ಗುರುವಾರ, ಫೆಬ್ರವರಿ 26, 2026

ಮಲ್ಲಿಕಾರ್ಜುನ ಮುತ್ಯಾ ಮೇಲಿನ ಆರೋಪ: ಪಿತೂರಿ ವಿರುದ್ಧ ಆಕಾಶ ಬೆನಕನಳ್ಳಿ ಆಕ್ರೋಶ.

​ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಸತ್ಯಕ್ಕೆ ದೂರವಾಗಿದ್ದು, ಇದು ಕೇವಲ  ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪಿತೂರಿಯಾಗಿದೆ ಎಂದು ಮುತ್ಯಾ ರವರ ಭಕ್ತರು ಹಾಗೂ ಕೋಲಿ ಸಮಾಜದ ಯುವ ಮುಖಂಡರಾದ ಆಕಾಶ ಬೆನಕನಳ್ಳಿ ಹೇಳಿಕೆ ನೀಡಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು​ಸಂಬಂಧಿಕರ ವಿಡಿಯೋ ದುರುಪಯೋಗ
​ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾದ ವಿಡಿಯೋವು ಮಲ್ಲಿಕಾರ್ಜುನ ಮುತ್ಯಾ ಅವರ ಹತ್ತಿರದ ಸಂಬಂಧಿ ಬಾಲಕಿಯದ್ದಾಗಿದ್ದು, ಅದು ಬಹಳ ಹಳೆಯದಾಗಿದೆ. ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳನ್ನು ಬೀದಿಗೆ ತಂದು, ವಿಡಿಯೋವನ್ನು ತಪ್ಪಾಗಿ ಬಿಂಬಿಸಿ ವೈರಲ್ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ. ಮುತ್ಯಾ ಅವರು ಯಾವುದೇ ಅಶಿಸ್ತಿನ ಅಥವಾ ಕಾನೂನು ಬಾಹಿರ ಕೃತ್ಯ ಎಸಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

​ "ಮಲ್ಲಿಕಾರ್ಜುನ ಮುತ್ಯಾ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅವರ ಭಕ್ತ ಸಮೂಹ ದೊಡ್ಡದಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡಿ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಖಂಡನೀಯ. ಈ ಪಿತೂರಿಯ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಿದೆ," ಎಂದು ಆಗ್ರಹಿಸಿದರು.

​"ಭಕ್ತಾದಿಗಳು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಅಥವಾ ಆತಂಕಕ್ಕೆ ಒಳಗಾಗಬಾರದು. ಸಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮ ಆದ್ಯತೆ. ಸತ್ಯಕ್ಕೆ ಜಯ ಸಿಗಲಿದೆ ಎಂಬ ನಂಬಿಕೆ ನಮಗಿದೆ. ಭಕ್ತರಲ್ಲಿ ಒಳ್ಳೆಯ ಸಂದೇಶವಿರಲಿ, ವದಂತಿಗಳಿಗೆ ಯಾರೂ ಕಿವಿಗೊಡಬೇಡಿ," ಎಂದು ಆಕಾಶ ಬೆನಕನಳ್ಳಿ ಮನವಿ ಮಾಡಿದ್ದಾರೆ.

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ: ಪಿತೂರಿಯ ಶಂಕೆ ವ್ಯಕ್ತಪಡಿಸಿದ ಬಸವರಾಜ ಮೈನಾಳಕರ್.

ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಒಂದು ವ್ಯವಸ್ಥಿತ ಪಿತೂರಿಯ ಭಾಗವಾಗಿದೆ ಎಂದು ಕೋಲಿ ಸಮಾಜದ ನಗರ ಅಧ್ಯಕ್ಷರು ಹಾಗೂ ಮುತ್ಯಾ ಅವರ ಪರಮ ಭಕ್ತರಾದ ಬಸವರಾಜ ಮೈನಾಳಕರ್ ತಿಳಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ​ವೈರಲ್ ವಿಡಿಯೋ ಹಳೆಯದು ಮತ್ತು ಕೌಟುಂಬಿಕ ​ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಇತ್ತೀಚಿನದ್ದಲ್ಲ, ಅದು ಹಳೆಯ ವಿಡಿಯೋ ಆಗಿದೆ. ಆ ವಿಡಿಯೋದಲ್ಲಿರುವ ಬಾಲಕಿ ಮುತ್ಯಾ ಅವರ ಹತ್ತಿರದ ಸಂಬಂಧಿಯಾಗಿದ್ದಾಳೆ. ಕೇವಲ ಕೌಟುಂಬಿಕ ಭಿನ್ನಾಭಿಪ್ರಾಯ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆಲವರು ಈ ವಿಡಿಯೋವನ್ನು ದುರುದ್ದೇಶಪೂರ್ವಕವಾಗಿ ವೈರಲ್ ಮಾಡಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಈ ರೀತಿ ಮಾಡಲಾಗಿದೆ ಎಂದು ಅವರು ದೂರಿದ್ದಾರೆ.

​"ಮಲ್ಲಿಕಾರ್ಜುನ ಮುತ್ಯಾ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧ ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗುತ್ತಿದೆ. ಘಟನೆಯ ಹಿಂದೆ ಕೌಟುಂಬಿಕ ಕಲಹಗಳು ಇರುವ ಸಾಧ್ಯತೆಯಿದ್ದು, ಸತ್ಯಾಸತ್ಯತೆ ತಿಳಿಯುವ ಮೊದಲೇ ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ," ಎಂದು ಮೈನಾಳಕರ್ ಅಭಿಪ್ರಾಯಪಟ್ಟಿದ್ದಾರೆ.

​ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು. ಸಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಕಾನೂನಿನ ಮೇಲೆ ನಂಬಿಕೆಯಿರಲಿ, ಸತ್ಯವು ಶೀಘ್ರದಲ್ಲೇ ಹೊರಬರಲಿದೆ ಎಂದು ಅವರು ಭಕ್ತ ಸಮೂಹಕ್ಕೆ ಧೈರ್ಯ ತುಂಬಿದ್ದಾರೆ.

​"ಮುತ್ಯಾ ಅವರ ಮೇಲಿನ ಭಕ್ತಿ ಅಚಲವಾಗಿರಲಿ. ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಶಾಂತಿಯಿಂದ ಇರೋಣ. ಒಳ್ಳೆಯ ಸಂದೇಶ ಸಮಾಜಕ್ಕೆ ತಲುಪಲಿ ಎಂಬುದು ನಮ್ಮ ಆಶಯ."

— ಬಸವರಾಜ ಮೈನಾಳಕರ್, ನಗರ ಅಧ್ಯಕ್ಷರು, ಕೋಲಿ ಸಮಾಜ ಚಿತ್ತಾಪುರ.

ಶನಿವಾರ, ಫೆಬ್ರವರಿ 21, 2026

ಸೂಲಹಳ್ಳಿಯಲ್ಲಿ ಅಕ್ರಮ ಡ್ರಿಲಿಂಗ್: ಜಗದೀಶ್ ಸಾಗರ ಆಕ್ರೋಶ.

ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಅವರಿಗೆ ಯಾವುದೇ ಮಾಹಿತಿ ನೀಡದೆ, ರಾತೋರಾತ್ರಿ ಅಕ್ರಮವಾಗಿ ಸುಣ್ಣದ ಕಲ್ಲು ಪತ್ತೆಗಾಗಿ ಡ್ರಿಲಿಂಗ್ ನಡೆಸುತ್ತಿರುವ RP GEO MINING SOLUTIONS ಕಂಪನಿಯ ವಿರುದ್ಧ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಕಾರ್ಮಿಕ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಸಾಗರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿಗಳು ಅಥವಾ ತಹಸೀಲ್ದಾರರಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಂಪನಿಯು ಸುಣ್ಣದ ಕಲ್ಲಿನ ಡ್ರಿಲಿಂಗ್ ನಡೆಸುತ್ತಿದೆ, 2022ರಲ್ಲಿಯೇ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರೈತರ ಗಮನಕ್ಕೆ ತರದೆ ಜಮೀನುಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿದೆ. ಈ ಹರಾಜನ್ನು ಅಂಬುಜಾ ಸಿಮೆಂಟ್ ಕಂಪನಿ ಪಡೆದುಕೊಂಡಿದೆ, ಬೋರ್‌ವೆಲ್‌ಗಳಿಂದ ಕೇವಲ 100 ಮೀಟರ್ ಅಂತರದಲ್ಲಿ ಆಳವಾಗಿ ಕೊರೆಯುವ ಮೂಲಕ ಅಂತರ್ಜಲ ಹಾಗೂ ಕೃಷಿ ಭೂಮಿಗೆ ಹಾನಿ ಮಾಡಲಾಗುತ್ತಿದೆ. ಜಮೀನಿನಿಂದ ತೆಗೆದ ಸುಣ್ಣದ ಕಲ್ಲಿನ ಮಾದರಿಗಳನ್ನು ರೈತರಿಗೆ ತಿಳಿಯದಂತೆ ಬೆಂಗಳೂರಿನ ಐ.ಬಿ.ಎಂ (IBM) ಗೆ ಸಲ್ಲಿಸಿ, ಇಡೀ ಗ್ರಾಮದ ಜಮೀನುಗಳನ್ನು ಹರಾಜು ಪ್ರಕ್ರಿಯೆಯಡಿ ವಶಪಡಿಸಿಕೊಳ್ಳುವ ಸಂಚು ರೂಪಿಸಲಾಗಿದೆ ಎಂದರು.

 ನವ ಕರ್ನಾಟಕ ರೈತ ಸಂಘ ಸೇಡಂ ತಾಲ್ಲೂಕು ಅಧ್ಯಕ್ಷ ದೊಡ್ಡಪ್ಪ ಮಳಖೇಡ ಮಾತನಾಡಿ "ರೈತರ ಬದುಕಿನ ಆಧಾರವಾಗಿರುವ ಜಮೀನುಗಳನ್ನು ಅವರಿಗೆ ತಿಳಿಯದಂತೆ ಕಂಪನಿಗಳಿಗೆ ಧಾರೆ ಎರೆಯುತ್ತಿರುವುದು ಖಂಡನೀಯ. ಕೂಡಲೇ ಈ ಅಕ್ರಮ ಡ್ರಿಲಿಂಗ್ ಕಾರ್ಯವನ್ನು ತಡೆಹಿಡಿಯಬೇಕು. ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ RP GEO MINING SOLUTIONS ಕಂಪನಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಜಗದೀಶ್ ಸಾಗರ ಒತ್ತಾಯಿಸಿದ್ದಾರೆ.
ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ಸೂಲಹಳ್ಳಿ ಗ್ರಾಮದ ರೈತರೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಕಾರ್ಮಿಕ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ಜಳಕಿ ಇದ್ದರು.

ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ: 14.73 ಲಕ್ಷಕ್ಕೂ ಅಧಿಕ ಸಂಗ್ರಹ.

ಚಿತ್ತಾಪುರ: ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಶನಿವಾರ ಭಕ್ತಿ ಮತ್ತು ಪಾರದರ್ಶಕತೆಯ ನಡುವೆ ಜರುಗಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಎಣಿಕೆ ಪ್ರಕ್ರಿಯೆಯು ಸತತವಾಗಿ ಸಂಜೆ 5 ಗಂಟೆಯವರೆಗೆ ನಡೆಯಿತು.

2025ರ ಆಗಸ್ಟ್ 4ರಿಂದ 2026ರ ಫೆಬ್ರವರಿ 21ರ ವರೆಗಿನ ಅವಧಿಯಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆಯಿಂದ ಒಟ್ಟು 14,73,160 ರೂಪಾಯಿ ಸಂಗ್ರಹವಾಗಿದೆ ಎಂದು ದೇವಸ್ಥಾನದ ಅಧ್ಯಕ್ಷರು ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ವಿದೇಶಿ ಕರೆನ್ಸಿ ಆಕರ್ಷಣೆ:
ಈ ಬಾರಿಯ ಹುಂಡಿ ಎಣಿಕೆಯಲ್ಲಿ ವಿಶೇಷವಾಗಿ ಮಲೇಷಿಯಾ ದೇಶದ ಕರೆನ್ಸಿ ಪತ್ತೆಯಾಗಿರುವುದು ಕಂಡುಬಂದಿದೆ. ಭಕ್ತರೊಬ್ಬರು ಮಲೇಷಿಯಾದ 1 ರಿಂಗಿಟ್ ಮುಖಬೆಲೆಯ 18 ನೋಟುಗಳನ್ನು ಹುಂಡಿಗೆ ಹಾಕಿದ್ದಾರೆ. ಭಾರತೀಯ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ (1 ರಿಂಗಿಟ್ = 23.26 ರೂ.) ಇದರ ಒಟ್ಟು ಮೊತ್ತ 418.68 ರೂಪಾಯಿಗಳಾಗುತ್ತದೆ.
ಇದರ ಜೊತೆಗೆ ಮಲೇಷಿಯಾದ 10 ಸೇನ್ (Sen) ಮುಖಬೆಲೆಯ 2 ನಾಣ್ಯಗಳು ಕೂಡ ಲಭ್ಯವಾಗಿವೆ. ಅಂತರಾಷ್ಟ್ರೀಯ ಮಾರುಕಟ್ಟೆ ದರದ ಅನ್ವಯ 20 ಸೇನ್‌ನ ಮೌಲ್ಯ ಸುಮಾರು 4.65 ರೂಪಾಯಿಗಳಾಗಲಿದ್ದು, ವಿದೇಶಿ ಕರೆನ್ಸಿಯ ಒಟ್ಟು ಮೊತ್ತ ಅಂದಾಜು 423.33 ರೂಪಾಯಿಗಳಾಗಲಿದೆ.

ಈ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು, "ಹುಂಡಿಯಲ್ಲಿ ಸಂಗ್ರಹವಾದ ಈ ಮೊತ್ತವು ಸರ್ಕಾರಕ್ಕೆ ಸೇರಿದ್ದಾಗಿದ್ದು, ಇದನ್ನು ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ಅಧಿಕೃತವಾಗಿ ಜಮಾ ಮಾಡಲಾಗುವುದು," ಎಂದು ತಿಳಿಸಿದರು.
ಸುದೀರ್ಘ 6 ಗಂಟೆಗಳ ಕಾಲ ನಡೆದ ಈ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಬ್ಯಾಂಕ್ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಶುಕ್ರವಾರ, ಫೆಬ್ರವರಿ 20, 2026

ಸಮಾಜದ ಅಂಕುಡೊಂಕು ತಿದ್ದಿದು ಸರ್ವಜ್ಞ: ನಾಗಯ್ಯ ಹೀರೆಮಠ.

ಚಿತ್ತಾಪುರ: "ತ್ರಿಪದಿ ಕವಿ ಸರ್ವಜ್ಞರು ತಮ್ಮ ಅರ್ಥಗರ್ಭಿತ ವಚನಗಳ ಮೂಲಕ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿ ಹಾಗೂ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ಸಮಾಜ ಸುಧಾರಕರು," ಎಂದು ತಹಸೀಲ್ದಾರ್ ನಾಗಯ್ಯ ಹೀರೆಮಠ ಬಣ್ಣಿಸಿದರು.

ಪಟ್ಟಣದ ಪ್ರಜಾಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 506ನೇ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಮಾತನಾಡಿದ ಅವರು ಸರ್ವಜ್ಞರು ಅಂದಿನ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಜೀವನದ ಸತ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಜಾತಿ, ಮತ ಎಂಬ ಭೇದವಿಲ್ಲದೆ ಸರ್ವ ಸಮಾನತೆಯನ್ನು ಸಾರಿದ ಅವರ ತ್ರಿಪದಿಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಸರ್ವಜ್ಞರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
ಕುಂಬಾರ ಸಮಾಜದ ಮಾಜಿ ಅಧ್ಯಕ್ಷ ಜಗದೇವ ಎಸ್. ಕುಂಬಾರ, "ಕುಂಬಾರ ಸಮಾಜದಲ್ಲಿ ಜನಿಸಿದ ಸರ್ವಜ್ಞರು ಇಡೀ ಜಗತ್ತೇ ಮೆಚ್ಚುವಂತಹ ಸಾಹಿತ್ಯ ನೀಡಿದ್ದಾರೆ. ಮಣ್ಣಿನಿಂದ ಕುಂಭ ತಯಾರಿಸುವ ಕಲೆಯಂತೆ, ಶಬ್ದಗಳ ಮೂಲಕ ಮನುಷ್ಯನ ವ್ಯಕ್ತಿತ್ವ ರೂಪಿಸುವ ಕಾರ್ಯವನ್ನು ಅವರು ಮಾಡಿದ್ದಾರೆ. ಕುಂಬಾರ ಸಮಾಜದ ಶ್ರಮಜೀವಿಗಳಿಗೆ ಸರ್ವಜ್ಞರ ಬದುಕು ಸದಾ ಸ್ಪೂರ್ತಿ," ಎಂದರು.

ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಮುಖಂಡರಾದ ವಿಶ್ವನಾಥ ಕುಂಬಾರ ಚಿತ್ತಾಪುರ, ಶ್ರೀಮಂತ ಕುಂಬಾರ, ಮೋಗಲಪ್ಪ ಕುಂಬಾರ, ರವಿ ಕುಂಬಾರ, ಕಾಶಿನಾಥ ಕುಂಬಾರ ಬೆಣ್ಣೂರ ಶಶಿಕುಮಾರ ಕುಂಬಾರ ರಾವೂರ, ಬೀಮರಾಯ ಕುಂಬಾರ ಭಂಕಲಗಿ, ಸೇರಿದಂತೆ ತಹಸೀಲ್ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.

ಕಂಬಳೇಶ್ವರ ಮಠಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಭೇಟಿ.


ಚಿತ್ತಾಪುರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕಂಬಳೇಶ್ವರ ಮಠಕ್ಕೆ ಕೊಪ್ಪಳದ ಗವಿಮಠದ ಪೀಠಾಧಿಪತಿಗಳಾದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇದೇ ಫೆಬ್ರವರಿ 23ರಂದು ಭೇಟಿ ನೀಡಲಿದ್ದಾರೆ ಎಂದು ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದ್ದಾರೆ.


ಅಂದು ಮಧ್ಯಾಹ್ನ 12 ಗಂಟೆಗೆ ಮಠಕ್ಕೆ ಆಗಮಿಸಲಿರುವ ಶ್ರೀಗಳು, ಮೊದಲು ಕಂಬಳೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ನಮನಗಳನ್ನು ಸಲ್ಲಿಸಲಿದ್ದಾರೆ. ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಸೋಮಶೇಖರ ಶಿವಾಚಾರ್ಯರು ಗವಿಸಿದ್ದೇಶ್ವರ ಶ್ರೀಗಳಿಗೆ ನಾಗಾವಿ ನಾಡಿನ ಇತಿಹಾಸ ಸಾರುವ ಪುಸ್ತಕಗಳನ್ನು ನೀಡಿ, ಮಠದ ಪರವಾಗಿ ಭಕ್ತಿಪೂರ್ವಕವಾಗಿ ಸತ್ಕರಿಸಿ ಗೌರವಿಸಲಿದ್ದಾರೆ.

"ಅಪರೂಪದ ಪವಾಡ ಪುರುಷರು ಹಾಗೂ ಸಮಾಜಮುಖಿ ಚಿಂತಕರಾದ ಗವಿಸಿದ್ದೇಶ್ವರ ಶ್ರೀಗಳ ಆಗಮನವು ನಮ್ಮ ಭಾಗದ ಭಕ್ತರಿಗೆ ಸೌಭಾಗ್ಯದ ಸಂಗತಿಯಾಗಿದೆ. ಈ ಸುಸಂದರ್ಭದಲ್ಲಿ ತಾಲೂಕಿನ ಸಮಸ್ತ ಭಕ್ತಾದಿಗಳು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಶ್ರೀಗಳ ದರ್ಶನಾಶೀರ್ವಾದ ಪಡೆದು ಪುನೀತರಾಗಬೇಕು" ಎಂದು ಸೋಮಶೇಖರ ಶಿವಾಚಾರ್ಯರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಶಿವಾಜಿ ಆಡಳಿತ ವೈಖರಿ ಇಂದಿಗೂ ಮಾದರಿ: ತಹಸೀಲ್ದಾರ್.

ಚಿತ್ತಾಪುರ: ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಬ್ಬ ರಾಜನಾಗಿರದೆ, ಅಪ್ರತಿಮ ದೇಶಪ್ರೇಮಿ ಹಾಗೂ ಜನಪರ ಆಡಳಿತಗಾರರಾಗಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಪ್ರಜಾಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಶಿವಾಜಿ ಮಹಾರಾಜರ ಕಾಲದ ಆಡಳಿತವು ಅತ್ಯಂತ ಶಿಸ್ತುಬದ್ಧವಾಗಿತ್ತು. ಸ್ವರಾಜ್ಯದ ಪರಿಕಲ್ಪನೆಯಡಿ ಅವರು ಜಾರಿಗೆ ತಂದ ಆಡಳಿತಾತ್ಮಕ ಸುಧಾರಣೆಗಳು ಇಂದಿನ ಪ್ರಜಾಪ್ರಭುತ್ವಕ್ಕೂ ಅಡಿಪಾಯದಂತಿವೆ ಎಂದು ತಹಸೀಲ್ದಾರ್ ಬಣ್ಣಿಸಿದರು.

ಪರಕೀಯರ ಆಳ್ವಿಕೆಯ ನಡುವೆ ಸ್ವಂತ ಸಾಮ್ರಾಜ್ಯ ಕಟ್ಟಿದ ಶಿವಾಜಿಯವರ ಸಾಹಸಗಾಥೆ ಹಾಗೂ ಮಾತೃಭೂಮಿಯ ಮೇಲಿದ್ದ ಅವರ ಭಕ್ತಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿತ್ತು. ತಮ್ಮ ಆಡಳಿತದಲ್ಲಿ ಎಲ್ಲ ಸಮುದಾಯದವರನ್ನು ಸಮಾನವಾಗಿ ಕಂಡಿದ್ದ ಮಹಾರಾಜರು, ಮಹಿಳೆಯರ ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಜೀವನ ಚರಿತ್ರೆ ನಮಗೆ ಶೌರ್ಯ ಮತ್ತು ನೀತಿ ಎರಡನ್ನೂ ಕಲಿಸುತ್ತದೆ ಎಂದರು.

.ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ್ ಮರತೂರ , ವಿಠ್ಠಲ್ ರಾವ್, ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಅನೀಲಕುಮಾರ ಯೆಂದೆ, ಪ್ರಹ್ಲಾದ್ ವಿಶ್ವಕರ್ಮ, ಉಪಾಧ್ಯಕ್ಷ ಅನೂಪ್ ಉಬಾಳೆ, ರೋಹಿತ್ ಚವ್ಹಾಣ, ಕಾರ್ಯದರ್ಶಿ ಗುರುರಾಜ್ ಉಪ್ಪಾರ, ಸಹ ಕಾರ್ಯದರ್ಶಿ ಮನೋಜ್ ಹರಾಳೆ, ಸಂಯುಕ್ತ ಕಾರ್ಯದರ್ಶಿ ಅಂಬರೀಶ್ ಭೋವಿ, ಖಜಾಂಚಿ ನವೀನ್ ಚವ್ಹಾಣ್,  ಸದಸ್ಯರಾದ ರೋಹಿತ್ ಯೆಂದೆ, ಸಂತೋಷ್ ಗಾವಲ್ಕರ್, ಸಂಜೀವ್ ಸೂರ್ಯವಂಶಿ, ಆಕಾಶ ಸುಗಂಧಿ ಲಾಡ್, ಗಣೇಶ ಜೀತುರೆ, ಮಹೇಶ್ ಸುಗಂಧಿ, ನಿತೇಶ್ ಸುಗಂಧಿ ಸೇರಿದಂತೆ ಮರಾಠ ಸಮಾಜದ ಮುಖಂಡರು ಅನೇಕರು ಉಪಸ್ಥಿತರಿದ್ದರು.

ತ್ಯಾಜ್ಯ ವಿಲೇವಾರಿ ಜ್ಞಾನದಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ: ಮುಖ್ಯಾಧಿಕಾರಿ.

ಚಿತ್ತಾಪುರ: ಪಟ್ಟಣದ ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕಕ್ಕೆ ತಾಲ್ಲೂಕಿನ ಕದ್ದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಇತ್ತೀಚೆಗೆ ಶೈಕ್ಷಣಿಕ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಂಗಡಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಪುರಸಭೆಯ ಮುಖ್ಯಾಧಿಕಾರಿಗಳಾದ ಮನೋಜ್ ಕುಮಾರ್ ಗುರಿಕಾರ್ ಅವರು ವಿಶೇಷ ಮಾಹಿತಿ ನೀಡಿದರು.

ಘಟಕದಲ್ಲಿ ಸಂಗ್ರಹವಾಗುವ ಕಸವನ್ನು ಹೇಗೆ ಹಸಿ ಕಸ ಮತ್ತು ಒಣ ಕಸವನ್ನಾಗಿ ವಿಂಗಡಿಸಲಾಗುತ್ತದೆ ಎಂಬ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸಿಕೊಡಲಾಯಿತು. ಮುಖ್ಯವಾಗಿ ಹಸಿ ಕಸದಿಂದ ವೈಜ್ಞಾನಿಕವಾಗಿ ಸಾವಯವ ಗೊಬ್ಬರ ತಯಾರಿಸುವ ವಿಧಾನ ಹಾಗೂ ಅದರ ಸಂರಕ್ಷಣೆಯ ಕುರಿತು ಮುಖ್ಯಾಧಿಕಾರಿಗಳು ವಿವರಿಸಿದರು.
ನಂತರ ಮಾತನಾಡಿದ ಅವರು, "ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಕೇವಲ ಸರ್ಕಾರದ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಇಂದಿನಿಂದಲೇ ಸಂಕಲ್ಪ ಮಾಡಬೇಕು. ಮನೆಯಲ್ಲಿಯೇ ಕಸವನ್ನು ವಿಂಗಡಿಸಿ ಪುರಸಭೆಯ ವಾಹನಗಳಿಗೆ ನೀಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಸಹಕರಿಸಬೇಕು," ಎಂದು ಕರೆ ನೀಡಿದರು.
ನಂತರ ಮುಖ್ಯಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಧ್ಯಾರ್ಥಿಗಳ ಪ್ರಶ್ನೆ, ಪ್ಲಾಸ್ಟಿಕ್ ಭೂಮಿಯಲ್ಲಿ ಕರಗಲು ಎಷ್ಟು ವರ್ಷ ಬೇಕು? ಎಂದಗಾ ಉತ್ತರಿದ ಅವರು ಪ್ಲಾಸ್ಟಿಕ್ ವಿಧಗಳ ಆಧಾರದ ಮೇಲೆ ನೂರಾರು ವರ್ಷಗಳು ಬೇಕಾಗಬಹುದು, ಅದಕ್ಕಾಗಿಯೇ ನಾವು ಮರುಬಳಕೆ (Recycle) ಮಾಡುವುದನ್ನು ಕಲಿಯಬೇಕು ಎಂದರು. ನಂತರ ಮತ್ತೆ ಪ್ರಶ್ನಿದ ವಿದ್ಯಾರ್ಥಿಗಳು ನಾವು ಮನೆಯಲ್ಲಿ ಗಿಡಗಳಿಗೆ ಸಾವಯವ ಗೊಬ್ಬರವನ್ನು ಹೇಗೆ ಬಳಸಬಹುದು ಎಂದರು ಆಗ ಉತ್ತರಿಸಿ ಅವರು ಪುರಸಭೆಯಿಂದ ಸಿದ್ಧವಾದ ಗೊಬ್ಬರವನ್ನು ನೀವು ಪಡೆದು ಗಿಡಗಳಿಗೆ ಬಳಸಬಹುದು, ಇದರಿಂದ ಗಿಡಗಳು ಆರೋಗ್ಯವಾಗಿ ಬೆಳೆಯುತ್ತವೆ. ವಿದ್ಯಾರ್ಥಿಗಳ ಕುತೂಹಲಕಾರಿ ಪ್ರಶ್ನೆಗಳಿಗೆ ಮುಖ್ಯಾಧಿಕಾರಿಗಳು ಸರಳವಾಗಿ ಉತ್ತರಿಸುವ ಮೂಲಕ ಅವರಲ್ಲಿ ಪರಿಸರ ಪ್ರೇಮವನ್ನು ಜಾಗೃತಗೊಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರೋಹಿತ್ ಕಟ್ಟಿಮನಿ, ಶಾಲೆಯ ಮುಖ್ಯಗುರುಗಳಾದ ನಾಗಮ್ಮ ಕುಂಬಾರ, ಪುರಸಭೆ ಸಮುದಾಯ ಸಂಚಾಲಕರಾದ ಮೀನಾಕ್ಷಿ, ಅಕ್ಷತಾ, ರೇಣುಕಾ, ಶಿಕ್ಷಕ ಸೋಪನಗೌಡ ಪಾಟೀಲ್, ಅತಿಥಿ ಶಿಕ್ಷಕ ಜಗದೇವ ಕುಂಬಾರ, ಎಲ್ಎಲ್ಎಫ್ ಶಿಕ್ಷಕ ಹಣಮಂತ ಕುಂಬಾರ ಸೇರಿದಂತೆ ಇತರರು ಇದ್ದರು.

ಬುಧವಾರ, ಫೆಬ್ರವರಿ 18, 2026

ಜೆಜೆಎಂ ಕಾಮಗಾರಿ ಹೆಸರಲ್ಲಿ ಪರಿಸರ ಮಾರಣಹೋಮ; ನಿಯಮ ಉಲ್ಲಂಘಿಸಿ ಬೆಟ್ಟ ಕೊರೆಯುತ್ತಿರುವ ಗುತ್ತಿಗೆದಾರ!

ಚಿತ್ತಾಪೂರ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ನಡುವೆ ಈಗ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ (JJM) ಯೋಜನೆಗೆ ಪರಿಸರ ಬಲಿಯಾಗುತ್ತಿದೆ. ವೈಜ್ಞಾನಿಕತೆ ಗಾಳಿಗೆ ತೂರಿ ಬೆಟ್ಟಗುಡ್ಡಗಳನ್ನು ನಾಶ ಮಾಡುತ್ತಿರುವ ಗುತ್ತಿಗೆದಾರ ಕಂಪನಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸರ್ಕಾರದ ಷರತ್ತುಗಳಿಗೆ ಕವಡೆ ಕಾಸಿನ ಬೆಲೆ ಇಲ್ಲವೇ?
ಸನ್ನತ್ತಿ ನದಿಯಿಂದ 70 ಗ್ರಾಮಗಳಿಗೆ ನೀರು ಪೂರೈಸುವ ಜೆಜೆಎಂ 4ನೇ ಹಂತದ ಯೋಜನೆಗಾಗಿ ಹುಳಂಡಗೇರಾ, ತರಕಸಪೇಟ, ರಾಮತೀರ್ಥ, ದಂಡಗುಂಡ ಮತ್ತು ಬನಹಟ್ಟಿಯಲ್ಲಿ ಟ್ಯಾಂಕ್‌ಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಆಗಸ್ಟ್ 2025ರಲ್ಲಿ ಭೂಮಿ ಮಂಜೂರು ಮಾಡಿದ್ದರು. ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ಅಡಿಯಲ್ಲಿ ಸುಮಾರು 2 ಎಕರೆ 36 ಗುಂಟೆ ಜಮೀನನ್ನು ಜಿಲ್ಲಾ ಪಂಚಾಯತ್ ಹೆಸರಿಗೆ ಹಸ್ತಾಂತರಿಸುವಾಗ "ಸರ್ಕಾರಿ ಜಮೀನನ್ನು ವಿನಾಶಕಾರಿ ಅಥವಾ ಕಾಯಂ ಹಾನಿಕಾರಕ ರೀತಿಯಲ್ಲಿ ಬಳಸಬಾರದು" ಎಂಬ ಸ್ಪಷ್ಟ ಷರತ್ತು ವಿಧಿಸಲಾಗಿತ್ತು. ಆದರೆ, ಪ್ರಸ್ತುತ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಕಂಪನಿಯು ಈ ನಿಯಮಗಳನ್ನು ಗಾಳಿಗೆ ತೂರಿ, ಬೆಟ್ಟದ ಮೂಲ ಸ್ವರೂಪವನ್ನೇ ನಾಶ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಆರೋಪಿಸಿದ್ದಾರೆ.

ರಾಮತೀರ್ಥ ಗ್ರಾಮದ ಸರಿಸುಮಾರು 1000 ಮೀಟರ್ ಉದ್ದದ ಭವ್ಯ 'ವಾರಿ ಬೆಟ್ಟ'ವು ಪ್ರಕೃತಿಯ ಸೌಂದರ್ಯಕ್ಕೆ ಹೆಸರಾಗಿತ್ತು. ಈಗ ಇಲ್ಲಿ ಜೆಜೆಎಂ ಟ್ಯಾಂಕ್ ನಿರ್ಮಾಣದ ಹೆಸರಿನಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಇಳಿಜಾರು ಪ್ರದೇಶದಲ್ಲಿ ಆಳವಾದ ಗುಂಡಿಗಳನ್ನು ತೋಡಲಾಗುತ್ತಿದೆ.
ನೂರಾರು ಗಿಡಮರಗಳು ಧರೆಗುರುಳುತ್ತಿವೆ.ಮಳೆಗಾಲದಲ್ಲಿ ಬೆಟ್ಟದ ಮಣ್ಣು ಸಡಿಲಗೊಂಡು ಇಡೀ ಟ್ಯಾಂಕ್ ಉರುಳಿ ಬೀಳುವ ಅಪಾಯವಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ" ಎಂದು ಕೈತೊಳೆದುಕೊಳ್ಳುತ್ತಿದ್ದರೆ, 
ಕೇಂದ್ರದ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆ ಸದಾ ಟೀಕೆ ಮಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಅಕ್ರಮಗಳು ಕಾಣಿಸುತ್ತಿಲ್ಲವೇ?" ಎಂದು ಅಯ್ಯಪ್ಪ ರಾಮತೀರ್ಥ ಪ್ರಶ್ನಿಸಿದ್ದಾರೆ. ತರಾತುರಿಯಲ್ಲಿ ಕಾಮಗಾರಿ ನಡೆಸಿ ಹಣ ಲೂಟಿ ಮಾಡುವ ಉದ್ದೇಶ ಈ ಯೋಜನೆಯ ಹಿಂದಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ದೂರಿದ್ದಾರೆ.

ಕೂಡಲೇ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸ್ಥಳ ಪರಿಶೀಲನೆ ನಡೆಸಬೇಕು.ಜಿಲ್ಲಾಧಿಕಾರಿಗಳ ಷರತ್ತು ಉಲ್ಲಂಘಿಸಿದ ಗುತ್ತಿಗೆದಾರ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ನೈಸರ್ಗಿಕ ಬೆಟ್ಟ ಮತ್ತು ಅರಣ್ಯ ಸಂಪತ್ತನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು.
ಮುಂದಾಗಬಹುದಾದ ಭೀಕರ ಅನಾಹುತವನ್ನು ತಪ್ಪಿಸಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಸಚಿವರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಫೆ. 23ಕ್ಕೆ 'ಅಭಿನಂದನ' ಪರ್ವ: ಗವಿಮಠದ ಶ್ರೀಗಳ ಪ್ರಪ್ರಥಮ ಆಗಮನ.

ಚಿತ್ತಾಪುರ: ಪಟ್ಟಣದ ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿರುವ ಶ್ರೀ ವಿಶ್ವಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ 16ನೇ ವಾರ್ಷಿಕೋತ್ಸವ ಹಾಗೂ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭವು ಇದೇ ಫೆಬ್ರವರಿ 23ರಂದು ಬೆಳಗ್ಗೆ 10 ಗಂಟೆಗೆ ಎಂ.ಬಿ. ಪಾಟೀಲ ಪಬ್ಲಿಕ್ ಶಾಲಾ ಆವರಣದಲ್ಲಿ ಅತ್ಯಂತ ವೈಭವದಿಂದ ಜರುಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ, "ಶತಮಾನದ ಶರಣ, ಅಭಿನವ ಅನ್ನದಾನಿ ಎಂದೇ ಖ್ಯಾತರಾದ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮೊದಲ ಬಾರಿಗೆ ಚಿತ್ತಾಪುರ ಪಟ್ಟಣಕ್ಕೆ ಆಗಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಶ್ರೀಗಳ ದರ್ಶನ ಹಾಗೂ ಆಶೀರ್ವಚನ ಆಲಿಸಲು ತಾಲೂಕಿನ ಜನತೆ ಕಾತರರಾಗಿದ್ದಾರೆ," ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಪ್ರಿಯಾಂಕ್ ಖರ್ಗೆ ರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ದಿವ್ಯ ಸಾನಿಧ್ಯವನ್ನು ಅಬ್ಬೆ ತುಮಕೂರಿನ ಡಾ. ಗಂಗಾಧರ ಮಹಾಸ್ವಾಮಿಗಳು, ಕಂಬಳೇಶ್ವರದ ಶ್ರೀ ಸೋಮಶೇಖರ ಶಿವಾಚಾರ್ಯರು, ದಿಗ್ಗಾಂವದ ಶ್ರೀ ಸಿದ್ದವೀರ ಶಿವಾಚಾರ್ಯರು ಹಾಗೂ ರಾವೂರ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಆಶೀರ್ವದಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಡಿಪಿಐ ಶಂಕ್ರಮ್ಮ ಡವಳಗಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆ
ಸಮಾರಂಭಕ್ಕೆ ಆಗಮಿಸುವ ಭಕ್ತರಿಗಾಗಿ ಮತ್ತು ಪೋಷಕರಿಗಾಗಿ ಸಂಸ್ಥೆಯ ವತಿಯಿಂದ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ,ಸುಮಾರು 3,000ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ಸುಸಜ್ಜಿತ ವ್ಯವಸ್ಥೆ, ಕುಡಿಯುವ ನೀರು ಹಾಗೂ ಸುಸಜ್ಜಿತ ಊಟದ ವ್ಯವಸ್ಥೆ ಮಾಡಲಾಗಿದೆ,ಪಟ್ಟಣದ ಪ್ರತಿಯೊಬ್ಬ ನಾಗರಿಕರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು," ಎಂದು ನಾಗರೆಡ್ಡಿ ಪಾಟೀಲರು ಕೋರಿದ್ದಾರೆ.

ಮಂಗಳವಾರ, ಫೆಬ್ರವರಿ 17, 2026

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದುಗೌಡ ಕುರಾಳ ನೇಮಕ.

ಚಿತ್ತಾಪುರ: ರಾಜ್ಯಾದ್ಯಂತ ನಡೆಯುತ್ತಿರುವ ಬಿಜೆಪಿ ಸಂಘಟನಾ ಪರ್ವದ ಅಂಗವಾಗಿ, ಕಲಬುರಗಿ ಗ್ರಾಮಾಂತರ ಜಿಲ್ಲೆಯ ಚಿತ್ತಾಪುರ ಮಂಡಲದ ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಇದರಲ್ಲಿ ಬಿಜೆಪಿ ಯುವ ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದುಗೌಡ ಕುರಾಳ ಅವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬುವ ಜವಾಬ್ದಾರಿ ನೀಡಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮಂಡಲ ಅಧ್ಯಕ್ಷರಾದ ರವೀಂದ್ರ ಸಜ್ಜನಶೆಟ್ಟಿ ಅವರು, ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಸಮರ್ಥ ಹಾಗೂ ಕ್ರಿಯಾಶೀಲ ಕಾರ್ಯಕರ್ತರನ್ನು ಗುರುತಿಸಿ ಈ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಮ್ಮ ನೇಮಕಾತಿ ಕುರಿತು ಸಂತಸ ವ್ಯಕ್ತಪಡಿಸಿರುವ ಸಿದ್ದುಗೌಡ ಕುರಾಳ ಅವರು ಮಾತನಾಡುತ್ತಾ "ನನ್ನ ಮೇಲೆ ನಂಬಿಕೆಯಿಟ್ಟು ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ನೀಡಿದ ಪಕ್ಷದ ಎಲ್ಲಾ ಹಿರಿಯ ನಾಯಕರಿಗೆ ಮತ್ತು ಮಂಡಲ ಅಧ್ಯಕ್ಷರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಪಕ್ಷದ ಸಿದ್ಧಾಂತಗಳನ್ನು ತಳಮಟ್ಟದ ಯುವಕರಿಗೆ ತಲುಪಿಸುವುದು ನನ್ನ ಆದ್ಯತೆಯಾಗಿದೆ. ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತ್ತಷ್ಟು ಸದೃಢಗೊಳಿಸಲು ಮತ್ತು ಯುವಶಕ್ತಿಯನ್ನು ಸಂಘಟಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ," ಎಂದು ತಿಳಿಸಿದರು.

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣ: ವ್ಯವಸ್ಥಿತ ಪಿತೂರಿ ಮತ್ತು ಕೌಟುಂಬಿಕ ದ್ವೇಷದ ಶಂಕೆ - ಯುವ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ಆಕ್ರೋಶ.

ಚಿತ್ತಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಸತ್ಯಕ್ಕೆ ದೂರವಾಗ...