ಶುಕ್ರವಾರ, ಫೆಬ್ರವರಿ 13, 2026

ದೇವಸ್ಥಾನ ನಿರ್ಮಾಣ: ಜೀರ್ಣೋದ್ಧಾರಕ್ಕೆ ಭಕ್ತರ ಸಾಥ್.

ಚಿತ್ತಾಪುರ: ತಾಲೂಕಿನ ದಂಡಗುಂಡ ಗ್ರಾಮದಲ್ಲಿರುವ ಪುರಾತನ ಹಳೆಯ ಬಸವಣ್ಣ ದೇವಸ್ಥಾನವನ್ನು ತೆರವುಗೊಳಿಸಿ, ಭಕ್ತರ ಆಶಯದಂತೆ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಮಾದರಿಯಲ್ಲೇ ಭವ್ಯ ನೂತನ ಕಟ್ಟಡವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ತಿಳಿಸಿದರು.

ಗ್ರಾಮದ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ವಾಸ್ತುಶಿಲ್ಪಿ ಬಸವರಾಜ ಖಂಡೇರಾವ ಅವರು ತಯಾರಿಸಿದ 10 ಕೋಟಿ ರೂಪಾಯಿ ವೆಚ್ಚದ ನೀಲಿ ನಕ್ಷೆಯಂತೆ ಕಾಮಗಾರಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಭಕ್ತರ ಸ್ವಯಂ ಪ್ರೇರಿತ ದೇಣಿಗೆಯಿಂದಲೇ ಕೆಲಸ ಸಾಗಿದ್ದು, ಇದುವರೆಗೂ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಶೇ. 30ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ ಕೆಲಸಗಳಿಗೆ ಹಣದ ಹೊಂದಾಣಿಕೆ ಮಾಡಲು ಟ್ರಸ್ಟ್ ಹಾಗೂ ಗ್ರಾಮಸ್ಥರು ತಂಡಗಳಾಗಿ ವಿವಿಧ ಗ್ರಾಮಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಲು ಸಜ್ಜಾಗಿದ್ದೇವೆ ಎಂದು ಅವರು ವಿವರಿಸಿದರು.

ದೇವಸ್ಥಾನದ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ತಲಾ 50 ಲಕ್ಷ ರೂ. ನೀಡಿದ್ದಾರೆ. ಇದಲ್ಲದೆ, 9 ಜನ ಭಕ್ತರು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸ್ವಂತ ಖರ್ಚಿನಲ್ಲಿ 9 ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ಮಾತನಾಡಿ, "ಜೀರ್ಣೋದ್ಧಾರ ಕಾರ್ಯಕ್ಕೆ ಕೆಲವರು ಅಡೆತಡೆ ಒಡ್ಡಲು ಪ್ರಯತ್ನಿಸಿದ್ದರು. ಆದರೆ ಭಕ್ತರು ಅವರ ಕುತಂತ್ರಕ್ಕೆ ಮಣಿಯದೆ ಬೆಂಬಲ ನೀಡಿದ್ದರಿಂದ ದೇವಸ್ಥಾನದ ಚಿತ್ರಣವನ್ನೇ ಬದಲಾಯಿಸಲು ಸಾಧ್ಯವಾಗುತ್ತಿದೆ" ಎಂದರು.

ಟ್ರಸ್ಟ್ ಹಿರಿಯ ಸದಸ್ಯ ಭೀಮಣ್ಣ ಸಾಲಿ ಮಾತನಾಡಿ ದೇವಸ್ಥಾನಕ್ಕೆ ಭಕ್ತರು 80 ಕೆಜಿ ಬೆಳ್ಳಿಯ ಪಲ್ಲಕ್ಕಿ ಕಾಣಿಕೆಯಾಗಿ ನೀಡಿದ್ದಾರೆ. ಅಲ್ಲದೆ 50 ತೊಲೆ ಬಂಗಾರದ ಕಿರೀಟವೂ ಇದೆ. ಭಕ್ತರು ನೀಡಿದ ಬೆಳ್ಳಿಯ ಸಣ್ಣ ಪುಟ್ಟ ವಸ್ತುಗಳನ್ನು ಕರಗಿಸಿ ಗರ್ಭಗುಡಿಯಲ್ಲಿ ಸುಂದರ ಕಮಾನು ನಿರ್ಮಿಸಲು ಚಿಂತಿಸಲಾಗಿದೆ. ದೇವಸ್ಥಾನಕ್ಕೆ ಭಕ್ತರು ಹರಕೆಯ ರೂಪದಲ್ಲಿ ಹೋರಿಗಳನ್ನು ನೀಡುವ ಸಂಪ್ರದಾಯವಿದೆ. ಆದರೆ ಅವುಗಳ ನಿರ್ವಹಣೆ ಕಷ್ಟವಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಭಕ್ತರು ಹೋರಿಗಳ ಬದಲಿಗೆ ಹಣವನ್ನು ದೇಣಿಗೆಯಾಗಿ ನೀಡಬೇಕು. ಈಗಿರುವ ಹೋರಿಗಳನ್ನು ರಶೀದಿ ಮೂಲಕ ಪಡೆದು ಭಕ್ತರು ಹರಕೆ ತೀರಿಸಿಕೊಳ್ಳಬಹುದು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಟ್ರಸ್ಟ್ ನ ಪ್ರಮುಖರಾದ ಮಹಾಂತಗೌಡ ಪಾಟೀಲ್ ಹಾಗೂ ರಾಜಶೇಖರ ಗೌಡ ಉಪಸ್ಥಿತರಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಾತಾ ಮಾಣಿಕೇಶ್ವರಿ ಭಕ್ತರಿಗೆ ರಾಜೇಶ್ ಹೋಳಿಕಟ್ಟಿ ತಂಡದಿಂದ ಅಲ್ಪಾಹಾರ ಸೇವೆ.

ಚಿತ್ತಾಪುರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಯಾನಗುಂದಿಯ ಶ್ರೀ ಮಾತಾ ಮಾಣಿಕೇಶ್ವರಿ ದೇವಿ ಯ ದರ್ಶನಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಭಕ್ತಾದಿಗಳಿಗ...