ಗುರುವಾರ, ಮಾರ್ಚ್ 12, 2026

ರಾಷ್ಟ್ರೀಯ ಸಂಘಟನೆ: ರಾಜ್ಯ ಪ್ರಚಾರ ಸಮಿತಿಗೆ ಜಗದೇವ ನೇಮಕ.

ಚಿತ್ತಾಪುರ: ರಾಷ್ಟ್ರಮಟ್ಟದಲ್ಲಿ ಬೃಹತ್ ಜಾಲವನ್ನು ಹೊಂದಿರುವ ಪ್ರತಿಷ್ಠಿತ 'ಅಖಿಲ ಭಾರತ ಕುಂಬಾರರ ಮಹಾಸಭಾದ' ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಚಿತ್ತಾಪುರದ ಜಗದೇವ ಎಸ್. ಕುಂಬಾರ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷರಾದ ನಿತ್ಯಾಭರಣ ಅವರು ಅಧಿಕೃತ ಆದೇಶ ಪತ್ರವನ್ನು ಹೊರಡಿಸಿದ್ದಾರೆ.

ಸಮಾಜದ ಅಭಿವೃದ್ಧಿಗಾಗಿ ಜಗದೇವ ಅವರು ನೀಡುತ್ತಿರುವ ನಿರಂತರ ಸೇವೆ ಹಾಗೂ ಸಂಘಟನೆಯ ಉದ್ದೇಶಗಳ ಮೇಲಿರುವ ಅವರ ಬದ್ಧತೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಈ ಸಂಘಟನೆಯ ಮಹತ್ವದ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಘಟಕದ ಅಧೀನದಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಮುನ್ನಡೆಸುವ ಪೂರ್ಣ ಅಧಿಕಾರವನ್ನು ಹೊಂದಿದ್ದಾರೆ. ಪ್ರಮುಖವಾಗಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಯುವ ಸಬಲೀಕರಣ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.

ತಮ್ಮ ಹುದ್ದೆಯ ವ್ಯಾಪ್ತಿಯಲ್ಲಿ ಬರುವ ವಿಭಾಗೀಯ ಸಮಿತಿಗಳನ್ನು ರಚಿಸುವ ಹಾಗೂ ಅಗತ್ಯ ಪದಾಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ಜಗದೇವ ಅವರಿಗೆ ನೀಡಲಾಗಿದೆ. ವಿಭಾಗ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಸಂಘಟನೆಗೆ ಬದ್ಧರಾಗಿರುವ, ಸೂಕ್ತ ಅನುಭವ ಹೊಂದಿರುವ ಸದಸ್ಯರನ್ನು ಗುರುತಿಸುವುದು. ಅಲ್ಲದೆ, ರಾಜ್ಯಾಧ್ಯಕ್ಷರು ಹಾಗೂ ಆಯಾ ಭಾಗದ ಹಿರಿಯ ನಾಯಕರೊಂದಿಗೆ ಚರ್ಚಿಸಿ ನೇಮಕಾತಿ ಪ್ರಕ್ರಿಯೆ ನಡೆಸುವುದು. ಅಖಿಲ ಭಾರತ ಕುಂಬಾರರ ಮಹಾಸಭಾದ ನೋಂದಾಯಿತ ನಿಯಮಗಳು ಹಾಗೂ ಶಿಸ್ತಿಗೆ ಒಳಪಟ್ಟು, ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವದ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಬಲಪಡಿಸುವುದು.

"ಜಗದೇವ ಕುಂಬಾರ ಅವರ ಸೇವೆಯು ನಮ್ಮ ಮಹಾಸಭೆಗೆ ಮತ್ತಷ್ಟು ಶಕ್ತಿ ಮತ್ತು ಗೌರವವನ್ನು ತಂದುಕೊಡಲಿದೆ ಎಂಬ ದೃಢ ವಿಶ್ವಾಸ ನಮ್ಮದಾಗಿದೆ. ಸಮಾಜದ ಹಿತಕ್ಕಾಗಿ ಅವರು ಕೈಗೊಳ್ಳುವ ಎಲ್ಲಾ ಯಶಸ್ವಿ ಕಾರ್ಯಗಳಿಗೆ ಸಂಘಟನೆಯ ಸಂಪೂರ್ಣ ಬೆಂಬಲವಿರುತ್ತದೆ" ಎಂದು ರಾಜ್ಯಾಧ್ಯಕ್ಷ ನಿತ್ಯಾಭರಣ ಅವರು ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ: ಬಿಜೆಪಿ ಆಕ್ರೋಶ.

​ಚಿತ್ತಾಪುರ: ಸೇಡಂ ಕ್ಷೇತ್ರದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಅಸಂವಿಧಾನಿಕ ಪದಗಳಿಂದ ನಿಂದಿಸಿರುವುದನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್ ತೀವ್ರವಾಗಿ ಖಂಡಿಸಿದ್ದಾರೆ.

​ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯ ಕುರಿತು ಈಗಾಗಲೇ ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

​ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭಿವೃದ್ಧಿಗೆ ಮೀಸಲಿದ್ದ 39 ಸಾವಿರ ಕೋಟಿ ರೂಪಾಯಿ ಅನುದಾನ ದುರ್ಬಳಕೆಯಾಗಿದೆ ಎಂದು ರಾಜಕುಮಾರ್ ಪಾಟೀಲ್ ತೇಲ್ಕೂರ್ ಪತ್ರಿಕಾ ಹೇಳಿಕೆ ನೀಡಿದ್ದರು. ಇದನ್ನು ಸಹಿಸದ ಸಚಿವರ ಬೆಂಬಲಿಗ ಚಂದ್ರಶೇಖರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ತೇಲ್ಕೂರ್ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಅಶ್ಲೀಲ ಹಾಗೂ ಕೆಟ್ಟ ಪದಗಳನ್ನು ಬಳಸಿ ಕಾಮೆಂಟ್ ಮಾಡಿದ್ದಾನೆ ಎಂದು ಬೆಣ್ಣೂರಕರ್ ದೂರಿದರು.

​ಯಾವಾಗಲೂ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ದಲಿತರ ಅಭಿವೃದ್ಧಿಯ ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾದರೂ ಮೌನವಾಗಿರುವುದೇಕೆ? ಈ ಕುರಿತು ಅವರು ಬಹಿರಂಗವಾಗಿ ಮಾತನಾಡಲಿ ಎಂದು ಬೆಣ್ಣೂರಕರ್ ಸವಾಲು ಹಾಕಿದರು.

​ಎಲ್ಲಾ ಸಮುದಾಯಗಳನ್ನು ಸಮನಾಗಿ ಕೊಂಡೊಯ್ಯುವ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಅಥವಾ ನಿಂದಿಸಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜನಶೆಟ್ಟಿ, ನಾಗರಾಜ ಹೂಗಾರ, ಈಶ್ವರ ದೊಡ್ಡಮನಿ, ಮಲ್ಲಿಕಾರ್ಜುನ ಇಟಗಿ, ಶಿವರಾಂ ಚವ್ಹಾಣ್, ಆನಂದ ಇಂಗಿಕಲ್, ನವೀನ್ ದಂಡೋತಿ. ಸೇರಿದಂತೆ ಇತರರು ಇದ್ದರು.

​"ರಾಜಕಾರಣದಲ್ಲಿ ಆರೋಗ್ಯಕರ ಟೀಕೆ ಮತ್ತು ಪ್ರಶ್ನೆಗಳಿರಲಿ. ಆದರೆ ಪ್ರಶ್ನೆ ಮಾಡಿದವರ ವಿರುದ್ಧವೇ ಅಸಂವಿಧಾನಿಕ ಪದಗಳಿಂದ ನಿಂದಿಸುವುದು ಸರಿಯಲ್ಲ. ಜಿಲ್ಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ತೇಲ್ಕೂರ್ ಅವರು ಸಮರ್ಥವಾಗಿ ಮಾತನಾಡುತ್ತಾರೆ ಎನ್ನುವ ಏಕೈಕ ಕಾರಣಕ್ಕೆ ಈ ರೀತಿ ಗುರಿ ಮಾಡಲಾಗುತ್ತಿದೆ."

— ಬಸವರಾಜ ಬೆಣ್ಣೂರಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

ಬುಧವಾರ, ಮಾರ್ಚ್ 11, 2026

ಪರೀಕ್ಷೆ ಎದುರಿಸಲು ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಸಿಡಿಪಿಒ.

ಚಿತ್ತಾಪುರ: ತಾಲ್ಲೂಕಿನ ಭಾಗೋಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲ್ಲೂಕು ಸಿಡಿಪಿಒ ಆರತಿ ಪಾಟೀಲ ಅವರು ಮಾತನಾಡಿ, "ವಿದ್ಯಾರ್ಥಿ ಜೀವನದಲ್ಲಿ ಹತ್ತನೇ ತರಗತಿಯು ಅತ್ಯಂತ ಪ್ರಮುಖ ಘಟ್ಟವಾಗಿದೆ. ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಪರೀಕ್ಷೆಯನ್ನು ಎದುರಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ," ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

​ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ. ಮಹಾಂತಗೌಡ ಪಾಟೀಲ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಕೃಷಿ ಮತ್ತು ತಾಂತ್ರಿಕ ಜ್ಞಾನದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಗ್ರಾಮದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟಕ್ಕೆ ಏರುತ್ತಿರುವುದು ಹೆಮ್ಮೆಯ ವಿಷಯ ಎಂದರು.

​ಎಸ್‌ಡಿಎಂಸಿ ಅಧ್ಯಕ್ಷ ದೇವೇಂದ್ರ ಡೋಣಗಾಂವ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯವಾಗಿ ಪರೀಕ್ಷೆ ಬರೆಯಬೇಕು ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ರಾಜೇಂದ್ರಪ್ಪ ಅರಣಕಲ್ ಅವರು ಕೂಡ ತಮ್ಮ ವಿಚಾರಗಳನ್ನು ಹಂಚಿಕೊಂಡರು.

​ಈ ಸಂದರ್ಭದಲ್ಲಿ ಶಾಲೆ ಮುಖ್ಯಗುರುಗಳಾದ ರವೀಂದ್ರ ರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಕೋರಿದರು. ವೇದಿಕೆಯ ಮೇಲೆ ಪ್ರಮುಖರಾದ ಶರಣಬಸಪ್ಪ ಎನ್. ಬೆಂಕಿ, ರಮೇಶ ನೀಲಕಂಠ, ಮಲ್ಲಿಕಾರ್ಜುನ ಏರಿ, ಮಹಾಂತಪ್ಪ ಹಾಸಬಾ, ಶಿವಯೋಗಿ ಏರಿ, ವಸಂತ ಸೂಗೂರು ಹಾಗೂ ಸೂರ್ಯಕಾಂತ್ ನವದಗಿ ಸೇರಿದಂತೆ ಶಾಲೆಯ ಸರ್ವ ಶಿಕ್ಷಕರು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.

​ಸಹಶಿಕ್ಷಕ ಬಸಪ್ಪ ಎಂಬತನಾಳ ಅವರು ಎಲ್ಲರನ್ನೂ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ಸುಧಾ ಮೇಡಂ ಅವರು ವಂದನಾರ್ಪಣೆ ಮಾಡಿದರು.

ಮಂಗಳವಾರ, ಮಾರ್ಚ್ 10, 2026

ವೆಂಕಟೇಶ ನಗರದಲ್ಲಿ ನೀರಿಗಾಗಿ ಹಾಹಾಕಾರ: ಪುರಸಭೆಗೆ ನಾಗರಿಕರ ಮುತ್ತಿಗೆ.

​ಚಿತ್ತಾಪುರ: ಪಟ್ಟಣದ ವೆಂಕಟೇಶ ನಗರದಲ್ಲಿ ಕಳೆದೊಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ನಿವಾಸಿಗಳು ಮಂಗಳವಾರ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರಿಗೆ ಮನವಿ ಪತ್ರ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

​ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
​ಈ ಸಂದರ್ಭದಲ್ಲಿ ಮಾತನಾಡಿದ ನಿವಾಸಿ ದೇವಪ್ಪ ನಂದೂರಕರ್, "ನಮ್ಮ ವಾರ್ಡಿನ ನೀರಿನ ಸಮಸ್ಯೆಯ ಬಗ್ಗೆ ಪುರಸಭೆ ವ್ಯವಸ್ಥಾಪಕರಿಗೆ, ನೀರು ಬಿಡುವವರಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ಎರಡು-ಮೂರು ಬಾರಿ ಲಿಖಿತ ಮನವಿ ನೀಡಿದ್ದರೂ ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ಸಮಸ್ಯೆ ಬಗೆಹರಿಯುತ್ತಿಲ್ಲ," ಎಂದು ಬೇಸರ ವ್ಯಕ್ತಪಡಿಸಿದರು.

​ "ತಿಳುವಳಿಕೆಯುಳ್ಳ ನಾವು ಸಮಸ್ಯೆ ಸರಿಯಾಗಬಹುದು ಎಂದು ತಾಳ್ಮೆಯಿಂದ ಕಾಯುತ್ತಿದ್ದೆವು. ಆದರೆ ಈಗ ತಾಳ್ಮೆ ಮೀರಿದೆ. ದಿನ ಬಿಟ್ಟು ದಿನ ಹಣ ತೆತ್ತು ಟ್ಯಾಂಕರ್ ಮೂಲಕ ನೀರು ತರಿಸಿಕೊಂಡು ಬದುಕು ಸಾಗಿಸುವಂತಾಗಿದೆ. ಇದು ನೀರು ಸರಬರಾಜು ಮಾಡುವವರಿಗೂ ತಿಳಿದಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಇದುವರೆಗೆ ನಮಗೆ ಕೇವಲ 'ಮಂತ್ರದಿಂದ ಮಾವಿನಕಾಯಿ ಉದುರಿಸುವ' ಕೆಲಸ ಮಾಡಲಾಗುತ್ತಿದೆಯೇ ಹೊರತು, ನಲ್ಲಿಗೆ ನೀರು ಬಿಡುವ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ," ಎಂದು ಅವರು ಹರಿಹಾಯ್ದರು.

​ಸಮಸ್ಯೆ ತಕ್ಷಣವೇ ಪರಿಹಾರವಾಗದಿದ್ದರೆ ಮುಂದಿನ ದಿನಗಳಲ್ಲಿ ಇಡೀ ಕುಟುಂಬದ ಸಮೇತ ಪುರಸಭೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ. "ನಮ್ಮ ಕುಟುಂಬಗಳನ್ನು ಬೀದಿಗೆ ತರಬೇಡಿ, ನಮಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಿ," ಎಂದು ನಿವಾಸಿಗಳು ಮನವಿ ಮಾಡಿದರು.

ಈ ಪ್ರತಿಭಟನೆಯಲ್ಲಿ ನಿವಾಸಿಗಳಾದ ಮೋನಯ್ಯ ಪಂಚಾಳ, ಹಮೀದ್‌ (ರಿಗಲ್ ಟೇಲರ್), ಸಾಬಣ್ಣ ಕಲಬುರಗಿ, ಹಣಮಂತ ಆಚಾರಿ, ಉದಯಕುಮಾರ ಇಂಗಳೆ, ರಾಘವೇಂದ್ರ ದ್ಯಾವರಳ್ಳಿ, ರೂಪಾ ಪೂಜಾರಿ, ಬೇಬಿ ಗುತ್ತೇದಾರ, ಪ್ರಭಾವತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸೋಮವಾರ, ಮಾರ್ಚ್ 9, 2026

ಸಂಭ್ರಮದಿಂದ ಜರುಗಿದ ಶ್ರೀ ಆಶಾಪುರ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ದೀಪೋತ್ಸವ

ಗುರುಮಿಟ್ಕಲ್: ಸುತ್ತಲಿನ ನಾಲ್ಕು ಗ್ರಾಮಗಳ ಮಧ್ಯದಲ್ಲಿರುವ ಕಾರಣಿಕ ಕ್ಷೇತ್ರ ಹಾಗೂ ಭಕ್ತರ ಆರಾಧ್ಯ ದೈವ ಶ್ರೀ ಆಶಾಪುರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಥೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮಗಳು ಭಕ್ತಿ-ಭಾವ ಮತ್ತು ಸಡಗರ-ಸಂಭ್ರಮಗಳಿಂದ ಜರುಗಿದವು.

ಎಲೇರಿ, ಗೊಪ್ಲಾಪುರ್, ಗಣಾಪುರ್, ಆಶಾಪುರ್ ತಾಂಡಾ ಹಾಗೂ ಜೆ.ಬಿ. ತಾಂಡಾಗಳ ಕೇಂದ್ರ ಬಿಂದುವಾಗಿರುವ ಶ್ರೀ ಆಶಾಪುರ ಆಂಜನೇಯ ದೇವಸ್ಥಾನದ ರಥೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಬೆಳಗಿದ ದೀಪೋತ್ಸವ: ರಥೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ವಿಶೇಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ದೇವೇಂದ್ರಪ್ಪ ಮಾಸ್ತರ್ ಕಾಳೂರ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗುರುಮಿಟ್ಕಲ್ ಅಧ್ಯಕ್ಷರಾದ ಶರಣಬಸಪ್ಪ ಕಾಳೂರ್  ಅವರ ನೇತೃತ್ವದಲ್ಲಿ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಗಣ್ಯರ ಉಪಸ್ಥಿತಿ: ಈ ಪುಣ್ಯ ಕಾರ್ಯಕ್ರಮದಲ್ಲಿ ದಿವಂಗತ ಶರಣಗೌಡ ಶಿವರಾಯ್ ಅವರ ಪುತ್ರ ಹಾಗೂ ಯಾದಗಿರಿಯ ನವ ನಂದಿ ಗುರುಕುಲ ಶಾಲೆಯ ಆಡಳಿತ ಮಂಡಳಿಯ ಸೋಮನಾಥ್ ರೆಡ್ಡಿ ಶಿವರಾಜ್, ಎಲೇರಿಯ ಬಸವರಾಜ್ ಗೌಡ ಶಿವರಾಜ್, ಚಂದ್ರಕಾಂತ್ ಗೌಡ ಎಲೇರಿ, ಶರಣಗೌಡ ಅಮಾಪ್ಯನೂರು, ಎಸ್.ಐ. ಹಣಮಂತ ಬೆಟ್ಟದ್, ಕಾಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶರಣಪ್ಪ ಕಾಳೂರು, ಪ್ರಮುಖರಾದ ಮಹೇಶ್ ಕಳೂರ್, ಗೌಡಪ್ಪ, ಮಾಳು ಬಳಗಾರ, ಬಸ್ಸು ಅತ್ತಿ ಗೂಡೂರ್, ಅಂತಪ್ಪ ದ್ಯಾವಮ್ಮನವರ್ ಸೇರಿದಂತೆ ಹಲವು ಗಣ್ಯರು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘ: 2026-27ನೇ ಸಾಲಿನ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ.

ಚಿತ್ತಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2026-27ನೇ ಸಾಲಿನ ಸದಸ್ಯತ್ವ ನವೀಕರಣ ಹಾಗೂ ಹೊಸದಾಗಿ ಸದಸ್ಯತ್ವ ಪಡೆಯಲು ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಕಲಬುರಗಿ ಜಿಲ್ಲಾ ಸಮಿತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್ ಹಾಗೂ ರಾಜ್ಯ ಸಮಿತಿ ಸದಸ್ಯ ರಾಜಕುಮಾರ ಉದನೂರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ತಾಪುರ ಸೇರಿ ಜಿಲ್ಲಾದ್ಯಾಂತ ಇರುವ ಪತ್ರಕರ್ತರು ಮಾರ್ಚ್ 10ರಿಂದ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಅರ್ಜಿಗಳನ್ನು ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 20ರ ಸಂಜೆ 5:00 ಗಂಟೆ ಕಡೆಯ ದಿನವಾಗಿರುತ್ತದೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳಾದ ಹಿಂದಿನ ವರ್ಷದ ಸಂಘದ ಗುರುತಿನ ಚೀಟಿ (ನವೀಕರಣ ಮಾಡುವವರಿಗೆ).ಸಂಪಾದಕರು ಅಥವಾ ಸಂಬಂಧಪಟ್ಟ ಮಾಧ್ಯಮ ಸಂಸ್ಥೆಗಳು ನೀಡಿದ ಆದೇಶ/ನೇಮಕಾತಿ ಪ್ರತಿ.ಆಧಾರ್ ಕಾರ್ಡ್ ಪ್ರತಿ.ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.ರೂ. 510/- ನಿಗದಿತ ಶುಲ್ಕ.

ಹೊಸದಾಗಿ ಸಂಘದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ (SSLC) ತೇರ್ಗಡೆಯಾದ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಇದರ ಜತೆಗೆ, ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಂದ ದೃಢೀಕರಣ ಪತ್ರವನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸಮಿತಿ ಸದಸ್ಯರಾದ ರಾಜಕುಮಾರ ಉದನೂರ ಸ್ಪಷ್ಟಪಡಿಸಿದ್ದಾರೆ.

ಶಿಸ್ತು, ಮೌಲ್ಯಗಳೇ ಯಶಸ್ಸಿನ ಮೆಟ್ಟಿಲು: ಜಗದೇವ ಕುಂಬಾರ

ಚಿತ್ತಾಪೂರ: ವಿದ್ಯಾರ್ಥಿ ಜೀವನದಲ್ಲಿ ಪ್ರಾಥಮಿಕ ಶಿಕ್ಷಣವು ಬುನಾದಿಯಿದ್ದಂತೆ. ಈ ಶಾಲೆಯಲ್ಲಿ ನೀವು ಕಲಿತ ಶಿಸ್ತು, ಸಮಯ ಪ್ರಜ್ಞೆ ಮತ್ತು ಮೌಲ್ಯಗಳನ್ನು ಮುಂದಿನ ದಿನಗಳಲ್ಲೂ ಪಾಲಿಸಿ. ಉತ್ತಮ ಪ್ರಜೆಗಳಾಗಿ ಬೆಳೆದು ಸಮಾಜಕ್ಕೆ ಮಾದರಿಯಾಗಿ," ಎಂದು ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯ ಕಾರ್ಯದರ್ಶಿಯಾದ ಜಗದೇವ ಎಸ್ ಕುಂಬಾರ ಹೇಳಿದರು.

ಪಟ್ಟಣದ ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 5ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ  ವಿದ್ಯಾದೇವತೆ ಶಾರದಾ ಮಾತೆ ಹಾಗೂ ಸರಸ್ವತಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನಗಳನ್ನು ಅರ್ಪಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದ ಒಂದು ಹಂತವನ್ನು ಯಶಸ್ವಿಯಾಗಿ ಮುಗಿಸಿ, ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಬಿಳ್ಕೊಡುಗೆ ಸಮಾರಂಭವು ಕೇವಲ ಬೀಳ್ಕೊಡುವಿಕೆಯಲ್ಲ, ಇದು ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುವ ಶುಭ ಸಂದರ್ಭವಾಗಿದೆ. ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯು ಕೇವಲ ಅಕ್ಷರ ಕಲಿಸಿದ ಸ್ಥಳವಲ್ಲ, ಇದು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಪವಿತ್ರ ದೇಗುಲವಾಗಿದೆ. ಇಲ್ಲಿ ಕಲಿತ ಸಂಸ್ಕಾರ ಮತ್ತು ಜ್ಞಾನದೊಂದಿಗೆ ನೀವು ಸಾಧನೆಯ ಶಿಖರ ಏರಬೇಕು, ನಿಮ್ಮ ಸಾಧನೆ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಲಿ," ಎಂದು ಹಾರೈಸಿದರು.

ಬಿಳ್ಕೊಡುಗೆ ಪಡೆಯುತ್ತಿರುವ 5ನೇ ತರಗತಿಯ ವಿದ್ಯಾರ್ಥಿಗಳಾದ ಪಿರ್ದೋಸ್, ಅಮಾನ್ ಮತ್ತು ಮಾನಸ ಮಾತನಾಡಿ, "ನಮಗೆ ಅಕ್ಷರ ಕಲಿಸಿ, ತಪ್ಪು ಮಾಡಿದಾಗ ತಿದ್ದಿ, ಪೋಷಕರಂತೆ ಪ್ರೀತಿಯಿಂದ ನೋಡಿಕೊಂಡ ನಮ್ಮ ಗುರುಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ಶಾಲೆಯ ನೆನಪುಗಳು ನಮ್ಮ ಜೀವನದ ಮಧುರ ಕ್ಷಣಗಳಾಗಿರುತ್ತವೆ. ನಮ್ಮನ್ನು ಈ ಹಂತಕ್ಕೆ ಬೆಳೆಸಿದ ಎಲ್ಲಾ ಶಿಕ್ಷಕರಿಗೂ ನಾವು ಚಿರಋಣಿಯಾಗಿದ್ದೇವೆ," ಎಂದು ಭಾವುಕವಾಗಿ ನುಡಿದರು.

ಈ ಸಂದರ್ಭದಲ್ಲಿ  ಶಾಲೆಯ ಶಿಕ್ಷಕರಾದ ಅಂಬರೀಶ್ ಭೋವಿ, ಶ್ರೀಮತಿ ಫೈಮುದ್ ಬೇಗಂ, ಸುಜಾತಾ ಕುಂಬಾರ, ಶಮ್ರೀನ್ ಬೇಗಂ, ಸುನಿತಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಟಿ-20 ವಿಶ್ವಕಪ್ ಜಯ: ವಾಡಿಯಲ್ಲಿ ವಿಜಯೋತ್ಸವ.

ಚಿತ್ತಾಪುರ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಮತಕ್ಷೇತ್ರದ ವಾಡಿ ಪಟ್ಟಣದ ನ್ಯೂ ಟೌನ್‌ನಲ್ಲಿ ‘ಬೆಳಗಿನ ಬಳಗ’ದ ಸದಸ್ಯರು ಭಾರತಾಂಬೆಗೆ ಜೈಕಾರ ಹಾಕುವ ಮೂಲಕ ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದರು.

ಬೆಳಗ್ಗೆ ಒಗ್ಗೂಡಿದ ಬಳಗದ ಸದಸ್ಯರು ಭಾರತದ ಗೆಲುವನ್ನು ಪರಸ್ಪರ ಅಭಿನಂದಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರು, "ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿ ವಿಶ್ವವಿಜೇತವಾಗಿ ಹೊರಹೊಮ್ಮಿರುವುದು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ. ಕೋಟ್ಯಂತರ ಭಾರತೀಯರ ಖುಷಿಯನ್ನು ಇಮ್ಮಡಿಗೊಳಿಸಿದ ಭಾರತದ ಯುವ ಕ್ರಿಕೆಟ್ ಪಡೆಯ ಕ್ರೀಡಾಸ್ಫೂರ್ತಿಯು ಜಗತ್ತಿನ ಕ್ರೀಡಾಪಟುಗಳಿಗೆ, ಕ್ರೀಡಾ ಪ್ರೇಮಿಗಳಿಗೆ ಹಾಗೂ ಯುವಕರಿಗೆ ಮಾದರಿಯಾಗಿದೆ. ವಿಜೇತ ತಂಡಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳು," ಎಂದು ಹರ್ಷ ವ್ಯಕ್ತಪಡಿಸಿದರು.

ಈ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಬೆಳಗಿನ ಬಳಗದ ಪ್ರಮುಖರಾದ ಜಯದೇವ ಜೋಗಿಕಲಮಠ, ಕಾಶಿನಾಥ ಶೆಟಗಾರ, ಬಸವರಾಜ ಕೇಶ್ವರ, ಅಮೃತಪ್ಪ ದಿಗ್ಗಾಂವ, ಶ್ರೀನಿವಾಸ ಅಣ್ಣೆ, ಸತೀಶ ಸಾವಳಗಿ, ವಿಠಲ ರಾಠೋಡ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ಭಾನುವಾರ, ಮಾರ್ಚ್ 8, 2026

ಹಕ್ಕುಪತ್ರದ ಕನಸು ನನಸು: ಶ್ರಮಕ್ಕೆ ಸಂದ ಜಯ.

ಚಿತ್ತಾಪುರ: ಕ್ಷೇತ್ರದ ಸ್ಟೇಷನ್ ತಾಂಡಾದ ನಿವಾಸಿಗಳ ದಶಕಗಳ ಕಾಲದ ಬೇಡಿಕೆಯಾಗಿದ್ದ ಮನೆಗಳ ಹಕ್ಕುಪತ್ರ ವಿತರಣೆಯ ಕಾರ್ಯವು ಕೊನೆಗೂ ಯಶಸ್ವಿಯಾಗಿ ನೆರವೇರಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಸುಮಾರು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ನಿವಾಸಿಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲಾಗಿದೆ.

ಪುರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಜಗದೀಶ್ ಡಿ. ಚವ್ಹಾಣ್ ಅವರ ನಿರಂತರ ಪರಿಶ್ರಮ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಿಂದ ಈ ಕಾರ್ಯ ಸಾಧ್ಯವಾಗಿದೆ.

ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಕಾಳಜಿಯಿಂದ ಈ ಯೋಜನೆ ಜಾರಿಗೆ ಬಂದಿದೆ.ಹಲವು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸವಿದ್ದರೂ ಹಕ್ಕುಪತ್ರವಿಲ್ಲದೆ ನಿವಾಸಿಗಳು ಬ್ಯಾಂಕ್ ಸಾಲ, ಸರ್ಕಾರಿ ಸೌಲಭ್ಯ ಹಾಗೂ ಖಾತೆ ಬದಲಾವಣೆಯಂತಹ ಸೌಲಭ್ಯಗಳಿಂದ ವಂಚಿತರಾಗಿದ್ದರು. ಈಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ. ಸಾವಿರಾರು ಕುಟುಂಬಗಳ ಪರವಾಗಿ ಜಗದೀಶ್ ಡಿ. ಚವ್ಹಾಣ್ ಅವರು ರಾಜ್ಯ ಸರ್ಕಾರಕ್ಕೆ ಹಾಗೂ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.


"ನಾನು ಪಟ್ಟ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ತಾಂಡಾದ ಬಡ ಜನರ ಮುಖದಲ್ಲಿ ನಗು ನೋಡುತ್ತಿರುವುದು ಸಂತಸ ತಂದಿದೆ. ಇದು ನಮ್ಮ ನೆಚ್ಚಿನ ನಾಯಕರಾದ ಪ್ರಿಯಾಂಕ್ ಖರ್ಗೆ ಅವರ ಆಶೀರ್ವಾದದ ಬಲದಿಂದ ಮಾತ್ರ ಸಾಧ್ಯವಾಗಿದೆ."

— ಜಗದೀಶ್ ಡಿ. ಚವ್ಹಾಣ್, ಮಾಜಿ ಅಧ್ಯಕ್ಷರು, ಪುರಸಭೆ ಸ್ಥಾಯಿ ಸಮಿತಿ ಚಿತ್ತಾಪುರ.

ಮೋದಿಯ ವಿದೇಶಾಂಗ ನೀತಿಯಿಂದ ದೇಶದ ಗೌರವಕ್ಕೆ ಧಕ್ಕೆ: ಖರ್ಗೆ ವಾಗ್ದಾಳಿ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹದಗೆಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಟೀಕಿಸಿದರು.

ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರದ ₹1,069 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು "ಮೋದಿಯವರು ಅಮೆರಿಕದ ಗುಲಾಮನಂತೆ ವರ್ತಿಸುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿಸಲು ಅಮೆರಿಕದ ಅನುಮತಿಗಾಗಿ ಕಾಯುವ ಸ್ಥಿತಿ ಬಂದಿದೆ. ಟ್ರಂಪ್‌ ಅವರೊಂದಿಗೆ ಸ್ನೇಹ ಮಾಡಿಕೊಂಡು ದೇಶದ ಹಿತಾಸಕ್ತಿಯನ್ನು ಗಿರಿವಿ ಇಟ್ಟಿದ್ದಾರೆ. ನೆಹರೂ ಅವರ ಕಾಲದ 'ಅಲಿಪ್ತ ನೀತಿ' ವಿಶ್ವಶಾಂತಿಗೆ ಪೂರಕವಾಗಿತ್ತು. ಆದರೆ ಈಗಿನ ಮೋದಿಯವರ ನಡೆಯಿಂದ ವಿಶ್ವಶಾಂತಿ ಕದಡುತ್ತಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, 371(ಜೆ) ಜಾರಿಗೆ ಬಿಜೆಪಿ ಅಂದು ಅಡ್ಡಿಪಡಿಸಿತ್ತು ಎಂದು ಸ್ಮರಿಸಿದ ಅವರು, ಈ ಸೌಲಭ್ಯದಿಂದ ಇಂದು ಬಡ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟು ಪಡೆಯುತ್ತಿದ್ದಾರೆ ಎಂದರು.
 
ನೀರಾವರಿ ಹಾಗೂ ಉದ್ಯೋಗದ ಭರವಸೆ: ಡಿಸಿಎಂ, ಡಿಕೆಶಿ ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಮಲ್ಲಿಕಾರ್ಜುನ ಖರ್ಗೆ ಅವರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದ 400ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮೂಲಕ ನಾವು 'ನೀರಾವರಿ ಗ್ಯಾರಂಟಿ' ನೀಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲು 2,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿದ್ದು, ಕಲ್ಯಾಣ ಕರ್ನಾಟಕಕ್ಕೆ 330 ಶಾಲೆಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು" ಎಂದು ತಿಳಿಸಿದರು.
ಗ್ಯಾಸ್ ಬೆಲೆ ಏರಿಕೆ ಪ್ರಿಯಾಂಕ್ ಖರ್ಗೆ ಕಿಡಿ
ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಇಂದು ವಿಶ್ವ ಮಹಿಳಾ ದಿನ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆ ಏರಿಸಿ ಜನರಿಗೆ 'ಅಚ್ಛೇ ದಿನ್' ಉಡುಗೊರೆ ನೀಡಿದೆ. ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಅವರಿಗೆ ಮರಳಿಸುತ್ತಿರುವುದನ್ನು ಸಹಿಸದೆ ಬಿಜೆಪಿ ಟೀಕಿಸುತ್ತಿದೆ. ಚಿತ್ತಾಪುರದ ಪ್ರತಿಯೊಂದು ಹಳ್ಳಿಗೆ ಸರಾಸರಿ ₹1 ಕೋಟಿಗೂ ಅಧಿಕ ಅನುದಾನ ನೀಡಲಾಗುತ್ತಿದೆ. ನಾನು ಈ ಮಣ್ಣಿನ ಮೊಮ್ಮಗನಾಗಿ ನಿಮ್ಮ ಸೇವೆ ಮಾಡುತ್ತಿದ್ದೇನೆ. ಜನರ ಆಶೀರ್ವಾದ ಇರುವವರೆಗೆ ನನಗೆ ಯಾರ ಭಯವೂ ಇಲ್ಲ" ಎಂದು ಗುಡುಗಿದರು.

ಕಾರ್ಯಕ್ರಮದ ಮುಖ್ಯಾಂಶಗಳು:
ಕ್ಷೇತ್ರದಲ್ಲಿ ₹1,069 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.
•ಕಲಬುರಗಿ ಜಿಲ್ಲೆಯ 15.50 ಲಕ್ಷ ರೈತರಿಗೆ ₹2,590 ಕೋಟಿ ಪರಿಹಾರ ವಿತರಣೆ.
•ಚಿತ್ತಾಪುರಕ್ಕೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ 2,000 ಮನೆಗಳ ಮಂಜೂರಾತಿ.

ವೇದಿಕೆಯಲ್ಲಿ ಡಾ. ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ್, ಶ್ರೀಮತಿ ಖನಿಜ ಫಾತಿಮಾ, ಎಂ ವೈ ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ಡಾ ಚಂದ್ರಶೇಖರ್ ಪಾಟೀಲ್, ತಿಪ್ಪಣಪ್ಪ ಕಮಕನೂರು, ಬಿ ಆರ್ ಪಾಟೀಲ್, ಬಾಬುರಾವ್ ಚಿಂಚನಸೂರ, ಜಗದೇವ ಗುತ್ತೇದಾರ್, ಸಯ್ಯದ್ ಮೊಹಮ್ಮದ್ ಅಲಿ ಹುಸೇನ್, ದೇವೇಂದ್ರಪ್ಪ ಮರತೂರು, ಅರುಣ್ ಕುಮಾರ್ ಪಾಟೀಲ್, ಸೈಯದ್ ಮಹಿಮೂದ್ ಚಿಸ್ತಿ ಸಾಹೇಬ್, ಪ್ರವೀಣ್ ಹರವಾಳ, ಶ್ರೀಮತಿ ಚಂದ್ರಿಕಾ ಪರಮೇಶ್ವರಿ, ಅಧಿಕಾರಿಗಳಾದ ಜಿಲ್ಲಾಧಿಕಾರಿ  ಫೌಜಿಯ ತರನ್ನುಮ್, ಜಿಪಂ ಸಿಇಓ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ್ ಶ್ರೀನಿವಾಸುಲು, ಎಸಿ ಪ್ರಭುರಾಜ್, ತಹಸಿಲ್ದಾರ್ ನಾಗಯ್ಯ ಹಿರೇಮಠ ಡಿವೈಎಸ್ಪಿ ಶಂಕರಗೌಡ ಪಾಟೀಲ್. ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಶನಿವಾರ, ಮಾರ್ಚ್ 7, 2026

ಚಿತ್ತಾಪುರ: ₹1069 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ; ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ.

ಚಿತ್ತಾಪುರ: ಪಟ್ಟಣದ ಮಳಖೇಡ ರಸ್ತೆಯ ಸೇಂದಿ ಡಿಪೋ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿರುವ ಬೃಹತ್ ಅಡಿಗಲ್ಲು ಹಾಗೂ ಉದ್ಘಾಟನಾ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ವೀಕ್ಷಿಸಿದರು.

​ಕ್ಷೇತ್ರದ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತದ ಎನ್ನಲಾದ ಅಂದಾಜು ₹1069 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಈ ಸಂದರ್ಭದಲ್ಲಿ ಚಾಲನೆ ದೊರೆಯಲಿದೆ.
​ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿಗಳು.ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವರು​ ಡಾ. ಶರಣಪ್ರಕಾಶ ಪಾಟೀಲ್, ಸೇರಿದಂತೆ ಹಲವು ಶಾಸಕರು, ಎಂಎಲ್‌ಸಿಗಳು ಹಾಗೂ ಮಾಜಿ ಸಚಿವರು ಭಾಗವಹಿಸಲಿದ್ದಾರೆ.

​ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ವೇದಿಕೆ ನಿರ್ಮಾಣ, ಸಾರ್ವಜನಿಕರ ಆಸನ ವ್ಯವಸ್ಥೆ ಹಾಗೂ ಊಟದ ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

​ಉಪಸ್ಥಿತರಿದ್ದ ಅಧಿಕಾರಿಗಳು ಮತ್ತು ಮುಖಂಡರು:
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರಸಿಂಗ್ ಮೀನಾ, ಎಸ್ ಪಿ ಅಡ್ಡರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಜರಿದ್ದರು.ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ರಮೇಶ್‌ ಮರಗೋಳ, ನಾಗರೆಡ್ಡಿ ಪಾಟೀಲ ಕರದಾಳ, ಸುನೀಲ್ ದೊಡ್ಡಮನಿ, ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ನಾಗಯ್ಯ ಗುತ್ತೇದಾರ, ಮನ್ಸೂರ್ ಪಟೇಲ್, ಎಂ.ಎ.ರಷೀದ್, ಜಯಪ್ರಕಾಶ್ ಕಮಕನೂರ, ಶಿವರಾಜ್ ಕಲಗುರ್ತಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಿಯಾಂಕ್ ಖರ್ಗೆಯವರ ಅಭಿವೃದ್ಧಿ ಕಾರ್ಯಕಂಡು ಬಿಜೆಪಿ ನಾಯಕರಿಗೆ ದಿಗ್ಭ್ರಮೆ: ಎಪಿಎಂಸಿ ಮಾಜಿ ಅಧ್ಯಕ್ಷ ತಿರುಗೇಟು

ಚಿತ್ತಾಪೂರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸತತ ಪ್ರಯತ್ನದಿಂದ ಚಿತ್ತಾಪೂರ ಕ್ಷೇ...