ಚಿತ್ತಾಪುರ: ಪಟ್ಟಣದಲ್ಲಿ ಫೆಬ್ರವರಿ 15ರ ಭಾನುವಾರದಂದು ತಾಲೂಕು ಆಡಳಿತ ಹಾಗೂ ಸೇವಾಲಾಲ್ ಜಯಂತೋತ್ಸವ ಸಮಿತಿ ವತಿಯಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷ ಗೋಪಾಲ್ ರಾಠೋಡ್ ತಿಳಿಸಿದರು.
ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ತಾಲೂಕಿನ ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮದ ನಂತರ ತಹಶೀಲ್ದಾರ್ ಕಾರ್ಯಾಲಯದಿಂದ ಭವ್ಯ ಮೆರವಣಿಗೆ ಆರಂಭವಾಗಿ ರೈಲ್ವೆ ಸ್ಟೇಷನ್ ಹತ್ತಿರವಿರುವ ಸೇವಾಲಾಲ್ ವೃತ್ತಕ್ಕೆ ತಲುಪಿ ಅಲ್ಲಿ ವಿಶೇಷ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಮೆರವಣಿಗೆಯು ಸ್ಟೇಷನ್ ಮಾರ್ಗವಾಗಿ ನಾಗಾವಿ ಚೌಕ್, ಜನತಾ ಚೌಕ್, ಭುವನೇಶ್ವರಿ ಚೌಕ್, ಅಂಬೇಡ್ಕರ್ ವೃತ್ತ ಹಾಗೂ ಲಾಡ್ಜಿಂಗ್ ಕ್ರಾಸ್ ಮುಖಾಂತರ ಸಾಗಿ ಪುನಃ ತಾಲೂಕು ಆಡಳಿತ ಕಾರ್ಯಾಲಯದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.
ಮೆರವಣಿಗೆಯಲ್ಲಿ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರವಿರುವ ಪಲ್ಲಕ್ಕಿ ಪ್ರಮುಖ ಆಕರ್ಷಣೆಯಾಗಿರಲಿದೆ. ಬಂಜಾರ ಸಮಾಜದ ಸಾಂಪ್ರದಾಯಿಕ ವೇಷಭೂಷಣಗಳು, ಡೊಳ್ಳು ಕುಣಿತ, ಡಿಜೆ ಸೌಂಡ್ ಸಿಸ್ಟಮ್ ಸೇರಿದಂತೆ ಸಕಲ ವಾದ್ಯಗೋಷ್ಠಿಗಳು ಮೆರವಣಿಗೆಗೆ ಮೆರುಗು ನೀಡಲಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಚಂದು ಜಾಧವ, ಪ್ರಮುಖರಾದ ಭೀಮಸಿಂಗ್ ಚವ್ಹಾಣ, ಆಕಾಶ್ ಚವ್ಹಾಣ, ಸುನಿಲ್ ರಾಠೋಡ್, ದೇವಿದಾಸ್ ಚವ್ಹಾಣ, ಶಂಕರ್ ನಾಯಕ ಚೋಕಿ ತಾಂಡಾ, ನೀಲಕಂಠ ಪವಾರ್, ಗೋಪಿ ರಾಠೋಡ್, ರವಿ ಜಾಧವ, ರಾಜು ರಾಠೋಡ್, ಜಗದೀಶ್ ಪವಾರ್, ಶ್ರೀಕಾಂತ್ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ