ಚಿತ್ತಾಪೂರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸತತ ಪ್ರಯತ್ನದಿಂದ ಚಿತ್ತಾಪೂರ ಕ್ಷೇತ್ರಕ್ಕೆ ರಾಜ್ಯದ 224 ಶಾಸಕರ ಪೈಕಿ ಅತಿ ಹೆಚ್ಚು ಅನುದಾನ ತಂದಿರುವುದನ್ನು ಕಂಡು ಬಿಜೆಪಿ ನಾಯಕರು ದಿಗ್ಭ್ರಮೆಗೊಂಡಿದ್ದಾರೆ. ಹತಾಶೆಯಿಂದ ಏನೇನೋ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಜೆಪಿ ನಾಯಕರ ಆರೋಪಗಳಿಗೆ ಎಳೆಎಳೆಯಾಗಿ ಉತ್ತರಿಸಿದ ಅವರು ನಿಯಮಾವಳಿಗಳ ಅರಿವಿಲ್ಲದ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆಯವರು ಕಾಂಗ್ರೆಸ್ ಕಾರ್ಯಕರ್ತರ ಜೇಬು ತುಂಬುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಸರ್ಕಾರದ ಯಾವುದೇ ಅನುದಾನವಾದರೂ ಅದು ನಿರ್ದಿಷ್ಟ ನಿಯಮಾನುಸಾರವೇ ಕಾರ್ಯರೂಪಕ್ಕೆ ಬರುತ್ತದೆ. ಆ ಪ್ರಕ್ರಿಯೆಯನ್ನು ಯಾರೂ ಮನಬಂದಂತೆ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಅರಿವು ಕೂಡ ಬಿಜೆಪಿ ನಾಯಕರಿಗೆ ಮರೆತುಹೋಗಿರುವುದು ವಿಪರ್ಯಾಸ" ಎಂದು ಟೀಕಿಸಿದ್ದಾರೆ.
"ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆಯವರ ಅಭಿವೃದ್ಧಿ ಕಾರ್ಯಗಳನ್ನು 'ನಾಟಕ' ಎಂದು ಜರಿಯುತ್ತಿದ್ದಾರೆ. ಆದರೆ, ಇದು ಕೇವಲ ಆಶ್ವಾಸನೆಯಲ್ಲ, ಚಿತ್ತಾಪೂರ ಜನತೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ತಂದಿರುವ ಸಾವಿರ ಕೋಟಿ ರೂಪಾಯಿಗಳ ವಾಸ್ತವ ಅನುದಾನ. ಕೇವಲ ಆಶ್ವಾಸನೆಗೂ ಮತ್ತು ಮಂಜೂರಾಗಿರುವ ಅನುದಾನಕ್ಕೂ ಇರುವ ವ್ಯತ್ಯಾಸ ತಿಳಿಯದೆ ಬಿಜೆಪಿಗರು ಕಂಗಾಲಾಗಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
ರೈತರ ವಿಚಾರದಲ್ಲಿ ಬಿಜೆಪಿಯ ದ್ವಂದ್ವ ನಿಲುವನ್ನು ಪ್ರಶ್ನಿಸಿದ ಸಿದ್ದುಗೌಡ ಅವರು, "ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ತೊಗರಿ ಬೆಳೆಗೆ ನೆಟೆರೋಗ ಬಂದು ರೈತರು ಕಂಗಾಲಾಗಿದ್ದರು. ಆಗ ಚಿತ್ತಾಪೂರದ ಯಾವೊಬ್ಬ ಬಿಜೆಪಿ ನಾಯಕನೂ ರೈತರ ಪರ ದನಿ ಎತ್ತಲಿಲ್ಲ. ಅಂದು ರೈತರ ಪರವಾಗಿ ಬೀದಿಗಿಳಿದು, ಸರ್ಕಾರದ ವಿರುದ್ಧ ಹೋರಾಟ ನಡೆಸಿ ಬೆಳೆ ಪರಿಹಾರ ಕೊಡಿಸಿದ ಏಕೈಕ ನಾಯಕ ಪ್ರಿಯಾಂಕ್ ಖರ್ಗೆ" ಎಂದು ಸ್ಮರಿಸಿದ್ದಾರೆ.
"ಚಿತ್ತಾಪೂರಿನಲ್ಲಿಯೇ ಹುಟ್ಟಿ ಬೆಳೆದ ಬಿಜೆಪಿ ನಾಯಕರು, ಒಮ್ಮೆ ಕಣ್ಣುಬಿಟ್ಟು ಇಲ್ಲಿನ ಶಾಲಾ-ಕಾಲೇಜುಗಳು ಯಾವ ರೀತಿ ಅಭಿವೃದ್ಧಿ ಹೊಂದಿವೆ ಎಂಬುದನ್ನು ನೋಡಲಿ. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಿಕೊಂಡು, ನಾಯಕರನಿಸಿಕೊಂಡವರು ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವುದು ಅವರಿಗೆ ಶೋಭೆ ತರುವಂಥದ್ದಲ್ಲ" ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.