ಎಲ್ಲಾ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಪ್ರಮುಖ: ಗುತ್ತೇದಾರ
ಚಿತ್ತಾಪುರ: ಎಲ್ಲಾ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಬಹಳ ಪ್ರಮುಖವಾಗಿದೆ ಎಂದು ಹಿರಿಯ ಪತ್ರಕರ್ತ ಕಾಶಿನಾಥ ಹೇಳಿದರು.
ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕ ಆಸ್ಪತ್ರೆ ಚಿತ್ತಾಪುರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಭಾರತೀಯ ರೆಡ್ ಕ್ರಾಸ್ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಶೈಕ್ಷಣಿಕ ಸಾಲಿನ ಒಂದು ದಿವಸದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಆರೋಗ್ಯಯುತ ಸಮಾಜ ನಿರ್ಮಾಣ ಆಗಬೇಕಾದರೆ ಅದು ಯುವಕ ಯುವತಿಯರ ಮೇಲಿದೆ ಎಂದರು.
ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ದೇವಸ್ಥಾನಗಳು ಹಾಗೂ ದಾವಖಾನೆಗಳು ಹೌಸ್ ಫುಲ್ ಆಗಿವೆ, ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚಾಗಿವೆ ಇದೇ ದುರಂತ ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಂತ ಆರೋಗ್ಯ ಅಧಿಕಾರಿ ಡಾ. ಖನಿಜ್ ಫಾತಿಮಾ ಮಾತನಾಡಿ, ಜೀವನ ಶೈಲಿ ಹೇಗೆ ಇರುತ್ತದೆ ಹಾಗೆ ಆರೋಗ್ಯ ಇರುತ್ತದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಯುವಕರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಅದರಲ್ಲೂ ಹಲ್ಲಿನ ಸುರಕ್ಷೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ಸುಜ್ಞಾನಿ ಪಾಟೀಲ್ ಮಾತನಾಡಿ, ಇಂದಿನ ಯುವಕರೇ ಮುಂದಿನ ಪ್ರಜೆಗಳು ಎಂದು ಹೇಳಿದ ಅವರು ಪ್ರಮುಖವಾಗಿ ಎಚ್ಐವಿ ಸೋಂಕಿನ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವ ಸಂದೇಶವನ್ನು ಅರಿತುಕೊಂಡು ಇಂದಿನ ಯುವ ಜನಾಂಗ ಸಾಗಬೇಕು. ಈ ನಿಟ್ಟಿನಲ್ಲಿ ದೇವರು ಕೊಟ್ಟ ಉತ್ತಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಶಶಿಧರ್ ಯಡ್ರಾಮಿ, ಆಸ್ಮಾ ನಿಖತ್, ಪ್ರಾಧ್ಯಾಪಕರಾದ ಪ್ರೋ.ಮಲ್ಲಪ್ಪ ಮಾನೇಗಾರ್, ಶರಣಬಸಪ್ಪ ರಾಯ್ಕೋಟಿ, ರೋಹಿಣಿ ಕಲ್ಮಟ್, ನಾಗವೇಣಿ, ಲಕ್ಷ್ಮೀಪುತ್ರ ಪಾಸೋಡಿ, ಕೈಲಾಸಪತಿ ವಿಶ್ವಕರ್ಮ, ಶರಣಪ್ಪ ದಿಗ್ಗಾಂವ, ಮರೇಪ್ಪ ಮೇತ್ರೆ, ಶ್ರೀಕಾಂತ್, ಅಭಿಷೇಕ್, ವಿಜಯಲಕ್ಷ್ಮೀ ರಾಠೋಡ, ಮಂಜುನಾಥ ದೇಶಪಾಂಡೆ, ಆಸ್ಪತ್ರೆಯ ನಿಜಾಮುದ್ದೀನ್, ಗುರುರಾಜ್ ಮುಗುಳಿ, ಪತ್ರಕರ್ತ ಸಂತೋಷಕುಮಾರ ಕಟ್ಟಿಮನಿ ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎನ್ಎಸ್ಎಸ್ ಅಧಿಕಾರಿ ಡಾ. ಸಂಗಪ್ಪ ಮಾಮನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಗುರೇಶ್ವರ ಆರ್ ಮಠಪತಿ ಸ್ವಾಗತಿಸಿದರು, ಮಲ್ಲಪ್ಪ ತೊಟ್ನಳ್ಳಿ ನಿರೂಪಿಸಿದರು, ಡಾ. ವಿಲಾಸ್ ವಂದಿಸಿದರು. ನಂತರ ಆರೋಗ್ಯ ತಪಾಸಣೆ ನಡೆಯಿತು. ವಿದ್ಯಾರ್ಥಿಗಳು ಶಿಬಿರದ ಸಂಪೂರ್ಣ ಸದುಪಯೋಗ ಪಡಿಸಿಕೊಂಡರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ