ನಮ್ಮ ಸರ್ಕಾರ ರೈತರ ಪರ ಸರ್ಕಾರ: ಬೊಮ್ಮಾಯಿ.

ಕಲಬುರಗಿ: ನಮ್ಮ ಸರ್ಕಾರ ರೈತರ ಪರ ಸರ್ಕಾರವಾಗಿದ್ದು, ರೈತರಿಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ನುಡಿದರು.

ಸೋಮವಾರ ಸೇಡಂ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಬೆಂಗಳೂರು ಹಾಗೂ ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮತ ನೇತೃತ್ವದಲ್ಲಿ  ಅಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು ರೈತರ ಮಕ್ಕಳಿಗೆ ನೀಡುವ ವಿದ್ಯಾನಿಧಿ ಯೋಜನೆ ಮಹತ್ವದ್ದು. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 4 ಗಂಟೆಯಲ್ಲಿ ಜಾರಿಗೆ ತಂದೆನು ಎಂದು ಹೇಳಿದ ಅವರು ವಿದ್ಯಾನಿಧಿಯಿಂದ ರೈತರ ಮಕ್ಕಳು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಿದೆ ಎಂದು ಹೇಳಿದರು.
ರಾಜ್ಯದ 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂಪಾಯಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು. 45 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಎಲ್ಲಾ ಸಹಕಾರ ಬ್ಯಾಂಕ್ ಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಈ ಮೂಲಕ ಎಲ್ಲಾ ಸಹಕಾರ ಬ್ಯಾಂಕ್‍ಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ತಲುಪಲಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ  ಸಹಕಾರ ರಂಗ ಇತರ ರಂಗಗಳಿಗಿಂತ ಮಂಚೂಣಿಯಲ್ಲಿರಬೇಕು. ಅದು ಸರ್ವ ಸ್ಪರ್ಶಿ-ಸರ್ವ ವ್ಯಾಪಿಯಾಗಬೇಕು ಎಂದು ಅವರು ಆಶಿಸಿದರು.

ಯಶಸ್ವಿನಿ ಯೋಜನೆ ಬಡವರಿಗೆ ಅನುಕೂಲಕರ ಯೋಜನೆಯಾಗಿದ್ದು, ಮತ್ತೆ ಈ ಯೋಜನೆ ಜಾರಿ ಮಾಡಬೇಕೆಂದು ಬಡಜನತೆ ಒತ್ತಾಯಿಸಿದ್ದರಿಂದ ರಾಜ್ಯ ಬಜೆಟ್‍ನಲ್ಲಿ 300 ಕೋಟಿ ರೂಪಾಯಿ ಮೀಸರಿಸಲಾಗಿದೆ. ಬಡವರಿಗೆ ಹೃದ್ರೋಗ, ಕಿಡ್ನಿ, ಕರಳು ಬೇನೆ, ಕ್ಯಾನ್ಸರ್ ಮುಂತಾದ ರೋಗಗಳಿಗೆ ಆಸ್ಪತ್ರೆಗಳಲ್ಲಿ ನೇರವಾಗಿ ಚಿಕಿತ್ಸೆ ದೊರೆಯಲಿದೆ ಎಂದು ಯಶಸ್ವಿನಿ ಯೋಜನೆಯ ಮಹತ್ವ ಹೇಳಿದರು.
 
ಮುಚ್ಚುವ ಸ್ಥಿತಿಯಲ್ಲಿದ್ದ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕನ್ನು ಮೇಲೆತ್ತಿ 1012 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಸುಸ್ಥಿತಿಗೆ ತಂದಿದ್ದಾರೆ ಎಂದು ಹೇಳುವ ಮೂಲಕ ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರನ್ನು ಮುಖ್ಯಮಂತ್ರಿಗಳು ಹಾಡಿಹೊಗಳಿದರು.

  ಕಾಗಿಣಾ ಏತ ನೀರಾವರಿ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದು, ಸದ್ಯದಲ್ಲೇ ನಾನೇ ಈ ಯೋಜನೆಗೆ ಚಾಲನೆ ನೀಡಲಿದ್ದೇನೆ ಎಂದು ಅವರು ಹೇಳಿದರು.

ಸಹಕಾರ ತತ್ವದ ಏಳು ತತ್ವಗಳನ್ನು ಸಾರುವ ಏಳು ಬಣ್ಣಗಳ ಒಳಗೊಂಡ ಸಹಕಾರ ಧ್ವಜಾರೋಹಣ ನೆರವೇರಿಸಿದ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ಅವರು ಮಾತನಾಡಿ, ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ನಬಾರ್ಡ್‍ಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು. ಸಹಕಾರ ರಂಗ ಬಲವರ್ಧನೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಕಾರ ಖಾತೆಯನ್ನು ಸೃಷ್ಠಿಸಿದ್ದು, ಇದರ ಹೊಣೆಯನ್ನು ಅಮಿತ್ ಶಾ ಅವರು ಹೊತ್ತಿದ್ದಾರೆ ಎಂದು ಗುಣಗಾನ ಮಾಡಿದರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮಾತನಾಡಿ, ಸಹಕಾರ ರಂಗದಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಕರ್ನಾಟಕ ಸರ್ಕಾರ ಈಗ ಮುಂಚೂಣಿಗೆ ಬರುತ್ತಿದೆ ಎಂದು ಹೇಳಿದರು. 

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಮಾತನಾಡಿ ನವೆಂಬರ್ 14ರಿಂದ 20 ವರೆಗೆ ಸಹಕಾರ ಸಪ್ತಾಹ ಆಚರಿಸುವ ಮೂಲಕ ಗುರಿ-ಧ್ಯೇಯೋದ್ದೇಶಗಳ ಸಾಧಿಸಲಾಗುವುದು ಎಂದರು. ಇದೇ ಮೊದಲ ಬಾರಿಗೆ ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳು ಲಾಭದಲ್ಲಿವೆ ಎಂದು ಹೆಮ್ಮೆಪಟ್ಟುಕೊಂಡರು. ಸಹಕಾರಿ ಸಪ್ತಾಹದಲ್ಲಿ ಇಷ್ಟೊಂದು ಜನ ಎಲ್ಲೂ ಸೇರಿಸರಲಿಲ್ಲ. ಆದರೆ ಸೇಡಂದಲ್ಲಿ ನಿರೀಕ್ಷೆ ಮೀರಿ ಜನ ಸೇರಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಮಾತನಾಡಿ, ಡಿಸಿಸಿ ಬ್ಯಾಂಕ್ ಅನ್ನು ಸುಸ್ಥಿಗೆ ತರುವ ಮೂಲಕ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರು ಕ್ರಾಂತಿ ಮಾಡಿದ್ದಾರೆ. ಎಲ್ಲಾ ವರ್ಗದವರಿಗೂ ಸಾಲ ಸಿಗುವ ಪ್ರಯತ್ನ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.  

  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು ಹಾಗೂ ಸುರಪುರ ಶಾಸಕ ನರಸಿಂಹ ನಾಯಕ (ರಾಜುಗೌಡ) ಕೂಡ ತೇಲ್ಕೂರ ಸೇವೆಯನ್ನು ಕೊಂಡಾಡಿದರು. ಡಿಸಿಸಿ ಬ್ಯಾಂಕ್ ಹೆಮ್ಮರವಾಗಿ ಬೆಳೆಯಲು ಶ್ರಮಿಸಿದ ಬ್ಯಾಂಕಿನ ಸದಸ್ಯರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. 
ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮಾತನಾಡಿ, ಮಂತ್ರಿಯಾಗಿದ್ದರೂ ಇಷ್ಟು ಖುಷಿ ದೊರಕುತ್ತಿರಲಿಲ್ಲ. ಆದರೆ ಮುಚ್ಚುವ ಸ್ಥಿತಿಗೆ ತಲುಪಿದ್ದ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಪುನ:ಶ್ಚೇತನಗೊಳಿಸಿ ರೈತರಿಗೆ ಮತ್ತೆ ಸಾಲ ವಿತರಣೆ ಮಾಡಿರುವುದು ಹೆಚ್ಚಿನ ಖುಷಿ ಕೊಟ್ಟಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜಕುಮಾರ್ ಪಾಟೀಲ್ ತೇಲ್ಕೂರ ಸೇರಿದಂತೆ 13 ಮಂದಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಲಬುರಗಿ ತರಬೇತಿ ಸಂಸ್ಥೆಯ ವಸತಿ ನಿಲಯದ ನೂತನ ಕಟ್ಟಡದ ಶಂಕು ಸ್ಥಾಪನೆಯನ್ನು ನೆರವೇರಿಸಿರು. 

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ  ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ,  ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ,  ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದ್ರಕಾಂತ ಜಿ. ಪಾಟೀಲ (ಚಂದು ಪಾಟೀಲ), ವಿಧಾನಸಭೆ ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಉಮೇಶ ಜಾಧವ,  ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ,  ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ್,  ಸಹಕಾರ ಸಂಘಗಳ ನಿಬಂಧಕ ಡಾ. ಕ್ಯಾಪ್ಟನ್ ಕೆ. ರಾಜೇಂದ್ರ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿ ಡಾ. ಗಿರೀಶ ಡಿ. ಬದೋಲೆ, ಸೇಡಂ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಡಿಸಿಸಿ ಬ್ಯಾಂಕ್ ಹಾಗೂ ವಿವಿಧ ಸಹಕಾರ ಸಂಘಗಳ ನಿರ್ದೇಶಕರು, ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.

ತಾಲ್ಲೂಕು ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ.

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.