನೆಯಲ್ಲಿ ಫಲಾನುಭವುಗಳಿಗೆ ಆಯ್ಕೆಯಾದ ಮನೆಗಳಲ್ಲಿ 2012-13ನೇ ಸಾಲಿನಲ್ಲಿ ಆಯ್ಕೆಯಾದ ಹಲವಾರು ಫಲಾನುಭವಿಗಳಿಗೆ ಈಗಾಗಲೇ ಮನೆ ಕಟ್ಟಲು ಅನುಮತಿ ಪತ್ರ ಕೊಟ್ಟಿದ್ದು ತಮಗೆ ಯಾರು ಹಣ ಕೊಟ್ಟಿರುವರೋ ಅಂಥವರಿಗೆ ಮಾತ್ರ ಅನುಮತಿ ಪತ್ರ (ವರ್ಕ ಆರ್ಡರ) ಕೊಟ್ಟು ಮನೆ ಕಟ್ಟಲು ಅವಕಾಶ ಮಾಡಿ ಮೊದಲನೆ ಹಂತ ಬಿಲ್ ಸಹ ಮಾಡಿರುತ್ತಾರೆ. ಇನ್ನುಳಿದ ಫಲಾನುಭವಿಗಳು ವರ್ಕ ಆರ್ಡರ ಕೇಳಿದರೆ  ನಿಮ್ಮ ಮನೆಗಳು ಹಿಂದೆ 2012-13ನೇ ಸಾಲಿನಲ್ಲಿ ತೆಗೆದುಕೊಂಡಿರುವಿರಿ ಎಂದು ಹಣ ಕೊಡದವರಿಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಮಾಲಗತ್ತಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಸೇರಿಕೊಂಡು ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಅನ್ಯಾಯಕೊಳಗಾದ ಫಲಾನುಭವಿಗಳಿಗೆ ನ್ಯಾಯ ಕೊಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಶನಿವಾರ, ಸೆಪ್ಟೆಂಬರ್ 13, 2025

ಬಿಸಿಯೂಟದ ಜವಾಬ್ದಾರಿಯಿಂದ ಶಿಕ್ಷಕರಿಗೆ ಬೇಡ: ಶಿವಾನಂದ ನಾಲವಾರ.


ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ. 

ಚಿತ್ತಾಪುರ: ಬಿಸಿಯೂಟ ಯೋಜನೆಯಲ್ಲಿ ಶಿಕ್ಷಕರ ಪಾಲ್ಗೊಳ್ಳುತ್ತಿರುವುದರಿಂದ ಬೋಧನೆಯಲ್ಲಿ ಏಕಾಗ್ರತೆ ಸಾಧಿಸುವಲ್ಲಿ ದುಷ್ಪರಿಣಾಮ ಬಿರುತ್ತಿದೆ ಹೀಗಾಗಿ ಬಿಸಿಯೂಟದ ಜವಾಬ್ದಾರಿಯಿಂದ ಶಿಕ್ಷಕರಿಗೆ ಬೇಡ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಹೇಳಿದರು.

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಸರಕಾರಿ, ಅನುದಾನಿತ.ಪ್ರಾಥಮಿಕ, ಪದವಿಧರ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮೊದಲಿಗಿಂತ ಶಿಕ್ಷಕರಿಗೆ ಗೌರವ ಕಡಿಮೆ ಆಗಲು ಕಾರಣವೇನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಬಿಸಿಯೂಟದ ಜವಾಬ್ದಾರಿಯಿಂದ ಶಿಕ್ಷಕರಿಗೆ ಮುಕ್ತಿ ಹಾಡಬೇಕು, ಶಿಕ್ಷಕರಿಗೆ ಬರೀ ಪಾಠ ಮಾಡಲು ಅವಕಾಶ ಮಾಡಬೇಕು ಎಂದು ಹೇಳಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಹೀಗಾಗಿ ಅವರಿಗೆ ಶಿಕ್ಷಣ ಇಲಾಖೆ ಅಭಾರಿಯಿದೆ ಎಂದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ ದೇಶ ಕಟ್ಟುವ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಶಿಕ್ಷಕರ ತಮ್ಮ ಮನಃಪರಿವರ್ತನೆ ಮಾಡಿಕೊಂಡಾಗ ಮಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಲು ಸಾಧ್ಯ ಎಂದರು. ಶಿಕ್ಷಕರ ದಿನಾಚರಣೆಗೆ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಆದರ್ಶ ವಿದ್ಯಾರ್ಥಿಗಳನ್ನು ತಯ್ಯಾರಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪಿಎಲ್‌'ಡಿ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ ಸಾವಿತ್ರಿ ಬಾಯಿ ಫುಲೆ ರವರ ಬಗ್ಗೆ ಮಾತನಾಡುತ್ತಾ ಶಿಲ್ಪಿಗಳು ಹೇಗೆ ಕಲ್ಲನ್ನು ಕಟಿದು ತಿದ್ದಿ ತೀಡಿ ಮೂರ್ತಿ ಮಾಡುತ್ತಾನೆ ಹಾಗೇ ಶಿಕ್ಷಕರು ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಯನ್ನು ತಿದ್ದಿ ತೀಡಿ ವಿದ್ಯಾ ಬುದ್ಧಿ ಕಲಿಸಿ ಉತ್ತಮ ಪ್ರಜೆಗಳಾಗಿ ಮಾಡುತ್ತಾನೆ ಇವರ ಕಾರ್ಯ ಮೆಚ್ಚುವಂತದು ಎಂದರು.

ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್‌, ಪದವಿಧರ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಣ್ಣಗೌಡ ಎಸ್‌.ಎಂ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಅರೆ ಸರ್ಕಾರಿ ಪ.ಜಾ./ಪ.ಪಂ. ನೌಕರರ ಸಂಘದ ಅಧ್ಯಕ್ಷ ಅರುಣಕುಮಾರ ಎಸ್. ಚೆಂಚನಸೂರ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೀಮರೆಡ್ಡಿ ಮಕಾಸಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ, ಕಾರ್ಯದರ್ಶಿ ಹೀರಾಲಾಲ ರಾಠೋಡ, ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಚಂದ್ರಾಮ ಅಮ್ಮನಗಡೆ, ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ರವೀಂದ್ರ ರೆಡ್ಡಿ ಎನ್. ಶಿಕಾರಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೇವಿಂದ್ರ ರೆಡ್ಡಿ ದುಗನೂರ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್‌, ಅನುದಾನಿತ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸಂತೋಷ ಕೋಮಟೆ, ಅಬ್ದುಲ್ ಸಲೀಂ ಪ್ಯಾರೆ, ಅಂಬಣ್ಣ ಘಂಟಿ, ರಮೇಶ ಬಟಗೇರಿ, ಅಪ್ಪಯ್ಯ ಎಸ್. ಹಿರೇಮಠ, ವೆಂಕಟೇಶ ಕೆ, ಬಸವರಾಜ ಹೊಸಮನಿ, ಮಲ್ಲಣ್ಣ ತಳವಾರ, ಜಗದೇವರೆಡ್ಡಿ ಪಾಟೀಲ, ಶರಣು ಡೋಣಗಾಂವ ವೇದಿಕೆಯಲ್ಲಿದ್ದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ರೋಣದ್, ವಿನೋದ ಗೌಳಿ, ಆದಪ್ಪ ಬಗಲಿ, ಗಂಗಾಧರ್, ತಮ್ಮನ್ನಾ ಕೌಸರ್, ಸುಭಾಶ್ಚಂದ್ರ, ಸಾಬಣ್ಣ, ಗುರುಬಸಪ್ಪ, ದೇವಪ್ಪ ನಂದೂರಕರ್, ಮಲ್ಲಣ್ಣ ಮಾಸ್ಟ‌ರ್, ಬಿ.ಆರ್.ಪಿ, ಸಿ.ಆರ್.ಪಿ ಸೇರಿದಂತೆ ಇತರರು ಇದ್ದರು

ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣ ಮತ್ತು ಸಾವಿತ್ರಿಬಾಯಿ ಫುಲೆ ರವರ ಆದರ್ಶಗಳು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು. ಶಿವಲೀಲಾ ಕಲಗುರ್ಕಿ ಪ್ರಾರ್ಥಿಸಿದರು, ಬಿಆ‌ರ್'ಸಿ ಮಲ್ಲಿಕಾರ್ಜುನ ಸೇಡಂ ಸ್ವಾಗತಿಸಿದರು, ಶರಣಪ್ಪ ಅಬ್ಬಿಗೇರಿ ನಿರೂಪಿಸಿದರು.

ಸೋಮವಾರ, ಸೆಪ್ಟೆಂಬರ್ 8, 2025

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ 

ಚಿತ್ತಾಪುರ: ಪಟ್ಟಣದ ನಾಗಾವಿ ಎಜುಕೇಷನ್ ಹಬ್‌ ಪ್ರದೇಶದಲ್ಲಿ ನಿರ್ಮಿಸಲಾದ 1000 ಜಿ+1 ಮನೆಗಳ ಹಂಚಿಕೆಯು ಮಂಗಳವಾರ ನಡೆಯಬೇಕಿದ್ದ ಪ್ರಕ್ರಿಯೆ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಕೊಳಚೆ ನಿರ್ಮೂಲನೆ ಮಂಡಳಿಯ ಎಇಇ ಶ್ರೀಧ‌ರ್ ಸಾರವಾಡ ತಿಳಿಸಿದ್ದಾರೆ.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ದಿನಾಂಕ 9 ಸೆಪ್ಟೆಂಬರ್ ಮಂಗಳವಾರ ಮಧ್ಯಾಹ್ನ 1ಕ್ಕೆ ನಡೆಯಲಿರುವ ಸಮಾರಂಭ ರದ್ದಾಗಿದ್ದು ಜಿಲ್ಲಾ ಅಧಿಕಾರಿಗಳ ಅನುಮತಿ ಮೆರೆಗೆ ಮುಂದೂಡಲಾಗಿದೆ ದಿನಾಂಕ 12 ಸೆಪ್ಟೆಂಬರ್ ರಂದು  ಫಲಾನುಭವಿಗಳಿಗೆ ಮನೆಗಳ ಅಂಕಿ ಸಂಖ್ಯೆಗಳನ್ನು ನೀಡುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆ ಅಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಉಪಾಧ್ಯಕ್ಷರು, ಸರ್ವ ಸದಸ್ಯರು ರಾಜಕೀಯ ಧುರೀಣರು ಸಹಭಾಗಿತ್ವದಲ್ಲಿ ಈ ಸಮಾರಂಭನಡೆಯಲಿದೆ. ವಸತಿ ಪಡೆದುಕೊಳ್ಳುವ ಪಟ್ಟಣದ ಫಲಾನುಭವಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಶುಕ್ರವಾರ, ಜುಲೈ 4, 2025

ಸರ್ಕಾರದ ಕಛೇರಿಗಳು ಜನಸ್ನೇಹಿಯಾಗಲಿ: ಪ್ರಿಯಾಂಕ್ ಖರ್ಗೆ.


ಸರ್ಕಾರದ ಕಛೇರಿಗಳು ಜನಸ್ನೇಹಿಯಾಗಲಿ: ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ಒಳ್ಳೆಯ ಆಡಳಿತ ಜನರಿಗೆ ಕೊಡಬೇಕಾದರೆ ಸರ್ಕಾರದ ಕಛೇರಿಗಳು ಜನಸ್ನೇಹಿ ಆಗಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದಲ್ಲಿ 18.41 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಜಾಸೌಧ (ಮಿನಿ ವಿಧಾನಸೌಧ) ಉದ್ಘಾಟಿಸಿ ಮಾತನಾಡಿದ ಅವರು ಈ‌ ಹಿಂದೆ ಮಿನಿ ವಿಧಾನಸೌಧ ಎಂದು ಕರೆಯುತ್ತಿದ್ದ ಕಟ್ಟಡಗಳಿಗೆ ಪ್ರಜಾಸೌಧ ಎಂದು ಹೆಸರಿಸಲಾಗುತ್ತಿದೆ ಕಾರಣ ಸರ್ಕಾರದ ಆಡಳಿತ ಜನರಿಗೆ ಹತ್ತಿರವಾಗಬೇಕು ಸರ್ಕಾರ ಜನರಿಗೆ ಸೇರಿದ್ದು ಅವರ ಕೆಲಸಗಳು ನಿರಂತರವಾಗಿ ನಡೆಯಬೇಕು ಎನ್ನುವ ಉದ್ದೇಶವಾಗಿದೆ ಎಂದರು.

ಮುಂದಿನ ಮೂರು ವಾರದಲ್ಲಿ ಸಮೃದ್ಧಿ ಯೋಜನೆಯಡಿಯಲ್ಲಿ 150 ಕೋಟಿ ರೂಪಾಯಿ ಅನುದಾನವನ್ನು ಮತಕ್ಷೇತ್ರಕ್ಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಜೊತೆಗೆ ಜುಲೈ ಅಂತ್ಯದ ಒಳಗೆ ಅಥವಾ ಅಗಸ್ಟ್ ಮೊದಲ ವಾರದಲ್ಲಿ ಗ್ರಾಮೀಣ ಮಟ್ಟದ ಅಕ್ರಮ ಜಾಗಗಳನ್ನು ಸಕ್ರಮ ಮಾಡಿ ಇ ಸ್ವತ್ತು ದಾಖಲೆ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.


 ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371(ಜೆ) ಜಾರಿಗೆ ಬಂದ ನಂತರ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗಿದೆ ಪ್ರತಿವರ್ಷ5000 ಕೋಟಿ ರೂಪಾಯಿ ಅನುದಾನ ಮಂಡಳಿಗೆ ಬರುತ್ತಿದೆ.ಕಳೆದ ಒಂದು ದಶಕದಲ್ಲಿ 30,000 ಕಾಮಗಾರಿಗಳು ನಡೆದಿವೆ. 6,795 ಮೆಡಿಕಲ್ ಹಾಗೂ 22,219 ಇಂಜಿನೀಯರಿಂಗ್ ಸೀಟುಗಳು ಆರ್ಟಿಕಲ್ 371(ಜೆ) ಅಡಿಯಲ್ಲಿ ದೊರಕಿದರೆ, ಇದೂವರೆಗೆ 1.10 ಲಕ್ಷ ಜನರಿಗೆ ನೌಕರಿ ಹಾಗೂ 37,600 ನೌಕರರಿಗೆ ಪ್ರಮೋಷನ್ ಸಿಕ್ಕಿದೆ ಎಂದರು.

ಮನ್ ಕೀ ಬಾತ್ ನಲ್ಲಿ‌ ಮಾತನಾಡಿದ ಪ್ರಧಾನಿಗಳು ಕಲಬುರಗಿ ರೊಟ್ಟಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ
ಮಹಿಳೆಯರಿಗೆ ಸ್ವಾವಲಂಬಿ ಜೀವನದ‌ ಬಗ್ಗೆ ಕೊಂಡಾಡಿದ್ದಾರೆ. ಆದರೆ ಅನುದಾನ ಬಿಡುಗಡೆ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದ ಖರ್ಗೆ, ನಮ್ಮ ಕೆಲಸಗಳ ಬಿಜೆಪಿಯ ಸ್ಥಳೀಯ ನಾಯಕರು ಹೊಗಳದೆ ಟೀಕಿಸುತ್ತಿದ್ದಾರೆ. ಇತ್ತೀಚಿಗೆ ಬಿಜೆಪಿಯ ನಾಯಕರು ಪದೇ ಪದೇ ಕಲಬುರಗಿಗೆ ಬರುತ್ತಿದ್ದಾರೆ ಕಾರಣ ನನ್ನ ಬಗ್ಗೆ ವೈಯಕ್ತಿಕ‌ ಟೀಕೆ ಮಾಡಲು ಬರುತ್ತಿದ್ದಾರೆ. 

ವಿಜಯೇಂದ್ರ ಸ್ಥಳೀಯ ಬಿಜೆಪಿ ನಾಯಕರನ್ನು‌ ನಂಬಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ. ಅದನ್ನು‌ ನಾನು ಅವರಿಗೆ ನೇರವಾಗಿ ಹೇಳಿದ್ದೇನೆ.‌ ಇಲ್ಲಿನ ಒಬ್ಬ ವ್ಯಕ್ತಿಯನ್ನು‌ ನಂಬಿ ಅವರು ಬಂದಿದ್ದರು. ಈಗ ಅವನು ಎಲ್ಲಿದ್ದಾನೋ ಗೊತ್ತಿಲ್ಲ. ಹೆಣದ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಬೀದರ್ ನಲ್ಲಿ ಯುವಕನೋರ್ವನ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಿದ್ದರು. ಮಂಗಳೂರು ಹಾಗೂ ಕರಾವಳಿ ಭಾಗವನ್ನು ಪ್ರಯೋಗ ಶಾಲೆ ಮಾಡಿದಂತೆ ನಮ್ಮ ಭಾಗದಲ್ಲಿ ಮಾಡಲು ಸಾಧ್ಯವಿಲ್ಲ.‌ಇದು ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಬಿಜೆಪಿಯವರ ಯಾವ ಪ್ರಯೋಗ ನಡೆಯುವುದಿಲ್ಲ. ವಾಡಿಯಲ್ಲಿ ನಡೆದ ಒಂದು ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ‌ ಜಗಳವಾದರೆ ವಿರೋಧಪಕ್ಷದ ನಾಯಕರು ಬರುತ್ತಾರೆ ಎಂದರೆ ಅವರ ಭೌದ್ದಿಕ ದಿವಾಳಿತನ ತೋರಿಸುತ್ತದೆ ಎಂದರು.

ಬಿಜೆಪಿ ಹಾಳಾಗಲು ರವಿಕುಮಾರ್ ಕಾರಣ ಅವರ ಕಂಪನಿಗೆ ಸಂವಿಧಾನದಲ್ಲಿ ನಂಬಿಕೆಯ ಇಲ್ಲ‌ ಮನುಸ್ಮೃತಿಯ ಮೇಲೆ ನಂಬಿಕೆ ಇದೆ. ಮನುಸ್ಕೃತಿಯನ್ನು ನಿಮ್ಮ ಮನೆಯಲ್ಲಿ ಜಾರಿಗೆ ತನ್ನಿ ಎಂದು ನಾನು ಅವರಿಗೆ ಒಂದು ಸವಾಲ್ ಹಾಕುತ್ತೇನೆ. ಇದು ಸಾಧ್ಯನಾ? ಧರ್ಮದ‌ ಹೆಸರಲ್ಲಿ ಬಡವರ ಮಕ್ಕಳನ್ನು ದಾರಿ ತಪ್ಪಿಸುವ ಬಿಜೆಪಿ ನಾಯಕರು, ತಮ್ಮ ಮಕ್ಕಳನ್ನ ಧರ್ಮದ, ಗೋ ರಕ್ಷಣೆಗೆ ಕಳಿಸಿದ್ದಾರೆ? ನಿಮ್ಮ ಮಕ್ಕಳಿಗೆ ಬುದ್ದ, ಬಸವ, ಅಂಬೇಡ್ಕರ್, ನಾರಾಯಣಗುರು,‌ಕುವೆಂಪು ಅವರ ಆದರ್ಶದ ಬಗ್ಗೆ ತಿಳಿ ಹೇಳಿ ಎಂದು ಪೋಷಕರಿಗೆ ಮನವಿ ಮಾಡಿದರು.

ಮುಂದಿನ ಮೂರು ವರ್ಷದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಿಸಲಾಗಿದೆ. ಕಲಬುರಗಿ ಹಾಗೂ ಚಿತ್ತಾಪುರ ಮತ್ತು ವಾಡಿ ಪಟ್ಟಣಗಳ ಅಭಿವೃದ್ದಿಗೆ ಖಾಸಗಿ ಸಂಸ್ಥೆಯೊಂದಿಗೆ ಮಾತುಕತೆ ನಡದಿದೆ. ಇದಕ್ಕೆ ಸಂಸದರ ಅವರ ಆಶೀರ್ವಾದ ಬೇಕಾಗುತ್ತದೆ. ವಾಡಿ ಹಾಗೂ ಚಿತ್ತಾಪುರ‌ ಅಭಿವೃದ್ದಿಗೆ ತಲಾ‌100 ಕೋಟಿ‌ ಅನುದಾನ ಬಿಡುಗಡೆ ಮಾಡುವಂತೆ ವೇದಿಕೆಯ ಮೇಲಿದ್ದ ಅದಾನಿ ಸಿಮೆಂಟ್ಸ್ ಕಂಪನಿಯ ಅಧಿಕಾರಿಗಳಿಗೆ‌ ಮನವಿ ಮಾಡಿದರು.

 ಜಿಲ್ಲಾಧಿಕಾರಿ ಬಗ್ಗೆ ಎಂ‌ಎಲ್ ಸಿ ರವಿಕುಮಾರ್ ಏನೇನೋ ಮಾತನಾಡಿದ್ದರು. ಜಿಲ್ಲಾಧಿಕಾರಿಯವರ ಒಂದೊಂದು‌ ಕಣ್ಣೀರ ಹನಿ ಅವನ‌ ಒಂದೊಂದು ವರ್ಷ ಆಯಸ್ಸು ಕಮ್ಮಿ ಆಗುತ್ತದೆ. ಈಗ ಮತ್ತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಸಿಎಸ್) ಬಗ್ಗೆ ಮಾತನಾಡಿದ್ದಾನೆ. ಅವನು ಕುಡಿದು ಮಾತನಾಡುತ್ತಾನೋ ಏನೋ? ಹೀಗೆ ಮಾತನಾಡುವವನು ತಾನು ಹುಟ್ಟಿರುವ ಜಾತಿಗೂ ಕೂಡಾ ಅವಮಾನ. ತಕ್ಷಣ ಅವನು ರಾಜೀನಾಮೆ‌‌ ಕೊಡಬೇಕು ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

- ತಿಪ್ಪಣ್ಣಪ್ಪ ಕಮಕನೂರ.
ವಿಧಾನ ಪರಿಷತ್ತ ಸದಸ್ಯ ಕಲಬುರಗಿ.
====================================
 ಸಚಿವ ಪ್ರಿಯಾಂಕ್ ಖರ್ಗೆ ರವರ ಸೇವೆ ಈ ಕ್ಷೇತ್ರಕ್ಕೆ ಸೀಮಿತವಾಗಿದೆ ಜಿಲ್ಲೆಯ ಪ್ರತಿ ತಾಲ್ಲೂಕಿಗೂ ವ್ಯಾಪಿಸಿದೆ ಅದರಲ್ಲೂ ಅಫಜಲಪೂರ ಪಟ್ಟಣಕ್ಕೆ 120 ಕೋಟಿ ರೂಪಾಯಿ ವೆಚ್ಚದ‌ ಕುಡಿಯುವ ನೀರಿನ ಯೋಜನೆ ಮಂಜೂರಾತಿಗಾಗಿ ಸಚಿವರ ಕೊಡುಗೆ ಬಹಳಷ್ಟಿದೆ ಎಂದರು.

- ಎಂ ವೈ ಪಾಟೀಲ್
ಶಾಸಕರು, ಅಫಜಲಪೂರ.

ಇದೇ ಸಂದರ್ಭದಲ್ಲಿ ಸಚಿವರು ಹಾಗೂ ಗಣ್ಯರು 517 ಫಲಾನುಭವಿಗಳಿಗೆ ಸೌಲಭ್ಯ ಪತ್ರಗಳನ್ನು ನೀಡಲಾಯಿತು.

ವೇದಿಕೆ ಮೇಲೆ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಅಫಜಲಪುರ ಶಾಸಕ ಎಂ ವೈ ಪಾಟೀಲ್, ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ವಿಧಾನ ಪರಿಷತ್ ಶಾಸಕರಾದ ಜಗದೇವ ಗುತ್ತೆದಾರ್, ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ್, ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಶ್ರೀಮತಿ ಅನ್ನಪೂರ್ಣ ಕಲ್ಲಕ್, ಶಿವಾನಂದ ಪಾಟೀಲ್ ಶ್ರೀನಿವಾಸ ಸಾಗರ, ಅಧಿಕಾರಿಗಳಾದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೊರು ಶ್ರೀನಿವಾಸುಲು, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರ, ಶಹಾಬಾದ ತಹಸೀಲ್ದಾರ್ ಜಗದೀಶ್, ಸೇಡಂ ತಹಸೀಲ್ದಾರ್ ಶ್ರೀಯಾಂಕ್ ಧನುಶ್ರೀ, ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಬಿಇಓ ಶಶಿಧರ ಬಿರಾದಾರ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ್ ಗುರಿಕಾರ್, ಕೃಷಿ ಇಲಾಖೆ ಅಧಿಕಾರಿ ಸಂಜೀವಕುಮಾರ್ ಮಾನಕರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೇತನ್ ಗುರಿಕಾರ್, ಸಿಡಿಪಿಓ ಆರತಿ ತುಪ್ಪದ್, ಬಿಸಿಎಂ ಅಧಿಕಾರಿ ಸುನಿತಾ, ತೋಟಗಾರಿಕೆ ಇಲಾಖೆ ಅಧಿಕಾರಿ ಶಂಕರಗೌಡ ಪಾಟೀಲ, ತಾಪಂ ಇಓ ಆಕ್ರಂ ಪಾಷಾ, ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್, ಗ್ರಾಮ ಆಡಳಿತ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಸುನೀಲ್ ಚವ್ಹಾಣ, ಬಸ್ ಘಟಕ ಅಧಿಕಾರಿ ಗೋಲಾಳಪ್ಪ ಬೀರಾದಾರ್, ಮುಖಂಡರಾದ ಅಜೀಜ್ ಸೇಟ್, ಶಿವರುದ್ರಪ್ಪ ಭೀಣ್ಣಿ, ಜಗಣ್ಣಗೌಡ ರಾಮತೀರ್ಥ, ಜಯಪ್ರಕಾಶ್‌ ಕಮಕನೂರ, ಸಿದ್ದುಗೌಡ ಅಫಜಲಪುರ, ಬಸವರಾಜ ಬಳೂಂಡಗಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ್ ಪಟೇಲ್, ಶೀಲಾ ಕಾಶಿ, ಮಹಿಮೂದ್ ಸಾಹೇಬ್, ವೀರಣ್ಣಗೌಡ ಪರಸರೆಡ್ಡಿ, ಸುನೀಲ್ ದೊಡ್ಡಮನಿ, ಮನ್ಸೂ‌ರ್ ಪಟೇಲ್, ನಾಗಯ್ಯ ಗುತ್ತೇದಾರ, ಶರಣಪ್ಪ ನಾಟೀಕಾರ, ಮಲ್ಲಪ್ಪ ಹೊಸಮನಿ, ಜಫಾರುಲ್ ಹಸನ್, ದೇವು ಯಾಬಾಳ, ಸಂಜಯ ಬುಳಕರ್‌ ಸೇರಿದಂತೆ ಮುಖಂಡರು ಮತ್ತು ತಾಲೂಕಿನ ಇತರೆ ಇಲಾಖೆಗಳ ಸಿಬ್ಬಂದಿಗಳು ಇದ್ದರು.

ಸೇಡಂ ಎಸಿ ಪ್ರಭು ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಶಂಕರ ಕಣ್ಣಿ ಸ್ವಾಗತಿಸಿದರು, ಸಂತೋಷ ಶಿರನಾಳ ನಿರೂಪಿಸಿದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...