ಗುರುವಾರ, ಆಗಸ್ಟ್ 17, 2023

ಸಚಿವರ ಮಾತಿಗೆ ಬೆಲೆ ಕೊಡದ ಅಬಕಾರಿ ಇಲಾಖೆ.


ಹಳ್ಳಿ-ಗಲ್ಲಿಗಳಲ್ಲಿ ಮದ್ಯ ದಂಧೆ ಜೋರು. 

ಚಿತ್ತಾಪುರ: ತಾಲೂಕಿನ ಬಹುತೇಕ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಬೇಕಾಬಿಟ್ಟಿ ಅಕ್ರಮ ಸರಾಯಿ ಮಾರಾಟ ಹಾಗೂ ಸಾಗಾಟ ಜೋರಾಗಿ ನಡೆಯುತ್ತಿದೆ. ಇದನ್ನೆಲ್ಲ ನೋಡಿದರೆ ಈ ಅಕ್ರಮ ಸರಾಯಿ ಮಾರಾಟಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿರುವುದು ಕಂಡುಬರುತ್ತಿದೆ. 
ಸಚಿವ ಪ್ರಿಯಾಂಕ್ ಖರ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ.

ಅಗಸ್ಟ್ 4ರಂದು ತಾಲ್ಲೂಕು ಪಂಚಾಯಿತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಿರಾಣ ಅಂಗಡಿಗಳಲ್ಲಿ ದಾಭಾಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅವಧಿಗೆ ಮೀರಿದ ಸಮಯದವರೆಗೆ ದಾಭಾಗಳು ತೆಗೆದಿರುತ್ತವೆ.‌ಈ ಬಗ್ಗೆ ಅಬಕಾರಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು ಬೇರೆ ಜಿಲ್ಲೆಯವರು ಎಷ್ಟಾದರೂ ಮದ್ಯ ಮಾರಾಟ ಮಾಡಲಿ, ಚಿತ್ತಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣ ಮಾರಾಟ ಮಾಡಲು ಅನುವು ಮಾಡಿಕೊಡಬೇಡಿ ಎಂದು 
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಬಕಾರಿ ಅಧಿಕಾರಿಗಳಿಗೆ ಹೇಳಿದರು ಅಬಕಾರಿ ಇಲಾಖೆ ಅಧಿಕಾರಿಗಳು ಸಚಿವರ ಮಾತಿಗೆ ಬೆಲೆ ಕೊಡದೆ ಅಕ್ರಮ ಸರಾಯಿ ಮಾರಾಟಕ್ಕೆ ಸಾಥ್ ನೀಡುವುದು ಕಂಡುಬರುತ್ತಿದೆ.
ಅಕ್ರಮ ಸರಾಯಿ ಮಾರಾಟಕ್ಕೆ ಅಧಿಕಾರಿಗಳ ಸಾಥ್.

ಪಟ್ಟಣದ  ಬಾರ್ ಗಳು, ವೈನ್‌ಶಾಪ್ ಮಳಿಗೆಗಳಿಂದ ಬೆಳಿಗ್ಗಿನ ಜಾವ 4/5 ಗಂಟೆಗೆ ಆಟೋಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ವ್ಯವಸ್ಥಿತ  ಸರಾಯಿ ಸಾಗಾಟ ಮಾಡುವ ಜಾಲ ಬೇರುಬಿಟ್ಟಿದೆ. ಮದ್ಯ ದಂಧೆ ಹೆಚ್ಚಳವಾಗಲು ಅಧಿಕಾರಿಗಳು ಮುಖ್ಯ ಕಾರಣ. ಅಧಿಕಾರಿಗಳ ಕಣ್ಣೆದುರಲ್ಲೇ ಈ ದಂಧೆ ನಡೆಯುತ್ತಿದ್ದರೂ, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಯಾವುದೇ ಕ್ರಮ ಕೈಗೊಳ್ಳದೆ ಪರೋಕ್ಷವಾಗಿ ಸಾರಾಯಿ ದಂಧೆ ಬೆಂಗಾವಲಾಗಿ ನಿಂತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚರವಹಿಸಿ ಮಾರಾಟಗಾರರ ಮೇಲೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವರೇ ಎಂಬ ಪ್ರಶ್ನೆ   ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಶುಕ್ರವಾರ, ಆಗಸ್ಟ್ 4, 2023

ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ-ಎಸ್ಟಿ ಅನುದಾನ ಬಳಕೆ ಬೇಡ: ಡಿವಿಪಿ.


ಚಿತ್ತಾಪೂರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲು ಇರುವ 11 ಸಾವಿರ ಕೋಟಿ ಅನುದಾನವನ್ನು ಬಳಕೆ ಮಾಡದೇ ಸಮುದಾಯದ ಅಭಿವೃದ್ಧಿಗೆ ಬಳಸುವಂತೆ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯರವರಿಗೆ ಬರೆದ ಮನವಿ ಪತ್ರವನ್ನು ಮಾನ್ಯ ತಹಶೀಲ್ದಾರ ರವರ ಮೂಲಕ ಸಲ್ಲಿಸಿದರು.

  ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಜಗದೇವ ಎಸ್ ಕುಂಬಾರ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಈ ಸಾಲಿನ ಅನುದಾನದಲ್ಲಿನ 11 ಸಾವಿರ ಕೋಟಿ ರೂಪಾಯಿ ಹಣವನ್ನು ಸರ್ಕಾರದ ಗ್ಯಾರಂಟಿ ಯೊಜನೆಗಳಿಗೆ ಬಳಸುತ್ತಿರುವುದನ್ನು ದಲಿತ ವಿದ್ಯಾರ್ಥಿ ಪರಿಷತ್ ವಿರೋಧಿಸುತ್ತದೆ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. 

  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಮೀಸಲಿರಬೇಕಾಗಿದ್ದ ಹಣವನ್ನು ಸರ್ಕಾರದ ಗ್ಯಾರಂಟಿ ಯೊಜನೆಗಳಿಗಾಗಿ ಬಳಸುತ್ತಿರುವುದನ್ನು ಖಂಡನೀಯ. ಶೋಷಿತ ಸಮುದಾಯಗಳ ಹಕ್ಕು ಕಿತ್ತುಕೊಂಡು, ತಮ್ಮ ಘೋಷಣೆ ಯೋಜನೆಗಳಿಗಾಗಿ ನಮ್ಮ ಹಣಬಳಸದೆ ಈ ಸಮುದಾಯಗಳ ವಿದ್ಯಾರ್ಥಿ ಯುವಜನರ ಹಾಗೂ ನಿರುದ್ಯೋಗ ಯುವಕರ, ಮಹಿಳೆಯರ ಮಕ್ಕಳ, ರೈತ ಕೂಲಿ ಕಾರ್ಮಿಕರ, ಒಟ್ಟಾರೆ ಈ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಒತ್ತಾಯಿಸುತ್ತದೆ ಎಂದರು.

  ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಸಂಚಾಲಕ ಪೃಥ್ವಿರಾಜ್ ಸಾಗರ, ಕುಮಾರ ಜಾಧವ್, ಶರಣು ದಂಡೋತಿ, ಸುನಿಲ್ ಜಿತುರೆ, ಸೇರಿದಂತೆ ಇತರರು ಇದ್ದರು.



ಸೋಮವಾರ, ಜೂನ್ 5, 2023

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಪಲ್ಲೇದ.

ಚಿತ್ತಾಪೂರ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಮಾತನ್ನು ನಾವು ಚಿಕ್ಕಂದಿನಿಂದಲೇ ಕೇಳಿರುತ್ತೇವೆ. ಮಾತ್ರವಲ್ಲದೆ ಅದರ ಮೇಲೆ ಪ್ರೀತಿ, ಕಾಳಜಿಯು ಮುಖ್ಯವಾಗಿರುತ್ತದೆ. ಅದಕ್ಕನುಗುಣವಾಗಿ ವಿಶ್ವ ಪರಿಸರ ದಿನವೆಂದು ಜೂನ್‌ 5ರಂದು ಆಚರಿಸುತ್ತೇವೆ. ಈ ಮಾತು ಕೇವಲ ಆ ದಿನಕ್ಕನುಗುಣವಾಗಿರದೆ ಪ್ರತಿ ದಿನ ಸಾಧ್ಯವಾಗದಿದ್ದರೆ ವಾರಕ್ಕೊಮ್ಮೆಯಾದರೂ ಸಸ್ಯದ ಪೋಷಣೆ ಮಾಡಿದರೆ ಆ ಗಿಡವೇ ಮುಂದಿನ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ ಎಸ್ ಪಲ್ಲೇದ ಹೇಳಿದರು.


ಪಟ್ಟಣದ ಹೊರ ವಲಯದ ಜ್ಞಾನ ಗಂಗಾ ಶಿಕ್ಷಣಾ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಇವರ ಸಂಯುಕ್ತಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ, ಪ್ಲಾಸ್ಟಿಕ್ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಿಮ್ಮ ನಿಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಮಾಡಿದ್ರೆ ನಮ್ಮ ಆರೋಗ್ಯ ಸುಚಿಯಾಗಿರುತ್ತದೆ. ಅಷ್ಟೇ ಅಲ್ಲದೇ ಸದೃಢ ಸಮಾಜ ನಿರ್ಮಾಣ ಮಾಡಲು ಸಾದ್ಯವಾಗುತ್ತದೆ ಎಂದರು.


ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮಾತನಾಡಿ
ಪರಿಸರ ಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ನಾವು ನಿರಂತರಾಗಿರಬೇಕು, ನಮ್ಮ ಸುತ್ತಲಿನ ಫಲವತ್ತಾದ ಮಣ್ಣು, ಸಗಣಿ, ಒಳಸಿಕೊಂಡು ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಕರೆ ನೀಡಿ. ಹುಟ್ಟಿದ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿರುವಂತೆ ಎಲ್ಲ ಪಶು–ಪಕ್ಷಿ, ಪ್ರಾಣಿ, ಮರ-ಗಿಡಗಳಿಗೂ ಇದೆ. ಇವೆಲ್ಲವೂ ಬದುಕಿದಾಗ ಮಾತ್ರ ನಾವು-ನೀವು ಎಲ್ಲರೂ ಜೀವಿಸಲು ಸಾಧ್ಯ. ಅರಣ್ಯದಲ್ಲಿರುವ ಆನೆ, ಹುಲಿ, ಚಿರತೆ ಇಂದಿನ ದಿನಗಳಲ್ಲಿ ಅಲ್ಲಲ್ಲಿ ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅರಣ್ಯ ನಾಶವೇ ಇದಕ್ಕೆ ಮೂಲ ಕಾರಣ. ಪ್ರಾಣಿ ಸಂಕುಲಗಳು ಅರಣ್ಯ ಬಿಟ್ಟು ಊರೊಳಗೆ ಬರುವುದು ಸಹಜ ಹೀಗಾಗಿ ಯಾರು ಭಯಪಡಬೇಡಿ ಇದಕ್ಕೆ ಪರ್ಯಾಯವಾಗಿ ಹೆಚ್ಚಿನ ಪ್ರಮಾಣ ಗಿಡ-ಮರಗಳು ಬೆಳಸುವ ಜೊತೆಗೆ ಅವುಗಳ ರಕ್ಷಣೆ ಆಗಬೇಕಾಗಿದೆ ಆದ್ದರಿಂದ ನಾವು ನಿವು ಎಲ್ಲರೂ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಜ್ಞಾನ ಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ ಹಂಚನಾಳ, ಸಿವಿಲ್ ನ್ಯಾಯಾಧೀಶರಾದ ಸಂತೋಷಕುಮಾರ ದೈವಜ್ಞ, ಶ್ರೀಮತಿ ಅಂಜನಾದೇವಿ ಆರ್, ಗಂಗಾಧರ ಸಾಲಿಮಠ, ವಲಯ ಅರಣ್ಯಾಧಿಕಾರಿ ವಿಜಯಕುಮಾರ,ಸತೀಶ ಮುಡಬೂಳಕರ,ಶಿವಾನಂದ ಅಂಬಿಗೇರ್,  ಅರಣ್ಯ ಸಿಬ್ಬಂದಿಗಳಾದ ಜಟ್ಟೆಪ್ಪ ಸಾರಿ, ಚಂದ್ರಹಾಸ ನಾಯಕ, ಮಂಜುನಾಥ ಹಂದ್ರಾಳ, ಗುರುರಾಜ, ಸಂತೋಷ ಕುಮಾರ, ಶಿಕ್ಷಣಾ ಸಂಸ್ಥೆಯ ಸಿಬ್ಬಂದಿಗಳಾದ ಶ್ರೀಮತಿ ಶೃತಿ, ಶ್ರೀಮತಿ ಪ್ರೀಯಾಂಕಾ, ಗುರು, ರಶ್ಮಿ, ಪ್ರಶಾಂತ, ಮಲ್ಲಣ್ಣಗೌಡ, ಸೇರಿದಂತೆ ಇತರರು ಇದ್ದರು.

ಭಾನುವಾರ, ಜೂನ್ 4, 2023

ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಿ: ಕಾಶಿನಾಥ ಗುತ್ತೇದಾರ್

ಚಿತ್ತಾಪುರ: ಗ್ರಂಥಾಲಯ ಜ್ಞಾನದ ಭಂಡಾರ ಇದ್ದಂತೆ ಹೀಗಾಗಿ ಯುವಕರು ಅಲ್ಲಿ ಇಲ್ಲಿ ಕುಳಿತುಕೊಂಡು ಹರಾಟೆ ಹೊಡೆದು ವ್ಯರ್ಥ ಸಮಯವನ್ನು ಕಳೆಯದೇ ಗ್ರಂಥಾಲಯಕ್ಕೆ ಭೇಟಿ ನೀಡಿ ವಿವಿಧ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.

  ಪಟ್ಟಣದ ಸ್ಟೇಷನ್ ತಾಂಡಾದ ಸೇವಾಲಾಲ್ ಮಂದಿರದ ಹತ್ತಿರ ತಾಂಡಾ ಅಭಿವೃದ್ದಿ ನಿಗಮದಿಂದ ಮಂಜೂರಾದ ನೂತನ ಗ್ರಂಥಾಲಯದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯಕವಾಗುವ ಪುಸ್ತಕಗಳು, ಭಾರತದ ಸಂವಿಧಾನ, ರಾಜಕೀಯ, ಇತಿಹಾಸ, ಅರ್ಥಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಸಾವಿರಾರು ಪುಸ್ತಕಗಳು ಒಂದೇ ಸ್ಥಳದಲ್ಲಿ ಸಂಗ್ರಹಿಸಿರುವ ಗ್ರಂಥಾಲಯಗಳು ಅಮೂಲ್ಯವಾದ ಜ್ಞಾನ ಭಂಡಾರ ಎಂದರು. ಪ್ರತಿಯೊಬ್ಬರು ತಮ್ಮ ಜ್ಞಾನದ ಹಸಿವನ್ನು ತೀರಿಸಿಕೊಳ್ಳಲು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಜತೆಗೆ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

  ದೇವರ ಮೂರ್ತಿ ಇರುವುದಕ್ಕೆ ಎಲ್ಲರೂ ದೇವಸ್ಥಾನ ಎಂದು ಭಾವಿಸಿದ್ದಾರೆ ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಗ್ರಂಥಾಲಯವನ್ನು ದೇವಸ್ಥಾನ ಎಂದು ಭಾವಿಸಿಕೊಂಡು ಜೀವನದ ಅತ್ಯಮೂಲ್ಯ ಸಮಯ ಗ್ರಂಥಾಲಯದಲ್ಲೇ ಕಳೆದಿದ್ದರಿಂದ ಇಂದು ಮಹಾನ್ ಜ್ಞಾನಿಯಾಗಿದ್ದಾರೆ ಎಂದು ಬಣ್ಣಿಸಿದರು. ತಾಂಡಾದಲ್ಲಿ ಉದ್ಘಾಟನೆಯಾದ ಗ್ರಂಥಾಲಯವನ್ನು ದೇವಸ್ಥಾನದಂತೆ ನೋಡಿಕೊಂಡು ಇದರ ಸದುಪಯೋಗ ಮಾಡಿಕೊಳ್ಳುವ ಮೂಲಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗ್ರಂಥಾಲಯಕ್ಕೆ ನಾನು ವಯಕ್ತಿಕವಾಗಿ ೫ ಸಾವಿರ ವೆಚ್ಚದ ವಿವಿಧ ಪುಸ್ತಕಗಳ್ನು ದೇಣಿಗೆಯಾಗಿ ನೀಡುತ್ತೇನೆ ಎಂದು ಗುತ್ತೇದಾರ ಹೇಳಿದರು.

 ಪುರಸಭೆ ಸದಸ್ಯ ಜಗದೀಶ ಚವ್ಹಾಣ್ ಇವತ್ತಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ.ಈ ಗ್ರಂಥಾಲಯ ತಾಂಡಾ ವಿದ್ಯಾರ್ಥಿಗಳ ಕಲಿಕೆಗೆ ಜನಸಾಮಾನ್ಯರ ಜ್ಞಾನಾಭಿವೃದ್ಧಿಗೆ ಉತ್ತಮ ಅವಕಾಶಕ್ಕೆ ಕಲ್ಪಿಸಿದಂತೆ ಆಗಿದೆ ಇದರಿಂದ ಪ್ರತಿಯೊಬ್ಬರು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

  ಉದ್ಘಾಟನೆ ನೆರವೇರಿಸಿದ ನಿಗಮದ ಜಿಲ್ಲಾ ಅಭಿವೃದ್ದಿ ಅಧಿಕಾರಿ ಸೂರ್ಯಕಾಂತ ರಾಠೋಡ ಮಾತನಾಡಿ, ಗ್ರಂಥಾಲಯಕ್ಕೆ ತಾಂಡಾ ಅಭಿವೃದ್ದಿ ನಿಗಮದಿಂದ ೧ಲಕ್ಷ ವೆಚ್ಚದಲ್ಲಿ ವಿವಿಧ ಸ್ಪರ್ಧಾತ್ಮಕ ಹಾಗೂ ಸಾಮಾನ್ಯ ಪುಸ್ತಕಗಳು ಹಾಗೂ ೧ ಲಕ್ಷ ವೆಚ್ಚದ ಪೀಠೋಪಕರಣಗಳು ಸೇರಿದಂತೆ ಒಟ್ಟು ೨ಲಕ್ಷ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವ ಮೂಲಕ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

  ಬಂಜಾರ ಸಮಾಜದ ಹಿರಿಯ ಮುಖಂಡ ತುಕಾರಾಮ್ ನಾಯಕ, ಗೋರ್ ಸೇನಾ ಜಿಲ್ಲಾಧ್ಯಕ್ಷ ಅಶ್ವಥ ರಾಠೋಡ, ಶಿವರಾಮ ಚವ್ಹಾಣ, ಬೊಮ್ಮು ಪವಾರ, ಶಿಕ್ಷಕರಾದ ಛತ್ರು ರಾಠೋಡ, ವಿಶ್ವನಾಥ ರಾಠೋಡ ಮಾತನಾಡಿದರು. ದೇವಿದಾಸ ನಾಯಕ, ತುಕಾರಾಮ ಪವಾರ, ಕಿರಣ ನಾಯಕ, ಲಕ್ಷ್ಮಣ ನಾಯಕ, ಆರ್.ಸಿ.ರಾಮನ್, ರವೀಂದ್ರ ನಾಯಕ, ಕುಮಾರ ಚವ್ಹಾಣ, ವಾಸು ರಾಠೋಡ, ಭೀಮಾ ನಾಯಕ, ಪಿಪಿನ್ ರಾಠೋಡ, ಅನೀಲ ಪವಾರ, ಆಕಾಶ ಚವ್ಹಾಣ, ಧರ್ಮು ಜಾಧವ, ಪ್ರಭುದಾಸ ರಾಠೋಡ, ಹೀರಾಬಾಯಿ ರಾಠೋಡ ಇತರರು ಇದ್ದರು. ಭೀಮಸಿಂಗ ಪವಾರ ಪ್ರಾರ್ಥಿಸಿದರು, ಜಗದೀಶ ಪವಾರ ನಿರೂಪಿಸಿ ವಂದಿಸಿದರು.

ಬುಧವಾರ, ಮೇ 31, 2023

ಪ್ರೀಯಾಂಕ್ ಖರ್ಗೆ ಸಚಿವ ಸ್ಥಾನಕ್ಕಾಗಿ ಹರಕೆ ಈಡೇರಿಸಿದ ಅಭಿಮಾನಿ.

ಚಿತ್ತಾಪೂರ: ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಿಯಾಂಕ್ ಖರ್ಗೆ ಗೆಲುವಿಗೆ ಹಾಗೂ ಸಚಿವ ಸ್ಥಾನಕ್ಕೆ ಹೇಳವನಕೇರಿ ಗ್ರಾಮದ ಅಭಿಮಾನಿ ಹಾಗೂ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಲಹ ಸಮಿತಿ ಸದಸ್ಯ ತಿಪ್ಪಣ್ಣ ರಾಮಣ್ಣ ಹೆಳವ ಅವರು ಮಂಗಳವಾರ ದೇವರಿಗೆ ಹರಕೆ ತಿರಿಸಿದ್ದಾರೆ.

ತೀವ್ರ ಜಿದ್ದಜಿದ್ದಿನ ಕ್ಷೇತ್ರವಾಗಿದ್ದ ಚಿತ್ತಾಪೂರ ಮತಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ಪಡೆದು ಗೆಲವು ಸಾಧಿಸಲೆಂದು ಹಾಗೂ ನೂತನ ಸರಕಾರದಲ್ಲಿ ಸಚಿವ ಸ್ಥಾನ ಸಿಗಲೆಂದು ಶ್ರೀ ನಾಗಾವಿ ಯಲ್ಲಮ್ಮ ದೇವಿ, ಯನಾಗುಂದಿ ಮಾತಾ ಮಣಿಕೇಶ್ವರಿ, ಯನಾಗುಂದಿ ಮೌಲಾಲಿ ಮುತ್ಯಾ, ಕಾನಕುರ್ತಿ ಶ್ರೀ ಯಲ್ಲಮ್ಮ ದೇವಿ, ಹಾಗೂ ಶ್ರೀ ಪರಶುರಾಮ ದೇವರಿಗೆ ಪ್ರತಿ ದೇವರಿಗೆ ಐದು ಟೆಂಗಿನಕಾಯಿ ಒಡಿಯುವ ಹರಿಕೆ ಮಾಡಿದ್ದರು.

ನೂತನ ಸರಕಾರದಲ್ಲಿ ಗ್ರಾಮೀಣ ಪಂಚಾಯತ ರಾಜಾ ಇಲಾಖೆ ಸಚಿವರಾಗಿದ್ದಕ್ಕೆ ಅಭಿಮಾನಿಯು ಖುಷಿಯಿಂದ ಮಂಗಳವಾರ ಎಲ್ಲಾ ದೇವರಿಗೆ ಭೇಟಿ ನೀಡಿ ದೇವರ ಹರಿಕೆ ತಿರಿಸಿದ್ದರು.





ಶುಕ್ರವಾರ, ಮೇ 19, 2023

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಮುಂದಿನ ಚುನಾವಣೆಯಲ್ಲಿ 50 ಸಾವಿರ ಮತಗಳಿಂದ ಬಿಜೆಪಿ ಗೆಲ್ಲಿಸುವೆ:ಮಣಿಕಂಠ

   ಚಿತ್ತಾಪುರ: ಕೆಲವು ಸಣ್ಣಪುಟ್ಟ ತಪ್ಪುಗಳಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸೋಲು ಉಂಟಾಗಿದೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನಗೆ ಟಿಕೇಟ್ ಸಿಗಲಿ ಅಥವಾ ಯಾರೇ ಅಭ್ಯರ್ಥಿಯಾಗಲಿ ಅವರ ಪರ ಶ್ರಮಿಸಿ 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು.

  ಪಟ್ಟಣದ ಬಾಪುರಾವ್ ಪಾಟೀಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ವಿಧಾನಸಭೆ ಚುನಾವಣೆ ನಿಮಿತ್ತ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ನನಗೆ ಸ್ವಲ್ಪ ಮಾರ್ಗದರ್ಶನ ಕೊರತೆ ಇತ್ತು ನಾನು ಎಲ್ಲರನ್ನೂ ತೆಗೆದುಕೊಂಡು ಹೋಗಲು ಆಗಲಿಲ್ಲ, ಎಲ್ಲ ಮುಖಂಡರನ್ನು ಹಾಗೂ ಕಾರ್ಯಕರ್ತರ ಸಮೀಪ ಹೋಗುವುದಕ್ಕೆ ಆಗಲಿಲ್ಲ ಆದರೂ ಪಕ್ಷದ ಮೇಲೆ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಕಾರ್ಯಕರ್ತರು ಹಗರಲಿರಳು ಶ್ರಮಿಸಿದ್ದರಿಂದ ೬೭ ಸಾವಿರಕ್ಕೂ ಅಧಿಕ ಮತಗಳು ಬಂದಿವೆ ಇದೊಂದು ದೊಡ್ಡ ಸಾಧನೆ ಈ ಮೂಲಕ ಚಿತ್ತಾಪುರದಲ್ಲಿ ಕಾರ್ಯಕರ್ತರೇ ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದಾರೆ ಎಂಬುದು ತೋರಿಸಿಕೊಟ್ಟಿದ್ದಾರೆ ಎಂದರು.

  ಕಾರ್ಯಕರ್ತರು ಯಾರೂ ಎದೆಗುಂದದೇ ನಿಮ್ಮ ಜೊತೆ ನಾನು ಇದ್ದೇನೆ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು, ಈ ನಿಟ್ಟಿನಲ್ಲಿ ಬರುವ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವಂತೆ ಈಗಿನಿಂದಲೇ ಕಾರ್ಯಪ್ರವೃತರಾಗಿ ಎಂದು ಕರೆ ನೀಡಿದರು.

  ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಎಮ್ಮೆನೋರ, ಚಂದ್ರಶೇಖರ ಅವಂಟಿ, ಸೋಮಶೇಖರ ಪಾಟೀಲ ಬೆಳಗುಂಪಾ, ಬಸವರಾಜ ಬೆಣ್ಣೂರಕರ್,ನಾಗರಾಜ ಭಂಕಲಗಿ ಅವರು ಮಾತನಾಡಿ,ಚುನಾವಣೆಯಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳಿಂದ ನಮಗೆ ಸೋಲಾಗಿದೆ ಬರುವ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಪಕ್ಷದ ಸಂಘಟನೆಯಲ್ಲಿ ತೊಡಗಿ ಮತ್ತೇ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.

   ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ತೊಗರಿ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಮುಖಂಡರಾದ ವಿಠಲ್ ನಾಯಕ, ಶಶಿಧರ ಸೂಗುರ, ಧರ್ಮಣ್ಣ ಇಟಗಾ, ಬಸವರಾಜ ಬೆಣ್ಣೂರಕರ್, ಮಲ್ಲಿಕಾರ್ಜುನ ಪೂಜಾರಿ, ನಾಗುಬಾಯಿ ಜಿತುರೆ, ಆನಂದ ಪಾಟೀಲ ನರಬೋಳ, ಶರಣಗೌಡ ಪಾಟೀಲ ಭೀಮನಳ್ಳಿ, ಗುಂಡಣ್ಣ ಬಾಳಿ, ರವೀಂದ್ರ ಸಜ್ಜನಶೆಟ್ಟಿ, ಪೋಮು ರಾಠೋಡ, ಶಂಕರ ಚವ್ಹಾಣ, ಭೀಮರೆಡ್ಡಿ ಕುರಾಳ, ಮಹೇಂದ್ರ ಕೋರಿ, ಅಣ್ಣಾರಾವ ಬಾಳಿ, ಶ್ರೀಕಾಂತ ಸುಲೇಗಾಂವ ಇತರರು ಇದ್ದರು. ರಾಮದಾಸ ಚವ್ಹಾಣ ನಿರೂಪಿಸಿದರು, ನಾಗರಾಜ ಹೂಗಾರ ವಂದಿಸಿದರು.

ಶನಿವಾರ, ಮೇ 13, 2023

ಪ್ರಿಯಾಂಕ್ ಖರ್ಗೆ ಹ್ಯಾಟ್ರಿಕ್ ಗೆಲುವು.

ಚಿತ್ತಾಪೂರ: ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಭರ್ಜರಿ ಜಯಭೇರಿಯೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 

ಪ್ರಿಯಾಂಕ್ ಖರ್ಗೆ ಅವರು 13640 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರನ್ನು ಮಣಿಸಿದ್ದಾರೆ. ಪ್ರಿಯಾಂಕ್ ಅವರಿಗೆ 81,323 ಮತಗಳು ದೊರಕಿದ್ದರೆ, ಅವರ ನೇರ ಎದುರಾಳಿ ಮಣಿಕಂಠ 67,683 ಮತಗಳನ್ನು ಪಡೆದಿದ್ದಾರೆ. ಇವರಿಬ್ಬರ ಮಧ್ಯೆಯೇ ತೀವ್ರ ಪೈಪೋಟಿ ನಡೆಸಿದ್ದು, ಕ್ಷೇತ್ರದಲ್ಲಿದ್ದ ಇತರೆ ಯಾವ ಅಭ್ಯರ್ಥಿಯೂ ಸಾವಿರ ಮತಗಳ ಗಡಿ ದಾಟುವುದಕ್ಕೂ ಸಾಧ್ಯವಾಗಿಲ್ಲ. ಒಟ್ಟು 1,53,195 ಮತಗಳು ಚಲಾವಣೆಯಾಗಿದೆ. 962 ಮತಗಳನ್ನು ಪಡೆದ ಆಮ್ ಆದ್ಮಿ ಪಕ್ಷದ ಜಗದೀಶ್ ಎಸ್ ಸಾಗರ್ ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಶರಣು ಸೂಗುರ 878 ಮತಗಳು, ಜೆಡಿಎಸ್ ಅಭ್ಯರ್ಥಿ ಡಾ. ಸುಭಾಶ್ಚಂದ್ರ ರಾಠೋಡ್ 643 ಮತಗಳು, ಕೆಆರ್ ಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಪೂಜಾರಿ 485 ಮತಗಳು, ಸ್ವತಂತ್ರ ಅಭ್ಯರ್ಥಿ ರಾಜು ಹುದನೂರ 505 ಮತಗಳು ಪಡೆದಿದ್ದಾರೆ.
ಇನ್ನು ನೋಟಾಕ್ಕೆ 816 ಮತಗಳು ಬಿದ್ದಿವೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೈ ಅನ್ನುವ ಜಯ ಘೋಷಗಳು ಕೇಳಿ ಬಂದವು. ಸರ್ವ ಕಾಂಗ್ರೆಸ್ ಕಾರ್ಯಕರ್ತರು ಜಯ ಘೋಷಗಳೊಂದಿಗೆ ಗುಲಾಲ್ ಎರಚಿ ಸಂತಸ  ಪಡುತ್ತಿದ್ದಾರೆ.

ಬಿಜೆಪಿಯವರು ಚಿತ್ತಾಪುರ ಜನತೆಗೆ ಇಷ್ಟ ಇಲ್ಲದಿದ್ದರೂ ರೌಡಿಶೀಟರ್ ನಲ್ಲಿ ಹೆಸರಿದ್ದ ಮಣಿಕಂಠ ರಾಠೋಡ ಅವರನ್ನು ಕಣಕ್ಕಿಳಿಸಿದರು. ಅವರ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಚಾರ ನಡೆಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಅಂತೂ ಸತ್ಯಕ್ಕೆ ಜಯವಾಗಿದೆ ಎಂದರು.
                    - ಪ್ರಿಯಾಂಕ್ ಖರ್ಗೆ
                ಶಾಸಕರು, ಮತಕ್ಷೇತ್ರ ಚಿತ್ತಾಪೂರ.

ಭಾನುವಾರ, ಮೇ 7, 2023

ದಾದಾಗಿರಿಗೆ ಅಂಜುವ ಮೊಮ್ಮಗ ನಾನಲ್ಲ: ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ದಾದಾಗಿರಿ ಶುರು ಮಾಡಿದರೆ ಕಾಂಗ್ರೆಸ್ ನವರು ಹೊರಗಡೆ ಬರುವುದಕ್ಕೆ ಆಗುವುದಿಲ್ಲ ಅಂತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳುತ್ತಾನೆ.  ಎಂಎಲ್ಎ ಚುನಾವಣೆಗೆ ನಿಲ್ಲುವುದಕ್ಕೆ ಬಂದಿದ್ದಾನಾ? ಅಥವಾ ದಾದಾಗಿರಿ‌‌ ಮಾಡುವುದಕ್ಕೆ ಬಂದಿದ್ದಾನಾ? ಅವನು ದಾದಾಗಿರಿ ಮಾಡಿದರೆ ಚಿತ್ತಾಪುರದ ಮೊಮ್ಮಗ ನಾನು ಸುಮ್ಮನೆ ಕೂತಿರುತ್ತೇನಾ ? ಎಂದು ಕಾಂಗ್ರೆಸ್ ಅಭ್ಯರ್ಥಿ  ಪ್ರಿಯಾಂಕ್ ಖರ್ಗೆ ಮಾರುತ್ತರ ನೀಡಿದರು.

ತಾಲ್ಲೂಕಿನ ಮಹಾನಗರ ತಾಂಡಾ, ಮುಗಳನಾಗಂವ್, ಬೆಣ್ಣೋರ, ಸಂಗಾವಿ, ಪೇಠಶಿರೂರು, ಕಾಟಮದೇವರ ಹಳ್ಳಿ, ಬೆಳಗುಂಪಾ, ಇವಣಿ,ಭಾಗೋಡಿ, ಕದ್ದರ್ಗಿ, ಜೀವಣಗಿ, ಗ್ರಾಮದಲ್ಲಿ ನಡೆದ‌ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು ನಾನು ಈ ತಾಲೂಕಿನ ಮೊಮ್ಮಗ ನಮ್ಮ ಜನರ ಕಷ್ಟ ಸುಖಗಳ ಅರಿವು ನನಗಿದೆ. ಎಲ್ಲಿಂದಲೋ ಬಂದವರು ದಾದಾಗಿರಿ ಮಾಡಿದರೆ ನಾನು ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದರು.

ಮಣಿಕಂಠ ಯಾರು ಅಂತ ನನಗೆ ಗೊತ್ತಿರಲಿಲ್ಲ. ಅವನು ನನಗೆ ಶೂಟ್ ಮಾಡುತ್ತೇನೆ ಎಂದು ಹೇಳಿದಾಗಲೇ ಅವನ ಬಗ್ಗೆ ಗೊತ್ತಾಗಿದ್ದು. " ಅಲ್ಲಪ್ಪ ನನಗೆ ಶೂಟ್ ಮಾಡುವುದಕ್ಕೆ ನಿಮ್ಮಪ್ಪನ ಗಂಟು ಏನಾದರೂ ತಿಂದಿದ್ದೇನಾ ? ಅಥವಾ ನಿನ್ನ ಗಂಟು ತಿಂದಿದ್ದೇನಾ? ಅಸಲಿಗೆ ನಿನ್ನ ಗಂಟು ಬೇಡ. ಯಾಕೆಂದರೆ ಅದು ಪಾಪದ‌ ದುಡ್ಡು ಎಂದು ತೀಕ್ಷ್ಣವಾಗಿ ಹೇಳಿದರು.

ಮಣಿಕಂಠನನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ನಂತರ ಪ್ರಬುದ್ದತೆಯ ಸಂಕೇತವಾದ ಚಿತ್ತಾಪುರ ಮರ್ಯಾದೆಗೆ ರಾಜ್ಯ ಮಟ್ಟದಲ್ಲಿ ಧಕ್ಕೆಯಾಗಿದೆ. ಕಾನೂನು ಬಾಹಿರವಾಗಿ ಅಕ್ಕಿ ಹಾಗೂ ಹಾಲಿನ ಪುಡಿ ಸಾಗಾಣಿಕೆ ಮಾಡುವ ವ್ಯಕ್ತಿಯನ್ನು ಬಿಜೆಪಿಯವರು ತಮ್ಮ ನಾಯಕ ಎಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಬಂದಿರುವುದೇ ದುರಂತ ಎಂದರು.

ಈ ಸಲದ ಚುನಾವಣೆಯಲ್ಲಿ ನನಗೆ ಹೆಚ್ಚಿನ ಬಹುಮತದಿಂದ ಆರಿಸಿ ತರುವ ಮೂಲಕ ನಿಮ್ಮ ಸೇವೆ ಮಾಡಲು ಅನುಕೂಲ ಮಾಡಿಕೊಡಿ ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಶಾಸಕ ವಿಶ್ವಜಿತ್ ಕದಂ, ಬೀಮಣ್ಣ ಸಾಲಿ, ನಾಗರೆಡ್ಡಿಗೌಡ ಪಾಟೀಲ, ರಮೇಶ ಮರಗೋಳ, ಸಿದ್ದುಗೌಡ ಪಾಟೀಲ್, ಪ್ರಭು ಕುಂಬಾರ, ಪ್ರದೀಪ ಪೂಜಾರಿ, ದೇವಿಂದ್ರ ಗುಡ್ಡಪೂರ, ದಶರಥ ಕದ್ದರ್ಗಿ, ದೇವಿಂದ್ರ ಭಾಗೋಡಿ, ವಿಶ್ವನಾಥ ರೆಡ್ಡಿ ಯರಗಲ್, ಸೇರಿದಂತೆ ಇತರರು ಇದ್ದರು.

ಅಕ್ರಮದಲ್ಲಿ ತೊಡಗುವವರಿಗೆ ಜೈಲು‌ಭಾಗ್ಯ: ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ನಾನು ಗೆದ್ದು ಬಂದ ಮೇಲೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದವರಿಗೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗವವರಿಗೆ ಜೈಲ್ ಗೆ ಕಳಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅಬ್ಬರಿಸಿದರು‌.

ತಾಲ್ಲೂಕಿನ ಮಲಗಾಣ, ಕಣಸೂರ, ಅಶೋಕ ನಗರದಲ್ಲಿ ಚುನಾವಣೆಯ ಪ್ರಚಾರ ಸಭೆ ಕುರಿತು ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾನೆ. ನಿಮಗೆ ಶಿಕ್ಷಣ, ಉದ್ಯೋಗ ಹಾಗೂ ನೆಮ್ಮದಿಯ ಜೀವನ ಬೇಕಾದರೆ ನನಗೆ ಮತನೀಡಿ. ಢಾಬಾ, ಜೈಲು ಹಾಗೂ ಬೇಲು ಅಂತ ಅಲೆದಾಡಬೇಕಾದರೆ ಮಣಿಕಂಠನಿಗೆ ಮತ ಹಾಕಿ ಎಂದರು.
ಖರ್ಗೆ ಹಾಗೂ ಕುಟುಂಬವನ್ನು ಸಾಫ್ ಮಾಡುತ್ತೇನೆ ಅಂತ ಅವನು ಹೇಳಿದ ಅಡಿಯೋ ವೈರಲ್ ಆಗಿದೆ. ನಮಗೆ ಸಾಫ್ ಮಾಡಲು ಬಂದರೆ ನನ್ನ ಕ್ಷೇತ್ರದ ಜನರು ಸುಮ್ಮನೆ ಇರುತ್ತೀರಾ ? ಎಂದು ಪ್ರಶ್ನಿಸಿದರು. ನಾನು ದಾದಾಗಿರಿ ಮಾಡಲು ಶುರು ಮಾಡಿದರೆ ಕಾಂಗ್ರೆಸ್ ನವರು ಮನೆಯಿಂದ ಹೊರಗೆ ಬರಲು ಆಗುವುದಿಲ್ಲ ಅಂತ ಮರಗೋಳದಲ್ಲಿ ಹೇಳಿದ್ದಾನಂತೆ, ಆ ಪಾರನಿಗೆ ಗೊತ್ತಿರಲಿ ಚಿತ್ತಾಪುರದ ಈ ಮೊಮ್ಮಗ‌ ಇನ್ನೂ ‌ಜೀವಂತವಾಗಿದ್ದಾನೆ  ಎಂದು ಟಕ್ಕರ್ ಕೊಟ್ಟರು.

ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ್, ಸುನೀಲ ದೊಡ್ಮನಿ, ಪ್ರವೀಣ ನಾಮದಾರ್, ಶಂಭುಲಿಂಗ ಗುಂಡಗುರ್ತಿ, ಶರಣಗೌಡ, ಸುಧಾಕರ ಪಾಟೀಲ್, ಆನಂದ ಹೊಸಮನಿ, ಪೃಥ್ವಿ ನಾಮದಾರ್, ಸೇರಿದಂತೆ ಇತರರು ಇದ್ದರು.

ಕ್ಷೇತ್ರವ್ಯಾಪ್ತಿಯಲ್ಲಿ ಮಣಿಕಂಠ ರಾಠೋಡ ಬಿರುಸಿನ ಪ್ರಚಾರ.

ಚಿತ್ತಾಪೂರ: ಮೀಸಲು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅಇವರು  ಪಟ್ಟಣದ 23 ವಾರ್ಡ್ ಗಳ ಮನೆ ಮನೆಗೆ ಹೋಗಿ ಮತ ಕೇಳುವ ಮೂಲಕ ಬಿರುಸಿನ ಪ್ರಚಾರ ನಡೆಸಿದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ತಾಲೂಕಿನಲ್ಲಿ ಸಾಕಾಷ್ಟು ಅಭಿವೃದ್ಧಿಗೆ ಸಾದ್ಯವಾಗುತ್ತದೆ. ನಾನು ನಿಮ್ಮ ಮನೆಯ ಮಗನಾಗಿ ನಿಮ್ಮೆಲ್ಲರ ಸೇವೆ ಮಾಡುವ ಭಾಗ್ಯ ನನ್ನಗೆ ಒದಗಿ ಬಂದಿದೆ. ಹೀಗಾಗಿ ಮೇ,10ಕ್ಕೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ನನ್ನಗೆ ಗೆಲ್ಲಿಸಿ ಎಂದು ಮತದಾರರಲ್ಲಿ ಕೈ ಮುಗಿದು ಬೇಡಿಕೊಂಡರು.

ಯಾವುದೇ ಪ್ರತಿಫಲಾ ಪೇಕ್ಷೆ ಇಲ್ಲದೆ ಕಾರ್ಯಕರ್ತರು ಪಣತೊಟ್ಟು ಮನೆಮನೆಗೂ ಪ್ರಚಾರದಲ್ಲಿ ತೊಡಗಿದ್ದಾರೆ. ಕಾರ್ಯಕರ್ತರ ಪ್ರೀತಿಗೆ ಚಿರಋಣಿ ಎಂದು ಹೇಳಿದರು.

ಕೇಂದ್ರದಿಂದ ಬಿಡುಗಡೆಯಾಗುವ ಒಂದು ಪೈಸೆ ಹಣವೂ ನಿರ್ದಿಷ್ಟ ಫಲಾನುಭವಿ ಯನ್ನು ತಲುಪಲು ಹಾಗೂ ನಿರ್ದಿಷ್ಟ ಯೋಜನೆಗೆ ಬಳಕೆ ಯಾಗಲು ಡಬಲ್‌ ಎಂಜಿನ್ ಸರ್ಕಾರ ಮುಖ್ಯ. ನಾಲ್ಕು ವರ್ಷಗಳ ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಇದು ಸಾಬೀತಾಗಿದೆ

ಬಿಜೆಪಿಯ ಜನಕಲ್ಯಾಣ ಕಾರ್ಯಕ್ರಮಗಳೇ ಗೆಲುವಿಗೆ ಸ್ಪೂರ್ತಿಯಾಗಿದ್ದು, ಜನರ ಬದುಕು ಸುಧಾರಣೆಯತ್ತ ಸಾಗುತ್ತಿದೆ. ಸಮೃದ್ಧ ಕರ್ನಾಟಕ ಪ್ರತಿ ನಿರ್ಮಾಣಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಾಗರಾಜ ಬಂಕಲಗಿ, ಮಲ್ಲಿಕಾರ್ಜುನ ಎಮ್ಮೆನೋರ, ಪ್ರಭು ಗಂಗಾಣಿ, ಕೋಟೇಶ್ವರ ರೇಷ್ಮೆ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಪೂಜಾರಿ, ಸೇರಿದಂತೆ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾಗಿದ್ದರು.

ಶುಕ್ರವಾರ, ಮೇ 5, 2023

ಶಿಕ್ಷಣ,ಉದ್ಯೋಗಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಪ್ರಿಯಾಂಕ್ ಖರ್ಗೆ.

ಚಿತ್ತಾಪೂರ: ಕ್ಷೇತ್ರದ ಜನತೆಗೆ ಒಳ್ಳೆಯ ಶಿಕ್ಷಣ ಹಾಗೂ ಉದ್ಯೋಗ ಸೀಗಬೇಕಾದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಹೇಳಿದರು.

ತಾಲ್ಲೂಕಿನ ತೋನಸನಳ್ಳಿ, ಮಲಕೂಡ, ಮರಗೋಳ, ಮುಡಬೂಳ, ಮೋಗಲಿ,
ದಂಡೋತಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಿಂದೆ ಹೋದರೆ‌ ಜೈಲು‌ ಹಾಗೂ ಬೇಲು ಗ್ಯಾರಂಟಿ ಜನರಿಗೆ ತಿಳಿ ಹೇಳಿದರು.

ಬಿಜೆಪಿಗರು ಮೋದಿ ಫೋಟೋ ತೋರಿಸಿ ಕಳ್ಳನಿಗೆ ಟಿಕೆಟ್ ಕೊಟ್ಟರೆ ಆರಿಸಿ ಕಳಿಸಲು ಚಿತ್ತಾಪುರದ ಪ್ರಬುದ್ಧ ಮತದಾರರು ಮತ ಹಾಕುತ್ತಾರೆಯೇ? ಎಂದು ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನಿಗೆ ಚುನಾವಣೆಯಲ್ಲಿ ಅಪ್ಪಿತಪ್ಪಿ ಗೆಲ್ಲಿಸಿದರೆ ಅಂಗನವಾಡಿಗೆ ಹೋಗುವ ಮಕ್ಕಳಿಗೆ ಹಾಲು ಸಿಗಲ್ಲ. ಯಾಕೆಂದರೆ, ಅವನು ಅಕ್ರಮವಾಗಿ ಹಾಲಿನಪುಡಿ ಸಾಗಾಣಿಕೆ ಮಾಡಿದ್ದಕ್ಕೆ ಯಾದಗಿರಿ ಕೋರ್ಟ್ ಶಿಕ್ಷೆ ನೀಡಿದೆ. ಅವನ ವಿರುದ್ದ ತೆಲಂಗಾಣ, ಆಂಧ್ರ,‌ಕರ್ನಾಟಕ ಹಾಗೂ ಮಹಾರಾಷ್ಟ್ರ ಹೀಗೆ ನಾಲ್ಕು ರಾಜ್ಯದ ಆರು ಜಿಲ್ಲೆಗಳಲ್ಲಿ ಅಕ್ರಮ ಅಕ್ಕಿ ಸಾಗಾಣಿಕೆ ಮಾಡಿದಕ್ಕೆ ಒಟ್ಟು 40 ಕೇಸುಗಳಿವೆ. ಹೀಗಾಗಿ ಅವನು ಕೇವಲ ರಾಜ್ಯದ ಫಿಗರ್ ಅಲ್ಲ ದಕ್ಷಿಣ ಭಾರತದ ಫಿಗರ್ ಆಗಿದ್ದಾನೆ ಎಂದು ವ್ಯಂಗ್ಯಮಾಡಿದರು.

ನನಗೆ ನೀವು ಹೇಗೆ ಆಶೀರ್ವಾದ ಮಾಡಬೇಕೆಂದರೆ ಮತ್ತೊಮ್ಮೆ ಬಿಜೆಪಿಗೆ ಚಿತ್ತಾಪುರದಲ್ಲಿ ಅಭ್ಯರ್ಥಿಗೆ ಮತ ಹಾಕಿರಬಾರದು ಎಂದು ಜನತೆಯಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ,ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಬೀಮಣ್ಣ ಸಾಲಿ, ನಾಗರೆಡ್ಡಿಗೌಡ ಪಾಟೀಲ, ರಾಜಶೇಖರ ತಿಮ್ಮನಾಯಕ, ತೆಲಂಗಾಣದ ಸುಜಾತ, ಶರಣಪ್ಪ ನಾಟೀಕಾರ್, ರಾಮಲಿಂಗ ಬಾನರ್, ಸಾಬಣ್ಣ ಡಿಗ್ಗಿ, ಬಸವರಾಜ ಚಿಮ್ಮನ್ನಳ್ಳಿ, ಗುಂಡು ಐನಾಪುರ, ಶರಣು ಡೋಣಗಾಂವ್, ರಮೇಶ ಕವಡೆ, ಸೇರಿದಂತೆ ಇತರರು ಇದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...