ಬುಧವಾರ, ಫೆಬ್ರವರಿ 18, 2026

ಜೆಜೆಎಂ ಕಾಮಗಾರಿ ಹೆಸರಲ್ಲಿ ಪರಿಸರ ಮಾರಣಹೋಮ; ನಿಯಮ ಉಲ್ಲಂಘಿಸಿ ಬೆಟ್ಟ ಕೊರೆಯುತ್ತಿರುವ ಗುತ್ತಿಗೆದಾರ!

ಚಿತ್ತಾಪೂರ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ನಡುವೆ ಈಗ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ (JJM) ಯೋಜನೆಗೆ ಪರಿಸರ ಬಲಿಯಾಗುತ್ತಿದೆ. ವೈಜ್ಞಾನಿಕತೆ ಗಾಳಿಗೆ ತೂರಿ ಬೆಟ್ಟಗುಡ್ಡಗಳನ್ನು ನಾಶ ಮಾಡುತ್ತಿರುವ ಗುತ್ತಿಗೆದಾರ ಕಂಪನಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸರ್ಕಾರದ ಷರತ್ತುಗಳಿಗೆ ಕವಡೆ ಕಾಸಿನ ಬೆಲೆ ಇಲ್ಲವೇ?
ಸನ್ನತ್ತಿ ನದಿಯಿಂದ 70 ಗ್ರಾಮಗಳಿಗೆ ನೀರು ಪೂರೈಸುವ ಜೆಜೆಎಂ 4ನೇ ಹಂತದ ಯೋಜನೆಗಾಗಿ ಹುಳಂಡಗೇರಾ, ತರಕಸಪೇಟ, ರಾಮತೀರ್ಥ, ದಂಡಗುಂಡ ಮತ್ತು ಬನಹಟ್ಟಿಯಲ್ಲಿ ಟ್ಯಾಂಕ್‌ಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಆಗಸ್ಟ್ 2025ರಲ್ಲಿ ಭೂಮಿ ಮಂಜೂರು ಮಾಡಿದ್ದರು. ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ಅಡಿಯಲ್ಲಿ ಸುಮಾರು 2 ಎಕರೆ 36 ಗುಂಟೆ ಜಮೀನನ್ನು ಜಿಲ್ಲಾ ಪಂಚಾಯತ್ ಹೆಸರಿಗೆ ಹಸ್ತಾಂತರಿಸುವಾಗ "ಸರ್ಕಾರಿ ಜಮೀನನ್ನು ವಿನಾಶಕಾರಿ ಅಥವಾ ಕಾಯಂ ಹಾನಿಕಾರಕ ರೀತಿಯಲ್ಲಿ ಬಳಸಬಾರದು" ಎಂಬ ಸ್ಪಷ್ಟ ಷರತ್ತು ವಿಧಿಸಲಾಗಿತ್ತು. ಆದರೆ, ಪ್ರಸ್ತುತ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಕಂಪನಿಯು ಈ ನಿಯಮಗಳನ್ನು ಗಾಳಿಗೆ ತೂರಿ, ಬೆಟ್ಟದ ಮೂಲ ಸ್ವರೂಪವನ್ನೇ ನಾಶ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಆರೋಪಿಸಿದ್ದಾರೆ.

ರಾಮತೀರ್ಥ ಗ್ರಾಮದ ಸರಿಸುಮಾರು 1000 ಮೀಟರ್ ಉದ್ದದ ಭವ್ಯ 'ವಾರಿ ಬೆಟ್ಟ'ವು ಪ್ರಕೃತಿಯ ಸೌಂದರ್ಯಕ್ಕೆ ಹೆಸರಾಗಿತ್ತು. ಈಗ ಇಲ್ಲಿ ಜೆಜೆಎಂ ಟ್ಯಾಂಕ್ ನಿರ್ಮಾಣದ ಹೆಸರಿನಲ್ಲಿ ಬೃಹತ್ ಯಂತ್ರಗಳನ್ನು ಬಳಸಿ ಇಳಿಜಾರು ಪ್ರದೇಶದಲ್ಲಿ ಆಳವಾದ ಗುಂಡಿಗಳನ್ನು ತೋಡಲಾಗುತ್ತಿದೆ.
ನೂರಾರು ಗಿಡಮರಗಳು ಧರೆಗುರುಳುತ್ತಿವೆ.ಮಳೆಗಾಲದಲ್ಲಿ ಬೆಟ್ಟದ ಮಣ್ಣು ಸಡಿಲಗೊಂಡು ಇಡೀ ಟ್ಯಾಂಕ್ ಉರುಳಿ ಬೀಳುವ ಅಪಾಯವಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ" ಎಂದು ಕೈತೊಳೆದುಕೊಳ್ಳುತ್ತಿದ್ದರೆ, 
ಕೇಂದ್ರದ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆ ಸದಾ ಟೀಕೆ ಮಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಅಕ್ರಮಗಳು ಕಾಣಿಸುತ್ತಿಲ್ಲವೇ?" ಎಂದು ಅಯ್ಯಪ್ಪ ರಾಮತೀರ್ಥ ಪ್ರಶ್ನಿಸಿದ್ದಾರೆ. ತರಾತುರಿಯಲ್ಲಿ ಕಾಮಗಾರಿ ನಡೆಸಿ ಹಣ ಲೂಟಿ ಮಾಡುವ ಉದ್ದೇಶ ಈ ಯೋಜನೆಯ ಹಿಂದಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ದೂರಿದ್ದಾರೆ.

ಕೂಡಲೇ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸ್ಥಳ ಪರಿಶೀಲನೆ ನಡೆಸಬೇಕು.ಜಿಲ್ಲಾಧಿಕಾರಿಗಳ ಷರತ್ತು ಉಲ್ಲಂಘಿಸಿದ ಗುತ್ತಿಗೆದಾರ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ನೈಸರ್ಗಿಕ ಬೆಟ್ಟ ಮತ್ತು ಅರಣ್ಯ ಸಂಪತ್ತನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು.
ಮುಂದಾಗಬಹುದಾದ ಭೀಕರ ಅನಾಹುತವನ್ನು ತಪ್ಪಿಸಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಸಚಿವರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜೆಜೆಎಂ ಕಾಮಗಾರಿ ಹೆಸರಲ್ಲಿ ಪರಿಸರ ಮಾರಣಹೋಮ; ನಿಯಮ ಉಲ್ಲಂಘಿಸಿ ಬೆಟ್ಟ ಕೊರೆಯುತ್ತಿರುವ ಗುತ್ತಿಗೆದಾರ!

ಚಿತ್ತಾಪೂರ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ನಡುವೆ ಈಗ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ (JJM) ಯೋಜನೆಗೆ ಪ...